'ಗಂಧದಗುಡಿ' ಕ್ಲೈಮ್ಯಾಕ್ಸ್ ಚಿತ್ರೀಕರಣ ಅವಘಡ ವಿವಾದ; ಘಟನೆ ವಿವರಿಸಿದ್ದರು ಎಂ. ಪಿ ಶಂಕರ್
'ಗಂಧದಗುಡಿ' ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾ. ಡಾ. ರಾಜ್ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಈ ಸಿನಿಮಾ ಬಂದೋಗಿ 5 ದಶಕಗಳೇ ಕಳೆದಿದೆ. ಆ ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕರು ಇಂದು ನಮ್ಮೊಂದಿಗಿಲ್ಲ. ಆದರೆ ಆ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ನಡೆದ ಅವಘಡ, ಬಳಿಕ ಆದ ವಿವಾದವನ್ನು ಕನ್ನಡ ಸಿನಿರಸಿಕರು ಇಂದಿಗೂ ಮರೆತ್ತಿಲ್ಲ.
ವಿಜಯ್ ನಿರ್ದೇಶನದ 'ಗಂಧದಗುಡಿ' ಚಿತ್ರದಲ್ಲಿ ಅಣ್ಣಾವ್ರು(ಕುಮಾರ್) ಹಾಗೂ ವಿಷ್ಣುವರ್ಧನ್(ಆನಂದ್)ಸಹೋದರರಾಗಿ ನಟಿಸಿದ್ದರು. ಆದರೆ ಕ್ಲೈಮ್ಯಾಕ್ಸ್ವರೆಗೆ ಈ ವಿಚಾರ ಇಬ್ಬರಿಗೂ ಗೊತ್ತಿರಲ್ಲ. ಆದರೆ ಚಿತ್ರೀಕರಣದ ವೇಳೆ ಬಂದೂಕಿನಿಂದ ಗುಂಡು ಹಾರಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ವಿಷ್ಣುವರ್ಧನ್ ಮೇಲೆ ಅಪವಾದ ಬಂದು ದೊಡ್ಡ ವಿವಾದವೇ ಆಗಿಬಿಟ್ಟಿತ್ತು. ಇದು ಇಬ್ಬರ ಅಭಿಮಾನಿಗಳ ನಡುವಿನ ವೈಮನಸ್ಸಿಗೂ ಕಾರಣವಾಗಿಬಿಡ್ತು.

ಅಭಿಮಾನಿಗಳಲ್ಲಿ ಡಾ. ರಾಜ್ ಹಾಗೂ ವಿಷ್ಣು ಶತ್ರುಗಳು ಎನ್ನುವಂತೆ ಬಿಂಬಿಸಲಾಗಿತ್ತು. ಆದರೆ ಅಂದು 'ಗಂಧದಗುಡಿ' ಚಿತ್ರೀಕರಣದ ವೇಳೆ ಆಗಿದ್ದೇನು? ಎನ್ನುವ ಬಗ್ಗೆ ಡಾ. ರಾಜ್ಕುಮಾರ್ ಆಗಲಿ, ವಿಷ್ಣುವರ್ಧನ್ ಆಗಲಿ ಕೊನೆಯವರೆಗೂ ಬಹಿರಂಗವಾಗಿ ಮಾತನಾಡಲೇಯಿಲ್ಲ. ಇದು ಆಡಿಕೊಳ್ಳುವವರಿಗೆ ಮತ್ತಷ್ಟು ಪುಷ್ಠಿ ನೀಡುವಂತಾಗಿತ್ತು. ಅಷ್ಟಕ್ಕೂ ಅಂದು ಏನಾಯ್ತು? ಎನ್ನುವ ಬಗ್ಗೆ ಒಬ್ಬೊಬ್ಬರು ಒಂದು ಕಥೆ ಹೇಳುತ್ತಾರೆ. ಇದರಲ್ಲಿ ನಿಜಕ್ಕಿಂತ ಸುಳ್ಳು ಸೇರಿ ಅದು ಭಾರೀ ವಿವಾದಕ್ಕೆ ಕಾರಣವಾಯಿತು ಎಂದರೆ ತಪ್ಪಾಗಲ್ಲ.
ಅಷ್ಟಕ್ಕೂ ಅಂದು ಕಾಕನಕೋಟೆಯ ಮಸಾಲೆ ಬೆಟ್ಟದಲ್ಲಿ 'ಗಂಧದಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಆಗಿದ್ದೇನು? ಎನ್ನುವ ವಿಚಾರದ ಬಗ್ಗೆ ಖುದ್ದು ನಟ, ನಿರ್ಮಾಪಕ ಎಂ. ಪಿ ಶಂಕರ್ ಹಳೇ ಸಂದರ್ಶನದಲ್ಲಿ ಮಾತನಾಡಿದ್ದರು. ಸಾಹಿತಿ ಜಯಂತ್ ಕಾಯ್ಕಿಣಿ ನಿರೂಪಣೆಯಲ್ಲಿ ಆ ಸಂದರ್ಶನ ನಡೆದಿತ್ತು. ಡಾ. ರಾಜ್ಕುಮಾರ್ ಜೊತೆಗಿನ ಒಡನಾಟ ಎಂ. ಪಿ ಶಂಕರ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ 'ಗಂಧದಗುಡಿ' ಕ್ಲೈಮ್ಯಾಕ್ಸ್ ಚಿತ್ರೀಕರಣ ಸಮಯದಲ್ಲಿ ನಡೆದ ಅವಘಡದ ಬಗ್ಗೆಯೂ ನೆನಪಿಸಿಕೊಂಡಿದ್ದರು.
"ಇವತ್ತಿಗೂ ಆ ಸನ್ನಿವೇಶ ನೆನಪಿಸಿಕೊಂಡರೆ ಮೈ ಜುಮ್ ಎನಿಸುತ್ತದೆ. ಚಿತ್ರೀಕರಣಕ್ಕೆ ಇಡೀ ಚಿತ್ರತಂಡ ಬೆಳಗ್ಗೆ ಹೋಗಿತ್ತು. ನಾನು ಅಣ್ಣಾವ್ರನ್ನು ನನ್ನ ಜೀಪ್ನಲ್ಲಿ ಮಧ್ಯಾಹ್ನ 11 ಗಂಟೆಗೆ ವೇಳೆಗೆ ಕರೆದುಕೊಂಡು ಹೋದೆ. ಅವರಿಗೂ ನನ್ನೊಟ್ಟಿಗೆ ಜೀಪ್ನಲ್ಲಿ ಬರೋದು ಅಂದ್ರೆ ಖುಷಿ. ನಾವು ಸ್ಥಳಕ್ಕೆ ಹೋದಾಗ ಚಿತ್ರೀಕರಣ ಸರಿಯಾಗಿ ನಡೆಯದೇ ಇಲ್ಲರೂ ತಮಾಷೆಯಾಗಿ ಮಾತನಾಡುತ್ತಾ ಕೂತಿದ್ದರು" ಎಂದು ಆ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.

ಅಂದು ಆಗಿದ್ದೇನು?
"ನಾವು ಹೋಗುವ ವೇಳೆ ಆನೆ ಅಟ್ಟಿಸಿಕೊಂಡು ಬಂದು ಚಿತ್ರತಂಡದವರೆಲ್ಲಾ ಓಡಿ ಹೋಗಿದ್ದರಂತೆ. ಆ ಘಟನೆಯನ್ನು ಅಣ್ಣಾವ್ರು ಕೇಳಿ ಬಿದ್ದು ಬಿದ್ದು ನಗುತ್ತಿದ್ದರು. ನನ್ನ ಬಳಿ ಡಬಲ್ ಬ್ಯಾರೆಲ್ ಗನ್ ಇರುತ್ತಿತ್ತು. ನಾನು ಲೋಡ್ ಮಾಡಿ ಇಡುತ್ತಿದ್ದೆ. ಕಾಡಿನಲ್ಲಿ ಡಾ. ರಾಜ್ಕುಮಾರ್ ಅಂತಹ ಮೇರು ಕಲಾವಿದರನ್ನು ಕರೆದುಕೊಂಡು ಹೋಗುವಾಗ ಏನಾದರೂ ಸಮಸ್ಯೆ ಆಗಬಹುದು ಎಂದು ಗನ್ ಇಟ್ಟುಕೊಂಡಿದ್ದೆ. ಬಳಿಕ ನಮ್ಮ ಹುಡುಗನನ್ನು ಕರೆದು ಗನ್ ಆಫೀಸ್ ರೂಮ್ನಲ್ಲಿ ಇಡು ಎಂದು ಕೊಟ್ಟೆ"
ಗನ್ ಬದಲಾಗಿದ್ದು ಯಾಕೆ?
"ಬಳಿಕ ಎಲ್ಲರೂ ಬೆಟ್ಟದ ಮೇಲೆ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಹತ್ತಿದ್ದೆವು. ಒಂದ್ಕಡೆ ಡಾ. ರಾಜ್ಕುಮಾರ್, ಮತ್ತೊಂದು ಬಾಲಣ್ಣ. ಚಿತ್ರೀಕರಣ ನಡೀತಿತ್ತು. ಬಾಲಣ್ಣ ನನ್ನ ಬಳಿ ಬಂದು ಏನಪ್ಪಾ ಇದು ಗನ್ ಬಹಳ ತೂಕ ಇದೆ. ಇದನ್ನು ಎತ್ತಿ ಹಿಡಿದು ನನಗೆ ಡೈಲಾಗ್ ಮರೆತುಹೋಗುತ್ತಿದೆ. ಬೆಳಗ್ಗೆ ಆನೆ ಅಟ್ಟಿಸಿಕೊಂಡು ಬಂದು ಭಯ ಆಗ್ತಿದೆ. ಈ ಗನ್ ಬೇಡ ತಗೋ ಎಂದ್ರು. ಆಗ ನಾನು, ಇದಕ್ಕಿಂತ ಕಮ್ಮಿ ತೂಕದ ಗನ್ ಬೇಕಲ್ವಾ? ನಿಮಗೆ ಎಂದು ಹೇಳಿ ಹೋಗಪ್ಪಾ, ನನ್ನ ಗನ್ ತಗೋಬಾ ಎಂದು ತರಿಸಿದ್ದೆ" ಎಂದು ಎಂ. ಪಿ ಶಂಕರ್ ಹೇಳಿದ್ದರು.
ನಾನು ಮರೆತುಬಿಟ್ಟಿದ್ದೆ
"ಅದು ಹ್ಯಾಮರ್ ಗನ್, ಎರಡು ಕಡೆ ಹ್ಯಾಮರ್ ಇರುತ್ತದೆ. ಲೋಡ್ ಮಾಡಿದ್ದು ಅದನ್ನು ಎಳೆದರೆ ಮಾತ್ರ ಫೈಯರ್ ಆಗುತ್ತಿತ್ತು. ಬಾಲಣ್ಣ ನನ್ನನ್ನ ಕೇಳಿದರು, ಇದರು ಗುಂಡು ಇಲ್ಲಾ ಅಲ್ವಾ? ಅಂತ. ನನ್ನ ಜೇಬಿನಲ್ಲಿ ತಡಕಾಡಿದರೆ ಬುಲೆಟ್ ಇತ್ತು. ಹಾಗಾಗಿ ಇಲ್ಲ, ಎಂದೆ. ಯಾಕಂದರೆ ಬೆಳಗ್ಗೆ ನಾನು ಲೋಡ್ ಮಾಡಿದ್ದು. ಆದರೆ ಶೂಟಿಂಗ್ ಗೊಂದಲದಲ್ಲಿ ನಾನು ಗನ್ ಲೋಡ್ ಮಾಡಿದ್ದು ಮರೆತುಬಿಟ್ಟಿದ್ದೆ. ಹ್ಯಾಮರ್ ಎಳೆಯೋದು ಹೇಳಿಕೊಡು ಎಂದರು. ನಾನು ತೋರಿಸಿಕೊಟ್ಟೆ. ಆಗಲೂ ಅದರಲ್ಲಿ ಗುಂಡು ಲೋಡ್ ಆಗಿದ್ದು ಮರೆತು ಹೋಗಿತ್ತು"
ಗನ್ ಫೈಯರ್ ಆಗಿದ್ದೇಗೆ?
"3 ಟೇಕ್ ಬಳಿಕ ತಗೊಳ್ಳಪ್ಪ ನಿನ್ನ ಗನ್ ಎಂದು ಕೊಟ್ಟರು. ಬಳಿಕ ಕೂಡ ನಿರ್ದೇಶಕರನ್ನು ಕರೆದು ಬಾಲಣ್ಣ, ಏನಪ್ಪಾ ನಾನು ಗನ್ ಹ್ಯಾಮರ್ ಎಳೆಯಲಿಲ್ಲ. ಗುಂಡು ಹಾರಿದ ಸದ್ದು ಬರಲಿಲ್ಲ ಎಂದರು. ಆಗ ನಿರ್ದೇಶಕರು ಸರ್, ಎಡಿಟಿಂಗ್ ಅಲ್ಲಿ ಗುಂಡಿನ ಸದ್ದು ಹಾಕಬಹುದು ಬಿಡಿ ಎಂದ. ಬಳಿಕ ತಗೋ ನಿನ್ ಗನ್ ಎಂದು ಕೊಟ್ಟರು. ನಾನು ತೆಗೆದುಕೊಂಡು ಗನ್ ಕೆಳಗೆ ಇಳಿಸಲು ಹೋದಾಗ ತೂಕಕ್ಕೆ ಟ್ರಿಗರ್ ಒತ್ತಿ ಫೈಯರ್ ಆಯ್ತು."
ಶಾಕ್ ಆಗಿದ್ದರು ಅಣ್ಣಾವ್ರು
"ಆ ಸದ್ದು ಕೇಳಿ ನಾನು ಶಾಕ್ ಆಗಿ ಕುಸಿದುಬಿಟ್ಟೆ. ಗುಂಡು ಬಿದ್ದ ಜಾಗದಲ್ಲಿ ಗುಂಡಿಯಾಗಿತ್ತು. ಎಲ್ಲರೂ ಹತ್ತಿರ ಓಡಿ ಬಂದರು. ಅಣ್ಣಾವ್ರು ಹತ್ತಿರಬಂದು ಕೇಳಿದರು. ನಾನು ಸರ್ ಗನ್ನಲ್ಲಿ ಇನ್ನು ಒಂದು ಗುಂಡು ಇದೆ. ಬೆಳ್ಳಗೆ 2 ಗುಂಡು ಹಾಕಿದ್ದೆ. ನನ್ನ ಕೈಯಿಂದ ಈಗ ಗುಂಡು ಹಾರಿತು ಎಂದೆ. ಎಲ್ಲರೂ ಸುಸ್ತಾಗಿಬಿಟ್ಟರು. ನನ್ನ ಅವಸ್ಥೆ ನೋಡಿ ಅಣ್ಣಾವ್ರು, ನಿಮ್ಮಲ್ಲಿ ಸತ್ಯ ಇರುವುದರಿಂದಲೇ ಇವತ್ತು ರಾಜ್ಕುಮಾರ್ ಬದುಕಿದ್ದಾನೆ. ಇಲ್ಲದಿದ್ದರೆ ಎಂತಹ ಅನಾಹುತ ಆಗುತ್ತಿತ್ತು. ನಡಿರಿ ಊಟಕ್ಕೆ ಹೋಗೋಣ" ಎಂದು ಕರೆದುಕೊಂಡು ಹೋದರು.
ವಿವಾದ ಹುಟ್ಟು ಹಾಕಿದ ಘಟನೆ
ಎಂ. ಪಿ ಶಂಕರ್ ಅಂದು ನಡೆದ ಘಟನೆಯನ್ನು ಈ ರೀತಿ ವಿವರಿಸಿದ್ದರು. ಆದರೆ 50 ವರ್ಷಗಳ ಹಿಂದೆ ಈ ಘಟನೆ ಬಗ್ಗೆ ಏನೇನೋ ಸುದ್ದಿ ಹರಿದಾಡಿ ಅದು ಭಾರೀ ವಿವಾದಕ್ಕೆ ಕಾರಣವಾಗಿಬಿಟ್ಟಿತು. ಇವತ್ತಿಗೂ ಆ ಘಟನೆ ಬಗ್ಗೆ ಒಬ್ಬೊಬ್ಬರು ಒಂದು ರೀತಿ ಮಾತನಾಡುತ್ತಾರೆ. ಆದರೆ ನಿಜವಾಗಿಯೂ ಮಾತನಾಡಬೇಕಿದ್ದ ಡಾ. ರಾಜ್ ಹಾಗೂ ವಿಷ್ಣು ಎಂದೂ ಬಹಿರಂಗವಾಗಿ ಮಾತನಾಡಲೇ ಇಲ್ಲ ಎನ್ನುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ.


Click it and Unblock the Notifications











