"ನಾವು 5 ಜನ ಇದ್ದೇವೆ.. ನಮ್ಮಿಚ್ಚೆಯಂತೆ ಬಳಸಿಕೊಳ್ಳುತ್ತೇವೆ" ಎಂದಿದ್ದ ತಮಿಳು ನಿರ್ಮಾಪಕ: ಕಿಡಿಕಾರಿದ್ದ ಶ್ರುತಿ ಹರಿಹರನ್
ಶ್ರುತಿ ಹರಿಹರನ್ ಕನ್ನಡದ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಕೇರಳ ಮೂಲದವರಾದರೂ, ಮಲಯಾಳಂ ಸಿನಿಮಾದಿಂದಲೇ ನಟನೆ ಶುರು ಮಾಡಿದ್ದರೂ ಜನಪ್ರಿಯತೆ ಗಳಿಸಿದ್ದು ಮಾತ್ರ ಕನ್ನಡ ಚಿತ್ರರಂಗದಲ್ಲಿ. ಕನ್ನಡದಲ್ಲಿ ನಟಿಸಿದ 'ಲೂಸಿಯಾ' ಸಿನಿಮಾ ಶ್ರುತಿ ಹರಿಹರನ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟಿತ್ತು.
ಇಲ್ಲಿಂದ ಕನ್ನಡ, ತಮಿಳು ಚಿತ್ರರಂಗದಲ್ಲಿ ಓಡಾಡಿಕೊಂಡಿದ್ದಾರೆ. ಒಮ್ಮೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದರೆ, ಇನ್ನೊಮ್ಮೆ ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಿನಿಮಾದಲ್ಲಿ ತಮ್ಮ ಪಾತ್ರದ ಮೂಲಕ ಎಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೋ ಅಷ್ಟೇ ವಿವಾದಗಳಿಂದಲೂ ಜನಪ್ರಿಯರಾಗಿದ್ದಾರೆ.

ಕಾಸ್ಟಿಂಗ್ ಕೌಚ್, ಮೀಟೂ ಸಂದರ್ಭದಗಳಲ್ಲಿ ಶ್ರುತಿ ಹರಿಹರನ್ ಓಪನ್ ಆಗಿ ಮಾತಾಡಿದ್ದರು. ಶ್ರುತಿ ಹರಿಹರನ್ ನೀಡಿದ ಬಹಿರಂಗ ಹೇಳಿಕೆ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಮಾಡಿದ ಆರೋಪ ದಕ್ಷಿಣ ಭಾರತದಲ್ಲಿ ದೊಡ್ಡ ಹಲ್ಚಲ್ ಅನ್ನೇ ಎಬ್ಬಿಸಿತ್ತು. ಆದರೆ, ಶ್ರುತಿ ಹರಿಹರನ್ ತಮಿಳು ನಿರ್ಮಾಪಕರ ಮೇಲೂ ಇಂತಹದ್ದೇ ಬಹಿರಂಗ ಆರೋಪ ಮಾಡಿದ್ದರು. ಅದೇನು ಅಂತ ತಿಳಿಯಲು ಮುಂದೆ ಓದಿ.
ಶ್ರುತಿ ಹರಿಹರನ್ ಕನ್ನಡ ಸಿನಿಮಾಗಳಿಂದ ಹೆಚ್ಚು ಜನಪ್ರಿಯರಾಗಿದ್ದರೂ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದರೆ, ಸಿನಿಮಾರಂಗದಲ್ಲಿ ನೆಲೆಯೂರುವುದಕ್ಕೆ ಪ್ರಯತ್ನ ಪಡುತ್ತಿದ್ದ ಆರಂಭಿಕ ದಿನಗಳಲ್ಲಿ ಅವರಿಗಾದ ಕೆಲವು ಕಹಿ ಅನುಭವಗಳನ್ನು ಹೇಳಿಕೊಂಡಿದ್ದರು. 2018ರಲ್ಲಿ ಹೈದರಾಬಾದ್ನಲ್ಲಿ ಇಂಡಿಯಾ ಟುಡೇ ನಡೆಸಿದ ಸೌತ್ ಕಾನ್ಕ್ಲೇವ್ನಲ್ಲಿ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದರು.
ಇಂಡಿಯಾ ಟು ಡೇ ಸೌತ್ ಕಾನ್ಕ್ಲೇವ್ನಲ್ಲಿ ಶ್ರುತಿ ಹರಿಹರನ್ ತನಗೆ ಕನ್ನಡ ಚಿತ್ರರಂಗದಲ್ಲೇ ಮೊಲದ ಬಾರಿಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು ಎಂದು ಹೇಳಿಕೊಂಡಿದ್ದರು. "ನನಗೆ ಕಾಸ್ಟಿಂಗ್ ಕೌಚ್ ಅನುಭವ ಆದಾಗ ಆಗ 18 ವರ್ಷ. ಅದು ನನ್ನ ಮೊದಲ ಕನ್ನಡ ಸಿನಿಮಾ ಆಗಿತ್ತು. ಅದು ನನ್ನನ್ನು ಸಿಕ್ಕಾಪಟ್ಟೆ ಭಯ ಹುಟ್ಟಿಸಿತ್ತು. ಆ ವೇಳೆ ನಾನು ಅಳುತ್ತಿದ್ದೆ. ಆಗ ನನ್ನ ಡ್ಯಾನ್ಸ್ ಕೊರಿಯೋಗ್ರಾಫರ್ಗೆ ಏನಾಯಿತು ಎಂದು ಹೇಳಿದೆ. ಆಗ ಅವರು ನಿನಗೆ ಇದನ್ನೆಲ್ಲ ಸಂಭಾಳಿಸಲು ಸಾಧ್ಯವಿಲ್ಲ ಎಂದಾದರೆ, ಇಲ್ಲಿಂದ ಹೊರಡು" ಎಂದು ಹೇಳಿದ್ದ ವಿಷಯವನ್ನು ನೆನಪಿಸಿಕೊಂಡಿದ್ದರು.

ಈ ಘಟನೆ ಶ್ರುತಿ ಹರಿಹರನ್ಗೆ ಆದ ಕಾಸ್ಟಿಂಗ್ ಕೌಚ್ನ ಮೊದಲ ಅನುಭವ ಎಂದು ಹೇಳಿಕೊಂಡಿದ್ದಾರೆ. ಇದೇ ವೇದಿಕೆ ಮೇಲೆ ತಮಿಳು ನಿರ್ಮಾಪಕರೊಬ್ಬರ ಮೇಲೂ ಆರೋಪ ಮಾಡಿದ್ದರು. ಕೌಸ್ಟಿಂಗ್ ಕೌಚ್ ಅನುಭವ ಆದ ನಾಲ್ಕು ವರ್ಷಗಳ ಬಳಿಕ ತಮಿಳು ನಿರ್ಮಾಪಕನಿಂದ ಇದಕ್ಕಿಂತ ಕೆಟ್ಟ ಅನುಭವ ಆಗಿತ್ತು ಎಂದು ಹೇಳಿದ್ದರು.
"ನನಗಾದ ಮೊದಲ ಅನುಭವದ 4 ವರ್ಷಗಳ ಬಳಿಕ ಮತ್ತೊಂದು ಘಟನೆ ನಡೆದಿತ್ತು. ತಮಿಳು ಚಿತ್ರರಂಗದ ಪ್ರಮುಖ ನಿರ್ಮಾಪಕರೊಬ್ಬರು ನನ್ನ ಕನ್ನಡ ಸಿನಿಮಾದ ಹಕ್ಕನ್ನು ಪಡೆದಿದ್ದರು. ತಮಿಳಿನಲ್ಲಿ ರಿಮೇಕ್ ಮಾಡಲು ಮುಂದಾಗಿದ್ದರು. ಆ ಸಿನಿಮಾದಲ್ಲಿ ನಾನೇ ನಟಿಸಬೇಕು ಎಂದು ಬಯಸಿದ್ದರು." ಎಂದು ಆ ಘಟನೆಯನ್ನು ವಿವರಿಸಿದ್ದಾರೆ.
ಆ ನಿರ್ಮಾಪಕ ಏನು ಹೇಳಿದ್ದನೋ ಅದನ್ನು ಹಾಗೆಯೇ ಹೇಳುತ್ತೇನೆ ಎಂದು ಬಹಿರಂಗ ಪಡಿಸಿದ್ದರು. "ನಾವು ಐದು ಮಂದಿ ನಿರ್ಮಾಪಕರಿದ್ದೇವೆ. ನಾವು ನಿನ್ನನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತೇವೆ ಎಂದಿದ್ದರು. ಆಗ ನಾನು ನನ್ನ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡಿದ್ದೇನೆ" ಎಂದು ಅವರಿಗೆ ತಿರುಗೇಟು ಕೊಟ್ಟೆ ಎಂದು ಕಾನ್ಕ್ಲೇವ್ನಲ್ಲಿ ಹೇಳಿದ್ದರು. ಈ ವಿಷಯವನ್ನು ಹಲವು ಮಾಧ್ಯಮಗಳು ವರದಿ ಕೂಡ ಮಾಡಿದ್ದವು.
ಇಷ್ಟೇ ಅಲ್ಲದೆ ಈ ಘಟನೆ ನಡೆದ ಬಳಿಕ "ಅವರೊಂದಿಗೆ ಸಿನಿಮಾ ಮಾಡುವುದಕ್ಕೆ ಕಷ್ಟ ಎಂದು ಗಾಳಿ ಸುದ್ದಿಯನ್ನು ಹಬ್ಬಿಸಿದ್ದರು. ಇದರಿಂದ ತಮಿಳು ಚಿತ್ರರಂಗದಲ್ಲಿ ಒಳ್ಳೆಯ ಪ್ರಾಜೆಕ್ಟ್ಗಳು ಸಿಗಲಿಲ್ಲ" ಎಂದು ಶ್ರುತಿ ಹರಿಹರನ್ ಹೇಳಿಕೊಂಡಿದ್ದರು. ಸಿನಿಮಾರಂಗದಲ್ಲಿ ಮಹಿಳೆಯರ ಸುರಕ್ಷತೆ ಕೊರತೆ ಬಗ್ಗೆ ಹಲವು ದಿನಗಳಿಂದ ಚರ್ಚೆ ಆಗುತ್ತಲೇ ಬರುತ್ತಿದೆ. ಕೆಲವರು ಓಪನ್ ಆಗಿ ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವು ಇಂತಹ ಪರಿಸ್ಥಿತಿಯನ್ನು ಎದುರಿಸಲಾಗದೆ ಪರದಾಡುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ಸಿಗಲೇಬೇಕೆಂದು ಸಿನಿಮಾರಂಗದಲ್ಲಿ ಕೆಲಸ ಮಾಡುವ ಮಹಿಳೆಯರು ಇಂದಿಗೂ ಹೋರಾಟ ಮಾಡುತ್ತಲೇ ಇದ್ದಾರೆ.


Click it and Unblock the Notifications











