ಡಾ. ರಾಜ್ ಕಾಲ್ಶೀಟ್ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ವಿಷ್ಣುಗೆ ಹತ್ತಿರವಾಗಿದ್ರಾ ದ್ವಾರಕೀಶ್?
ಖ್ಯಾತ ಹಾಸ್ಯನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಯೋಗಳನ್ನು ಮಾಡಿ 50ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಿಸಿ ಅವರು ಸೇವೆ ಸಲ್ಲಿಸಿದ್ದರು. ಡಾ. ರಾಜ್ಕುಮಾರ್, ರಜನಿಕಾಂತ್ , ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರೊಟ್ಟಿಗೆ ಸಿನಿಮಾಗಳನ್ನು ಮಾಡಿದ್ದರು.
'ಕಳ್ಳ-ಕುಳ್ಳ' ಸಿನಿಮಾದಿಂದ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ನಡುವೆ ಆತ್ಮೀಯ ಸ್ನೇಹ ಬೆಳೆದುಬಿಡ್ತು. ಬಳಿಕ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆಪ್ತಮಿತ್ರರಾಗಿ ಗುರ್ತಿಸಿಕೊಂಡಿದ್ದರು. ವಯಸ್ಸಿನಲ್ಲಿ ತಮಗಿಂತ 8 ವರ್ಷ ದೊಡ್ಡವರಾದರೂ ಹೋಗೋ ಬಾರೋ ಎಂದೇ ದ್ವಾರಕೀಶ್ ಅವರನ್ನು ವಿಷ್ಣು ಮಾತನಾಡಿಸುತ್ತಿದ್ದರು. ಆದರೆ ಬಳಿಕ ಸಾಕಷ್ಟು ಬಾರಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ಮತ್ತೆ ಒಂದಾದರೂ ಬಹಳ ದಿನ ಅದು ಮುಂದುವರೆಯುತ್ತಿರಲಿಲ್ಲ.

ಇದ್ದಕ್ಕಿದ್ದಂತೆ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ನಡುವೆ ಗಾಢ ಸ್ನೇಹ ಶುರುವಾಗಿದ್ದು ಹೇಗೆ? ಎನ್ನುವ ಬಗ್ಗೆ ಹಲವು ಬಾರಿ ದ್ವಾರಕೀಶ್ ಮಾತನಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸಂದರ್ಶನಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಅದೇನೋ ಗೊತ್ತಿಲ್ಲ ವಿಷ್ಣು ನನ್ನ ಹುಡುಗ, ನನ್ನ ಹೀರೋ, ನನ್ನವನು ಎಂದು ನನಗೆ ಅನ್ನಿಸಿಬಿಡ್ತು. ಆತನಿಗೂ ಅಷ್ಟೇ ಅದೇ ಭಾವನೆ ಬಂದಿತ್ತು. ಹಾಗಾಗಿ ಆತ್ಮೀಯ ಸ್ನೇಹಿತರಾಗಿದ್ದೆವು, ಒಟ್ಟಿಗೆ ಸಿನಿಮಾಗಳನ್ನು ಮಾಡಿದೆವು ಎಂದಿದ್ದರು.
ಇನ್ನು ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ನಡುವಿನ ಸ್ನೇಹದ ಬಗ್ಗೆ ಆಗ ಚಿತ್ರರಂಗದಲ್ಲಿ ಸಾಕಷ್ಟು ಊಹಾಪೋಹವಿತ್ತು. ಜಾತಿ ಕಾರಣಕ್ಕೆ ಇಬ್ಬರು ಒಂದಾಗಿದ್ದಾರೆ. ಅಣ್ಣಾವ್ರ ಕಾಲ್ಶೀಟ್ ಸಿಗದೇ ಹಿನ್ನೆಲೆಯಲ್ಲಿ ವಿಷ್ಣು ಜೊತೆ ದ್ವಾರಕೀಶ್ ಕೈ ಜೋಡಿಸಿದರು ಅಂತೆಲ್ಲಾ ಗುಸುಗುಸು ಕೇಳಿ ಬಂದಿತ್ತು. ಇತ್ತೀಚೆಗೆ ಪತ್ರಕರ್ತ ಬಿ. ಗಣಪತಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ದ್ವಾರ್ಕಿ ಸ್ಪಷ್ಟನೆ ನೀಡಿದ್ದರು.
ಜಾತಿ ಕಾರಣಕ್ಕೆ ನೀವಿಬ್ಬರು ಅಷ್ಟು ಆತ್ಮೀಯರಾಗಿಬಿಟ್ರಾ? ಎನ್ನುವ ಪ್ರಶ್ನೆಗೆ "ಕಂಡಿತ ಇಲ್ಲ. ಜಾತಿ ಎನ್ನುವ ವಿಚಾರ ನನಗೆ ಸಿನಿಮಾರಂಗದಲ್ಲಿ ಬಂದಿಲ್ಲ. ಜಾತಿ ಬಗ್ಗೆ ನಾನು ಎಂದು ಮಾತನಾಡಿದವನಲ್ಲ. ಜಾತಿ ಮಧ್ಯ ಬರಲು ಸಾಧ್ಯವಿಲ್ಲ. ಜಾತಿ ಪ್ರಕಾರ ನೋಡಿದವರೆ ಅವನು ಮಾಧ್ವ ಅಲ್ಲ, ಅವನು ಸಂಕೇತಿನೋ ಏನೋ ಇರಬೇಕು. ಬ್ರಾಹ್ಮಣರಲ್ಲೂ ಬೇರೆ ಬೇರೆ ವ್ಯತ್ಯಾಸಗಳಿವೆ. ಆತನ ಜಾತಿಪ್ರೇಮ ಇರಲಿಲ್ಲ ನನಗೆ"

"ವಿಷ್ಣು ಕಲಾವಿದನಾಗಿ ನನಗೆ ಇಷ್ಟ. ಅಣ್ಣಾವ್ರನ್ನು ಇಷ್ಟಪಟ್ಟಂತೆ ವಿಷ್ಣುನ ಇಷ್ಟಪಟ್ಟೆ. ಬಹಳ ಸ್ಪುರದ್ರೂಪಿ. ಚುರುಕು, ಯಾವುದೇ ಪಾತ್ರ ಕೊಟ್ಟರೂ ಚೆನ್ನಾಗಿ ಮಾಡುತ್ತಿದ್ದ. ಮುಖ್ಯವಾಗಿ ಸಕ್ಸಸ್ ಮುಖ್ಯ. ನಮ್ಮಿಬ್ಬರ ಕಾಂಬಿನೇಷನ್ ಸಕ್ಸಸ್ ಆಗಿತ್ತು. ಅದಕ್ಕೆ ಮಾಡುತ್ತಾ ಹೋದೆವು" ಎಂದಿದ್ದರು.
ಡಾ. ರಾಜ್ಕುಮಾರ್ ನಟನೆಯ 'ಮೇಯರ್ ಮುತ್ತಣ್ಣ' ಹಾಗೂ 'ಭಾಗ್ಯವಂತರು' ಚಿತ್ರಗಳನ್ನು ದ್ವಾರಕೀಶ್ ನಿರ್ಮಿಸಿ ಗೆದ್ದಿದ್ದರು. ಬಳಿಕ ಅಣ್ಣಾವ್ರ ಜೊತೆ ಸಿನಿಮಾ ಮಾಡಲಿಲ್ಲ. ಅಷ್ಟರಲ್ಲಾಗಲೇ ವಿಷ್ಣು ಜೊತೆ ಸಿನಿಮಾ ಮಾಡಲು ಆರಂಭಿಸಿ ಗೆದ್ದಿದ್ದರು. ಇದನ್ನು ನೋಡಿ ಅಣ್ಣಾವ್ರ ಕಾಲ್ಶೀಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ವಿಷ್ಣು ಜೊತೆ ದ್ವಾರಕೀಶ್ ಹೆಚ್ಚು ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆಯೂ ಆ ಸಂದರ್ಶನದಲ್ಲಿ ದ್ವಾರಕೀಶ್ ಮಾತನಾಡಿದ್ದರು.
"ಆ ರೀತಿ ಏನು ಇಲ್ಲ. ನನಗೆ ಆ ಸಮಯದಲ್ಲಿ ಒಬ್ಬ ಹೀರೊ ಬೇಕಿತ್ತು. ಅಷ್ಟೊತ್ತಿಗೆ ರಾಜ್ಕುಮಾರ್ ತಮ್ಮದೇ ಹೋಂ ಬ್ಯಾನರ್ ಆರಂಭಿಸಿದ್ದರು. ಬೇರೆ ಕಂಪನಿಗಳಲ್ಲಿ ಸಿನಿಮಾ ಮಾಡುವುದು ಬೇಡ ಎಂದು ನಿರ್ಧರಿಸಿದ್ದರು. ವಜ್ರೇಶ್ವರಿ ದೊಡ್ಡ ಸಂಸ್ಥೆಯಾಯಿತು. ಅವರೇ ನಿರ್ಮಾಪಕರಾದ ಮೇಲೆ ರಾಜ್ಕುಮಾರ್ ಡೇಟ್ಸ್ ಯಾರಿಗೂ ಸಿಗುತ್ತಿರಲಿಲ್ಲ. ನನಗೆ ಹೀರೊ ಬೇಕಿತ್ತು. ನಾನು ಒಬ್ಬ ಹೀರೊ ಹುಡುಕಬೇಕಿತ್ತು. ವಿಷ್ಣು ಸಿಕ್ಕಿದ ಸಿನಿಮಾ ಮಾಡ್ದೆ. ಬಳಿಕ ಶಂಕರ್ ನಾಗ್ ಜೊತೆ ಸಿನಿಮಾ ಮಾಡಿದೆ" ಎಂದು ವಿವರಿಸಿದ್ದರು.


Click it and Unblock the Notifications











