Rajinikanth: ಕಾವೇರಿ ಸಮಸ್ಯೆಗೆ ರಜನಿಕಾಂತ್ ನದಿ ಜೋಡನೆ ಐಡಿಯಾ: 1 ಕೋಟಿ ರೂ. ಘೋಷಿಸಿದ್ದ ತಲೈವಾ
ಕರ್ನಾಟಕ ಹಾಗೂ ತಮಿಳುನಾಡು ನಡುವೆ ಕಾವೇರಿ ನೀರು ಹಂಚಿಕೆ ವಿವಾದ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಪ್ರತಿ ಬಾರಿ ಇಂತಹ ಪರಿಸ್ಥಿತಿ ನಿರ್ಮಾಣವಾದಾಗ ರಜನಿಕಾಂತ್ ಹೆಸರು ಪ್ರಸ್ತಪವಾಗುತ್ತದೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಜನಿಕಾಂತ್ ಮುಂದೆ ತಮಿಳುನಾಡಿನಲ್ಲಿ ನೆಲೆ ಕಂಡುಕೊಂಡರು. ಹಾಗಾಗಿ ಕಾವೇರಿ ವಿಚಾರದಲ್ಲಿ ರಜನಿ ನಿಲುವೇನು? ಎನ್ನುವ ಪ್ರಶ್ನೆ ಪದೇ ಪದೆ ಕೇಳುವವರಿದ್ದಾರೆ.
ಇತ್ತೀಚೆಗೆ ಕಾವೇರಿ ವಿವಾದ ಬಗ್ಗೆ ಎದುರಾದ ಮಾಧ್ಯಮಗಳ ಪ್ರಶ್ನೆಗೆ ರಜನಿಕಾಂತ್ ಮಾತನಾಡದೇ ಹೊರಟುಬಿಟ್ಟಿದ್ದರು. ತಮಿಳುನಾಡಿನ ರಾಜಕೀಯ ಮುಖಂಡರು ಇದನ್ನು ಖಂಡಿಸಿದ್ದರು. ಇದು ಕಳ್ಳ ಮೌನ ಎಂದು ವನ್ನಿ ಅರಸು ಮೂದಲಿಸಿದ್ದರು. ಈ ಹಿಂದೆ ಕೂಡ ಕಾವೇರಿ ಸಮಸ್ಯೆ ತಲೆದೋರಿದಾಗ ತಮಿಳು ಚಿತ್ರರಂಗ ಅಲ್ಲಿನ ಸರ್ಕಾರದ ಪರ ನಿಲ್ಲುತ್ತಾ ಬಂದಿದೆ. ಆ ಸಮಯದಲ್ಲೂ ರಜನಿಕಾಂತ್ ನೀಡಿದ್ದ ಹೇಳಿಕೆಗಳಲ್ಲಿ ತಪ್ಪು ಹುಡುಕಿದ್ದರು. ಖಂಡಿಸಿದ್ದರು. ರಜನಿಕಾಂತ್ ಮಾತನಾಡಿದ್ದ ಆ ಹಳೇ ವಿಡಿಯೋಗಳು ಈಗ ವೈರಲ್ ಆಗ್ತಿದೆ.

20 ವರ್ಷಗಳ ಹಿಂದೆ ಕಾವೇರಿ ಸಮಸ್ಯೆ ಉದ್ಭವಿಸಿದ್ದಾಗ ರಜನಿಕಾಂತ್ ಏನು ಮಾತನಾಡಿದ್ದರು ಎಂದು ನೆನಪಿಸಿಕೊಳ್ಳುವಾದರೆ "ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದೆ. 2 ರಾಜ್ಯಗಳ ಮುಖ್ಯಮಂತ್ರಿಗಲೂ ಮಾತನಾಡುತ್ತಿದ್ದಾರೆ. ಅವರಿಂದಲೇ ಈ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ನಮ್ಮ ಚಿತ್ರರಂಗದಿಂದ ಪರಿಹಾರ ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಇದು ಅವರ ರಾಜಕೀಯ ಸಮಸ್ಯೆ. ಕರ್ನಾಟಕದಲ್ಲಿ ಅಲ್ಲಿನ ಚಿತ್ರರಂಗ ಪ್ರತಿಭಟಿಸಿದರು. ಅವರು ಪ್ರತಿಭಟಿಸಿದ್ದರಿಂದ ನಾವು ಇಲ್ಲಿ ಮಾಡಬೇಕಾಗಿದೆ"
"40 ಲಕ್ಷ ತಮಿಳರು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರಿಗೆ ಏನು ತೊಂದರೆ ಆಗಬಹುದು ಗೊತ್ತಾ ? ಅಲ್ಲಿ ಅವರ ಆಸ್ತಿಪಾಸ್ತಿ, ಪ್ರಾಣಕ್ಕೆ ತೊಂದರೆ ಆದರೆ ನೀವೆಲ್ಲಾ ಹೋಗ್ತೀರಾ? ಭರವಸೆ ಕೂಡ್ತೀರಾ? ಕೊಡಿ. ಕರ್ನಾಟಕದ ಎಷ್ಟು ಜನ ತಮಿಳರು ನನಗೆ ಫೋನ್ ಮಾಡಿ ಅಳುತ್ತಿದ್ದಾರೆ ಗೊತ್ತಾ?"
"ಕೆಲವರು ನನ್ನ ಮೇಲಿನ ಅಭಿಮಾನದಿಂದ, ಕೆಲವರು ನನ್ನ ಮೇಲಿನ ಭಯದಿಂದ ಈ ವಿಚಾರವನ್ನು ಮಾತನಾಡಿ ಇದಕ್ಕೆ ತುಪ್ಪ ಸುರಿಯಲು ನಾನು ಬಯಸುವುದಿಲ್ಲ. ಯಾರು ರಾಜಕಾರಣ ಮಾಡುತ್ತಿದ್ದಾರೆ. ಯಾರು ಮಾತನಾಡುತ್ತಿದ್ದಾರೆ ಅವರನ್ನು ಚುನಾವಣೆ ಬಂದಾಗ ನಾನು ನೋಡಿಕೊಳ್ಳುತ್ತೇನೆ."

"ನಾನು ಕಲಾವಿದರ ಸಂಘ, ಫಿಲ್ಮ್ ಚೇಂಬರ್ನಲ್ಲಿ ಕಾವೇರಿ ನೀರು ಬಿಡಬೇಕು ಎಂದು ಉಪವಾಸ ಧರಣಿ ಕೂರುತ್ತೇನೆ" ಎಂದಿದ್ದರು. ಮತ್ತೊಮ್ಮೆ ಇದೇ ವಿಚಾರವಾಗಿ ಮಾತನಾಡಿದ್ದ ರಜನಿಕಾಂತ್, ನದಿಗಳನ್ನು ಜೋಡಣೆ ಮಾಡಿದರೆ ಕಾವೇರಿ ಸಮಸ್ಯೆ ಬಗೆಹರಿಯಬಹುದು ಎಂದರೆ ಹಾಗೆ ಮಾಡಿ ಎಂದಿದ್ದರು. "ಗಂಗಾ ನದಿಯನ್ನು ಕಾವೇರಿ ಜೊತೆ ಸೇರಿಸಲು ಸಾಧ್ಯವಾಗದಿದ್ದರೆ ದಕ್ಷಿಣದ ನದಿಗಳನ್ನು ಸೇರಿಸಿ. ಅದಕ್ಕೆ ಎಷ್ಟು ಹಣ ಆಗುತ್ತೆ ಹೇಳಿ. ನಾಳೆ ನೀವು ಘೋಷಿಸಿದರೆ ನಾನು ನನ್ನ ಜೇಬಿನಿಂದ 1 ಕೋಟಿ ರೂ. ಕೊಡುತ್ತೇನೆ. ಹಣದ ಬಗ್ಗೆ ರಾಜಕಾರಣಿಗಳು ಯೋಚಿಸಬೇಡಿ. ಹಣ ಇಲ್ಲ ಅನ್ನಬೇಡಿ. ಜನರಿಗೆ ಹೇಳಿ ಹಣ ವಿಷಯ ನಾವು ನೋಡಿಕೊಳ್ಳುತ್ತೇವೆ" ಎಂದು ಥೇಟ್ ಸಿನಿಮಾ ಶೈಲಿಯಲ್ಲಿ ಡೈಲಾಗ್ ಬಿಟ್ಟಿದ್ದರು.
6 ವರ್ಷಗಳ ಹಿಂದೆ ತಮಿಳುನಾಡಿನ ರೈತರು ರಜನಿಕಾಂತ್ ಅವರನ್ನು ಭೇಟಿ ಮಾಡಿ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿದ್ದರು. 15 ವರ್ಷಗಳ ಹಿಂದೆ ನದಿ ಜೋಡಣೆಗೆ 1 ಕೋಟಿ ರೂ. ಕೊಡ್ತೀನಿ ಎಂದು ಹೇಳಿದ್ದಿರಿ. ಅದನ್ನು ಕೊಡಿ ಎಂದು ಮನವಿ ಮಾಡಿದ್ದರು. ಅದಕ್ಕೆ ರಜನಿಕಾಂತ್ ಖಂಡಿತ ಪ್ರಧಾನ ಮಂತ್ರಿಗೆ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಆ ವಿಚಾರ ತಮಿಳುನಾಡಿನಲ್ಲಿ ಭಾರೀ ಸದ್ದು ಮಾಡಿತ್ತು.


Click it and Unblock the Notifications











