ಚಿರುಗೆ 'ಸಿಪಾಯಿ' ಚಿತ್ರದ ಸಂಭಾವನೆಯಾಗಿ 3 ಎಕರೆ ಜಾಗ ಬರೆದುಕೊಟ್ಟಿದ್ರಾ ಕ್ರೇಜಿಸ್ಟಾರ್?
ತೆಲುಗು ನಟ ಚಿರಂಜೀವಿ. ಭಾರತೀಯ ಚಿತ್ರರಂಗದ ಮೆಗಾಸ್ಟಾರ್. ಅಸಂಖ್ಯಾತ ಅಭಿಮಾನಿಗಳ ಆರಾಧ್ಯದೈವ. ಕನ್ನಡ ಸಿನಿರಸಿಕರಿಗೂ ಚಿರು ಚಿರಪರಿಚಿತ. ಕನ್ನಡದ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು 80-90ರ ದಶಕದಲ್ಲಿ ಚಿರು ಸಿನಿಮಾಗಳು ಕರ್ನಾಟಕದಲ್ಲಿ ಕೂಡ ಭರ್ಜರಿ ಪ್ರದರ್ಶನ ಕಂಡಿದ್ದವು.
1996ರಲ್ಲಿ ತೆರೆಕಂಡ 'ಸಿಪಾಯಿ' ಚಿತ್ರದ ಮೂಲಕ ಮೆಗಾಸ್ಟಾರ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಅವರನ್ನು ಅಂದು ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡಕ್ಕೆ ಕರೆತಂದಿದ್ದರು. ಆ ಕಾಲಕ್ಕೆ ಚಿರು ಬಹುಬೇಡಿಕೆಯ ನಟನಾಗಿದ್ದರು. 1992ರಲ್ಲೇ 'ಆಪತ್ಪಾಂದವುಡು' ಎನ್ನುವ ಚಿತ್ರಕ್ಕೆ 1.25 ಕೋಟಿ ಸಂಭಾವನೆ ಪಡೆದು ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದಿದ್ದರು. ಮ್ಯಾಗಜೀನ್ವೊಂದರಲ್ಲಿ ಅಮಿತಾಬ್ ಬಚ್ಚನ್ಗಿಂತ ದೊಡ್ಡ ನಟ ಎಂದು ಲೇಖನ ಪ್ರಕಟವಾಗಿತ್ತು.

90ರ ದಶಕದಲ್ಲಿ ಮೆಗಾಸ್ಟಾರ್ ಕ್ರೇಜ್ ಆ ರೀತಿ ಇತ್ತು. 1993ರಲ್ಲಿ ಬಂದ 'ಮುಠ್ಠಾಮೇಸ್ತ್ರಿ' ಸಿನಿಮಾ ಕರ್ನಾಟಕದಲ್ಲೂ ಭರ್ಜರಿ ಯಶಸ್ಸು ಗಳಿಸಿತ್ತು. ಅಂತಹ ಸಮಯದಲ್ಲಿ 'ಸಿಪಾಯಿ' ಚಿತ್ರಕ್ಕೆ ಅವರನ್ನು ರವಿಚಂದ್ರನ್ ಕರೆತರುವ ಪ್ರಯತ್ನ ಮಾಡಿದ್ದರು. ಅದರಲ್ಲಿ ಯಶಸ್ಸು ಕೂಡ ಆಗಿದ್ದರು. ಮೊದಲಿಗೆ ರವಿ ಸಣ್ಣ ಅತಿಥಿ ಪಾತ್ರ ಎಂದಿದ್ದರು. ಎರಡ್ಮೂರು ದಿನ ಚಿತ್ರೀಕರಣ ಎಂದೇ ಮೆಗಾಸ್ಟಾರ್ ಭಾವಿಸಿದ್ದರು. ಆದರೆ ಅದು ಕೊಂಚ ದೊಡ್ಡ ಪಾತ್ರ ಎಂದು ಗೊತ್ತಾದಾಗಲೂ ಕ್ರೇಜಿಸ್ಟಾರ್ ಮಾತಿಗೆ ಒಪ್ಪಿ ನಟಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ಅದ್ಧೂರಿ ಸಿನಿಮಾಗಳನ್ನು ನಿರ್ಮಿಸಿ ಎನ್. ವೀರಾಸ್ವಾಮಿ ದೊಡ್ಡ ಹೆಸರು ಮಾಡಿದ್ದರು. ಮುಂದೆ ಪುತ್ರ ರವಿಚಂದ್ರನ್ 'ಪ್ರೇಮಲೋಕ', 'ಶಾಂತಿಕ್ರಾಂತಿ' ಹಾಗೂ 'ರಾಮಾಚಾರಿ' ರೀತಿಯ ಸಿನಿಮಾಗಳ ಮೂಲಕ ಗಮನ ಸೆಳೆದರು. 'ಶಾಂತಿಕ್ರಾಂತಿ' ಸಿನಿಮಾ ಸೋತರು ಅವತ್ತಿನ ಕಾಲಕ್ಕೆ ರವಿಚಂದ್ರನ್ ಸಾಹಸ ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತಾಗಿತ್ತು. 4 ಭಾಷೆಗಳಲ್ಲಿ ಸ್ಟಾರ್ ನಟರನ್ನು ಬಳಸಿಕೊಂಡು ಸಿನಿಮಾ ಮಾಡಿ ಗಮನ ಸೆಳೆದಿದ್ದರು.
'ಸಿಪಾಯಿ' ಚಿತ್ರದಲ್ಲಿ ಒಂದು ಸಣ್ಣ ಅತಿಥಿ ಪಾತ್ರ ಇದೆ, ನೀವು ಮಾಡಬೇಕು ಎಂದು ರವಿಚಂದ್ರನ್ ಫೋನ್ ಮಾಡಿ ಕೇಳಿದ್ದರು. ಕೂಡಲೇ ಚಿರಂಜೀವಿ ಒಪ್ಪಿಕೊಂಡಿದ್ದರಂತೆ. ಈ ವಿಚಾರವನ್ನು ಈ ಹಿಂದೆ ಟಿವಿ9 ಸಂದರ್ಶನದಲ್ಲಿ ಖುದ್ದು ಕ್ರೇಜಿಸ್ಟಾರ್ ವಿವರಿಸಿದ್ದರು. ಬಳಿಕ ಹೋಗಿ ಕಥೆ ಹೇಳಿ 12 ದಿನ ಕಾಲ್ಶೀಟ್ ಬೇಕು ಎಂದೆ. ಮರುದಿನ ಹೋಗಿ ಅವರ ಬಾಮೈದ ಅಲ್ಲು ಅರವಿಂದ್ ಬಳಿ ಸಂಭಾವನೆ ಎಷ್ಟು ಎಂದು ಕೇಳಿದ್ದೆ. ನಿಮಗೋಸ್ಕರ ಸಿನಿಮಾ ಮಾಡ್ತಿರೋದು ನೀವು ಎಷ್ಟು ಕೊಡ್ತಿರೋ ಕೊಡಿ ಅಂದಿದ್ರು"

"ಒಂದೇ ಒಂದು ಮಾತಿಗೆ ಚಿರಂಜೀವಿ ಅವರು ಬಂದು ನಟಿಸಿದ್ದರು. ಅದಕ್ಕೆ ನಾನು ಶರಣು. ಅವತ್ತಿಗೆ ದೊಡ್ಡ ಸ್ಟಾರ್, ಅಂತಹವರು ನೀವು ಏನು ಸಂಭಾವನೆ ಕೊಡ್ತಿರೋ ಕೊಡಿ ಅಂದ್ರು. ಸಿನಿಮಾ ರಿಲೀಸ್ ಆಗುವರೆಗೂ ಸಂಭಾವನೆ ಅಂತ ಕೊಡಲಿಲ್ಲ. ಸಿನಿಮಾ ರಿಲೀಸ್ಗೆ ಒಂದು ದಿನ ಮೊದಲು ಒಂದಷ್ಟು ಹಣ ಕೊಡಲು ಹೋದೆ. ಈಗ ಯಾಕೆ ಹಣ, ಸಿನಿಮಾ ರಿಲೀಸ್ ಬಳಿಕ ಕೊಡಿ ಅಂದ್ರು"
"ಅಕಸ್ಮಾತ್ ಸಿನಿಮಾ ಕೈಕೊಟ್ಟರೆ? ಏನಾದರೂ ಆಗಿಬಿಟ್ರೆ? ಕೊಡುವುದಕ್ಕೆ ಮನಸ್ಸು ಬರುತ್ತೋ? ಇಲ್ವೋ? ನನ್ನ ಬಳಿ ಹಣ ಇರುತ್ತೋ ಇಲ್ವೋ ಗೊತ್ತಿಲ್ಲ ಎಂದು ಒಂದಷ್ಟು ಮೊತ್ತ ಕೊಟ್ಟುಬಂದೆ. ಅಂತಹ ದೊಡ್ಡ ನಟರ ಗುಣಗಳೇ ನಮಗೆ ಸಾಕಷ್ಟು ಪಾಠ ಕಲಿಸಿದ್ದು" ಎಂದು ರವಿಚಂದ್ರನ್ ವಿವರಿಸಿದ್ದರು. ಆದರೆ 'ಸಿಪಾಯಿ' ಚಿತ್ರಕ್ಕೆ ಸಂಭಾವನೆಯಾಗಿ ರವಿಚಂದ್ರನ್ 3 ಎಕರೆ ಜಾಗವನ್ನು ಚಿರುಗೆ ಕೊಟ್ಟರು ಎನ್ನುವ ವದಂತಿಯೊಂದು ಹರಿದಾಡಿತ್ತು.
ರವಿಚಂದ್ರನ್ ಕೊಟ್ಟ ಸಂಭಾವನೆಯನ್ನು ಚಿರಂಜೀವಿ ಸ್ವೀಕರಿಸಲಿಲ್ಲ. ಅದಕ್ಕಾಗಿ ದೇವನಹಳ್ಳಿ ಬಳಿ 3 ಎಕರೆ ಜಾಗವನ್ನು ಬರೆದು ಕೊಟ್ಟಿದ್ದರು ಎಂದು ಆಗಿನ ಕಾಲಕ್ಕೆ ಗುಲ್ಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇವತ್ತಿಗೂ ದೇವನಹಳ್ಳಿ ಬಳಿ ಚಿರಂಜೀವಿ ಒಂದು ಫಾರ್ಮ್ಹೌಸ್ ಹೊಂದಿದ್ದಾರೆ. ಆಗಾಗ್ಗೆ ಕುಟುಂಬ ಸಮೇತ ಅಲ್ಲಿಗೆ ಬಂದು ಕಾಲ ಕಳೆಯುತ್ತಾರೆ. ಆದರೆ ಇದನ್ನು ರವಿಚಂದ್ರನ್ ಕೊಟ್ಟಿದ್ದು ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎನ್ನಲಾಗುತ್ತದೆ.
'ಸಿಪಾಯಿ' ಚಿತ್ರದಲ್ಲಿ ಮೇಜರ್ ಚಂದ್ರಕಾಂತ್ ಪಾತ್ರದಲ್ಲಿ ಮೆಗಾಸ್ಟಾರ್ ಮಿಂಚಿದ್ದರು. 'ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ' ಸಿನಿಮಾ ಇವತ್ತಿಗೂ ಕನ್ನಡ ಸಿನಿರಸಿಕ ಫೇವರಿಟ್. ಬನಶಂಕರಿ ಬಳಿಯ ಮೀನಾಕ್ಷಿ ದೇವಸ್ಥಾನದಲ್ಲಿ ಮೊದಲ ದಿನ ಚಿತ್ರೀಕರಣ. ಅಲ್ಲಿಗೆ ಚಿರು ಹೆಲಿಕಾಪ್ಟರ್ನಲ್ಲಿ ಬಂದು ಇಳಿದಿದ್ದರು. ಹೈದರಾಬಾದ್ನಿಂದ ಅವರನ್ನು ರವಿಚಂದ್ರನ್ ಹೆಲಿಕಾಪ್ಟರ್ನಲ್ಲಿ ಕರೆಸಿಕೊಂಡಿದ್ದರು. ಬಳಿಕ ಕಾರಿನಲ್ಲಿ ಶೂಟಿಂಗ್ ಸೆಟ್ಗೆ ಬಂದಿದ್ದರು.


Click it and Unblock the Notifications











