ಎನ್ಟಿಆರ್ ಪರ ನಿಂತಿದ್ದಕ್ಕೆ ವೇದಿಕೆಯಲ್ಲೇ ಆ ವ್ಯಕ್ತಿ ಅಣ್ಣಾವ್ರ ಕುತ್ತಿಗೆ ಪಟ್ಟಿ ಹಿಡಿದಿದ್ದ!!
ಭಾರತೀಯ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ನಟಸಾರ್ವಭೌಮ ಡಾ. ರಾಜ್ಕುಮಾರ್. ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ನಟನೆ ವಿಚಾರಕ್ಕೆ ಬಂದರೆ ಭಾರತದ ಮತ್ಯಾವುದೇ ಕಲಾವಿದ ಅಣ್ಣಾವ್ರ ಸರಿಸಮಕ್ಕೆ ಬರೋಲ್ಲ ಎಂದರೆ ಅತಿಶಯೋಕ್ತಿ ಆಗುವುದಿಲ್ಲ.
ಡಾ. ರಾಜ್ಕುಮಾರ್ ಕಾಲಾವಧಿಯಲ್ಲೇ ತೆಲುಗು ನಟ ಎನ್ಟಿಆರ್ ಕೂಡ ಚಿತ್ರರಂಗದಲ್ಲಿ ಮೆರೆದರು. ಅಣ್ಣಾವ್ರ ರೀತಿ ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ನಂದಮೂರಿ ತಾರಕ ರಾಮಾರಾವು ಅದ್ಭುತ ಕಲಾವಿದ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪಾತ್ರಗಳನ್ನು ಮಾಡುವುದರಲ್ಲಿ ಯಾರಿಗಿಂತ ಕಮ್ಮಿ ಇಲ್ಲ. ವಿಶ್ವವಿಖ್ಯಾತ ನಟಸಾರ್ವಭೌಮ ಎಂದೇ ಅಭಿಮಾನಿಗಳು ಬಿರುದು ಕೊಟ್ಟಿದ್ದರು. ಅವರ ಪ್ರತಿಭೆ ಬಗ್ಗೆ ಎರಡು ಮಾತಿಲ್ಲ. ಆದರೆ ಖುದ್ದು ಎನ್ಟಿಆರ್ ನಮ್ಮ ಅಣ್ಣಾವ್ರ ನಟನೆಗೆ ಮಾರು ಹೋಗಿದ್ದರು.

ರಾಜ್ಕುಮಾರ್ ಸರಿಸಮನಾಗಿ ನಟಿಸೋಕೆ ನನ್ನಿಂದ ಸಾಧ್ಯವಿಲ್ಲ ಎಂದು ಹೇಳುತ್ತಿದ್ದರಂತೆ. ಇನ್ನು ಇಬ್ಬರ ನಡುವೆ ಆತ್ಮೀಯ ಒಡನಾಟವಿತ್ತು. ರಾಜ್ಕುಮಾರ್ ಅವರನ್ನು ನಾ ತಮ್ಮಡು(ತಮ್ಮ) ಎಂದೇ ಎನ್ಟಿಆರ್ ಕರೆಯುತ್ತಿದ್ದರು. ಆರಂಭದಲ್ಲೇ ಒಂದಷ್ಟು ಸಿನಿಮಾಗಳನ್ನು ಇಬ್ಬರೂ ಒಟ್ಟೊಟ್ಟಿಗೆ ನಟಿಸಿದ್ದರು. ಅಂದರೆ ಏಕಕಾಲಕ್ಕೆ ಒಂದೇ ಕಥೆಯಲ್ಲಿ ಇತ್ತ ಅಣ್ಣಾವ್ರು, ಅತ್ತ ಎನ್ಟಿಆರ್ ಅಭಿನಯಿಸುತ್ತಿದ್ದರು. ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ.
'ಸತ್ಯ ಹರಿಶ್ಚಂದ್ರ' ಬಳಿಕ ಇದಕ್ಕೆ ಬ್ರೇಕ್ ಬಿದ್ದಿತ್ತು. ಆಗ ಮದ್ರಾಸ್ ಸ್ಟುಡಿಯೋಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಎರಡೂ ಚಿತ್ರಕ್ಕೆ ಒಂದೇ ಸೆಟ್ಟು, ಸಹ ಕಲಾವಿದರನ್ನು ಬಳಸಿಕೊಳ್ಳುತ್ತಿದ್ದರು. ಹಗಲಿನ ಸಮಯದಲ್ಲಿ ತೆಲುಗು ಸಿನಿಮಾ ಚಿತ್ರೀಕರಣ ನಡೆದರೆ ರಾತ್ರಿ ಸಮಯದಲ್ಲಿ ಅಲ್ಲೇ ಕನ್ನಡ ಸಿನಿಮಾ ಸೆರೆಹಿಡಿಯಲಾಗುತ್ತಿತ್ತು. ಹಾಗಾಗಿ ಅಣ್ಣಾವ್ರು, ಎನ್ಟಿಆರ್ ಪದೇ ಪದೇ ಭೇಟಿ ಆಗುತ್ತಿದ್ದರು. ಇಬ್ಬರ ನಡುವೆ ಆತ್ಮೀಯ ಒಡನಾಟ ಬೆಳೆದಿತ್ತು.
ವಯಸ್ಸಿನಲ್ಲಿ ರಾಜ್ಕುಮಾರ್ ಅವರಿಗಿಂತ ಎನ್ಟಿಆರ್ ಹಿರಿಯರು. ಅಷ್ಟೇ ಅಲ್ಲ ಅಣ್ಣಾವ್ರಿಗಿಂತ ಮೊದಲೇ ರಾಮಾರಾವು ಚಿತ್ರರಂಗಕ್ಕೆ ಬಂದಿದ್ದರು. ಇನ್ನು ಇಬ್ಬರ ನಡುವಿನ ಒಡನಾಟದ ಬಗ್ಗೆ ಹಾಲು ಜೇನು ರಾಮ್ಕುಮಾರ್ ಟೋಟಲ್ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದರು. ಅದೊಮ್ಮೆ ಎನ್ಟಿಆರ್ ಪರ ಅಣ್ಣಾವ್ರು ಮಾತನಾಡಿದ್ದಕ್ಕೆ ವ್ಯಕ್ತಿಯೊಬ್ಬ ವೇದಿಕೆಯಲ್ಲೇ ಅಣ್ಣಾವ್ರ ಕುತ್ತಿಗೆಪಟ್ಟಿ ಹಿಡಿದುಕೊಂಡಿದ್ದ ಘಟನೆ ನಡೆದಿತ್ತು ಎಂದು ಮೆಲುಕು ಹಾಕಿದ್ದಾರೆ.
ಡಾ. ರಾಜ್- ಎನ್ಟಿಆರ್ ಸ್ನೇಹ
'ಭೂ ಕೈಲಾಸ' ಚಿತ್ರ ಚಿತ್ರೀಕರಣದ ವೇಳೆ ಅಣ್ಣಾವ್ರ ಹಾಗೂ ಎನ್ಟಿಆರ್ ಮೊದಲಿಗೆ ಭೇಟಿ ಆಗಿದ್ದರು. ಅದಕ್ಕೂ ಮುನ್ನ 'ಬೇಡರ ಕಣ್ಣಪ್ಪ' ಸಿನಿಮಾ ತೆಲುಗಿಗೆ ರೀಮೇಕ್ ಆಗುತ್ತಿದ್ದಾಗ ಒಮ್ಮೆ ರಾಮಾರಾವು ಸೆಟ್ಗೆ ಭೇಟಿ ನೀಡಿದ್ದರಂತೆ. ಇನ್ನು 'ಭೂಕೈಲಾಸ' ಚಿತ್ರದ ಚಿತ್ರದಲ್ಲಿ ಎನ್ಟಿಆರ್ ಅವರಿಗಿಂತ ಅಣ್ಣಾವ್ರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದು ರಾಮಾರಾವು ಅವರಿಗೂ ಗೊತ್ತಾಗಿ 'ಗಾಳಿಗೋಪುರ' ಚಿತ್ರೀಕರಣದ ವೇಳೆ ನಾನು ಕನ್ನಡ ಸಿನಿಮಾ ಚಿತ್ರೀಕರಣ ನೋಡಿ ಸ್ಫೂರ್ತಿ ಪಡೆಯುತ್ತೇನೆ ಎಂದು ಎನ್ಟಿಆರ್ ಹೇಳಿದ್ದರಂತೆ. ಈ ವಿಚಾರವನ್ನು ಹಾಲು ಜೇನು ರಾಮ್ಕುಮಾರ್ ತಿಳಿಸಿದ್ದಾರೆ.
'ಗಾಳಿಗೋಪುರ' ಸಿನಿಮಾ ಕನ್ನಡ ಹಾಗು ತೆಲುಗಿನಲ್ಲಿ ಏಕಕಾಲಕ್ಕೆ ತೆರೆಗೆ ಬಂದಿತ್ತು. ಎನ್ಟಿಆರ್ ಮೊದಲು ನಾನು ರಾಜ್ಕುಮಾರ್ ಅಭಿನಯ ನೋಡಿ ನಂತರ ನಾನು ನಟಿಸುತ್ತೇನೆ ಎಂದು ಪಂತುಲು ಬಳಿ ಹೇಳಿದ್ದು ಅವರಿಗೆ ಅಚ್ಚರಿ ತಂದಿತ್ತಂತೆ. ಈ ಬಗ್ಗೆ ಸಹಾಯಕರಾಗಿದ್ದ ಪುಟ್ಟಣ್ಣ ಕಣಗಾಲ್ ಬಳಿಕ ಪಂತುಲು ಮಾತನಾಡಿದ್ದಂರಂತೆ. ನಮ್ಮ ನಟನ ಪ್ರತಿಭೆ ಬಗ್ಗೆ ನಮ್ಮವರಿಗೆ ಗೊತ್ತಿಲ್ಲ ಎಂದಿದ್ದರಂತೆ.
'ಸಾಕು ಮಗಳು' ಚಿತ್ರದಲ್ಲಿ ಕೂಡ ಚಿತ್ರವನ್ನು ಕೂಡ ಇದೇ ರೀತಿ ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣ ಮಾಡಲಾಗಿತ್ತು. ಅಣ್ಣಾವ್ರು ಈ ಚಿತ್ರದಲ್ಲಿ ನಟಿ ಕಲ್ಪನಾ ಅವರ ಕಾಲಿಗೆ ಬೀಳುವ ಸನ್ನಿವೇಶ ಇದೆ. ಈ ರೀತಿ ಬೇಕು ಎಂದು ಪುಟ್ಟಣ್ಣ ಹೇಳಿದರೆ ಪಂತುಲು ಬೇಡ ಎನ್ನುತ್ತಿದ್ದರಂತೆ. ಕೊನೆಗೆ ವಿಷಯ ಗೊತ್ತಾಗಿ ಪುಟ್ಟಣ್ಣ ಹೇಳುವುದು ಸರಿ ಎಂದು ರಾಜ್ಕುಮಾರ್ ಆ ದೃಶ್ಯದಲ್ಲಿ ನಟಿಸಿದ್ದರು.
ಇದೇ ಸನ್ನಿವೇಶವನ್ನು ತೆಲುಗಿನಲ್ಲಿ ಎನ್ಟಿಆರ್ ನಟಿಸೋಕೆ ನಿರಾಕರಿಸಿದ್ದರು. ನಿನ್ನೆ ರಾಜ್ಕುಮಾರ್ ಈ ಸನ್ನಿವೇಶದಲ್ಲಿ ನಟಿಸಿದ್ದಾರೆ, ನೀವು ಮಾಡಿದರೆ ಚೆನ್ನಾಗಿರುತ್ತದೆ ಎಂದು ಸಹ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಹೋಗಿ ಎನ್ಟಿಆರ್ ಬಳಿ ಹೇಳಿದ್ದರಂತೆ. ಹೌದಾ ರಾಜ್ಕುಮಾರ್ ನಟಿಸಿದ್ರಾ? ಅವ್ರು ಗ್ರೇಟ್, ನಾನು ಗ್ರೇಟ್ ಅಲ್ಲ ಎಂದು ಎನ್ಟಿಆರ್ ಹೇಳಿದ್ದರು.

'ವಾಲ್ಮೀಕಿ' ಚಿತ್ರವನ್ನು ಕೂಡ ಎರಡು ಭಾಷೆಗಳಲ್ಲಿ ಒಟ್ಟಿಗೆ ನಿರ್ಮಿಸಿದ್ದರು. ಅಣ್ಣಾವ್ರು ಕಾಟನ್ ಪಂಚೆ ಕೇಳಿ ಧರಿಸಿ ನಟಿಸಿದ್ದರಂತೆ. ಎನ್ಟಿಆರ್ ಮಾತ್ರ ಸಿಲ್ಕ್ ಪಂಚೆ ಕೇಳಿದ್ದರು. 'ವೀರ ಕೇಸರಿ' ಕೂಡ ಒಟ್ಟೊಟ್ಟಿಗೆ ಎನ್ಟಿಆರ್ ಹಾಗೂ ರಾಜ್ಕುಮಾರ್ ನಟಿಸಿದ್ದ ಸಿನಿಮಾ. ಈ ಚಿತ್ರದ ಬಳಿಕ ಸ್ವತಃ ನಿರ್ದೇಶಕ ವಿಠಲಾಚಾರ್ಯ ನನಗೆ ತೆಲುಗಿಗಿಂತ ಕನ್ನಡ ಸಿನಿಮಾ ಇಷ್ಟವಾಯಿತು, ಕಾರಣ ಎನ್ಟಿಆರ್ ನಟನೆ ನನಗೆ ಇಷ್ಟವಾಯಿತು ಎಂದು ಬಹಿರಂಗವಾಗಿ ಎನ್ಟಿಆರ್ ಪಕ್ಕದಲ್ಲೇ ಕೂತು ಹೇಳಿದ್ದರು. ಇದಕ್ಕೆ ಎನ್ಟಿಆರ್ ಕೂಡ ಏನು ಹೇಳದೇ ಒಪ್ಪಿಕೊಂಡಿದ್ದರು ಎನ್ನಲಾಗುತ್ತದೆ.
'ಸತ್ಯಹರಿಶ್ಚಂದ್ರ' ಚಿತ್ರದಲ್ಲಿ ರಾಜ್ಕುಮಾರ್ ನಟನೆ ಅದ್ಭುತವಾಗಿತ್ತು. ತೆಲುಗಿನಲ್ಲಿ ಎನ್ಟಿಆರ್ ನಟನೆ ಅದಕ್ಕೆ ಸರಿಸಮನಾಗಿ ಇಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಇದೇ ಕಾರಣಕ್ಕೆ ಮುಂದೆ ಏಕಕಾಲದಲ್ಲಿ ಎರಡು ಸಿನಿಮಾ ನಿರ್ಮಾಣ ಬೇಡ ಎಂದು ಎನ್ಟಿಆರ್ ನಿರ್ಧರಿಸಿದ್ದರು.
ಒಮ್ಮೆ ಎನ್ಟಿಆರ್ ಮನೆಗೆ ರಾಜ್ಕುಮಾರ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದರು. ರಾತ್ರಿ 10 ಗಂಟೆಗೆ ರಾಮಾರಾವು ಊಟ ಮಾಡಿ ಮಲಗುವ ಅಭ್ಯಾಸ ಇತ್ತು. ಆದರೆ ಆ ದಿನ ಬೇರೆ ಕಾರ್ಯಕ್ರಮದಲ್ಲಿ ಅಣ್ಣಾವ್ರು ಭಾಗಿ ಆಗಿದ್ದರಿಂದ ಎನ್ಟಿಆರ್ ಮನೆಗೆ ಹೋಗುವುದು ತಡವಾಗಿತ್ತು. 12 ಗಂಟೆ ವೇಳೆಗೆ ಹೋಗೋಣ ಎಂದಾಗ ನಾಗೇಶ್ವರ ರಾವ್ ಬೇಡ ಎಂದರಂತೆ. ಪರವಾಗಿಲ್ಲ ನಾನು ಕ್ಷಮೆ ಕೇಳುತ್ತೇನೆ ಎಂದು ರಾಜ್ಕುಮಾರ್ ಹೋಗಿದ್ದರಂತೆ. ಎನ್ಟಿಆರ್ ಕಾರ್ಯಕ್ರಮದ ಬಗ್ಗೆ ಗೊತ್ತಿದ್ದರಂತೆ ಛೇ, ಇದೇ ಸಮಯಕ್ಕೆ ಆ ಕಾರ್ಯಕ್ರಮ ಆಯೋಜಿಸಬೇಕಿತ್ತೇ ಎಂದು ಆಯೋಜಕರನ್ನು ಬೈದುಕೊಂಡಿದ್ದರು.
ಎನ್ಟಿಆರ್ ನಟನೆಯ 'ಲವ-ಕುಶ' ಸಿನಿಮಾ ಬೆಂಗಳೂರಿನಲ್ಲಿ ಬಿಡುಗಡೆಯಾಗಿದ್ದಾಗ ಪೋಸ್ಟರ್ಗಳಲ್ಲಿ ಎನ್ಟಿಆರ್ ಮುಖಕ್ಕೆ ಕೆಲವರು ಸಗಣಿ ಮೆತ್ತಿದ್ದರು. ಬೆಂಗಳೂರಿಗೆ ಬಂದಾಗ ಎನ್ಟಿಆರ್ ಇದನ್ನು ನೋಡಿ ಬೇಸರಗೊಂಡಿದ್ದರಂತೆ. ನನ್ನ ಮುಖಕ್ಕೆ ಸಗಣಿ ಮೆತ್ತಿದ್ದರೆ ಪರವಾಗಿಲ್ಲ, ಆದರೆ ರಾಮನ ವೇಷದಲ್ಲಿರುವ ನನಗೆ ಸಗಣಿ ಮೆತ್ತಿದ್ದರೆ ಅದು ರಾಮನಿಗೆ ಮೆತ್ತಿದ್ದಂತೆ. ಅದಕ್ಕೆ ಬೇಸರವಾಗುತ್ತಿದೆ ಎಂದು ಬೇಸರಗೊಂಡಿದ್ದರು. ಈ ಬಗ್ಗೆ ರಾಜ್ಕುಮಾರ್ ಬಳಿಕ ನೋವು ತೋಡಿಕೊಂಡಿದ್ದರು.
ರಾಜ್ಕುಮಾರ್ ಈ ಬಗ್ಗೆ ಒಮ್ಮೆ ಹೇಳಿಕೆ ಕೊಟ್ಟಿದ್ದರು. ಕಲಾವಿದರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ. ಅವರಿಗೆ ಪೋಸ್ಟರ್ಗೆ ಸಗಣಿ ಹಾಕಿದ್ದರೆ ಪರವಾಗಿಲ್ಲ, ರಾಮನ ವೇಷದಲ್ಲಿದ್ದ ಅವರಿಗೆ ಸಗಣಿ ಮೆತ್ತಿದ್ದು ತಪ್ಪು. ನಿಮಗೆ ನಿಜವಾಗಿಯೂ ಕನ್ನಡಾಭಿಮಾನ ಇದ್ದರೆ ತೆಲುಗು ಸಿನಿಮಾ ನೋಡಬೇಡಿ. ಅದು ಬಿಟ್ಟು ಕಲಾವಿದರಿಗೆ ಈ ರೀತಿ ಅವಮಾನ ಮಾಡಬೇಡಿ ಎಂದು ರಾಜ್ಕುಮಾರ್ ಮನವಿ ಮಾಡಿದ್ದರು. ಈ ಹೇಳಿಕೆ ಕೆಲವರಿಗೆ ಬೇಸರ ತಂದಿತ್ತು.
ಕಾರ್ಯಕ್ರಮವೊಂದರಲ್ಲಿ ರಾಜ್ಕುಮಾರ್ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬ ಏಕಾಏಕಿ ಹೋಗಿ ಅಣ್ಣಾವ್ರ ಕುತ್ತಿಗೆ ಪಟ್ಟಿಗೆ ಕೈ ಹಾಕಿದ್ದ. "ಏನು ಮಾತನಾಡುತ್ತಿದ್ದೀಯಾ ನೀನು, ನಿಮ್ಮ ಪರ ನಾವು ಹೋರಾಟ ಮಾಡುತ್ತಿದ್ದೇವೆ. ಕನ್ನಡಪರ ಹೋರಾಟ ನಮ್ಮದು, ನೀನು ನಮಗೆ ಬೆಂಬಲ ಕೊಡುವುದು ಬಿಟ್ಟು ಯಾರೋ ಹೊರಗಡೆ ನಟನಿಗೆ ಸಪೋರ್ಟ್ ಮಾಡುತ್ತೀಯಾ ಎಂದಿದ್ದನಂತೆ. ಆದರೆ ಅಣ್ಣಾವ್ರು ಸಮಾಧಾನದಿಂದಲೇ ಉತ್ತರಿಸಿದ್ದರು. ನಾನು ಹೇಳಿದ್ದು ಕಲಾವಿದರ ಬಗ್ಗೆ. ನಿಮ್ಮ ಅಭಿಮಾನ ಕಲಾವಿದರಿಗೆ ತೊಂದರೆ ಆಗಬಾರದು ಎಂದಿದ್ದರಂತೆ. ಅಷ್ಟರಲ್ಲಿ ಕೆಲವರು ಬಂದು ಆ ವ್ಯಕ್ತಿಯನ್ನು ಸಮಾಧಾನ ಮಾಡಿ ಕಳುಹಿಸಿದ್ದರು ಎಂದು ಆ ಘಟನೆಯನ್ನು ಹಾಲು ಜೇನು ರಾಮ್ಕುಮಾರ್ ವಿವರಿಸಿದ್ದಾರೆ.


Click it and Unblock the Notifications











