ಆತನ ಮುಂದೆ ನೀನು ಇರುವೆಗೆ ಸಮ, ಮತ್ತೆ ಪುನರಾವರ್ತನೆ ಆದ್ರೆ ಚಪ್ಪಲಿಯಲ್ಲಿ ಹೊಡೀತಿನಿ ಅಂದಿದ್ರು- ರಜನಿಕಾಂತ್
ಅಬಾಲ ವೃದ್ಧರಾಗಿ ಎಲ್ಲಾ ವರ್ಗದ ಪ್ರೇಕ್ಷಕರ ಮನಗೆದ್ದ ನಟ ಸೂಪರ್ ಸ್ಟಾರ್ ರಜನಿಕಾಂತ್. ವಯಸ್ಸು 70 ದಾಟಿದರೂ ರಜನಿಕಾಂತ್ ಕ್ರೇಜ್ ಮಾತ್ರ ಇನ್ನು ಕಮ್ಮಿ ಆಗಿಲ್ಲ, ಆಗುವುದು ಇಲ್ಲ. ಬೆಂಗಳೂರಿನ ಬಿಟಿಎಸ್ ಬಸ್ ಕಂಡೆಕ್ಟರ್ ಶಿವಾಜಿ ರಾವ್ ಗಾಯಕ್ವಾಡ್ ಮುಂದೆ ಸೂಪರ್ ಸ್ಟಾರ್ ಆಗಿದ್ದು ಗೊತ್ತೇಯಿದೆ.
ರಜನಿಕಾಂತ್ ಜೀವನದಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳಿವೆ. ಅದನ್ನು ಸ್ವತಃ ತಲೈವಾ ಸಾಕಷ್ಟು ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ಇನ್ನು ತಮ್ಮ ಕುಡಿತ, ಸಿಗರೇಟ್ ಚಟದ ಬಗ್ಗೆಯೂ ಸಾಕಷ್ಟು ಸಂದರ್ಭಗಳಲ್ಲಿ ರಜನಿಕಾಂತ್ ಮಾತನಾಡಿದ್ದಾರೆ. ಈ ಚಟಗಳನ್ನು ಯಾರೂ ಬೆಳೆಸಿಕೊಳ್ಳಬೇಡಿ ಎಂದು ಮನವಿ ಮಾಡುತ್ತಿರುತ್ತಾರೆ. ಆದರೆ ಇದೇ ಕುಡಿತದ ಅಭ್ಯಾಸದಿಂದ ಅವರು ಒಮ್ಮೆ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಕಂಗಣ್ಣಿಗೆ ಗುರಿಯಾಗಿದ್ದರು.

ಬಹಳ ಸಣ್ಣ ವಯಸ್ಸಿನಲ್ಲೇ ಶಿವಾಜಿ ಮದ್ಯ ಸೇವನೆ ಹಾಗೂ ಸಿಗರೇಟ್ ಸೇದುವ ಚಟ ಬೆಳೆಸಿಕೊಂಡಿದ್ದರು. ಮದುವೆ ಬಳಿಕ ಅದನ್ನು ಕೊಂಚ ಕಮ್ಮಿ ಆಗಿದ್ದರು. ಯೋಗ, ಧ್ಯಾನ ಅಭ್ಯಾಸದ ಬಗ್ಗೆ ಸಾಧ್ಯವಾದಷ್ಟು ಅದನ್ನು ಕಮ್ಮಿ ಮಾಡಿಕೊಂಡಿದ್ದೇನೆ. ಸಂಪೂರ್ಣವಾಗಿ ಬಿಟ್ಟಿದ್ದೇನೆ ಎಂದು ಸುಳ್ಳು ಹೇಳುವುದಿಲ್ಲ. ನಾನು ಈ ಚಟಗಳಿಗೆ ದಾಸನಾಗಿದೇ ಇದ್ದಿದ್ದರೆ ಇನ್ನು ಹೇಗೋ ಇರ್ತಿದ್ದೆ. ಸಿನಿಮಾ ಹಾಗೂ ಸಾರ್ವಜನಿಕ ಜೀವನದಲ್ಲಿ ಇನ್ನು ಸಾಕಷ್ಟು ಸಾಧಿಸುತ್ತಿದ್ದೆ ಎಂದು ಹೇಳಿದ್ದಾರೆ.
ಮೇಕಪ್ ಹಾಕಿಕೊಂಡು ಯಾರು ಮದ್ಯ ಸೇವಿಸಬಾರದು. ಅಥವಾ ಮದ್ಯ ಸೇವಿಸಿದ ಮೇಲೆ ಯಾರು ಮೇಕಪ್ ಹಾಕಬಾರದು. ಇದು ನಾನು ಕಲಿತ ಪಾಠ. ಅದಕ್ಕೆ ಕಾರಣ ನಮ್ಮ ಗುರುಗಳು ಕೆ. ಬಾಲಚಂದರ್ ಸರ್ ಅಂದಯ ಬೈದು ಬುದ್ದಿ ಹೇಳಿದ್ದು. ಅದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ 'ತಪ್ಪಿದ ತಾಳ' ಚಿತ್ರೀಕರಣದ ವೇಳೆ ನಡೆದ ಘಟನೆ ಎಂದು ರಜನಿಕಾಂತ್ ಹಳೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
"ಅಪೂರ್ವ ರಾಗಂಗಳ್ ಬಳಿಕ 'ತಪ್ಪಿದ ತಾಳ' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ. ಆಗ ತಮಿಳಿನ ಹೆಸರಾಂತ ನಟ ನಾಗೇಶ್ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವತ್ತು ಸಂಜೆ 7 ಗಂಟೆಗೆ ಚಿತ್ರೀಕರಣ ಮುಗೀತು ಅಂದ್ರು. ನಾನು ಹೋಗಿ ಸ್ನಾನ ಮಾಡಿ ಕೊಂಚ ಮದ್ಯ ಸೇವಿಸಿದ್ದೆ" ಎಂದು ಆ ಘಟನೆಯನ್ನು ರಜನಿಕಾಂತ್ ನೆನಪಿಸಿಕೊಂಡಿದ್ದರು.

"ಚಿತ್ರೀಕರಣ ಮುಗೀತು ಎಂದು ನಾನು ಸುಮ್ಮನಾಗಿದ್ದೆ. ಕೂಡಲೇ ಸಹ ನಿರ್ದೇಶಕ ಬಂದು ಸರ್, ಮತ್ತೊಂದು ಸನ್ನಿವೇಶ ಚಿತ್ರೀಕರಣ ಅಂತೆ. ಬಾಲಚಂದರ್ ಸರ್ ಕರೆದರು ಎಂದು ಬಂದು ಹೇಳಿದರು. ಮತ್ತೆ ಶೂಟಿಂಗ್ ಅಂದಾಗ ಶಾಕ್ ಆಗಿದ್ದೆ. ಕೂಡಲೇ ಸ್ನಾನ ಮಾಡಿ, ಬಾಯಿ ತೊಳೆದು ಹೋಗಿ ಮೇಕಪ್ ಹಾಕಿಕೊಂಡು ನಿಂತೆ. ಆದರೆ ಬಾಲಚಂದರ್ ಸರ್ಗೆ ಗೊತ್ತಾಗಿಬಿಡ್ತು" ಎಂದು ಅವತ್ತು ಬೈಸಿಕೊಂಡಿದ್ದನ್ನು ತಲೈವಾ ಬಿಚ್ಚಿಟ್ಟಿದ್ದರು.
"ನಾನು ಕುಡಿದಿದ್ದು ಗೊತ್ತಾಗಿ ರೂಮ್ಗೆ ಬರಲು ಹೇಳಿದರು. ಭಯದಿಂದಲೇ ಹೋದೆ. ಅವರು ಏನೂ ಹೇಳಲಿಲ್ಲ. ನಿನಗೆ ನಾಗೇಶ್ ಗೊತ್ತಲ್ವಾ? ಅವರು ಎಂತಹ ನಟ ಗೊತ್ತಾ? ಅವರ ಮುಂದೆ ನೀನು ಒಂದು ಇರುವೆಗೂ ಸಮ ಅಲ್ಲ. ಆದರೆ ಕುಡಿದು ಕುಡಿದು ಆತ ಜೀವನ ಹಾಳು ಮಾಡಿಕೊಂಡ. ಇನ್ನು ಮುಂದೆ ನೀನು ಶೂಟಿಂಗ್ ವೇಳೆ ಕುಡಿದಿದ್ದು ಗೊತ್ತಾದರೆ ಚಪ್ಪಲಿಯಲ್ಲಿ ಹೊಡಿತ್ತೀನಿ ಅಂದ್ರು. ಅದೇ ಕೊನೆ, ಮತ್ತೆಂದೂ ಚಿತ್ರೀಕರಣದ ವೇಳೆ ನಾನು ಕುಡಿಯಲ್ಲ" ಎಂದು ರಜನಿಕಾಂತ್ ವಿವರಿಸಿದ್ದರು. ಸದ್ಯ ಈ ವೀಡಿಯೋ ವೈರಲ್ ಆಗ್ತಿದೆ.


Click it and Unblock the Notifications











