ಅಪ್ಪುನ ಒಂದು ಗಂಟೆ ಗೇಟ್ನಲ್ಲೇ ತಡೆದಿದ್ದ ಸೆಕ್ಯುರಿಟಿ ಗಾರ್ಡ್; ವಿಷಯ ಗೊತ್ತಾಗಿ ಓಡೋಡಿ ಬಂದಿದ್ದ ನಾಗಾರ್ಜುನ!
ಸರಳ, ಸಜ್ಜನ ವ್ಯಕ್ತಿತ್ವದಿಂದ ತಂದೆ ರೀತಿ ಮನೆ ಮಾತಾಗಿದ್ದವರು ಪುನೀತ್ ರಾಜ್ಕುಮಾರ್. ನಟನೆ ಮಾತ್ರವಲ್ಲ ಸಂಸ್ಕಾರ ಕೂಡ ತಂದೆಯಿಂದ ಅಣ್ಣಾವ್ರ ಮಕ್ಕಳಿಗೆ ಬಳುವಳಿಯಾಗಿ ಬಂದುಬಿಟ್ಟಿದೆ. ಚಿಕ್ಕಂದಿನಿಂದ ಮಕ್ಕಳನ್ನು ಉತ್ತಮ ರೀತಿಯಲ್ಲೇ ಡಾ. ರಾಜ್ಕುಮಾರ್ ದಂಪತಿ ಬೆಳೆಸಿದ್ದಾರೆ.
ಅವತ್ತಿನ ಕಾಲಕ್ಕೆ ತಮಿಳಿನ ಎಂಜಿಆರ್, ಶಿವಾಜಿ ಗಣೇಶನ್ ತೆಲುಗಿನ ಎನ್ಟಿಆರ್, ಎನ್ಎನ್ಆರ್, ಬಾಲಿವುಡ್ನ ಅಮಿತಾಬ್ ಬಚ್ಚನ್ಗೆ ಸರಿಸಮನಾಗಿ ಚಿತ್ರರಂಗದಲ್ಲಿ ಮಿಂಚಿದವರು ಡಾ. ರಾಜ್ಕುಮಾರ್. ನಟನೆಯಲ್ಲಿ ಎಲ್ಲರಿಗಿಂತ ಒಂದು ಕೈ ಮೇಲು ಎಂದರೂ ಅತಿಶಯೋಕ್ತಿ ಆಗುವುದಿಲ್ಲ. ಇದ್ದನ್ನು ಸ್ವತಃ ಆ ದಿಗ್ಗಜ ನಟರು ಒಪ್ಪಿಕೊಂಡಿದ್ದರು.

ಎನ್ಟಿಆರ್, ಅಕ್ಕಿನೇನಿ ನಾಗೇಶ್ವರರಾವ್ ಜೊತೆಗೆ ಡಾ. ರಾಜ್ಕುಮಾರ್ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಆಗ ಕನ್ನಡ ಹಾಗೂ ತೆಲುಗು ಚಿತ್ರರಂಗ ಕೂಡ ಮದ್ರಾಸ್ನಲ್ಲೇ ನೆಲೆಸಿತ್ತು. ಹಾಗಾಗಿ ಸಿನಿಮಾಗಳ ಚಿತ್ರೀಕರಣದ ವೇಳೆ ಆಗಾಗ್ಗೆ ಅವರಿಬ್ಬರನ್ನು ಅಣ್ಣಾವ್ರ ಭೇಟಿ ಮಾಡುತ್ತಿದ್ದರು. ಅವರ ಸಿನಿಮಾ ಸೆಟ್ಗೆ ಇವರು, ಇವರ ಸಿನಿಮಾ ಸೆಟ್ಗೆ ಅವರು ಹೋಗುವುದು ನಡೆಯುತ್ತಿರುತ್ತಿತ್ತು.
ಅಕ್ಕಿನೇನಿ ಕುಟುಂಬ ಡಾ. ರಾಜ್ ಕುಟುಂಬದ ಜೊತೆ ಇವತ್ತಿಗೂ ಉತ್ತಮ ಬಾಂಧವ್ಯ ಮುಂದುವರೆಸಿದೆ. ಹಿಂದೆ ಹೈದರಾಬಾದ್ಗೆ ಪುನೀತ್ ರಾಜ್ಕುಮಾರ್ ಹೋಗಿದ್ದಾಗ ನಾಗಾರ್ಜುನ ಭೇಟಿಗೆ ಹೋಗಿದ್ದರು. ಆಗ ನಡೆದ ಪ್ರಸಂಗವೊಂದನ್ನು ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಹಂಚಿಕೊಂಡಿದ್ದಾರೆ. ಸುದ್ದಿಮನೆ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ.
ಪುನೀತ್, ಶಿವಣ್ಣ, ರಾಘಣ್ಣ ಯಾರೇ ಆಗಲಿ ಚೆನ್ನೈ, ಹೈದರಾಬಾದ್ ಹೋದಾಗ ಅಲ್ಲಿನ ಹಿರಿಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬರಲು ತಂದೆ ಡಾ. ರಾಜ್ಕುಮಾರ್ ಹೇಳುತ್ತಿದ್ದರು. ಒಮ್ಮೆ ಪುನೀತ್ ರಾಜ್ಕುಮಾರ್ ಹೈದರಾಬಾದ್ಗೆ ಹೋಗಿದ್ದರು. ಅಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಆಶೀರ್ವಾದ ಪಡೆದು ಬರಲು ಅಪ್ಪಾಜಿ ಹೇಳಿದ್ದರು. ಅದರಂತೆ ಅಪ್ಪು ಹೋಗಿ ಎಎನ್ಆರ್ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು.
ಆಗ ಎಎನ್ಆರ್ ಪುತ್ರ ನಟ ನಾಗಾರ್ಜುನ ತಮ್ಮ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿದ್ದರು. ಪುನೀತ್ ಅಲ್ಲಿಗೆ ಹೋಗಿ ಅವರನ್ನು ಭೇಟಿ ಮಾಡಬೇಕು ಎಂದುಕೊಂಡರು. ಅಪ್ಪು ಸ್ಟುಡಿಯೋ ಬಳಿ ಹೋದಾಗ ಸೆಕ್ಯುರಿಟಿ ಗಾರ್ಡ್ ಒಳಗೆ ಬಿಡಲಿಲ್ಲ. ಬೇಸರದಲ್ಲಿ ಪುನೀತ್ ಅಲ್ಲೇ ಕುಳಿತ್ತಿದ್ದರಂತೆ. ಒಂದು ಗಂಟೆ ಆದರೂ ಅವಕಾಶ ಸಿಕ್ಕಿರಲಿಲ್ಲ. ಅಷ್ಟರಲ್ಲಿ ಒಳಗಿದ್ದ ನಟ ನಾಗಾರ್ಜುನಗೆ ವಿಷಯ ಗೊತ್ತಾಗಿದೆ.

ಡಾ. ರಾಜ್ ಪುತ್ರ ಪುನೀತ್ ಬಂದಿದ್ದಾರೆ ಎನ್ನುವ ವಿಚಾರ ತಿಳಿದು ಗಾಬರಿಯಿಂದ ಓಡೋಡಿ ಬಂದಿದ್ದರು. ಬಂದು ಸೆಕ್ಯುರಿಟಿ ಬಳಿ ವಿಚಾರಿಸಿದ್ದಾರೆ. ಯಾಕೆ ಹೀಗೆ ಮಾಡ್ದೆ ಅಂತ. ಇವರು ಯಾರು ಗೊತ್ತಾ ಡಾ. ರಾಜ್ಕುಮಾರ್ ಮಗ. ಅವರನ್ನು ಹೊರಗೆ ಕೂರಿಸೋದಾ? ಎಂದು ಅವರದ್ದೇ ಸ್ಟೈಲ್ನಲ್ಲಿ ತಾಕೀತು ಮಾಡಿ ಅಪ್ಪುನ ಒಳಗೆ ಕರೆದುಕೊಂಡು ಹೋಗಿದ್ದರು. ಬಳಿಕ ನಾಗ್ ಜೊತೆ ಮಾತುಕತೆ ನಡೆಸಿ ಪುನೀತ್ ವಾಪಸ್ ಬಂದರು.
ಬೆಂಗಳೂರಿಗೆ ಬಂದು ಅನ್ನಪೂರ್ಣ ಸ್ಟುಡಿಯೋ ಬಳಿ ನಡೆದ ಘಟನೆಯನ್ನು ತಂದೆಗೆ ಅಪ್ಪು ಹೇಳಿದ್ದಾರೆ. ನಾಗಾರ್ಜುನಾ ಫ್ಯಾಮಿಲಿ ಅವ್ರು ನಮ್ಮ ಕುಟುಂಬವನ್ನು ಅಷ್ಟು ಪ್ರೀತಿಸ್ತಾರೆ. ಗೌರವ ಕೊಡುತ್ತಾರೆ, ಆದರೆ ಆ ಸೆಕ್ಯುರಿಟಿ ಗಾರ್ಡ್ಗೆ ಒಂದೇ ಒಂದು ಮಾತು ಆಡಲಿಲ್ಲ. ತರಾಟೆಗೆ ತೆಗೆದುಕೊಳ್ಳಲಿಲ್ಲ, ಕೆಲಸದಿಂದ ತೆಗೆಯಲಿಲ್ಲ, ಯಾಕೆ ಅಪ್ಪಾಜಿ ಎಂದು ಹೇಳಿದ್ದರಂತೆ.
ಪುನೀತ್ ಪ್ರಶ್ನೆಗೆ ಅಣ್ಣಾವ್ರು ಅದೇ ಕಣ್ಣಪ್ಪಾ ಸಂಸ್ಕಾರ ಅಂದ್ರೆ, ಮನೆಯಿಂದ ಬಂದ ಸಂಸ್ಕಾರ ನಾಗಾರ್ಜುನ ಅವರಲ್ಲಿದೆ. ಆ ಕಾರಣಕ್ಕೆ ಏನು ಮಾಡಲಿಲ್ಲ. ಸೆಕ್ಯುರಿಟಿ ಗಾರ್ಡ್ ತನ್ನ ಕರ್ತವ್ಯ ಮಾಡಿದ್ದಾನೆ. ಅವನ ಕೆಲಸ ಅದು. ರಾಜ್ಕುಮಾರ್ ಮಗನಿಗೆ ಹಿಂಸೆ ಕೊಡಬೇಕು ಅಂತ ನಿನ್ನ ಹಾಗೆ ಕೂರಿಸಿದ್ದಲ್ಲ. ತನ್ನ ಕೆಲಸ ಮಾಡಿದ್ದಕ್ಕೆ ಆ ಸೆಕ್ಯುರಿಟಿ ಮೇಲೆ ಯಜಮಾನ(ನಾಗಾರ್ಜುನ)ನಿಗೆ ಆತನ ಮೇಲೆ ನಂಬಿಕೆ ಇದೆ. ಇದೆಲ್ಲಾ ಸಂಸ್ಕಾರದಿಂದ ಬರುವುದು ಎಂದರಂತೆ. ತಂದೆ ಮಾತಿಗೆ ಅವರ ಕಾಲಿಗೆ ಬಿದ್ದಿದ್ದರಂತೆ ಪುನೀತ್ ರಾಜ್ಕುಮಾರ್.


Click it and Unblock the Notifications











