ಸುದೀಪ್ ನಟನೆಯ ಸಿನಿಮಾ ಹಾಡು ಕೇಳಿ ತಮ್ಮ ತಂದೆಯನ್ನು ನೆನಪಿಸಿಕೊಳ್ಳುತ್ತಿದ್ದ ಅಪ್ಪು
ಸ್ಟಾರ್ ನಟರನ್ನು ಅಭಿಮಾನಿಗಳು ಆರಾಧಿಸುತ್ತಾರೆ. ಸ್ಟಾರ್ ನಟರು ಕೂಡ ಮತ್ತೊಬ್ಬ ನಟನಿಗೆ ಅಭಿಮಾನಿಗಳಾಗಿಬಿಟ್ಟಿರುತ್ತಾರೆ. ತಮ್ಮ ಸರಳ ಸಜ್ಜನಿಕೆಯಿಂದ ಎಲ್ಲರಿಗೂ ಆಪ್ತರಾಗಿದ್ದವರು ಅಪ್ಪು. ಒಳ್ಳೆ ವಿಷಯಗಳ ಬಗ್ಗೆ ಸದಾ ಮಾತನಾಡುತ್ತಿದ್ದರು. ಪ್ರತಿಭೆಗಳನ್ನು ಗುರ್ತಿಸುತ್ತಿದ್ದರು. ಮೆಚ್ಚು ಮಾತನಾಡುತ್ತಿದ್ದರು.
ಕಿಚ್ಚ ಸುದೀಪ್ ನಟನೆಯ ಸಿನಿಮಾವೊಂದರ ಹಾಡು ಪುನೀತ್ ರಾಜ್ಕುಮಾರ್ ಅವರಿಗೆ ಬಹಳ ಅಚ್ಚು ಮೆಚ್ಚಾಗಿತ್ತು. ಆ ಹಾಡು ಕೇಳಿದಾಗ ತಮ್ಮ ತಂದೆ ಡಾ. ರಾಜ್ಕುಮಾರ್ ಅವರನ್ನು ಅಪ್ಪು ನೆನಪಿಸಿಕೊಳ್ಳುತ್ತಿದ್ದರು. ತಂದೆ ಮಗನ ಬಾಂಧವ್ಯದ ಆ ಹಾಡು ಸೂಪರ್ ಹಿಟ್ ಆಗಿತ್ತು. ಅರ್ಜುನ್ ಜನ್ಯಾ ಸಂಗೀತದಲ್ಲಿ ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದ ಹಾಡನ್ನು ಶಂಕರ್ ಮಹಾದೇವನ್ ಹಾಡಿದ್ದರು.

ಆ ಹಾಡು ಹುಟ್ಟಿದ ಬಗೆಯನ್ನು ಗೀತ ಸಾಹಿತಿ ಕೆ. ಕಲ್ಯಾಣ್ ಒಮ್ಮೆ ತಮ್ಮದೇ ಯುಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮೆಲುಕು ಹಾಕಿದ್ದರು. ಆ ಹಾಡು ಕೇಳಿ ಸುದೀಪ್ ಬಹಳ ಭಾವುಕರಾಗಿಬಿಟ್ಟಿದ್ದರು. ತಮ್ಮ ತಂದೆಯವರನ್ನು ಕಲ್ಪಿಸಿಕೊಂಡು ಪದೇ ಪದೆ ಆ ಹಾಡು ಕೇಳಿ ಮೆಚ್ಚಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ತಮ್ಮ ತಂದೆ ವೀರಾಸ್ವಾಮಿ ಅವರನ್ನು ನೆನಪಿಸಿಕೊಂಡು ಮೆಚ್ಚುಗೆ ಸೂಚಿಸಿದ್ದರು. ಅಷ್ಟಕ್ಕೂ ಆ ಹಾಡು ಯಾವುದು ಗೊತ್ತಾ? 'ಮಾಣಿಕ್ಯ' ಚಿತ್ರದ 'ಜೀವ ಜೀವ ನನ್ನ ದೈವ' ಹಾಡು.
ತೆಲುಗಿನ 'ಮಿರ್ಚಿ' ಚಿತ್ರವನ್ನು 'ಮಾಣಿಕ್ಯ' ಹೆಸರಿನಲ್ಲಿ ಕನ್ನಡಕ್ಕೆ ಸುದೀಪ್ ರೀಮೆಕ್ ಮಾಡಿದ್ದರು. ಆದರೆ ಹೊಸ ಟ್ಯೂನ್ಗಳನ್ನು ಹಾಕಿಸಿದ್ದರು. ಬಾಲ್ಯದಿಂದ ತಂದೆ ಬಗ್ಗೆ ತಪ್ಪು ಅಭಿಪ್ರಾಯ ತುಂಬಿಕೊಂಡಿದ್ದ ಮಗ, ಇಡೀ ಊರು ಅಪ್ಪನನ್ನು ಪ್ರೀತಿಸುತ್ತಿದೆ. ಆದರೆ ಅದೇ ಜನರಿಗಾಗಿ ಅಮ್ಮನನ್ನು ದೂರ ಮಾಡಲು ಹಿಂದು ಮುಂದು ನೋಡದ ಅಪ್ಪನನ್ನು ಪ್ರೀತಿಸಬೇಕಾ? ದ್ವೇಷಿಸಬೇಕಾ? ಎನ್ನುವ ತಾಕಲಾಟಕ್ಕೆ ಸಿಲುಕಿದ ಸನ್ನಿವೇಶದಲ್ಲಿ ಈ ಹಾಡು ಬರುತ್ತದೆ. ರಾತ್ರಿ 12 ಗಂಟೆ ರಾತ್ರಿಯಿಂದ ಬೆಳಗ್ಗೆ 4 ಗಂಟೆವರೆಗೆ ಫೋನ್ ಸಂಭಾಷಣೆಯಲ್ಲೇ ಈ ಹಾಡಿಗೆ ಸಾಹಿತ್ಯ ಬರೆದಿದ್ದನ್ನು ಕೆ. ಕಲ್ಯಾಣ್ ಮೆಲುಕು ಹಾಕಿದ್ದರು.

ಆರಂಭದ ಸಾಲುಗಳು ಬಹಳ ಸರಳವಾಗಿ ಸಿಕ್ಕಿಬಿಡ್ತು.. "ಜೊತೆ ಬಾಳದ ಅಪ್ಪನ ದ್ವೇಷಿಸಲೇ, ಜಗಮೆಚ್ಚಿದ ಅವನನ್ನು ಪ್ರೀತಿಸಲೇ" ಸಾಲುಗಳು ಸುದೀಪ್ ಅವರಿಗೆ ಬಹಳ ಇಷ್ಟವಾಗಿತ್ತು. ಮುಂದೆ "ನನ್ನ ಹೆತ್ತವ ಒಬ್ಬ ದೇವರು ನಾ ದೇವರ ಮಗ" ಅಂತ ಬರೆದಿದ್ದು ಕೇಳಿ ಸುದೀಪ್ ಸರ್ ಬಹಳ ಭಾವುಕರಾಗಿಬಿಟ್ಟಿದ್ರು.. ಫೋನ್ನಲ್ಲೇ ಸೂಪರ್ ಅಂದ್ರು.. ಬಳಿಕ ಇಡೀ ಸಾಂಗ್ ಮುಗೀತು.. ಫೋನ್ ಮಾತುಕತೆ ಮುಗಿಸಿದ್ದೆವು.. ಬಳಿಕ 10 ನಿಮಿಷ ಬಿಟ್ಟು ಮತ್ತೆ ಸುದೀಪ್ ಸರ್ ಫೋನ್ ಮಾಡಿದ್ರು.. ಆ ಕೊನೆ ಸಾಲು ಹೇಳಿ ಅಂದ್ರು.. "ನನ್ನ ಹೆತ್ತವ ಒಬ್ಬ ದೇವರು ನಾ ದೇವರ ಮಗ" ಹಾಡುತ್ತಿದ್ದಂತೆ ಬಹಳ ಎಮೋಷನ್ ಅನ್ಸುತ್ತೆ ಅಂದ್ರು..ಪ್ರತಿಯೊಬ್ಬ ಮಕ್ಕಳು ತಮ್ಮ ಅಪ್ಪನಿಗೆ ಅಂದುಕೊಳ್ಳಬಹುದಾದ ಸಾಲು ಇದು. ಸುದೀಪ್ ಸರ್ ಬಹಳ ಮೆಚ್ಚಿಕೊಂಡಿದ್ದರು ಎಂದು ಕೆ. ಕಲ್ಯಾಣ್ ಮೆಲುಕು ಹಾಕಿದ್ದರು.
ಬಳಿಕ ರವಿಚಂದ್ರನ್ ಸರ್ ಮನೆಗೆ ಹೋದಾಗ ಅವರು ಈ ಸಾಲುಗಳ ಬಗ್ಗೆ ಮಾತನಾಡಿದ್ರು.. ನಾನು ನಮ್ಮ ತಂದೆಯನ್ನು ನೆನಪಿಸಿಕೊಂಡೆ ಅಂದ್ರು.. ಅದೇ ರೀತಿ ಅಪ್ಪು ಸರ್ "ಒಮ್ಮೆ ನಿನ್ನ ಕಂಗಳ ಬಿಸಿಯ ಹನಿಗಳು" ಹಾಡನ್ನು ಒಮ್ಮೆ ಹಾಡಿ ವೀಡಿಯೋ ಮಾಡಿದ್ದರು. ದು ಬಹಳ ವೈರಲ್ ಆಗಿತ್ತು. ಆ ಹಾಡಿನ ಲಿಂಕ್ ನನಗೂ ಕಳಿಸಿದ್ದರು. ನಾನು ಕೇಳಿ ಫೋನ್ ಮಾಡಿ ಮಾತನಾಡಿದ್ದೆ. ಆಗ ಮಾಣಿಕ್ಯ ಚಿತ್ರದ ಜೀವ ಜೀವ ಹಾಡಿನ "ನನ್ನ ಹೆತ್ತವ ಒಬ್ಬ ದೇವರು ನಾ ದೇವರ ಮಗ" ಸಾಲಿನ ಬಗ್ಗೆ ಅಪ್ಪು ಸರ್ ಮಾತನಾಡಿದ್ರು.. ಕಲ್ಯಾಣ್ ಸರ್ "ನೀವು ಮಾಣಿಕ್ಯ ಚಿತ್ರಕ್ಕೆ ಬರೆದ ಸಾಲುಗಳು ನಾನು ನನ್ನ ತಂದೆಯನ್ನು ಕಲ್ಪಿಸಿಕೊಳ್ತೀನಿ" ಎಂದು ಭಾವುಕರಾಗಿದ್ರು ಎಂದು ಕಲ್ಯಾಣ್ ವಿವರಿಸಿದ್ದರು.


Click it and Unblock the Notifications










