"ದರ್ಶನ್ ಸರ್ ನನ್ನ ತಟ್ಟೆ ತೊಳೆದಿದ್ರು, ಚಪ್ಪಲಿ ತೆಗೆದಿಟ್ಟಿದ್ರು": ಉಮಾಪತಿ ಹೇಳಿಕೆ ವೈರಲ್
ನಟ ದರ್ಶನ್ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬರ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್ ನಟನೆಯ 'ರಾಬರ್ಟ್' ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದರು. ಈ ವೇಳೆ ದರ್ಶನ್ಗೆ ಬಹಳ ಆಪ್ತರಾಗಿದ್ದರು.
25 ಕೋಟಿ ಲೋನ್ ಕೇಸ್ ಬಳಿಕ ಆತ್ಮೀಯ ಸ್ನೇಹಿತರಾಗಿದ್ದ ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್ ದೂರಾಗಿದ್ದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ದರ್ಶನ್ ಜೊತೆಗೆ ಒಡನಾಟದಲ್ಲಿದ್ದ ಸಂದರ್ಭದಲ್ಲಿ ನಡೆದ ಘಟನೆಗಳ ಬಗ್ಗೆ ಉಮಾಪತಿ ಶ್ರೀನಿವಾಸ್ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ. ಒಮ್ಮೆ ತಮ್ಮ ಆಪ್ತರ ಮೇಲೆ ದರ್ಶ್ನ ಹಲ್ಲೆ ಮಾಡಿದ್ದರು, ನನ್ನ ಮೇಲೂ ಹಲ್ಲೆ ಯತ್ನಿಸಿದ್ದರು ಎಂದು ಹೇಳಿದ್ದಾರೆ.

'ರಾಬರ್ಟ್' ಸಿನಿಮಾ ಸಮಯದಲ್ಲಿ ಪದೇ ಪದೆ ದರ್ಶನ್ ಗಲಾಟೆ ಮಾಡುತ್ತಿದ್ದರು. ಎಲ್ಲವನ್ನು ನಾವು ಸಹಿಸಿಕೊಂಡೆವು. ಆದರೆ ಆ ವ್ಯಕ್ತಿ ಮಾತ್ರ ಬದಲಾಗಲೇ ಇಲ್ಲ. ಅದೇ ಕಾರಣಕ್ಕೆ ಇವತ್ತು ಇಂತಹ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಉಮಾಪತಿ ಶ್ರೀನಿವಾಸ್ ಹೇಳುತ್ತಿದ್ದಾರೆ. ಆದರೆ ಈ ಹಿಂದೆ ದರ್ಶನ್ ಉತ್ತಮ ಗುಣಗಳ ಬಗ್ಗೆ ಉಮಾಪತಿ ಮಾತನಾಡಿದ್ದರು. ಅಭಿಮಾನಿಗಳು ಆ ವೀಡಿಯೋಗಳನ್ನು ಈಗ ವೈರಲ್ ಮಾಡುತ್ತಿದ್ದಾರೆ.
'ಉಪಾಧ್ಯಕ್ಷ' ಸಿನಿಮಾ ಬಿಡುಗಡೆ ಸಮಯದಲ್ಲಿ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನಲ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸಂದರ್ಶನ ನೀಡಿದ್ದರು. ಅದರಲ್ಲಿ ದರ್ಶನ್ ಸರಳ, ಸಜ್ಜನಿಕೆ ಬಗ್ಗೆ ಉಮಾಪತಿ ಮಾತನಾಡಿದ್ದರು. ನಾನು ದರ್ಶನ್ ಅವರನ್ನ ಬಹಳ ಮಿಸ್ ಮಾಡಿಕೊಂಡಿದ್ದೀನಿ, ನಮ್ಮ ಸಿನಿಮಾ ವೇಳೆ ಅವ್ರು ನನ್ನ ಬಿಟ್ಟುಕೊಟ್ಟಿಲ್ಲ, ನಾನು ಅವ್ರನ್ನು ಬಿಟ್ಟುಕೊಟ್ಟಿಲ್ಲ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ.
"ರಾಬರ್ಟ್ ಶೂಟಿಂಗ್ ಸಮಯದಲ್ಲಿ ನಾನು ದರ್ಶನ್ ಅವರೊಟ್ಟಿಗೆ ಸಾಕಷ್ಟು ಸಮಯ ಕಳೆದಿದ್ದೆ. ಒಮ್ಮೆ ರಾಮೋಜಿ ಫಿಲ್ಮಿಸಿಟಿಯಲ್ಲಿ ಊಟಕ್ಕೂ ಮುಂಚೆ ನಮ್ಮ ತಟ್ಟೆಯನ್ನು ತೊಳೆದುಕೊಂಡು ಬರುತ್ತಿದ್ದರು. ನಾನು ಏನ್ ಬಾಸ್ ಇದೆಲ್ಲ ಅಂದ್ರೆ, ಹೇಯ್ ಸುಮ್ಮನಿರಿ ನಿರ್ಮಾಪಕರೇ ಎನ್ನುತ್ತಿದ್ದರು. ಒಮ್ಮೆ ನನ್ನ ಚಪ್ಪಲಿ ಸೋಫಾ ಕೆಳಗೆ ಹೋಗಿತ್ತು. ನನ್ನನ್ನು ಕೈ ತೊಳೆದುಕೊಂಡು ಬರಲು ಹೇಳಿ, ನೀವು ನಂಬಲ್ಲ ನನ್ನ ಚಪ್ಪಲಿ ತೆಗೆದು ಅಲ್ಲಿಟ್ಟಿದ್ದರು"

"ನನಗೆ ಆ ದಿನವೆಲ್ಲಾ ಅದನ್ನು ಅರಗಿಸಿಕೊಳ್ಳೋಕೆ ಆಗಿರಲಿಲ್ಲ. ಏನಯ್ಯಾ ಒಬ್ಬ ವ್ಯಕ್ತಿ ಈ ರೀತಿ ಮಾಡಿದ್ರಲ್ಲ, ಎಂದು ಆ ಘಟನೆಯನ್ನು ನನ್ನಿಂದ ಮರೆಯೋಕೆ ಸಾಧ್ಯವಿಲ್ಲ. ಒಮ್ಮೆ ನನಗೆ ಏನೋ ಪ್ರಾಬ್ಲಂ ಆಗಿದ್ದರು. ಫೋನ್ ಮಾಡಿ ನಿರ್ಮಾಪಕರೇ ಏನೋ ಆಯ್ತಂತೆ, ನಾನಿದ್ದೀನಿ ತಲೆ ಕೆಡಿಸಿಕೊಳ್ಳಬೇಡಿ ಅಂದ್ರು, ಆ ರೀತಿ ಕಾಳಜಿ ವಹಿಸಿದ್ದನ್ನು ಮರೆಯೋಕೆ ಸಾಧ್ಯವಿಲ್ಲ."
"ನನಗೆ ಅವರ ಮೇಲೆ ಯಾವುದೇ ದ್ವೇಷ ಇರಲಿಲ್ಲ. ಅವರಿಗೂ ಇರಲಿಲ್ಲ. ನಮ್ಮ ತಾಯಿ ಹೇಳುತ್ತಿದ್ದರು. ದೇವರೇಟು ತಡೆದುಕೊಳ್ಳಬಹುದು, ಮನುಷ್ಯರ ಏಟು ತಡೆದುಕೊಳ್ಳೊಕ್ಕಾಗಲ್ಲ, ಕಲ್ಲೇಟು ತಡೆದುಕೊಳ್ಳಬಹುದು ಆದರೆ ಕಣ್ಣೇಟು ತಡೆದುಕೊಳ್ಳುವುದು ಕಷ್ಟ ಅಂತ. ಅದು ಕಣ್ಣೇಟು ಅನಿಸುತ್ತದೆ. ಚೆನ್ನಾಗಿ ಕಂಡರೆ ಈ ರೀತಿ ಆಗಿಬಿಡುತ್ತದೆ. ನಾನು ಚಿತ್ರರಂಗದಲ್ಲಿ ಮುಂದುವರೆದರೂ ದರ್ಶನ್ ಸರ್ ಬಗ್ಗೆ ನನಗೆ ಅದೇ ಗೌರವ ಇರುತ್ತದೆ"
"ಯಾವುದೋ ಒಂದು ಘಟನೆಯಿಂದ ದರ್ಶನ್ ಅವರ ಮೇಲಿನ ಮರ್ಯಾದೆ ಕಮ್ಮಿ ಮಾಡ್ಕೊಳ್ಳಲ್ಲ. ಯಾರೋ ಬೇರೆಯವರು ನಮ್ಮ ನಡುವೆ ತಂದಾಕ್ಕಿ ತಮಾಷೆ ನೋಡಿದ್ದು ಅಷ್ಟೆ. ಅದು ಆಗಬಾರದಿತ್ತು ಎಂದು ಸಾಕಷ್ಟು ಸಲ ಅನಿಸಿದೆ. ನನ್ನನ್ನು ಯಾರ ಮುಂದೆ ಕೂಡ ಬಿಟ್ಟುಕೊಟ್ಟವರಲ್ಲ. ಮುಂದೊಂದು ದಿನ ಬರಬಹುದು. ತಂದಾಕಿದವರು ದೂರ ಹೋಗಬಹುದು. ನಾವು ಮತ್ತೆ ಒಟ್ಟಿಗೆ ಕೂರಬಹುದು" ಎಂದು ಉಮಾಪತಿ ಹೇಳಿದ್ದರು.
ಸದ್ಯ ದರ್ಶನ್ ಬಗ್ಗೆ ಉಮಾಪತಿ ಶ್ರೀನಿವಾಸ್ ಆರೋಪಗಳ ನಡುವೆ ಹಿಂದೆ ಮಾತನಾಡಿದ್ದ ಈ ವಿಡಿಯೋವನ್ನು ಕೆಲವರು ವೈರಲ್ ಮಾಡುತ್ತಿದ್ದಾರೆ.


Click it and Unblock the Notifications










