Don't Miss!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- News ಡಿಕೆ ಸುರೇಶ್ ನಿದ್ದೆಗೆಡಿಸಿದ ಡಾಕ್ಟರ್; ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ: ಭವಿಷ್ಯ ನುಡಿದ ಸಿದ್ದರಾಮ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಂತಾರ ಚಿತ್ರದಲ್ಲಿ ಬರುವ ಪಂಜುರ್ಲಿ, ಗುಳಿಗ ದೈವ ಹಿನ್ನೆಲೆ ಏನು? ದೈವಗಳ ಪ್ರಾಮುಖ್ಯತೆ ಏನು?
ಕನ್ನಡ ಚಿತ್ರರಂಗ ಮತ್ತೊಂದು ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ತುಳುವರ ಅತೀ ನಂಬುಗೆಯ ದೈವಾರಾಧನೆಯನ್ನು ಪ್ರಮುಖ ಆಶಯವನ್ನಾಗಿಸಿಕೊಂಡು ರಚಿಸಿರುವ 'ಕಾಂತಾರ' ಚಿತ್ರಕ್ಕೆ ಸಿನಿ ಪ್ರೇಮಿಗಳು ಮನಸೋತಿದ್ದಾರೆ. ರಿಷಬ್ ಶೆಟ್ಟಿಯವರ ಅಮೋಘ ನಿರ್ದೇಶನ ಮತ್ತು ನಟನೆಗೆ ಜನ ಬಹುಪರಾಕ್ ಅಂತಾ ಶ್ಲಾಘಿಸಿದ್ದಾರೆ. ಈ ಚಿತ್ರ ಕೇವಲ ಚಿತ್ರ ಅಲ್ಲ, ಅದೊಂದು ವಿಶಿಷ್ಠವಾದ ಅನುಭವ ಎಂದು ಚಿತ್ರ ನೋಡಿದ ಪ್ರೇಕ್ಷಕರು ಉದ್ಘಾರವೆತ್ತಿದ್ದಾರೆ.
ತುಳುನಾಡಿನ ಜನರ ನಂಬುಗೆಯ ಪಂಜುರ್ಲಿ ದೈವ ಮತ್ತು ಗುಳಿಗ ದೈವದ ಕಾರ್ಣಿಕವನ್ನು ಬಿಂಬಿಸುವ ಕಾಂತಾರ ಚಿತ್ರ, ದೈವಾರಾಧನೆ ಮಾಡುವ ಪ್ರತಿಯೊಬ್ಬನಲ್ಲೂ ಭಯಭಕ್ತಿಯನ್ನು ಉದ್ದೀಪನಗೊಳಿಸುತ್ತಾರೆ. ತುಳುನಾಡಿನ ಭಾಗಶಃ ಎಲ್ಲಾ ಮನೆಮನಗಳನ್ನು ಆವರಿಸಿರುವ ಪಂಜುರ್ಲಿ, ಗುಳಿಗ ದೈವದ ಮಹಿಮಾನ್ವಿತ ಶಕ್ತಿಯನ್ನು ಕಾಂತಾರ ಚಿತ್ರದಲ್ಲಿ ಅದ್ಭುತವಾಗಿ ತಿಳಿಸಲಾಗಿದೆ.
ನಂಬಿದವರನ್ನು ಪೊರೆಯುವ, ಅಭೀಷ್ಠಗಳನ್ನು ಪೂರೈಸುವ ಪಂಜುರ್ಲಿ ದೈವಕ್ಕೆ ತುಳುನಾಡಿನಲ್ಲಿ ಅಪಾರ ಗೌರವವಿದೆ. ಕುಟುಂಬನ್ನು ಪೊರೆಯುವ ಯಜಮಾನನ ಸ್ಥಾನವನ್ನು ಪಂಜುರ್ಲಿ ದೈವಕ್ಕೆ ನೀಡಲಾಗುತ್ತದೆ. ಪಂಜುರ್ಲಿಯನ್ನು ಮನೆಯ ಚಾವಡಿಯಲ್ಲಿ ಅಥವಾ ಮನೆಯೊಳಗೆ ಮನೆಮಂಚ(ಪೀಠ)ವನ್ನು ಮಾಡಿ ದೈವದ ಬಿಂಬವನ್ನು ಪೂಜಿಸಲಾಗುತ್ತದೆ. ಗುಳಿಗ ದೈವ ರೋಷಾವೇಶದ ಅಂಶವಾಗಿದ್ದು,ಮನೆ ಹೊರಗೆ,ಗುಡ್ಡದಲ್ಲಿ ಕಲ್ಲಿನ ರೂಪದಲ್ಲಿ ಆರಾಧಿಸಲಾಗುತ್ತದೆ. ಮನೆಯನ್ನು ಪಂಜುರ್ಲಿ ದೈವ ರಕ್ಷಣೆ ಮಾಡಿದರೆ,ಮನೆಗೆ ಸೇರಿದ ಪ್ರದೇಶವನ್ನು ಕ್ಷೇತ್ರಪಾಲಕನಾಗಿ ಗುಳಿಗ ಕಾಪಾಡುತ್ತಾನೆ ಎಂಬ ನಂಬಿಕೆ ಜನರಲ್ಲಿದೆ.
ಪಂಜರ್ಲಿ ದೈವದ ಹಿನ್ನೆಲೆ ಏನು?
ಪಂಜುರ್ಲಿ ದೈವದ ಅಂಶ ಅಂದರೆ ಪಂಜಿ(ಹಂದಿ). ಪಂಜುರ್ಲಿ ದೈವದ ಹಿನ್ನಲೆಯ ಬಗ್ಗೆ ನಾನಾ ಭಾಗಗಳಲ್ಲಿ ಹಲವು ಹುಟ್ಟು ಕಥೆಗಳಿವೆ. ಈ ಹಿಂದೆ ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಊರ ಪ್ರಮುಖನೊಬ್ಬ ಕೃಷಿಗೆ ಭಾರೀ ಕಾಟ ನೀಡುತ್ತಿದ್ದ ಕಾಡುಹಂದಿಯನ್ನು ಬೇಟೆಯಾಡಿ ಕೊಲ್ಲುತ್ತಾನೆ. ದೈವೀ ಅಂಶವಿದ್ದ ಹಂದಿಯನ್ನು ಬೇಟೆಯಾಡಿದ ಸಂದರ್ಭದಲ್ಲಿ ಆ ಹಂದಿ ಸತ್ತ ಬಳಿಕ ಪಂಜುರ್ಲಿ ದೈವವಾಗಿ ರೂಪಾಂತರಗೊಂಡಿತು ಎಂಬ ಕಥೆಗಳಿವೆ. ಹೀಗೆ ದೈವೀ ಅಂಶವಾದ ಪಂಜುರ್ಲಿ ಮುಂದೆ ಗ್ರಾಮವನ್ನು ಉದ್ಧಾರ ಮಾಡಿ, ಎಲ್ಲರ ನಂಬುಗೆಯ ಭಯಭಕ್ತಿಯ ಶಕ್ತಿಯಾಯಿತು.
ನಂಬಿಗಸ್ಥ ದೈವ ಪಂಜುರ್ಲಿಯ ಹಿನ್ನೆಲೆ ಏನು?
ಪಂಜುರ್ಲಿ ದೈವ ಧರ್ಮಸ್ಥಳದಲ್ಲಿ ಅಣ್ಣಪ್ಪ ಸ್ವಾಮಿಯಾಗಿ, ಬೇರೆ ಬೇರೆ ಭಾಗದಲ್ಲಿ ನಾನಾ ರೂಪದಲ್ಲಿ ಆರಾಧನೆಗೊಳುತ್ತದೆ. ಕುಟುಂಬದ ದೈವವಾಗಿ, ಊರಿನ ದೈವವಾಗಿ, ಗ್ರಾಮದ ಪ್ರಧಾನ ದೈವವಾಗಿ ಪಂಜುರ್ಲಿ ದೈವ ಆರಾಧನೆಯನ್ನು ಪಡೆಯುತ್ತಾ ಬಂದಿದೆ. ಕುಟುಂಬದೊಳಗಿನ ವ್ಯಾಜ್ಯಗಳನ್ನು, ಸಮಸ್ಯೆಗಳನ್ನು ಪಂಜುರ್ಲಿ ದೈವ ನೇಮ ನಡೆದ ಸಂಧರ್ಭದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸಮಸ್ಯೆ ಬಗೆಹರಿಸಿದ ಸಾವಿರಾರು ಜ್ವಲಂತ ಉದಾಹರಣೆಗಳು ತುಳುನಾಡು ಭಾಗದಲ್ಲಿ ಕಾಣಸಿಗುತ್ತದೆ. ನ್ಯಾಯಾಲಯದಲ್ಲಿ ಬಗೆಹರಿಯದ ವ್ಯಾಜ್ಯ ತೀರ್ಮಾನಗಳು ಪಂಜುರ್ಲಿ ದೈವದ ಮೂಲಕ ಬಗೆಹರಿದ ಘಟನೆಗಳು ತುಳುನಾಡಿನಲ್ಲಿ ಕಾಣಸಿಗುತ್ತದೆ. ಕಷ್ಟದಲ್ಲಿದ್ದಾಗ ನೆರವಾಗುವ, ತಪ್ಪಿ ನಡೆದಾಗ ಎಚ್ಚರಿಸುವ, ಸದಾ ಕಾಯುವ ನಂಬಿಗಸ್ಥ ದೈವವಾಗಿ ಪಂಜುರ್ಲಿ ದೈವಾರಾಧಕರ ಹೃದಯದಲ್ಲಿ ನೆಲೆಯಾಗಿದೆ.
ಸಾವಿರದೊಂದು ದೈವಗಳು ನೆಲೆಯಾಗಿವೆ
ತುಳುನಾಡಿನ ಸಾವಿರದೊಂದು ದೈವಗಳು ನೆಲೆಯಾಗಿದ್ದರೂ, ಇಷ್ಟು ದೈವಗಳ ಪೈಕಿ ಅತೀ ಕೋಪದ, ರೋಷಾವೇಶದ ದೈವ ಅಂತಾ ಇರೋದು ಗುಳಿಗ ದೈವ. ಪ್ರಧಾನ ದೈವವಾದ ಗುಳಿಗ ಕ್ಷುದ್ರದೈವವಾಗಿದ್ದು, ಮನೆ ಹೊರಗೆ ಆರಾಧನೆಗೊಳಗಾಗುತ್ತದೆ. ಎಲ್ಲರೂ ತಾಯಿಯ ಹೊಟ್ಟೆಯಿಂದ ಸಹಜವಾಗಿ ಜನನ ಹೊಂದಿದರೆ, ಗುಳಿಗ ದೈವ ಮಾತ್ರ ಹೊಟ್ಟೆಯನ್ನೇ ಬಗಿದು ಹೊರಬಂದ ಕಥೆಗಳಿವೆ. ಗುಳಿಗ ಸದಾ ಹಸಿವಿನಿಂದ ಕೂಡಿದ್ದು, ಕೋಳಿ ಬಲಿಕೊಡುವ ಸಂಪ್ರದಾಯ ತುಳುನಾಡಿನಲ್ಲಿದೆ. ಗುಳಿಗ ದೈವ ಕೆಲವೊಂದೆಡೆ ಇತರ ದೈವಗಳೊಡನೆ ಇದ್ದರೆ ಮತ್ತೊಂದೆಡೆ ಕ್ಷೇತ್ರಪಾಲನಾಗಿ ಇರುತ್ತದೆ. ಗುಡ್ಡ ಪ್ರದೇಶ ಅಥವಾ ಮನೆಯ ಹೊರಭಾಗದಲ್ಲಿ ಕಲ್ಲು ಪ್ರತಿಷ್ಠಾಪನೆ ಮಾಡಿ ಗುಳಿಗ ದೈವವನ್ನು ಆರಾಧಿಸಲಾಗುತ್ತದೆ. ಮನೆಗೆ ಸಂಬಂಧಿಸಿದ ಜಾಗವನ್ನು ಗುಳಿಗ ಕಾಪಾಡುತ್ತಾನೆ ಎನ್ನುವ ನಂಬಿಕೆ ತುಳುವರಲ್ಲಿದೆ. ಆ ನಂಬಿಕೆ ಇಂದಿಗೂ ವಿವಿಧ ನಿದರ್ಶನ, ಕಾರಣಿಕ ಶಕ್ತಿಯ ಮೂಲಕ ನಿಜವಾಗುತ್ತಿದೆ.
ತುಳುವರ ಮನಸೂರೆಗೊಳಿಸಿದ ಕಾಂತಾರ ಚಿತ್ರ
ಕಾಂತಾರ ಚಿತ್ರದಲ್ಲಿ ಈ ಎರಡೂ ದೈವಗಳ ಶಕ್ತಿಯನ್ನು ಅದ್ಭುತವಾಗಿ ತೋರಿಸಲಾಗಿದೆ. ಕ್ಷೇತ್ರಪಾಲನಾಗಿ ಗುಳಿಗ ಪ್ರದೇಶವನ್ನು ರಕ್ಷಣೆ ಮಾಡುವ ರೀತಿ, ಪಂಜುರ್ಲಿ ದೈವ ಭಕ್ತರಿಗೆ ಅಭಯ ನೀಡುವ ಪರಿ 'ಕಾಂತಾರ' ಚಿತ್ರದಲ್ಲಿ ಅದ್ಭುತವಾಗಿ ಸೆರೆಯಾಗಿದೆ. ಕಾಂತಾರ ಚಿತ್ರದ ರೀತಿಯೇ ಹಲವು ಸತ್ಯಘಟನೆಗಳು ತುಳುನಾಡಿನಲ್ಲಿ ನಡೆದಿದೆ. ತುಳುವರ ಮನಸೂರೆಗೊಳಿಸಿದ ಕಾಂತಾರ ಚಿತ್ರ, ತುಳು ಸಂಸ್ಕೃತಿ, ದೈವಾರಾಧನೆಯ ಶಕ್ತಿ ಅರಿಯದವರಿಗೂ ಅರಿಯುವ ಉತ್ಸಾಹವನ್ನು ತಂದುಕೊಟ್ಟಿದೆ ಅಂದರೆ ತಪ್ಪಾಗಲಾರದು.