ನಾನು ಹಾಗೂ ಡಾ. ರಾಜ್ಕುಮಾರ್ ಶೂದ್ರರು, ಉಳಿದವ್ರು ಬ್ರಾಹ್ಮಣರಿದ್ರು; ನನಗೆ ಅವಕಾಶ ಕೊಡ್ಬಾರ್ದು ಅಂತ ನೋಡಿದ್ದ ನಿರ್ದೇಶಕ
ಚಿತ್ರರಂಗದಲ್ಲಿ ಅಷ್ಟು ಸುಲಭವಾಗಿ ಅವಕಾಶಗಳು ಸಿಗಲ್ಲ. ನಾನಾ ಕಾರಣಗಳಿಂದ ಅವಕಾಶಗಳು ತಪ್ಪಿ ಹೋಗುತ್ತವೆ. ಡಾ. ರಾಜ್ಕುಮಾರ್ ಚಿತ್ರರಂಗದಲ್ಲಿ ಗೆಲ್ಲುವುದು ಅಷ್ಟು ಸುಲಭ ಇರಲಿಲ್ಲ. ಹಿಂದುಳಿದ ಸಮುದಾಯದಿಂದ ಬಂದವರು ಎನ್ನುವ ಕಾರಣಕ್ಕೆ ಕೆಲ ಪಾತ್ರಗಳನ್ನು ಅಣ್ಣಾವ್ರು ಮಾಡಬಾರದು ಎಂದು ಜಾತಿವಾದಿಗಳು ವಿರೋಧಿಸಿದ್ದು ಇದೆ.
ಚಿತ್ರರಂಗದಲ್ಲಿ ಕೂಡ ಜಾತಿವಾದಿಗಳು ಇದ್ದಾರೆ ಎಂದು ನಟ ಕಲಾತಪಸ್ವಿ ರಾಜೇಶ್ ನೀಡಿದ್ದ ಹೇಳಿಕೆ ಈಗ ವೈರಲ್ ಆಗ್ತಿದೆ. 60-70ರ ದಶಕದಲ್ಲಿ ಹೀರೊ ಆಗಿ ಮಿಂಚಿದವರು ರಾಜೇಶ್. ಸಹಜ ಅಭಿನಯದಿಂದ ಸಿನಿರಸಿಕರನ್ನು ರಂಜಿಸಿದ್ದರು. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ನಾನು ಶೂದ್ರ ಎನ್ನುವ ಕಾರಣಕ್ಕೆ 'ಅರಿಶಿನ ಕುಂಕುಮ' ಚಿತ್ರದಲ್ಲಿ ಅವಕಾಶ ಕೊಡಬಾರದು ಎಂದು ನಿರ್ದೇಶಕ ಕೆ.ಎಸ್. ಎಲ್ ಸ್ವಾಮಿ ಪ್ರಯತ್ನಿಸಿದ್ದರು ಎಂದು ರಾಜೇಶ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಆ ವಿಡಿಯೋ ಈಗ ವೈರಲ್ ಆಗ್ತಿದೆ.

ಕೆ.ಎಸ್. ಎಲ್ ಸ್ವಾಮಿ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ನಟಿಸಿದ್ದರು. ಜಾತಿ ಹೆಸರಿನಲ್ಲಿ ಕೆ.ಎಸ್. ಎಲ್ ಸ್ವಾಮಿ ತಾರತಮ್ಯ ಮಾಡಿದ್ರು ಎಂದು 'ನೆಲಮುಗಿಲು ಟಿವಿ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರಾಜೇಶ್ ಹೇಳಿದ್ದರು. 'ಅರಿಶಿನ ಕುಂಕುಮ' ಚಿತ್ರದಲ್ಲಿ ರಾಜೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಿರ್ಮಾಪಕರ ಒತ್ತಾಯದ ಮೇರೆಗೆ ಆ ಚಿತ್ರದಲ್ಲಿ ನಟನೆ ಅವಕಾಶ ಸಿಕ್ಕಿತ್ತು. ಅದನ್ನು ತಪ್ಪಿಸೋಕೆ ಕೆ.ಎಸ್. ಎಲ್ ಸ್ವಾಮಿ ಪ್ರಯತ್ನ ಮಾಡಿದ್ರು ಎಂದಿದ್ದರು.
ಕೆ.ಎಸ್. ಎಲ್ ಸ್ವಾಮಿ ಹಾಗೂ ನನಗೂ ಆಗುತ್ತಿರಲಿಲ್ಲ. 'ನಮ್ಮ ಊರು ದೇವರು' ಸಿನಿಮಾ ಬಳಿಕ ನಾನು ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಪ್ರೀಮಿಯರ್ ಸ್ಟುಡಿಯೋದಲ್ಲಿ 'ಸುವರ್ಣಭೂಮಿ' ಎಂಬ ಸಿನಿಮಾ ಚಿತ್ರೀಕರಣ ನಡೀತಿತ್ತು. ಆ ಚಿತ್ರದ ಛಾಯಾಗ್ರಾಹಕರು ಜಾನಕಿ ರಾಮ್. ಆಗ ಸಿನಿಮಾ ಸೆಟ್ಗೆ ಪ್ರತಿದಿನ ನಿರ್ದೇಶಕ ಕೆ.ಎಸ್. ಎಲ್ ಸ್ವಾಮಿ ಬರ್ತಿದ್ರು. ಬಂದು ಜಾನಕಿರಾಮ್ ಅವರ ಬಳಿ ಮಾತನಾಡಿ ಹೋಗುತ್ತಿದ್ದರು. ನನ್ನನ್ನು ಮಾತನಾಡಿಸುತ್ತಿರಲಿಲ್ಲ. ಕೊನೆಗೆ ಜಾನಕಿ ರಾಮ್ ಅವರನ್ನು ಕೇಳ್ದೆ. ಯಾರು ಈ ವ್ಯಕ್ತಿ ಅಂತ. ಸರ್, ನಿರ್ದೇಶಕ ಕೆ.ಎಸ್. ಎಲ್ ಸ್ವಾಮಿ(ರವಿ) ಅಂದ್ರು. ಓಹ್ ಸರಿ ಎಂದು ಸುಮ್ಮನಾದೆ ಎಂದು ರಾಜೇಶ್ ನೆನಪಿಸಿಕೊಂಡಿದ್ದರು.

ಚಿತ್ರದುರ್ಗದ ನಾಲ್ವರು ಕೆ.ಎಸ್. ಎಲ್ ಸ್ವಾಮಿಗೆ ಒಂದು ಸಿನಿಮಾ ಮಾಡಿಕೊಡುವಂತೆ ಕೇಳಿದ್ದಾರೆ. ರಾಜೇಶ್ ಅವರು ನಟಿಸಿದರೆ ಮಾತ್ರ ಸಿನಿಮಾ ಮಾಡ್ತೀವಿ ಎಂದು ಷರತ್ತು ಹಾಕಿದ್ದಾರೆ. ಆದರೆ ಸ್ವಾಮಿ ದಿನಾ ನಮ್ಮ ಸೆಟ್ಗೆ ಬಂದು ಛಾಯಾಗ್ರಾಹಕರು ಜಾನಕಿರಾಮ್ ಬಳಿ ಮಾತ್ರ ಮಾತನಾಡಿ ಹೋಗುತ್ತಿದ್ದರು. ನನ್ನನ್ನು ಮಾತನಾಡಿಸುತ್ತಿರಲಿಲ್ಲ. ರಾಜೇಶ್ ಸಿಗುತ್ತಿಲ್ಲ, ಅಲ್ಲಿದ್ದಾರೆ, ಇಲ್ಲಿದ್ದಾರೆ ಎಂದು ನಿರ್ಮಾಪಕರಿಗೆ ಸುಳ್ಳು ಹೇಳಿಕೊಂಡು ಸ್ವಾಮಿ ಓಡಾಡಿಕೊಂಡಿದ್ದರು. ರಾಜೇಶ್ ಇಲ್ಲದೇ ಸಿನಿಮಾ ಮಾಡುವುದೇ ಬೇಡ ಎಂದುಬಿಟ್ಟಿದ್ದಾರೆ. ಆಗ ಓಡೋಡಿ ಬಂದ ಸ್ವಾಮಿ ನನಗೆ ಬಂದು ಕಥೆ ಕೇಳಿ ಸಿನಿಮಾ ಮಾಡೋಕೆ ಒಪ್ಪಿಸಿದ್ರು.
ಕೊನೆಗೆ ನಿರ್ಮಾಪಕರು ಬಂದರು. ಸತಾಯಿಸಿಬಿಟ್ರಲ್ಲ ನಮ್ಮನ್ನ ಅಂದ್ರು.. ಯಾಕೆ ಏನಾಯ್ತು ಅಂದಾಗ ಸ್ವಾಮಿ ಹೇಳಿದ್ರು, ನೀವು ಅಲ್ಲಿದ್ದೀರಾ, ಇಲ್ಲಿದ್ದೀರಾ, ಕೈಗೆ ಸಿಗಲಿಲ್ಲ ಅಂತ ಅಂದ್ರು. ಸಿನಿಮಾ ಡ್ರಾಪ್ ಮಾಡೋಣ ಅಂದಾಗ ನೀವು ಸಿಕ್ಕಿಬಿಟ್ರಿ. ನನಗೆ ಆಗ ಸತ್ಯ ಗೊತ್ತಾಯಿತು. ಇದರ ಮರ್ಮ ಏನು ಅಂದ್ರೆ, ನಾನು ಶೂದ್ರ, ಅವನು ಬ್ರಾಹ್ಮಣ. ಶೂದ್ರನಿಗೆ ಯಾಕೆ ಅವಕಾಶ ಕೊಡಬೇಕು ಎನ್ನುವ ಕಾರಣಕ್ಕೆ ಕೆ.ಎಸ್. ಎಲ್ ಸ್ವಾಮಿ ಹೀಗೆ ಮಾಡಿದ್ರು ಎಂದು ರಾಜೇಶ್ ಹೇಳಿದ್ದರು.
ಒಬ್ಬ ಶೂದ್ರ ಡಾ. ರಾಜ್ಕುಮಾರ್ ಈಗಾಗಲೇ ಚಿತ್ರರಂಗದಲ್ಲಿ ಮಿಂಚುತ್ತಿದ್ದಾನೆ. ಇನ್ನೊಬ್ಬ ಶೂದ್ರ(ರಾಜೇಶ್) ಬರ್ತಿದ್ದಾನೆ. ಅದನ್ನು ಸಹಿಸೋಕೆ ಆಗುತ್ತಿರಲಿಲ್ಲ. ನಮ್ಮಿಬ್ಬರನ್ನು ಬಿಟ್ರೆ ಚಿತ್ರರಂಗದಲ್ಲಿ ಉಳಿದವರೆಲ್ಲಾ ಬ್ರಾಹ್ಮಣರು. ಹಾಗಾಗಿ ಸ್ವಾಮಿ ಹೀಗೆ ಅವಕಾಶ ಕೊಡಲು ತಾರತಮ್ಯ ಮಾಡಿದ್ರು ಎಂದು ರಾಜೇಶ್ ಹೇಳಿದ್ದರು. 4 ವರ್ಷಗಳ ಹಿಂದೆ ರಾಜೇಶ್ ನಿಧನರಾಗಿದ್ದರು.


Click it and Unblock the Notifications