"ಲಂಗಾ ಮೇಲೆತ್ತಿ ನನ್ನ ತೊಡೆ ಚೆನ್ನಾಗಿದ್ಯಾ ನೋಡಿ" ಎಂದು ಕೇಳಿದ್ದ ಜ್ಯೂಲಿ ಲಕ್ಷ್ಮಿ
ಮದ್ರಾಸಿನಲ್ಲಿ ಹುಟ್ಟಿ ಬೆಳೆದರೂ ಕನ್ನಡ ಸಿನಿರಸಿಕರಿಗೆ ಬಹಳ ಆಪ್ತರಾದವರು, ಕನ್ನಡ ನಟಿಯೇ ಆಗಿಬಿಟ್ಟವರು ಜ್ಯೂಲಿ ಲಕ್ಷ್ಮಿ. 600ಕ್ಕೂ ಅಧಿಕ ಸಿನಿಮಾಗಳಲ್ಲಿ ಪಂಚಭಾಷೆ ತಾರೆಯಾಗಿ ಮೋಡಿ ಮಾಡಿದವರು. 60-70ರ ದಶಕದಲ್ಲೇ ಸ್ವಿಮ್ ಸೂಟ್ ತೊಡಲು ಹಿಂದೇಟು ಹಾಕಿರಲಿಲ್ಲ. ಅಷ್ಟರ ಮಟ್ಟಿಗೆ ಬಹಳ ಬೋಲ್ಡ್ ನಟಿ ಎಂದೇ ಖ್ಯಾತರಾಗಿದ್ದರು.
5 ದಶಕಗಳಿಂದ ನಟಿ ಲಕ್ಷ್ಮಿ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಆರಂಭದಲ್ಲಿ ನಾಯಕಿಯಾಗಿ ಮಿಂಚಿದ ಆಕೆ ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದರು. ಡಾ. ರಾಜ್ಕುಮಾರ್, ಶಿವಾಜಿ ಗಣೇಶನ್, ಎನ್ಟಿಆರ್, ಎಎನ್ಆರ್, ವಿಷ್ಣುವರ್ಧನ್ ರೀತಿಯ ದಿಗ್ಗಜ ನಟರೊಂದಿಗೆ ಲಕ್ಷ್ಮಿ ನಾಯಕಿಯಾಗಿ ಮಿಂಚಿದವರು. ಸ್ಟಾರ್ ನಟರ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಗುರ್ತಿಸಿಕೊಂಡರು.

ಕಳೆದ ವರ್ಷ ಬಂದ ತೆಲುಗಿನ 'ಖುಷಿ' ಚಿತ್ರದಲ್ಲಿ ಜ್ಯೂಲಿ ಲಕ್ಷ್ಮಿ ನಟಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಕೂಡ ಲಕ್ಷ್ಮಿ ಗಮನ ಸೆಳೆದರು. 'ಡ್ರಾಮಾ ಜ್ಯೂನಿಯರ್ಸ್' ಶೋ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಅಂದಹಾಗೆ ಕನ್ನಡದ 'ಗೋವಾದಲ್ಲಿ CID 999' ಚಿತ್ರದ ಮೂಲಕ ಆಕೆ ಬಣ್ಣದ ಲೋಕ ಪ್ರವೇಶಿಸಿದ್ದರು. 1968ರಲ್ಲಿ ಬಂದಿದ್ದ ಅಣ್ಣಾವ್ರ ಬಾಂಡ್ ಶೈಲಿಯ ಸಿನಿಮಾ ಅದು.
ಲಾಯರ್ ಆಗಬೇಕು ಎಂದುಕೊಂಡಿದ್ದ ಲಕ್ಷ್ಮಿ ಬಳಿಕ ಸಿನಿಮಾಗಳಲ್ಲಿ ನಟಿಸೋಕೆ ಮನಸ್ಸು ಮಾಡಿದ್ದರು. ತಾಯಿಯ ಪ್ರೋತ್ಸಾಹದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅದಾಗಲೇ ತಮಿಳಿನ ಒಂದು ಚಿತ್ರದಲ್ಲಿ ಬಣ್ಣ ಹಚ್ಚಿ ಒಂದು ವಾರ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಲಕ್ಷ್ಮಿ ನಿರ್ದೇಶಕ ಭಗವಾನ್ ಕಣ್ಣಿಗೆ ಬಿದ್ದಿದ್ದರು. ಆಗಲೇ 'ಗೋವಾದಲ್ಲಿ CID 999' ಚಿತ್ರಕ್ಕೆ ಆಯ್ಕೆ ಮಾಡಲು ಮುಂದಾದರು.

ಲಕ್ಷ್ಮಿ ಅವರನ್ನು ಮೊಲದ ಬಾರಿ ಅವರ ಮನೆಗೆ ಹೋಗಿ ನೋಡಿದ್ದು, ತಮ್ಮ ಚಿತ್ರದಲ್ಲಿ ನಟಿಸುವಂತೆ ಕೇಳಿದ್ದರ ಬಗ್ಗೆ ನಿರ್ದೇಶಕ ಭಗವಾನ್ 'ಕನ್ನಡ ಮಾಣಿಕ್ಯ' ಯೂಟ್ಯೂಬ್ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು. "ಲಕ್ಷ್ಮಿ ಅವರನ್ನು ಹುಡುಕಿ ಮನೆಗೆ ಹೋದೆವು. ಅವರ ತಾಯಿ ಕಾನ್ವೆಂಟ್ಗೆ ಹೋಗಿದ್ದಾಳೆ ಬರ್ತಾಳೆ ಇರಿ ಅಂದ್ರು. ನಾವು ಕೂತಿದ್ದೆವು. 3 ಗಂಟೆ ವೇಳೆಗೆ ಸ್ಕೂಲ್ ಯೂನಿಫಾರ್ಮ್ನಲ್ಲೇ ಲಕ್ಷ್ಮಿ ಮನೆಗೆ ಬಂದಳು" ಎಂದು ಆ ದಿನ ನಡೆದ ಘಟನೆ ಮೆಲುಕು ಹಾಕಿದ್ದರು.
"ರಾಜ್ಕುಮಾರ್ ಸಿನಿಮಾದಲ್ಲಿ ನಟಿಸ್ತೀಯಾ ಎಂದು ಕೇಳಿದ ಕೂಡಲೇ ಖುಷಿಯಿಂದ ಒಪ್ಪಿಕೊಂಡಳು. ಇದು ಜೇಮ್ಸ್ ಬಾಂಡ್ ಫಿಲ್ಮ್. ಕೊಂಚ ಎಕ್ಸ್ಪೋಸ್ ಇರುತ್ತದೆ. ನೀನು ತಯಾರಿದ್ದರೆ ಮಾಡಬಹುದು ಎಂದೆ. ಸ್ವಿಮ್ ಸೂಟ್ ಹಾಕಬೇಕು, ಅದಕ್ಕೆ ಬಾಡಿ ತುಂಬಾ ಚೆನ್ನಾಗಿ ಇರಬೇಕು. ಕೈ, ಕಾಲು, ತೊಡೆ ಎಲ್ಲಾ ಚೆನ್ನಾಗಿರಬೇಕು, ಆಗ ಸ್ವಿಮ್ಸೂಟ್ ಹಾಕಲು ಚೆಂದ ಅಂದೆ. ಕೂಡಲೇ ಲಂಗಾ ಮೇಲಕ್ಕೆ ತೆಗೆದು ನನ್ನ ತೊಡೆ ಚೆನ್ನಾಗಿದ್ಯಾ? ನೋಡಿ ಎಂದಳು. ಅಷ್ಟು ಬೋಲ್ಡ್ ಲಕ್ಷ್ಮಿ" ಎಂದು ಭಗವಾನ್ ನೆನಪಿಸಿಕೊಂಡಿದ್ದರು.
ಅಂದು ಲಕ್ಷ್ಮಿ ಅವರ ಮನೆಯಿಂದ ಬರುವಾಗಲೇ ನನ್ನ ಜೊತೆಗಿದ್ದ ದೊರೆ ಹೇಳಿದ್ದರು, ಈ ಹುಡುಗಿಯನ್ನು ಬಿಡಬೇಡಿ, ಈಕೆ ದೊಡ್ಡ ನಟಿಯಾಗುತ್ತಾಳೆ, ಆಕೆಗೆ ಒಳ್ಳೆ ಭವಿಷ್ಯ ಇದೆ ಎಂದಿದ್ದರು. ದೊರೆ ಹೇಳಿದಂತೆಯೇ ಲಕ್ಷ್ಮಿ ದೊಡ್ಡದಾಗಿ ಬೆಳೆದರು. ಕೇಳಿದ ಕೂಡಲೇ ತೊಡೆ ತೋರಿಸಿ ಧೈರ್ಯ ತೋರಿದ್ದಳು. ಸಾಮಾನ್ಯವಾಗಿ ಸ್ವಿಮ್ಸೂಟ್ ಅಂದ್ರೆ ಮೂಗುಮುರಿಯುವವರೇ ಹೆಚ್ಚು. ಆದರೆ ಲಕ್ಷ್ಮಿ ಆ ರೀತಿ ಮಾಡಲಿಲ್ಲ, ಎಂದು ಭಗವಾನ್ ವಿವರಿಸಿದ್ದರು.
ವೀಕೆಂಡ್ ವಿತ್ ರಮೇಶ್ ಶೋಗೆ ಜ್ಯೂಲಿ ಲಕ್ಷ್ಮಿ ಅತಿಥಿಯಾಗಿ ಬಂದಾಗಲೂ ನಿರ್ದೇಶಕ ದೊರೆ ಭಗವಾನ್ ಆ ಘಟನೆಯನ್ನು ನೆನಪಿಸಿಕೊಂಡಿದ್ದರು. ಮುಂದೆ ದೊರೆ- ಭಾಗವಾನ್ ನಿರ್ದೇಶನದ 'ಚಂದನದ ಗೊಂಬೆ', 'ನಾನೊಬ್ಬ ಕಳ್ಳ', 'ಬೆಂಕಿಯ ಬಲೆ' ಸೇರಿದಂತೆ ಕೆಲ ಚಿತ್ರಗಳಲ್ಲಿ ಲಕ್ಷ್ಮಿ ನಟಿಸಿದ್ದರು.


Click it and Unblock the Notifications











