"ನಮ್ ಹೆಂಡ್ತೀನ ಕೇಳಿ, ನನ್ನ ಒಡಹುಟ್ಟಿದ ಅಕ್ಕ ಬೈದ್ಬಿಟ್ಲು"; ದರ್ಶನ್ ವಿಡಿಯೋ ವೈರಲ್
ಸೋಶೀಯಲ್ ಮೀಡಿಯಾದಲ್ಲಿ ಹಳೇ ವಿಡಿಯೋಗಳು ವೈರಲ್ ಆಗುವುದು ಸಾಮಾನ್ಯ. ಆದರೆ ಸ್ಟಾರ್ ನಟರು ಯಾವುದೋ ಸಂದರ್ಭದಲ್ಲಿ ಮಾತನಾಡಿದ ಮಾತುಗಳು ಇದ್ದಕ್ಕಿದಂತೆ ಟ್ರೆಂಡ್ ಆಗಿಬಿಡುತ್ತವೆ. ನಟ ದರ್ಶನ್ ತಮ್ಮ ಸಹೋದರಿ ಬಗ್ಗೆ ಮಾತನಾಡಿರುವ ಹಳೇ ವೀಡಿಯೋ ವೈರಲ್ ಆಗುತ್ತಿದೆ.
ದರ್ಶನ್ ನಟನೆಯ 'ನವಗ್ರಹ' ಸಿನಿಮಾ ಇದೇ ಶುಕ್ರವಾರ ರೀ-ರಿಲೀಸ್ ಆಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಇಂತಹ ಸಮಯದಲ್ಲಿ ಸಿನಿಮಾ ಬರ್ತಿರುವುದು ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿದೆ. ದಿನಕರ್ ತೂಗುದೀಪ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ನವಗ್ರಹ' ಮತ್ತೆ ತೆರೆಗೆ ಬರ್ತಿದೆ.

ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳನ್ನು ಒಟ್ಟಿಗೆ ಸೇರಿಸಿ ದರ್ಶನ್ 'ನವಗ್ರಹ' ಚಿತ್ರ ಮಾಡಿದ್ದರು. ತಾವೇ ಸ್ವತಃ ಸಿನಿಮಾ ನಿರ್ಮಿಸಿದ್ದರು. ಚಿತ್ರದಲ್ಲಿ ಜಗ್ಗು ಆಗಿ ಖಡಕ್ ಲುಕ್ನಲ್ಲಿ ದರ್ಶನ್ ಅಬ್ಬರಿಸಿದ್ದರು. ಅದರಲ್ಲೂ ವಿಲನಿಸಂ ತೋರಿಸಿ ಅಭಿಮಾನಿಗಳ ಮನಗೆದ್ದಿದ್ದರು. ಮತ್ತೊಮ್ಮೆ ಮಹಾನ್ ಕಲಾವಿದ ಜಗ್ಗುನ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.
ಚಿತ್ರದಲ್ಲಿ ದರ್ಶನ್ ಜೊತೆಗೆ ಟೈಗರ್ ಪ್ರಭಾಕರ್ ಮಗ ವಿನೋದ್, ಲೋಕೇಶ್ ಮಗ ಸೃಜನ್, ಸುಂದರ್ ಕೃಷ್ಣ ಅರಸ್ ಮಗ ನಾಗೇಂದ್ರ, ದಿನೇಶ್ ಮಗ ಗಿರಿ, ಸುಧೀರ್ ಮಗ ತರುಣ್, ಕೀರ್ತಿರಾಜ್ ಮಗ ಧರ್ಮ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲೇ ಇದು ವಿನೂತನ ಪ್ರಯತ್ನ ಆಗಿತ್ತು. ಸಿನಿಮಾ ತೆರೆಗೆ ಬಂದು 16 ವರ್ಷ ಪೂರೈಸಿದ ಸಮಯದಲ್ಲೇ ರೀ-ರಿಲೀಸ್ ಆಗುತ್ತಿದೆ.
ಮೈಸೂರು ಅರಮನೆ ಅಂಬಾರಿ ಮೇಲೆ 9 ಜನ ಕಳ್ಳರು ಕಣ್ಣಾಕುವುದು. ಅದನ್ನು ಕದಿಯುವುದು. ಕೊನೆಗೆ ಮಾರಿ ಹಣ ಪಡೆಯುವ ಹಂತದಲ್ಲಿ ತಮ್ಮ ತಮ್ಮಲೇ ಹಣಕ್ಕಾಗಿ ಕಚ್ಚಾಡುವುದು, ಜಗ್ಗು ಅಂತೂ ಎಲ್ಲರನ್ನೂ ಕೊಂದು ಸಂಪೂರ್ಣ ಹಣವನ್ನು ತಾನೊಬ್ಬನೇ ಲಪಟಾಯಿಸಬೇಕು ಎಂಬ ದುರಾಸೆಗೆ ಬೀಳುವುದು, ಅಷ್ಟರಲ್ಲಿ ಪೊಲೀಸರು ಬಂದು ಅಂಬಾರಿಯನ್ನು ವಶಪಡಿಸಿಕೊಳ್ಳುವ ಕಥೆ ಚಿತ್ರದಲ್ಲಿದೆ.
ಆರಂಭದಲ್ಲಿ ಹಣಕ್ಕಾಗಿ ಪ್ರೀತಿಸಿದ ಹುಡುಗಿಗಾಗಿ ಜಗ್ಗು & ಗ್ಯಾಂಗ್ ಜೊತೆ ಕೈ ಜೋಡಿಸುವ ವಿಕ್ಕಿಗೆ ಬಳಿಕ ತಪ್ಪಿನ ಅರಿವಾಗುತ್ತದೆ. ಕೊನೆಗೆ ಪೊಲೀಸರಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಆಗ ಜಗ್ಗು ಕೈಯಲ್ಲಿ ಒದೆ ತಿನ್ನುತ್ತಾನೆ. ಇದೇ ಸನ್ನಿವೇಶದಲ್ಲಿ ದರ್ಶನ್ ವಿಲನಿಸಂ ನಟನೆ ನೋಡಿ ಸ್ವತಃ ಒಡಹುಟ್ಟಿದ ಅಕ್ಕ ಬೈದಿದ್ದರಂತೆ. ಹಳೇ ಸಂದರ್ಶನವೊಂದರಲ್ಲಿ ದರ್ಶನ್ ಈ ಬಗ್ಗೆ ಮಾತನಾಡಿದ್ದರು. ಆ ವೀಡಿಯೋ ಈಗ ವೈರಲ್ ಆಗುತ್ತಿದೆ.
"ನನ್ನ ಹೆಂಡ್ತಿನ ಕೇಳಿ, ನನ್ನ ಜೊತೆ ಒಡಹುಟ್ಟಿದ ಅಕ್ಕ ನನ್ನನ್ನು ಬೈದುಬಿಟ್ಲು, ಆಕೆ ಸಿನಿಮಾ ನೋಡುತ್ತಿದ್ಲು. ಕೊನೆಯಲ್ಲಿ ಧರ್ಮ ಕೀರ್ತಿರಾಜ್ ಕಡೆ ನಾನು ತಿರುಗಿ ನೋಡುವ ಸೀನ್ ಇದೆ. ಅದನ್ನು ನೋಡಿ ನಮ್ಮ ಅಕ್ಕ ಎಷ್ಟು ಬೈದ್ಲು ಅಂದ್ರೆ, ನೀನು ಮನುಷ್ಯನಾ? ಏನು ಹಂಗೆ ಲುಕ್ ಕೊಟ್ಟಿದ್ದೀಯಾ ಅಂದ್ಲು. ಆಗ ನಾನು ನಿನಗೆ ಆ ರೀತಿ ಅನ್ನಿಸಿದೆ ಅಂದ್ರೆ, ನಾನು ಗೆದ್ದಂಗೆ ಎಂದುಕೊಂಡಿದ್ದೆ" ಎಂದು ದರ್ಶನ್ ಹೇಳಿದ್ದರು.
'ನವಗ್ರಹ' ರೀ-ರಿಲೀಸ್ ಸಂಭ್ರಮಾಚರಣೆಗೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ನರ್ತಕಿ ಹಾಗೂ ಪ್ರಸನ್ನ ಚಿತ್ರಮಂದಿರಗಳಲ್ಲಿ ಸಂಭ್ರಮಾರಣೆ ಕೊಂಚ ಜೋರಾಗಿ ಇರಲಿದೆ. ಚಿತ್ರತಂಡ ಕೂಡ ಪ್ರಚಾರ ನಡೆಸುತ್ತಿದೆ. ಸಿನಿಮಾ ಸೀಕ್ವೆಲ್ ಮಾಡುವಂತೆ ಅಭಿಮಾನಿಗಳು ಕೇಳುತ್ತಿದ್ದಾರೆ.
ದರ್ಶನ್ ನಟನೆಯ 'ಶಾಸ್ತ್ರಿ' ಹಾಗೂ 'ಕರಿಯ' ಚಿತ್ರಗಳು ಕೆಲ ದಿನಗಳ ಹಿಂದೆ ರೀ-ರಿಲೀಸ್ ಆಗಿತ್ತು. ಅಭಿಮಾನಿಗಳು ಸಿನಿಮಾ ನೋಡಿ ಖುಷಿಪಟ್ಟಿದ್ದರು. ಇದೀಗ ಅವರು ಬಹಳ ದಿನಗಳಿಂದ ಕೇಳುತ್ತಿದ್ದ 'ನವಗ್ರಹ' ಸಿನಿಮಾ ಮತ್ತೆ ತೆರೆಗೆ ಬರ್ತಿದ್ದು ಸಂತಸ ಮುಗಿಲು ಮುಟ್ಟಿದೆ.


Click it and Unblock the Notifications











