ಅಂದು ದಾದಾ ಕಟೌಟ್ ಬೀಳಿಸಲು ಹೊಂಚು ಹಾಕಿದ್ಯಾರು? ಬ್ಲೇಡ್ ಹಿಡ್ದು ಪ್ರೇಮ್ ಕಾವಲು ಕಾದಿದ್ಯಾಕೆ?
ಸಾಹಸಸಿಂಹ ವಿಷ್ಣುವರ್ಧನ್. ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ಕುಮಾರ್ ಬಳಿಕ ದೊಡ್ಡ ಸ್ಟಾರ್ ಆಗಿ ಮೆರೆದ ನಟ. ಸೂಪರ್ ಹಿಟ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಸಿದ ಹೀರೊ. ತಮ್ಮ ಅದ್ಭುತ ಅಭಿನಯದಿಂದ ಮೋಡಿ ಮಾಡಿದ ಅಭಿನಯ ಭಾರ್ಗವ. ದಾದಾನ ನೋಡಿ ಪ್ರೇರಣೆಗೊಂಡು ಚಿತ್ರರಂಗಕ್ಕೆ ಬಂದವರು ಸಾಕಷ್ಟು ಜನ ಇದ್ದಾರೆ.
ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಇಂದು ನಿನ್ನೆಯದ್ದಲ್ಲ. ದಶಕಗಳಿಂದ ನಡೆದುಬಂದಿದೆ. ಅಣ್ಣಾವ್ರು, ವಿಷ್ಣುವರ್ಧನ್ ಸಿನಿಮಾಗಳು ಬಿಡುಗಡೆ ಸಂಭ್ರಮದಲ್ಲಿ ಕಿರಿಕ್ಗಳು ನಡೆದ ಉದಾಹರಣೆಗಳು ಇವೆ. ಒಮ್ಮೆ ವಿಷ್ಣುವರ್ಧನ್ ಸಿನಿಮಾ ಬಿಡುಗಡೆ ವೇಳೆ ಕೆಲವರು ದೊಡ್ಡ ಕಟೌಟ್ ಅನ್ನು ಬೀಳಿಸಲು ಪ್ರಯತ್ನಿಸಿದ್ದರಂತೆ. ಆಗ ಇನ್ನು ಬಾಲಕರಾಗಿದ್ದ ನಟ ಪ್ರೇಮ್ ಅದನ್ನು ತಡೆಯಲು ಪ್ರಯತ್ನಿಸಿದ್ದರಂತೆ. ಹಿಂದೆ ಕಾರ್ಯಕ್ರಮವೊಂದರಲ್ಲಿ ಖುದ್ದು ನಟ ಪ್ರೇಮ್ ಈ ವಿಚಾರ ಹೇಳಿಕೊಂಡಿದ್ದರು.

"ನಾನು ಹುಟ್ಟಿ ಬೆಳೆದಿದ್ದು ಸಂಪಂಗಿ ರಾಮನಗರ. ನಮ್ಮ ಏರಿಯಾದಲ್ಲಿ ಪಲ್ಲವಿ ಥಿಯೇಟರ್ ಇತ್ತು. ವಿಷ್ಣು ಸರ್ ಯಾವುದೇ ಸಿನಿಮಾ ಬಿಡುಗಡೆ ಆದರೂ ಆ ಚಿತ್ರಮಂದಿರದಲ್ಲಿ ಹಾಕುತ್ತಿದ್ದರು. ಆಗ 'ಕಲ್ಲು ವೀಣೆ ನುಡಿಯಿತು' ಎನ್ನುವ ಸಿನಿಮಾ ಬಿಡುಗಡೆ ಆಗಿತ್ತು. ಆಗ 100 ಅಡಿ ಕಟೌಟ್ ಹಾಕಿದ್ದರು. ಆಗ ಪೈಪೋಟಿ ಹೇಗಿತ್ತು ಎಂದು ನಿಮಗೆ ಗೊತ್ತು. ಆ ಕಟೌಟ್ನ ಹೊಡಿಬೇಕು ಅಂತ ಒಂದಷ್ಟು ಜನ ಗುಂಪು ಕಟ್ಟಿಕೊಂಡು ಇರುತ್ತಿದ್ದರು." ಎಂದು ಆ ಘಟನೆಯನ್ನು ಪ್ರಸ್ತಾಪಿಸಿದ್ದರು.
"ಆಗ ನಾನು ಇನ್ನು ಚಿಕ್ಕ ಹುಡುಗ. 7 ತರಗತಿಯಲ್ಲಿ ಓದುತ್ತಿದ್ದೆ. 'ಚೌಕ' ಚಿತ್ರದಲ್ಲಿ ಬಾಯಿಯಿಂದ ಬ್ಲೇಡ್ ತೆಗೆದು ಡೈಲಾಗ್ ಹೊಡಿತ್ತೀನಿ. ಅವತ್ತು ಪೊಲೀಸರ ಕಣ್ತಪ್ಪಿಸಿ ನಾಲಿಗೆ ಕೆಳಗೆ ಬ್ಲೇಡ್ ಇಟ್ಟುಕೊಂಡು ವಿಷ್ಣು ಸರ್ ಕಟೌಟ್ಗೆ ಅಡ್ಡ ನಿಂತಿದ್ದೆ. ಬನ್ರೋ ಯಾವನ್ ಬರ್ತಿರೋ ಲೇ ಅಂತ. ನನ್ನ ಮೈಯಲ್ಲೇ ಮುಕ್ಕಾಲು ಕೆಜಿ ಮಾಂಸ ಇರಲಿಲ್ಲ. ಆದರೆ ಅಭಿಮಾನ ಎನ್ನುವುದು ಅವತ್ತಿನಿಂದಲೇ ಬಂದಿತ್ತು" ಎಂದಿದ್ದರು.
"ಒಂದೇ ಗುರಿ ಎನ್ನುವ ಸಿನಿಮಾ ಪೋಸ್ಟರ್ ಅನ್ನು ನಾನು ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದೆ. ಟೀಸರ್ ಬೋರ್ಡ್ ಮೇಲೆ ಬರೆಯುತ್ತಿದ್ದರೆ ಪಕ್ಕ ಗೋಡೆಯಲ್ಲಿ ಮೊಳೆ ಒಡೆದು 'ಒಂದೇ ಗುರಿ' ಪೋಸ್ಟರ್ ಹಾಕಿದ್ದೆ. ಟೀಚರ್ಸ್ ಹೆಚ್ಎಂಗೆ ಕಂಪ್ಲೇಟ್ ಮಾಡಿ ಅವ್ರು ನಮ್ಮ ಪೋಷಕರನ್ನು ಕರೆಸಿದ್ದರು. ಆ ರೀತಿ ವಿಷ್ಣುವರ್ಧನ್ ಸರ್ ಮೇಲೆ ಅಭಿಮಾನ ಇತ್ತು"

"ಚಿತ್ರರಂಗಕ್ಕೆ ಬಂದಮೇಲೆ ವಿಷ್ಣು ಸರ್ನ ಮಾತಾಡಿಸಬೇಕು ಎಂದುಕೊಂಡೆ. ಒಮ್ಮೆ ಸಾಂಗ್ ಪ್ರಾಸ್ಟೀಸ್ ಮಾಡಬೇಕಾದರೆ ಹಿಂದೆಯಿಂದ ಬಂದು ಭುಜದ ಮೇಲೆ ಕೈ ಹಾಕಿ ಮಾತನಾಡಿದ್ದರು. ನಿನ್ನ ಬಗ್ಗೆ ಭಾರತಿ ಬಹಳ ಹೇಳುತ್ತಿರುತ್ತಾಳೆ. ಆ ಹುಡುಗ ಬಹಳ ಚೆನ್ನಾಗಿದ್ದಾನೆ. ಅವನ ಹಾಡು ನೋಡಿ ಎಂದು ತೋರಿಸುತ್ತಾಳೆ. ತುಂನಾ ಸುಂದರವಾಗಿದ್ದೀಯಾ ಮರಿ, ಒಳ್ಳೆ ನಟನಾಗುತ್ತೀಯಾ ಎಂದು ಆರ್ಶಿವದಿಸಿದ್ದಾಗಿ" ಎಂದು ವಿಷ್ಣುವರ್ಧನ್ ಹೇಳಿದ್ದಾಗಿ ನೆನಪಿಸಿಕೊಂಡಿದ್ದರು.
"ನಮ್ಮ ಅತ್ತೆ ನಿಮ್ಮ ಅಭಿಮಾನಿ ಎಂದು ಹೇಳಿದ್ದೆ. ಒಮ್ಮೆ ಖುದ್ದು ವಿಷ್ಣು ಸರ್ ಕರೆ ಮಾಡಿ ನಮ್ಮ ಅತ್ತೆ ಜೊತೆ ಬಹಳ ಹೊತ್ತು ಮಾತನಾಡಿದ್ದರು. ಕೊನಿಕಾ ಸಮೀಕ್ಷೆಯಲ್ಲಿ ವಿಷ್ಣುವರ್ಧನ್ ಹೆಸರು ದಾಖಲಾಗಿತ್ತು. ಭಾರತೀಯ ಚಿತ್ರರಂಗದಲ್ಲಿ ಕ್ಯಾಮರಾವನ್ನು ಯಾವುದೇ ಕೋನದಲ್ಲಿ ಇಟ್ಟರೂ ಸುಂದರವಾಗಿ ಕಾಣುವ ನಟ ವಿಷ್ಣುವರ್ಧನ್ ಎಂದು ದಾಖಲಾಗಿದೆ" ಎಂದು ನಟ ಪ್ರೇಮ್ ವಿವರಿಸಿದ್ದರು.


Click it and Unblock the Notifications











