ಡಾ.ರಾಜ್ ಕುಮಾರ್ ಮತ್ತು ಉದಯ್ ಕುಮಾರ್ ಸಂಬಂಧ ಹೇಗಿತ್ತು ? ಕಠಾರಿ ವೀರ ಚಿತ್ರೀಕರಣದಲ್ಲಿ ಆಗಿದ್ದೇನು..?
ಡಾ.ರಾಜ್ ಕುಮಾರ್ ಮತ್ತು ಉದಯ್ ಕುಮಾರ್ ಅವರ ನಡುವೆ ಇದ್ದ ಸಂಬಂಧದ ಬಗ್ಗೆ ಹಲವರಲ್ಲಿ ಹತ್ತಾರು ಪ್ರಶ್ನೆಗಳಿರಬಹುದು. ಅನುಮಾನಗಳಿರಬಹುದು. ಎಲ್ಲವೂ ಅವರ ಅವರ ಭಕೂತಿಗೆ ಅವರ ಅವರ ಭಾವಕ್ಕೆ.
ಆದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗಿರುವಂತೆ ಡಾ.ರಾಜ್ ಕುಮಾರ್ ಮತ್ತು ಉದಯ್ ಕುಮಾರ್ ನಡುವೆ ಯಾವತ್ತೂ ಅಹಂ ಇರಲೇ ಇಲ್ಲ. ಬದಲಿಗೆ ಇಬ್ಬರ ನಡುವೆ ಆತ್ಮೀಯವಾದ ಸಂಬಂಧ ಇತ್ತು. ಗೆಳೆತನ ಇತ್ತು. ಇದಕ್ಕೆ ಕೈಗನ್ನಡಿ ಅನ್ನುವಂತೆ ಚಿತ್ರರಂಗದಲ್ಲಿ ಇಬ್ಬರು ಹನ್ನೆರಡು ವರ್ಷ ಇಬ್ಬರು ಅನ್ಯೋನ್ಯವಾಗಿದ್ದರು.

ಈ ಹನ್ನೆರಡು ವರ್ಷದಲ್ಲಿ ಇಬ್ಬರು 36 ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಕೆಲ ಒಮ್ಮೆ ತಂದೆ-ಮಗನ ಪಾತ್ರ.. ಇನ್ನೂ ಕೆಲವೊಮ್ಮೆ ಸ್ನೇಹಿತರ ಪಾತ್ರ.. ನಾಯಕ-ಖಳನಾಯಕನಾಗಿ.. ಅಣ್ಣ-ತಮ್ಮಂದಿರಾಗಿ.. ಹೀಗೆ ಅನೇಕ ಬಗೆಯ ಪಾತ್ರಗಳನ್ನ ಮಾಡಿದ್ದರು ನಟಸಾರ್ವಭೌಮ ಮತ್ತು ನಟಕೇಸರಿ. ಕಾಲಘಟ್ಟವೊಂದರ ಸಮಾನಾಂತರ ನಾಯಕನಟರು ಅತಿ ಹೆಚ್ಚು ಬಾರಿ ಒಟ್ಟಾಗಿ ನಟಿಸಿದ ಈ ದಾಖಲೆ ಭಾರತೀಯ ಚಿತ್ರರಂಗದ ಸಂದರ್ಭದಲ್ಲೇ ಅಪರೂಪದ್ದು
ಇನ್ನು..ಡಾ.ರಾಜ್ ಕುಮಾರ್ ಅವರನ್ನ ಉದಯ್ ಕುಮಾರ್ ಅವರು ಶ್ರೀರಾಮ ಚಂದ್ರ ಎಂದು ಕರೆಯುತ್ತಿದ್ದರು. ಮತ್ತೊಮ್ಮೆ ಪ್ರಭು ಎನ್ನುತ್ತಿದ್ದರು. ಇನ್ನೂ ಕೆಲವೊಮ್ಮೆ ಅಣ್ಣಾ ಎನ್ನುತ್ತಿದ್ದರು. ಉದಯ್ ಕುಮಾರ್ ಯಾವುದೇ ಹೆಸರಿನಲ್ಲಿ ಕರೆದರು ಒಮ್ಮೊಮ್ಮೆ ಬೇಕೆಂದೇ ಡಾ.ರಾಜ್ ಕುಮಾರ್ ಪ್ರತಿಕ್ರಿಯೆಯನ್ನ ನೀಡುತ್ತಿರಲಿಲ್ಲ. ಬದಲಿಗೆ ಏನೂ ಉತ್ತರ ಕೊಡದೇ ಉದಯ್ ಕುಮಾರ್ ಅವರನ್ನೇ ದಿಟ್ಟಿಸಿ ನೋಡುತ್ತಿದ್ದರು. ಇದರಿಂದ ಸಹನೆಯನ್ನ ಕಳೆದುಕೊಳ್ಳುತ್ತಿದ್ದ ಉದಯ್ ಕುಮಾರ್ ಅವರು ಡಾ.ರಾಜ್ ಕುಮಾರ್ ಅವರನ್ನ ಏನೋ ಮಗನೇ ಎಂದು ಕರೆಯುತ್ತಿದ್ದರು. ಅಷ್ಟರ ಮಟ್ಟಿಗೆ ಇಬ್ಬರು ನಡುವೆ ಸಲುಗೆ ಇತ್ತು. ಆತ್ಮೀಯತೆ ಇತ್ತು. ಡಿಸೆಂಬರ್ 26-1985ರಲ್ಲಿ ಉದಯ್ ಕುಮಾರ್ ಅವರು ನಿಧನರಾದ ನಂತರ ಡಾ.ರಾಜ್ ಕುಮಾರ್ ಸಂದರ್ಶನವೊಂದರಲ್ಲಿ ಈ ಮಾತನ್ನ ಹೇಳಿದ್ದರು.

ಇಷ್ಟೇ ಅಲ್ಲ ಅವತ್ತು ಉದಯ್ ಕುಮಾರ್ ಅವರ ಬಗ್ಗೆ ಮಾತನಾಡಿದ್ದ ಡಾ.ರಾಜ್ ಕುಮಾರ್, ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಅವನು ದೊಡ್ಡ ಕಲಾವಿದ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ ನನಗಿಂತಲೂ ದೊಡ್ಡ ಕಲಾವಿದ ಎಂದಿದ್ದರು. ಇಂತಹ ಸತ್ಯಗಳನ್ನ ಮನಸಿನಲ್ಲಿ ಮುಚ್ಚಿಟ್ಟುಕೊಂಡರೆ ಏನು ಪ್ರಯೋಜನ, ಹಾಗಾಗಿ ಆ ಸತ್ಯವನ್ನ ನಾನು ನಿಮಗೆ ಇವತ್ತು ಹೇಳ್ತಾಯಿದೀನಿ. ನಾನು ಒಪ್ಪಿದ ಕಲಾವಿದರಲ್ಲಿ ಉದಯ್ ಕುಮಾರ್ ಕೂಡ ಒಬ್ಬ. ಚಂದವಳ್ಳಿಯ ತೋಟ ಚಿತ್ರದಲ್ಲಿ ಶಿವ ನಂಜೇಗೌಡ ಪಾತ್ರವನ್ನ ನಿರ್ವಹಿಸುವಾಗ ನಾನು ಅವನನ್ನೇ ನೋಡ್ತಾ ಕುಳಿತು ಬಿಡ್ತಿದ್ದೆ. ಅದೆಷ್ಟು ಚೆನ್ನಾಗಿ ಆ ಗೌಡನ ಪಾತ್ರದಲ್ಲಿ ನಮ್ಮ ಉದಯ್ ತಲ್ಲೀನನಾಗಿದ್ದಾನೆ ಎಂದು ನಾನು ಅಂದುಕೊಳ್ಳುವೆ. ಆತನ ಸಾವು ನಿಜಕ್ಕೂ ಅನಿರೀಕ್ಷಿತ ಎಂದು ದು:ಖವನ್ನ ವ್ಯಕ್ತಪಡಿಸಿದ್ದರು ಡಾ.ರಾಜ್ ಕುಮಾರ್. ಉದಯ್ ಕುಮಾರ್ ಬಗ್ಗೆ ಡಾ.ರಾಜ್ ಕುಮಾರ್ ಅವರ ಅಂತರಂಗದಿಂದ ಬಂದ ಮಾತು 1986ರ ಫೆಬ್ರವರಿ ಸಂಚಿಕೆಯ ರೂಪತಾರಾ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಹೀಗೆ ಪರಸ್ಪರ ಪ್ರೀತಿ-ಗೌರವವನ್ನ ಹೊಂದಿದ್ದ ಈ ಸ್ನೇಹಿತರ ಎದುರು ಅದೊಂದು ದಿನ ಸತ್ವಪರೀಕ್ಷೆ ಹಾಗೂ ಅಗ್ನಿ ಪರೀಕ್ಷೆಯ ಕಾಲ ಎದುರಾಗಿತ್ತು. ಇಬ್ಬರಲ್ಲಿಯೂ ಹಗೆತನ-ದ್ವೇಷ-ಅಸೂಯೆ ಇದ್ದಿದ್ದರೆ ಅವತ್ತು ನಡೆದ ಪ್ರಮಾದ ವಿವಾದದ ಸ್ವರೂಪವನ್ನೂ ಪಡೆದುಕೊಳ್ಳುತ್ತಿತ್ತು. ಆದರೆ ಅದು ಹಾಗಾಗಲಿಲ್ಲ.

ಹೌದು, ಅದು.. ಕಠಾರಿ ವೀರ ಚಿತ್ರದ ಚಿತ್ರೀಕರಣದ ಸಂದರ್ಭ. ಕತ್ತಿವರಸೆ ಸನ್ನಿವೇಶದಲ್ಲಿ ರಾಜಕುಮಾರ್ ಮತ್ತು ಉದಯಕುಮಾರ್ ಭಾಗವಹಿಸಿದ್ದರು. ಶಿವಯ್ಯ ಈ ಸಾಹಸ ಸನ್ನಿವೇಶದ ನಿರ್ದೇಶಕರಾಗಿದ್ದರು. ಕತ್ತಿವರಸೆ ಮಾಡುತ್ತಿದ್ದಾಗ ಉದಯಕುಮಾರ್ ಅವರು ಬೀಸಿದ ಕತ್ತಿಯ ಮೊನೆ ರಾಜಕುಮಾರ್ ಅವರ ಕಣ್ಣಿಗೆ ತಗುಲಿ ಆಳವಾದ ಪೆಟ್ಟಾಯಿತು. ಅಮ್ಮಾ ಎಂದು ರಾಜ್ ಕೂಗುತ್ತ ಕೆಳಗೆ ಬಿದ್ದರು. ಜ್ಞಾನ ತಪ್ಪಿ ಕೆಲಕಾಲ ಮೂರ್ಛಾವಸ್ಥೆಯಲ್ಲಿದ್ದರು.
ಡಾ.ರಾಜ್ ಕುಮಾರ್ ಅವರನ್ನ ಆ ನಂತರ ಆಸ್ಪತ್ರೆಗೆ ಸೇರಿಸಲಾಯಿತು. ಎಲ್ಲರಿಗೂ ಗಾಬರಿ, ಆತಂಕ. ಉದಯಕುಮಾರ್ ಅವರಿಗಂತೂ ತಾನು ಬೀಸಿದ ಕತ್ತಿಯಿಂದ ತನ್ನ ಆಪ್ತಮಿತ್ರನಿಗೆ ಹೀಗಾಯಿತಲ್ಲ ಎಂಬ ಪಾಪಪ್ರಜ್ಞೆ ಕಾಡುತ್ತಿತ್ತು. ಆದರೆ ಆ ನಂತರ ಜ್ಞಾನ ಬಂದಾಗ ಸಾವರಿಸಿಕೊಂಡು ರಾಜಕುಮಾರ್, ಇದ್ರಲ್ಲಿ ಯಾರ ತಪ್ಪೂ ಇಲ್ಲ, ನನ್ನದೇ ತಪ್ಪಿರಬೇಕು. ನಾನು ಹೇಗೆ ತಿರುಗಿದೆ ಎಂದೇ ಗೊತ್ತಿಲ್ಲ ನೀವ್ಯಾಕೇ ಹೆದರುತ್ತೀರಿ ಎಂದು ಉದಯಕುಮಾರ್ ಅವರಿಗೆ ಸಾಂತ್ವನ ಹೇಳಿದರು.
ಅದೃಷ್ಟವಶಾತ್ ಕಠಾರಿ ವೀರ ಚಿತ್ರದ ಸಮಯದಲ್ಲಾದ ಈ ಘಟನೆ ವಿವಾದವಾಗಿ ಮಾರ್ಪಾಡಾಗಲಿಲ್ಲ. ಯಾರೂ ಈ ಘಟನೆಯನ್ನು ತಂದಿಕ್ಕಿ ತಮಾಷೆ ನೋಡಲು ಬಳಸಿಕೊಳ್ಳಲಿಲ್ಲ.ಆದರೆ ದುರಾದೃಷ್ಟವಶಾತ್ ಗಂಧದಗುಡಿ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಯಿತು. ವದಂತಿಗಳ ಉರಿಯಲ್ಲಿ ಗಂಧದಗುಡಿ ವಿವಾದವಾಯಿತು.


Click it and Unblock the Notifications











