"ಕೆನಡಾದಿಂದ ಕ್ಯಾಮರಾ ತಂದು ಲಂಡನ್ನಲ್ಲಿ ಆಕ್ಟೋಪಸ್ ಮಾಡ್ಸಿ ಶೂಟಿಂಗ್": ಶಂಕರ್ ನಾಗ್ ಆಕಾಶವಾಣಿ ಸಂದರ್ಶನ ಭಾಗ-2
ನಟನಾಗಿ ಮಾತ್ರವಲ್ಲದೇ ಶಂಕರ್ ನಾಗ್ ತಮ್ಮ ನಿರ್ದೇಶನದಿಂದಲೂ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದವರು. ಪಾದರಸದಂತ ಸದಾ ಕ್ರಿಯಾಶೀಲರಾಗಿದ್ದ ಶಂಕ್ರಣ್ಣ 'ಆಕ್ಸಿಡೆಂಡ್', 'ಗೀತಾ', 'ಒಂದು ಮುತ್ತಿನ ಕಥೆ' ಸೇರಿದಂತೆ ಹಲವು ಅದ್ಭುತ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಸಂಕೇತ್ ಸ್ಟುಡಿಯೋ ಸ್ಥಾಪಿಸಿದ್ದರು.
1988ರಲ್ಲಿ ಆಕಾಶವಾಣಿಗೆ ನೀಡಿದ ಸಂದರ್ಶನದಲ್ಲಿ ಶಂಕ್ರಣ್ಣ, ತಮ್ಮ ಸಿನಿಮಾಗಳ ಬಗ್ಗೆ ಮಾತನಾಡಿದ್ದರು. 'ಒಂದು ಮುತ್ತಿನ ಕಥೆ' ಸಿನಿಮಾ ಚಿತ್ರೀಕರಿಸಿದ ರೋಚಕ ವಿಷಯಗಳನ್ನು ಹೇಳಿದ್ದರು. ಅವತ್ತಿನ ಕಾಲಕ್ಕೆ ನೀರಿನ ಆಳದಲ್ಲಿ ಸಿನಿಮಾ ಚಿತ್ರೀಕರಣ ನಡೆಸಿದ್ದು ಹೇಗೆ? ಅದಕ್ಕಾಗಿ ತಯಾರಿ ಹೇಗಿತ್ತು? ಎನ್ನುವುದನ್ನು ವಿವರಿಸಿದ್ದರು. ಸಂಕೇತ್ ಸ್ಟುಡಿಯೋ ನಿರ್ಮಾಣ, ಇಳಯರಾಜಾ ಸಂಗೀತದ ಬಗ್ಗೆಯೂ ಕರಾಟೆ ಕಿಂಗ್ ಮಾತನಾಡಿದ್ದರು.

"ದೂರ ದೇಶಕ್ಕೆ ಹೋಗುವ ಅವಕಾಶ ನನಗೆ 'ಒಂದು ಮುತ್ತಿನ ಕಥೆ' ಚಿತ್ರದಿಂದ ಸಿಕ್ಕಿತ್ತು. ಎರಡು ಕಾರಣಗಳಿಂದ. ಆ ಚಿತ್ರಕ್ಕೆ ನೀರಿನ ಆಳದಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಎರಡನೇಯದು ನೀರಿನಲ್ಲಿ ಆಕ್ಸಿಜನ್ ಮಾಸ್ಕ್ ಸೇರಿದಂತೆ ಯಾವುದೇ ಸಹಾಯ ಇಲ್ಲದೇ ಶೂಟಿಂಗ್ ಮಾಡಬೇಕಿತ್ತು. ಸ್ವಲ್ಪ ಕಷ್ಟನೇ ಆಯಿತು. ಕೊನೆಗೆ ಕೆನಡಾಗೆ ಹೋಗಿ ಕ್ಯಾಮರಾ ತಂದು ಲಂಡನ್ಗೆ ಹೋಗಿ ಒಂದು ಆಕ್ಟೋಪಸ್ ಮಾಡಿಸಿ, ಮಾಲ್ಡೀವ್ಸ್ಗೆ ಹೋಗಿ ಜರ್ಮನ್ ಕ್ಯಾಮರಾಮನ್ ಇಟ್ಕೊಂಡು ಅಂಡರ್ ವಾಟರ್ ಶೂಟಿಂಗ್ ಮಾಡಿದ್ವಿ."
ಕನ್ನಡ ಸಿನಿರಸಿಕರು ಎಂದೂ ಮರೆಯಲಾಗದ ಸಿನಿಮಾ 'ಒಂದು ಮುತ್ತಿನ ಕಥೆ'. 1987ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಅವತ್ತಿನ ಕಾಲಕ್ಕೆ ಸ್ಟಾರ್ ಡೈರೆಕ್ಟರ್ ಶಂಕರ್ ನಾಗ್ ಹಾಗೂ ಸೂಪರ್ ಸ್ಟಾರ್ ರಾಜ್ಕುಮಾರ್ ಕಾಂಬಿನೇಷನ್ ಭಾರೀ ಸಂಚಲನ ಸೃಷ್ಟಿಸಿತ್ತು. ದ್ವಾರಕಾನಾಥ್, ರಾಮದಾಸ್, ಎ. ಎಸ್ ಮೂರ್ತಿ, ಡಿ. ಕೆ. ಕೆ ಪ್ರಸಾದ್ ಸಿನಿಮಾ ನಿರ್ಮಾಣ ಮಾಡಿದ್ದರು. ವೈದ್ಯನಾಥ್ ಸಂಗೀತ, ಗೌರಿ ಶಂಕರ್ ಛಾಯಾಗ್ರಹಣ ಹೈಲೆಟ್ ಆಗಿತ್ತು. ಇವತ್ತಿಗೂ ಸಿನಿಮಾ ಹಾಡುಗಳು ಜನ ಜನಿತ.

ಸಮುದ್ರದಲ್ಲಿ ಮುತ್ತುಗಳನ್ನು ಹುಡುಕುವ ಸಮುದಾಯದ ಐತು ಮತ್ತವನ ಬದುಕಿನ ಕಥೆಯನ್ನು ಶಂಕರ್ ನಾಗ್ ತೆರೆಗೆ ತಂದಿದ್ದರು. ಐತು ತನಗೆ ಸಿಕ್ಕ ಅಮೂಲ್ಯವಾದ ಮುತ್ತನ್ನು ಮಾರಲು ಮುಂದಾದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ? ಆ ಮುತ್ತಿನಿಂದ ಆತ ತನ್ನವರನ್ನೆಲ್ಲಾ ಹೇಗೆ ದೂರ ಮಾಡಿಕೊಳ್ಳುತ್ತಾನೆ? ತನ್ನ ಬಾಳಿಗೆ ಅದೃಷ್ಟ ಎಂದು ಭಾವಿಸಿದ್ದ ಅದೇ ಮುತ್ತು ಹೇಗೆ ಆತನ ಬಾಳಿಗೆ ಮೃತ್ಯುವಾಗುತ್ತದೆ? ಕೊನೆಗೆ ಆ ಅದೃಷ್ಟವೇ ಬೇಡ ಎಂದು ಐತು ಅದನ್ನು ಸಮದ್ರಕ್ಕೆ ಬಿಸಾಕಿಬಿಡುವ ಕತೆ ಸೊಗಸಾಗಿದೆ. ಅಂದಿಗೆ 58 ವರ್ಷ ವಯಸ್ಸಿನ ಅಣ್ಣಾವ್ರು ಸಮುದ್ರದ ಆಳದಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದೇ ಬಲು ರೋಚಕ.
1947 ರಲ್ಲಿ ಜಾನ್ ಸ್ಟೈನ್ಬೆಕ್ ಬರೆದ 'ದಿ ಪರ್ಲ್' ಎನ್ನುವ ಕಾದಂಬರಿ ಆಧರಿಸಿ ಶಂಕರ್ ನಾಗ್ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಬಾಕ್ಸಾಫೀಸ್ನಲ್ಲಿ ಸಿನಿಮಾ ದೊಡ್ಡದಾಗಿ ಸದ್ದು ಮಾಡದಿದ್ದರೂ ಕನ್ನಡ ಚಿತ್ರರಂಗದ ಇತಿಹಾಸಲದಲ್ಲಿ ಕಲ್ಟ್ ಕ್ಲಾಸಿಕ್ ಸಿನಿಮಾ ಎನಿಸಿಕೊಂಡಿದೆ.
ಚಿತ್ರದಲ್ಲಿ ಡಾ. ರಾಜ್ಕುಮಾರ್ ಜೋಡಿಯಾಗಿ ಅರ್ಚನಾ ನಟಿಸಿದ್ದರು. ಶಿವರಾಂ, ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ಬಾಲಕೃಷ್ಣ, ರಮೇಶ್ ಭಟ್, ತೂಗುದೀಪ ಶ್ರೀನಿವಾಸ್, ಸುಂದರ್ ರಾಜ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಚಿತ್ರದ ಎಲ್ಲಾ ಹಾಡುಗಳಿಗೆ ಚಿ. ಉದಯ್ ಶಂಕರ್ ಸಾಹಿತ್ಯ ಬರೆದಿದ್ದರು. ಸಿನಿಮಾ ಹಿಟ್ ಆಗದಿದ್ದರೂ 80ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲೇ ಟೆಕ್ನಿಕಲಿ ಬಹಳ ಅಡ್ವಾನ್ಸ್ಡ್ ಸಿನಿಮಾ ಎನಿಸಿಕೊಂಡಿತ್ತು.


Click it and Unblock the Notifications











