ಕನ್ನಡ ಬಿಟ್ಟು ನಟಿ ಸೌಂದರ್ಯ ತೆಲುಗು ಚಿತ್ರರಂಗಕ್ಕೆ ಹೋಗಿದ್ದೇಕೆ?
ಬಹುಭಾಷಾ ನಟಿ ಸೌಂದರ್ಯ ಬಾರದಲೋಕಕ್ಕೆ ಪಯಣ ಬೆಳೆಸಿ 20 ವರ್ಷ ಕಳೆದಿದೆ. ಏಪ್ರಿಲ್ 17, 2004ರಂದು ಅವರು ಲಘು ವಿಮಾನ ದುರಂತದಲ್ಲಿ ಕೊನೆಯುಸಿರೆಳೆದಿದ್ದರು. ಅಭಿಮಾನಿಗಳು ಇಂದಿಗೂ ಆ ಸೌಂದರ್ಯವತಿಯನ್ನು ಮರೆತ್ತಿಲ್ಲ. ತಮ್ಮ ಪಾತ್ರಗಳ ಮೂಲಕ ಆಕೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ.
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಸೌಮ್ಯ ಸತ್ಯ ನಾರಾಯಣ ತಮ್ಮ ಹೆಸರನ್ನು ಸೌಂದರ್ಯ ಎಂದು ಬದಲಿಸಿಕೊಂಡು ಚಿತ್ರರಂಗಕ್ಕೆ ಬಂದಿದ್ದರು. 1992ರಲ್ಲಿ 'ಗಂಧರ್ವ' ಚಿತ್ರದಲ್ಲಿ ಮೊದಲ ಬಾರಿಗೆ ಆಕೆ ಬಣ್ಣ ಹಚ್ಚಿದ್ದರು. ಕನ್ನಡದ ನಟಿಯಾಗಿದ್ದರೂ ಸೌಂದರ್ಯ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು. ಆಗೊಮ್ಮೆ ಈಗೊಮ್ಮೆ ಅವಕಾಶ ಸಿಕ್ಕಾಗ ಬಂದು ನಟಿಸುತ್ತಿದ್ದರು. ಕೊನೆಯದಾಗಿ 'ಆಪ್ತಮಿತ್ರ' ಚಿತ್ರದಲ್ಲಿ ಮಿಂಚಿ ಕನ್ನಡ ಸಿನಿರಸಿಕರನ್ನು ರಂಜಿಸಿದರು.

ಸೌಂದರ್ಯ ವಿಚಾರದಲ್ಲಿ ಸಾಕಷ್ಟು ಜನರಿಗೆ ಹಲವು ಪ್ರಶ್ನೆಗಳಿವೆ. ಅದರಲ್ಲೂ ಆಕೆ ಯಾಕೆ ಎಕ್ಸ್ಪೋಸ್ ಮಾಡುತ್ತಿರಲಿಲ್ಲ, ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಹೆಚ್ಚು ನಟಿಸಿದ್ದೇಕೆ? ಎನ್ನುವ ಅನುಮಾನವಿದೆ. ಈ ಬಗ್ಗೆ ಖುದ್ದು ಸೌಂದರ್ಯ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಮದುವೆಯಾದ ಹೊಸತರಲ್ಲಿ ಸೌಂದರ್ಯ ಈಟಿವಿ ಕನ್ನಡ ವಾಹಿನಿಗೆ ಸಂದರ್ಶನ ನೀಡಿದ್ದರು. ಆಗ ಸಹೋದರ ಅಮರ್ನಾಥ್ ಹಾಗೂ ಪತಿ ರಘು ಸಹ ಮಾತನಾಡಿದ್ದರು.
ತಾರೆಯರ ಮನೆ-ಮನ ಎನ್ನುವ ಸಂದರ್ಶನದಲ್ಲಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸೌಂದರ್ಯ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಕನ್ನಡ ಚಿತ್ರಗಳಲ್ಲಿ ಯಾಕೆ ಹೆಚ್ಚು ನಟಿಸಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದರು. "ನಾನು ತೆಲುಗಿಗೆ ಹೋಗಲು ಬಲವಾದ ಕಾರಣ ಏನು ಇರಲಿಲ್ಲ. ಅನಿವಾರ್ಯವೂ ಅಲ್ಲ, ಆಕಸ್ಮಿಕ ಎನ್ನಬಹುದು. ಕನ್ನಡದಲ್ಲಿ ನನ್ನ 2ನೇ ಸಿನಿಮಾ 'ಅಣ್ಣ-ತಂಗಿ'. ತೆಲುಗು ನಿರ್ದೇಶಕ ಪೇರಾಲ ನಿರ್ದೇಶನ ಮಾಡಿದರು. ಶೂಟಿಂಗ್ ವೇಳೆ ತೆಲುಗು ಸಿನಿಮಾದಲ್ಲಿ ನಟಿಸುತ್ತೀಯಾ? ಎಂದರು. ಹೌದು ಎಂದೆ. ಅದು ಹಾಗೇ ಮುಂದುವರೀತು" ಎಂದಿದ್ದರು.

ಸಿನಿಮಾಗಳಲ್ಲಿ ಎಕ್ಸ್ಪೋಸ್ ಮಾಡಿದರೆ ಮಾತ್ರ ಅವಕಾಶಗಳು ಸಿಗುತ್ತವೆ. ಎನ್ನುವ ಮಾತನ್ನು ಸೌಂದರ್ಯ ಒಪ್ಪುತ್ತಿರಲಿಲ್ಲ. "ನಾನು ಕರ್ಮಷಿಯಲ್ ಸಿನಿಮಾಗಳಲ್ಲಿ ನಟಿಸಿದ್ದೇನೆ, ಆದರೆ ಎಂದು ಎಲ್ಲೆ ದಾಟಲಿಲ್ಲ. ನನ್ನ ನಿಯಮಗಳು ನನಗಿತ್ತು. ನಾನು ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕ. ಚಿತ್ರರಂಗದಲ್ಲಿರಬೇಕು ಎಂದ್ರೆ ನನ್ನ ನಿಯಮಗಳನ್ನು ಮೀರಬಾರದು ಎಂದುಕೊಂಡಿದ್ದೆ. ಹಾಗಿದ್ದರೆ ಮಾತ್ರ ಮುಂದುವರೆಯುತ್ತೇನೆ, ಇಲ್ಲದಿದ್ದರೆ ಈ ಕ್ಷೇತ್ರವೇ ಬೇಡ ಎಂದುಕೊಂಡಿದ್ದೆ"
"ಒಬ್ಬ ಕಲಾವಿದೆ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಲು ಎಕ್ಸ್ಪೋಸ್ ಮಾಡಲೇಬೇಕೆಂದು ಇಲ್ಲ. ಸಭ್ಯತೆ ಗಡಿ ದಾಟಿದರೆ ಮಾತ್ರ ಜನಪ್ರಿಯರಾಗುತ್ತಾರೆ ಎನ್ನುವುದು ಸುಳ್ಳು. ಅವರು ಮಾಡುವ ಪಾತ್ರಗಳು ಎಷ್ಟರಮಟ್ಟಿಗೆ ಜನರ ಮನಸ್ಸಿನಲ್ಲಿ ಉಳಿಯುತ್ತದೆ ಎನ್ನುವುದು ಮುಖ್ಯ. ಬರೀ ಎಕ್ಸ್ಪೋಸಿಂಗ್ನಿಂದ ಯಾರು ಜನಪ್ರಿಯರಾಗುವುದಿಲ್ಲ. ಒಂದು ವೇಳೆ ಆದರೂ ಅದು ತಾತ್ಕಾಲಿಕ. ಬಹಳ ದಿನ ಜನ ನೆನಪಿಟ್ಟುಕೊಳ್ಳುವುದಿಲ್ಲ. ಗ್ಲಾಮರ್ ಮುಖ್ಯ. ಆದ್ರೆ ಅದೇ ಎಲ್ಲವೂ ಅಲ್ಲ. ಅದಕ್ಕೆ ನಾನೇ ಉದಾಹರಣೆ" ಎಂದಿದ್ದರು.
ಚುನಾವಣೆ ಪ್ರಚಾರಕ್ಕಾಗಿ ಅಂದು (2004, ಏಪ್ರಿಲ್ 17) ನಟಿ ಸೌಂದರ್ಯ ತಮ್ಮ ಸಹೋದರ ಅಮರ್ನಾಥ್ ಜೊತೆ ಆಂಧ್ರಕ್ಕೆ ಹೊರಟಿದ್ದರು. ವಿಮಾನ ಟೇಕ್ಆಫ್ ಆಗಿದ್ದ ಕೆಲವೇ ನಿಮಿಷಗಳಲ್ಲಿ ಪತನವಾಗಿ ಆಕೆ ಸಜೀವ ದಹನವಾಗಿದ್ದರು. ಆ ಸಮಯದಲ್ಲಿ ಆಕೆ ಗರ್ಭೀಣಿ ಆಗಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು. 20 ವರ್ಷ ಕಳೆದರೂ ಅಭಿಮಾನಿಗಳು ಆಕೆಯನ್ನು ಮರೆತ್ತಿಲ್ಲ.


Click it and Unblock the Notifications











