ಭಾವಪರವಶರಾಗಿ ಯುವ ಪತ್ರಕರ್ತೆಯ ಕಾಲಿಗೆ ಬಿದ್ದಿದ್ದ ಪುಟ್ಟಣ್ಣ; ಆ ಘಟನೆ ನೆನೆದ ಶಮಂತಾ
ಭಾರತೀಯ ಚಿತ್ರರಂಗ ಕಂಟ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನು ತೆರೆಗೆ ತಂದವರು. ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಜೈ ಜಗದೀಶ್, ಶ್ರೀಧರ್ ಸೇರಿದಂತೆ ಹಲವರಿಗೆ ತಮ್ಮ ಸಿನಿಮಾಗಳಲ್ಲಿ ಅದ್ಭುತ ಪಾತ್ರಗಳನ್ನು ಕೊಟ್ಟು ಗೆಲ್ಲಿಸಿದ್ದರು.
ಬಿ. ಆರ್ ಪಂತಲು ಗರಡಿಯಲ್ಲಿ ಬೆಳೆದ ಪುಟ್ಟಣ್ಣ ಮುಂದೆ ತಮ್ಮದೇ ಹೊಸ ಹಾದಿ ಸೃಷ್ಟಿಸಿಕೊಂಡರು. ಅದ್ಭುತ ಕಾದಂಬರಿಗಳಿಗೆ ದೃಶ್ಯರೂಪ ಕೊಟ್ಟಿದ್ದರು. ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕರಲ್ಲಿ ಮೊದಲ ಸಾಲಿನಲ್ಲಿ ಪುಟ್ಟಣ್ಣ ನಿಲ್ಲುತ್ತಾರೆ. ಅವರ ಬಗ್ಗೆ ಭಿನ್ನ ವಿಭಿನ್ನ ಅಭಿಪ್ರಾಯಗಳಿವೆ, ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳು ಅವರ ಜೀವನದಲ್ಲಿ ನಡೆದಿದೆ.

ಪುಟ್ಟಣ್ಣ ಬಹಳ ಮುಂಗೋಪಿ, ಕಲಾವಿದರು ಹೇಳಿದಂತೆ ನಟಿಸದಿದ್ದರೆ ಹೊಡೆಯುತ್ತಿದ್ದರು ಎನ್ನುವ ಮಾತುಗಳು ಆಗ ಕೇಳಿಬರುತ್ತಿತ್ತು. ಪುಟ್ಟಣ್ಣ ಕಣಗಾಲ್ ಸಿನಿಮಾದಲ್ಲಿ ನಟಿಸುವುದು ಎಂದರೆ ಹೇಗೆ ಅದ್ಭುತ ಅವಕಾಶ ಎಂದುಕೊಳ್ಳುತ್ತಿದ್ದರೋ ಅದೇ ರೀತಿ ಅವರ ನಿರ್ದೇಶನದಲ್ಲಿ ನಟಿಸೋಕೆ ಕೆಲವರು ಹೆದರುತ್ತಿದ್ದರು. ಕಾರಣ ಪುಟ್ಟಣ್ಣ ಹೇಳಿದ್ದೆ ಸೆಟ್ನಲ್ಲಿ ಅಂತಿಮ ಎನ್ನುವಂತಾಗಿತ್ತು. ಬಹಳ ನಿಷ್ಠುರವಾದಿಯಾಗಿದ್ದ ಅವರು ಅಷ್ಟು ಸುಲಭವಾಗಿ ಎಲ್ಲವನ್ನು ಒಪ್ಪುತ್ತಿರಲಿಲ್ಲ. ಅದೇನೆ ಇರಲಿ. ಪುಟ್ಟಣ್ಣ ಒಮ್ಮೆ ಯುವ ಪತ್ರಕರ್ತೆಯ ಕಾಲಿಗೆ ಬಿದ್ದಿದ್ದರು.
ಪತ್ರಕರ್ತೆ ಶಮಂತಾ ಒಮ್ಮೆ ಪುಟ್ಟಣ್ಣ ಕಣಗಾಲ್ ಅವರ ಸಂದರ್ಶನವನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಮುಂದಾಗಿದ್ದರು. ಅದಕ್ಕಾಗಿ ಅವರನ್ನು ಸಂಪರ್ಕಿಸಿ ಸಂದರ್ಶನ ನಡೆಸಲು ಸಮಯ ನಿಗದಿಪಡಿಸಿಕೊಂಡಿದ್ದರು. ಆ ದಿನ ಅವರ ಮನೆಗೆ ಹೋದಾಗ ಬಹುಶಃ ಪುಟ್ಟಣ್ಣ ಪೂಜೆ ಮಾಡುತ್ತಿದ್ದರು ಎನಿಸುತ್ತದೆ. ಶಮಂತಾ ಅವರು ಬಾಗಿಲು ತೆಗೆದು ಒಳಗೆ ಹೋಗುತ್ತಿದ್ದಂತೆ ದಿಢೀರ್ ಆಕೆಯ ಪಾದಕ್ಕೆರಗಿಬಿಟ್ಟಿದ್ದಾರೆ. ಇದರಿಂದ ವಿಚಲಿತರಾಗಿದ್ದ ಶಮಂತಾ ಅಲ್ಲಿಂದ ಸಂದರ್ಶನ ಮಾಡದೇ ಹೊರಟು ಬಂದಿದ್ದಾರೆ.

ಪುಟ್ಟಣ್ಣ ಏಕಾಏಕಿ ಪತ್ರಕರ್ತೆರ ಪಾದಕ್ಕೆರಗಿನ ಸುದ್ದಿ ಮರುವಾರ ಮ್ಯಾಗಜೀನ್ನಲ್ಲಿ ದೊಡ್ಡದಾಗಿ ಪ್ರಕಟವಾಗಿತ್ತು. ಆ ದಿನ ಏನೆಲ್ಲಾ ಆಯ್ತು ಎನ್ನುವುದನ್ನು ಸ್ವತಃ ಪತ್ರಕರ್ತೆ ಶಮಂತಾ ಇದೀಗ ವಿವರಿಸಿದ್ದಾರೆ. ಸಾರಥಿ ಕಮ್ಯೂನಿಕೇಷನ್ ಡೆವಲಪ್ಮೆಂಟ್ ಯೂಟ್ಯೂಬ್ ವಾಹಿನಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅವರ ಮಾತುಗಳನ್ನು ಅವರು ಹೇಳಿರುವಂತೆ ಮುಂದೆ ಓದಿ.
"'ಮಾನಸ ಸಹೋವರ' ಸಿನಿಮಾ ಆರಂಭಿಸುವ ಸಮಯದಲ್ಲಿ ಒಂದು ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿ ಬಳಿಕ ಪುಟ್ಟಣ್ಣ ಕಣಗಾಲ್ ಅವ್ರ ಸಂದರ್ಶನ ಬೇಕು ಎಂದು ಕೇಳಿದ್ದೆ. ಸರಿ ಎರಡು ದಿನ ಬಿಟ್ಟು ಬರೋಕೆ ಹೇಳಿದ್ರು. ಅವತ್ತು ಶುಕ್ರವಾರ. ಜಯನಗರ 7th ಬ್ಲಾಕ್ನಲ್ಲಿ ಅವ್ರ ಮನೆ ಇತ್ತು. ಅವ್ರು ಹೇಳಿದ ಸಮಯಕ್ಕಿಂತ 10 ನಿಮಿಷ ಬೇಗನೆ ಹೋಗಿದ್ದೆ. ಕೊಂಚ ಸಮಯ ಕೂರಲು ಹೇಳಿದ್ದರು. ಕೆಲ ಹೊತ್ತಿನ ಬಳಿಕ ಒಳಗೆ ಬರಲು ಹೇಳಿದ್ರು" ಎಂದು ಪತ್ರಕರ್ತೆ ಶಮಂತಾ ಆ ಘಟನೆ ನೆನಪು ಮಾಡಿಕೊಂಡಿದ್ದಾರೆ.
ಮನೆಯೊಳಗೆ ಹೋದೆ. ಬಲಭಾಗಕ್ಕೆ ದೇವರ ಮನೆ ಇತ್ತು. ದೀಪ ಹಚ್ಚಿ ಪೂಜೆ ಮಾಡಿದ್ದರು. ಇಕ್ಕಟ್ಟಾದ ಮನೆ. ನಾನು ಬಲಭಾಗದಿಂದ ಒಳಗೆ ಹೋದೆ. ಅವ್ರು ನನ್ನ ಎಡಕ್ಕೆ ಇದ್ದರು. ಅವ್ರು ಆರತಿ ಬೆಳಗಿ ದೇವರಿಗೆ ಪೂಜೆ ಮಾಡಿ ದಿಢೀರನೆ ನನ್ನ ಕಾಲಿಗೆ ಬಿದ್ದರು. "ಅಮ್ಮಾ ಭಗವತಿ ನನಗೆ ಆಶೀರ್ವಾದ ಮಾಡು" ಎಂದು ಬೇಡಿಕೊಂಡರು. ಆ ಕ್ಷಣನೆ ಏನು ಮಾಡಬೇಕು ಎಂದು ನನಗೆ ಗೊತ್ತಾಗಲೇ ಇಲ್ಲ. ಗಾಬರಿಯಾಗಿತ್ತು. ಅವ್ರು ಕಣ್ಣು ಮುಚ್ಚಿ ಮಂತ್ರ ಹೇಳುತ್ತಿದ್ದರು. ನಾನು ನಡುಗುತ್ತಾ ನಿಂತಿದ್ದೆ. ಬಳಿಕ ಎಲೆ ಅಡಿಕೆ ತಾಂಬೂಲ ಕೊಟ್ರು. ತಾಯಿ ಇದನ್ನು ಸ್ವೀಕರಿಸು ಎಂದರು. ಸಂದರ್ಶನಕ್ಕೆ ಹೋಗಿದ್ದ ನಾನು ನಿರೀಕ್ಷಿಸಿರಲಿಲ್ಲ" ಎಂದು ಶಮಂತಾ ವಿವರಿಸಿದ್ದಾರೆ.
ಪುಟ್ಟಣ್ಣ ಭಕ್ತಿಪರವಶರಾಗಿ ಬೇರೆಯದ್ದೇ ಲೋಕದಲ್ಲಿದ್ದರು. ಆ ಸಮಯದಲ್ಲಿ ಏನು ಮಾತನಾಡಬೇಕು ತಿಳಿಯಲಿಲ್ಲ. ಸಂದರ್ಶನ ಮಾಡಲು ಹೋಗಿದ್ದ ಸಂದರ್ಶನ ಸಿಗಲಿಲ್ಲ. ಈ ಘಟನೆ ನನಗೆ ಅಚ್ಚರಿ ಆತಂಕ ಎಲ್ಲ ತಂದಿತ್ತು. ಕೊಂಚಹೊತ್ತು ಕೂತು ಸುಧಾರಿಸಿಕೊಂಡು ಅಲ್ಲಿಂದ ಹೊರಟು ಬಂದುಬಿಟ್ಟೆ. ಮನೆಗೆ ಹೋಗಿ ನಡೆದ ಘಟನೆಯನ್ನು ಅಮ್ಮನಿಗೆ ಹೇಳಿದೆ. ಹೋಗಲಿ ಬಿಡು, ಅದ್ಕೆ ಒಬ್ಬೊಬ್ಬಳೇ ಎಲ್ಲೂ ಹೋಗಬೇಡ ಅನ್ನೋದು, ಪೂಜೆ ಎನಿಸುತ್ತೆ ಹೋಗಲಿ ಬಿಡು ಎಂದು ಸಮಾಧಾನ ಮಾಡಿದ್ರು. ಮರುದಿನ ನಾನು ಆಫೀಸ್ ಹೋಗಿದ್ದೆ" ಎಂದು ಮುಂದೆ ಏನಾಯ್ತು ಎಂದು ಮೆಲುಕು ಹಾಕಿದ್ದಾರೆ.
"ಗಣೇಶ್ ಕಾಸರಗೋಡು ಆಗ ನನ್ನ ಸಹೋದ್ಯೋಗಿ. ಪುಟ್ಟಣ್ಣ ಮನೆಯಲ್ಲಿ ನಡೆದ ಘಟನೆಯನ್ನು ಗಣೇಶನಿಗೆ ಹೇಳಿದೆ. ಎಳೆ ಎಳೆಯಾಗಿ ಬಿಡಿಸಿ ಹೇಳಿದೆ. ಬಳಿಕ ಇದೇ ಘಟನೆಯನ್ನು ಆರ್ಟಿಕಲ್ ಬರೆದು ಕೊಡುವಂತೆ ಗಣೇಶ್ ಹೇಳಿದರು. ನಾನು ಏನು ಬರೆಯೋದು? ನಾನು ಸಂದರ್ಶನ ಮಾಡಲೇ ಇಲ್ಲ ಎಂದೆ. ಇದೇ ವಿಚಾರವನ್ನು ಬರೆಯಲು ಹೇಳಿದರು. ಪುಟ್ಟಣ್ಣ ನನ್ನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಸಂಗತಿಯನ್ನು ಬರೆಯುವಂತೆ ಪಟ್ಟು ಹಿಡಿದ್ರು. ನನಗೆ ಏನು ಮಾಡಬೇಕು ಎಂದು ತೋಚದೇ ಇಡೀ ಘಟನೆಯನ್ನು ಬರೆದುಕೊಟ್ಟು ನಿರಾಳಲಾಗಿದ್ದೆ" ಶಮಂತಾ ತಿಳಿಸಿದ್ದಾರೆ.
ಬಳಿಕ ಮಾತು ಮುಂದುವರೆಸಿರುವ ಶಮಂತಾ "ಒಂದು ವಾರದ ಬಳಿಕ ಪತ್ರಿಕೆಯಲ್ಲಿ "ವರದಿಗಾರ್ತಿಯ ಕಾಲಿಗೆ ಬಿದ್ದ ಪುಟ್ಟಣ್ಣ" ಎಂದು ಆರ್ಟಿಕಲ್ ಪ್ರಕಟವಾಗಿತ್ತು. ನಾನು ಒಂದು ಕ್ಷಣ ಅವಕ್ಕಾಗಿದ್ದೆ. ಸಂಪೂರ್ಣ ವಿಚಾರವನ್ನು ಅದಡಲ್ಲಿ ಪ್ರಕಟಿಸಿದ್ದರು. ಇಂಡಸ್ಟ್ರಿಯಲ್ಲಿ ಅವತ್ತು ಅದೇ ಟಾಕ್. ಇವತ್ತಿಗೂ ಅದು ಬಿಗ್ ನ್ಯೂಸ್. ಆ ಬಳಿಕ ನಮ್ಮ ಎಡಿಟರ್ ಹೇಳಿದ್ರು. ಪುಟ್ಟಣ್ಣ, ಭಗವತಿ ಭಕ್ತರು. ಆರಾಧಾನೆ ಪೂಜೆ ಸಮಯದಲ್ಲಿ ಹೆಣ್ಣು ಮಗಳನ್ನು ನೋಡಿ ಕನ್ಯಾಪೂಜೆ ರೀತಿ ಏನಾದರೂ ಮಾಡಿರಬಹುದು. ಏನು ಸಮಸ್ಯೆ ಇಲ್ಲ. ಭಯ ಪಡಬೇಡಿ" ಎಂದು ಹೇಳಿದ್ದಾಗಿ ಶಮಂತಾ ವಿಶ್ಲೇಷಿಸಿದ್ದಾರೆ.
ಆ ಘಟನೆಯನ್ನು ಯಾವ ರೀತಿ ಬೇಕಾದರೂ ನೋಡಬಹುದು, ವಿಶ್ಲೇಷಿಸಬಹುದು. ಆ ದಿನ ಅವ್ರು ನನ್ನನ್ನು ದೇವಿ ರೀತಿ ಭಾವಿಸಿರಬಹುದು. ಅದಕ್ಕೆ ಆ ರೀತಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರಬಹುದು. ಅದು ನಮ್ಮ ಪತ್ರಿಕೆಗೆ ಎಕ್ಸ್ಕ್ಯೂಸ್ಲಿವ್ ಸುದ್ದಿ ಆಗಿತ್ತು ಎಂದು ಶಮಂತಾ ಹೇಳಿದ್ದಾರೆ. ಗಣೇಶ್ ಕಾಸರಗೋಡು ಅವರ ಸಲಹೆಯಂತೆ ತಮ್ಮ ಅನುಭವವನ್ನು ಇದೀಗ ಯೂಟ್ಯೂಬ್ ವಾಹಿನಿಯಲ್ಲಿ ಹಂಚಿಕೊಂಡಿರುವುದಾಗಿ ಶಮಂತಾ ಹೇಳಿಕೊಂಡಿದ್ದಾರೆ.
1933ರಲ್ಲಿ ಮೈಸೂರಿನ ಕಣಗಲ್ ಎಂಬಲ್ಲಿ ಜನಿಸಿ ಪುಟ್ಟಣ್ಣ ಟೀಚರ್, ಸೇಲ್ಸ್ಮನ್ ಹಾಗೂ ಕ್ಲೀನರ್ ಆಗಿ ಕೆಲಸ ಮಾಡಿದ್ದರು. ಸಿನಿಮಾ ಪ್ರಚಾರ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಿಂದ ಪುಟ್ಟಣ್ಣ ಚಿತ್ರರಂಗದತ್ತ ಮುಖ ಮಾಡುವಂತಾಗಿತ್ತು. ಪಂತಲು ಬಳಿ ಸಹಾಯಕರಾಗಿ ಸೇರಿಕೊಂಡಿದ್ದರು. ಮಲಯಾಳಂನಲ್ಲಿ ಮೊದಲು 'ಸ್ಕೂಲ್ ಮಾಸ್ಟರ್' ಎಂಬ ಚಿತ್ರ ನಿರ್ದೇಶನ ಮಾಡಿದ್ದರು. ಬಳಿಕ ಕನ್ನಡದ ಬೆಕ್ಕಿನ ಕಣ್ಣು ಕಾದಂಬರಿಯನ್ನು ಮಲಯಾಳಂನಲ್ಲಿ ಸಿನಿಮಾ ಮಾಡಿದ್ದರು.
ಕನ್ನಡದಲ್ಲಿ 'ಬೆಳ್ಳಿಮೋಡ' ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚೊಚ್ಚಲ ಸಿನಿಮಾ. ಮುಂದೆ 'ಗೆಜ್ಜೆಪೂಜೆ', 'ಶರಪಂಜರ', 'ನಾಗರಹಾವು' ರೀತಿಯ ಅದ್ಭುತ ಸಿನಿಮಾಗಳನ್ನು ಕಟ್ಟಿಕೊಟ್ಟಿದರು. ತಮಿಳು, ಹಿಂದಿ ಸಿನಿಮಾಗಳಿಗೂ ಆಕ್ಷನ್ ಕಟ್ ಹೇಳಿದ್ದರು. 'ನಾಗರಹಾವು' ಹಿಂದಿಗೆ ರೀಮೆಕ್ ಮಾಡಿದ್ದರು. 'ರಂಗನಾಯಕಿ', 'ಮಾನಸ ಸರೋವರ' ಪುಟ್ಟಣ್ಣ ಕಟ್ಟಿಕೊಟ್ಟ ಮತ್ತೆರಡು ಅದ್ಭುತ ಸಿನಿಮಾಗಳು. 'ಮಸಣದ ಹೂವು' ಹಾಗೂ 'ಸಾವಿರ ಮೆಟ್ಟಿಲು' ಪುಟ್ಟಣ್ಣ ಪೂರ್ಣಗೊಳಿಸದೇ ಬಿಟ್ಟು ಹೋಗಿದ್ದ ಸಿನಿಮಾಗಳು.


Click it and Unblock the Notifications











