ಆ ನಟಿ ಹಸೆಮಣೆ ಏರಿದಾಗ ಕ್ರೇಜಿಸ್ಟಾರ್ ರವಿಚಂದ್ರನ್ ಹಾರ್ಟ್ ಬ್ರೇಕ್ ಆಗಿತ್ತು!
ಕನ್ನಡ ಚಿತ್ರರಂಗದ ಶೋಮ್ಯಾನ್, ಕ್ರೇಜಿಸ್ಟಾರ್ ವಿ. ರವಿಚಂದ್ರನ್. ಅದ್ಭುತ ಸಿನಿಮಾ ಕನಸುಗಳನ್ನು ಕಂಡು ಅದನ್ನು ನನಸಾಗಿಸಿಕೊಳ್ಳಲು ಸದಾ ಹವಣಿಸುವ ಸಿನಿವ್ಯಾಮೋಹಿ. ಪ್ರತಿ ದೃಶ್ಯ, ಪ್ರತಿ ಹಾಡು ಚಿತ್ತಾರದಂತೆ ಮೂಡಿ ಬರಬೇಕು ಎಂದು ಪರಿತಪಿಸುವ ಕನಸುಗಾರ.
ದಶಕಗಳ ಹಿಂದೆಯೇ 'ಪ್ರೇಮಲೋಕ' ಸೃಷ್ಟಿಸಿ ಜಾದೂ ಮಾಡಿದ್ದರು. ಇನ್ನು ಹಂಸಲೇಖ ಜೊತೆಗೂಡಿ ಸಿನಿರಸಿಕರು ಮೈಕುಣಿಸುವಂತೆ, ಪದೇ ಪದೇ ಗುಣುವಂತಹ ಎವರ್ಗ್ರೀನ್ ಹಾಡುಗಳನ್ನು ಕೊಟ್ಟವರು ಕ್ರೇಜಿಸ್ಟಾರ್. ತನಗೆ ಇಷ್ಟ ಆಗುವವರೆಗೂ ಅದನ್ನು ಪ್ರೇಕ್ಷಕರಿಗೆ ತೋರಿಸಬಾರದು, ಎಷ್ಟೇ ನಷ್ಟ ಆದರೂ ಪರವಾಗಿಲ್ಲ ಅಂದುಕೊಂಡಂತೆ ಸಿನಿಮಾ ಬರಬೇಕು ಎಂದು ಪಟ್ಟು ಹಿಡಿಯುವ ಹಠವಾದಿ. 90ರ ದಶಕದ ಆರಂಭದಲ್ಲೇ ನಿಜವಾದ ಪ್ಯಾನ್ ಇಂಡಿಯಾ ಕ್ರಾಂತಿ ಮಾಡಿದ್ದ ಫಿಲ್ಮ್ ಮೇಕರ್.

ಸಿನಿಮಾ ಸಿನಿಮಾ ಎಂದು ಸಾಕಷ್ಟು ಕಳೆದುಕೊಂಡವರು, ಎಷ್ಟೇ ಕಳೆದುಕೊಂಡರೂ ಮತ್ತೆ ಸಂಪಾದಿಸಿ ಸಿನಿಮಾ ಕನಸು ಕಂಡವರು ರವಿಚಂದ್ರನ್. ಪರಭಾಷೆಯ ಖ್ಯಾತ ನಟಿಯರನ್ನು ಕನ್ನಡಕ್ಕೆ ಪರಿಚಯಿಸಿದವರು ಕ್ರೇಜಿಸ್ಟಾರ್. ಸಿನಿಮಾಗಳಲ್ಲಿ ನಟಿಯರಿಗೆ ಚೆಂದ ಚೆಂದ ದುಬಾರಿ ಕಾಸ್ಟ್ಯೂಮ್ ಹಾಕಿಸಿ, ಮೇಕಪ್ ಮಾಡಿಸಿ ಸುಂದರವಾಗಿ ತೋರಿಸಿದವರು. 30 ವರ್ಷಗಳ ಹಿಂದೆ ಕೋಟಿ ಕೋಟಿ ಸುರಿದು 'ಶಾಂತಿ ಕ್ರಾಂತಿ' ಸಿನಿಮಾ ಮಾಡಿ ಕೈಸುಟ್ಟುಕೊಂಡಿದ್ದರು. ಅಂದು ಆ ಸಿನಿಮಾ ಗೆದ್ದಿದ್ದರೆ ಕಥೆ ಬೇರೆನೆ ಇರುತ್ತಿತ್ತು.
ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ರವಿಚಂದ್ರನ್ ಸಿನಿಮಾ ಕೃಷಿ ಮುಂದುವರೆಸಿದ್ದಾರೆ. ನಿಮಗೆ ಗೊತ್ತಾ ಶ್ರೀದೇವಿ ಚೆಲುವೆಗೆ ರವಿಚಂದ್ರನ್ ದೊಡ್ಡ ಅಭಿಮಾನಿ ಆಗಿದ್ದರು. ಮದ್ರಾಸ್ ಮೂಲದ ಶ್ರೀ ಅಮ್ಮ ಯಂಗೇರ್ ಅಯ್ಯಪ್ಪನ್ ಮುಂದೆ ಶ್ರೀದೇವಿಯಾಗಿ ಚಿತ್ರರಂಗದಲ್ಲಿ ಮೋಡಿ ಮಾಡಿದ್ದು ಗೊತ್ತೇಯಿದೆ. ಆಕೆಯ ಚೆಲುವೆಗೆ ಮಾರು ಹೋಗದವರಿಲ್ಲ. ಖ್ಯಾತ ತಾರೆಯರು ಕೂಡ ಆಕೆಗೆ ಅಭಿಮಾನಿಗಳಾಗಿಬಿಟ್ಟಿದ್ದರು. ನಾನು ಶ್ರೀದೇವಿಯನ್ನು ನೋಡಬೇಕು, ಆಕೆಯ ಜೊತೆ ಸಿನಿಮಾ ಮಾಡಬೇಕು ಎನ್ನುವ ಒಂದೇ ಆಸೆಯಿಂದ ಚಿತ್ರರಂಗಕ್ಕೆ ಬಂದೇ ಎಂದು ನಿರ್ದೇಶಕ ರಾಮ್ಗೋಪಾಲ್ ವರ್ಮಾ ಹೇಳಿದ್ದರು.
80, 90ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಶ್ರೀದೇವಿ ಜಾದೂ ಮರೆಯೋಕೆ ಸಾಧ್ಯವಿಲ್ಲ. 1996ರಲ್ಲಿ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಜೊತೆ ಆಕೆಯ ಮದುವೆ ನಡೆದಿತ್ತು. ಆಗ ಸಾಕಷ್ಟು ಜನ ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗಿತ್ತು. ಅದರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ರವಿಚಂದ್ರನ್ ಕೂಡ ಒಬ್ಬರು. ಈ ವಿಚಾರವನ್ನು ಹಿಂದೆ ಸಂದರ್ಶನವೊಂದರಲ್ಲಿ ಸ್ವತಃ ರವಿಚಂದ್ರನ್ ಹೇಳಿದ್ದರು.
ಶ್ರೀದೇವಿ ಜೊತೆ ಸಿನಿಮಾ ಮಾಡುವ ರವಿಚಂದ್ರನ್ ಕನಸು ಕೂಡ ಈಡೇರಲೇ ಇಲ್ಲ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಿದ್ದ ಸೂಪರ್ ಟಾಕ್ಟೈಮ್ ಸಂದರ್ಶನದಲ್ಲಿ ರವಿಚಂದ್ರನ್ ಹಾಗೂ ಖುಷ್ಬೂ ಭಾಗಿ ಆಗಿದ್ದರು. ರಾಪಿಡ್ ಫೈರ್ ರೌಂಡ್ನಲ್ಲಿ ಅಕುಲ್ ಬಾಲಾಜಿ "ಯಾವ ಹೀರೊಯಿನ್ ಮದುವೆಯಾದಾಗ ನಿಮ್ಮ ಹಾರ್ಟ್ ಬ್ರೇಕ್ ಆಗಿತ್ತು? ಎಂದು ಕೇಳಿದ್ದರು. ಆಗ ಒಂದು ಕ್ಷಣ ಯೋಚಿಸದೇ ಶ್ರೀದೇವಿ ಹೆಸರಯ ಹೇಳಿದ್ದರು ರವಿಚಂದ್ರನ್.
ಇತ್ತೀಚೆಗೆ 'ಭರ್ಜರಿ ಬ್ಯಾಚುಲರ್ಸ್' ಶೋನಲ್ಲಿ ಶ್ರೀದೇವಿ ಜೊತೆ ಸಿನಿಮಾ ಮಾಡೋಕೆ ಸಾಧ್ಯವಾಗಲಿಲ್ಲ ಎಂದು ಕ್ರೇಜಿಸ್ಟಾರ್ ಹೇಳಿದ್ದರು. ಪರಭಾಷೆಯ ಖ್ಯಾತ ನಟಿಯರನ್ನು ಕನ್ನಡಕ್ಕೆ ಪರಿಚಯಿಸಿದ್ದೀರಾ, ಆದರೆ ಶ್ರೀದೇವಿ ಹಾಗೂ ಐಶ್ವರ್ಯ ರೈ ಜೊತೆ ಯಾಕೆ ನಟಿಸಲಿಲ್ಲ ಎಂದು ರಚಿತಾ ರಾಮ್ ಕೇಳಿದ್ದರು. ಆಗ ರವಿಚಂದ್ರನ್ ಮಾತನಾಡಿ "ಶ್ರೀದೇವಿ ಜೊತೆ ಒಂದು ಸಿನಿಮಾ ಮಾಡಬೇಕಿತ್ತು. ಅದಕ್ಕೆ 'ಚೆಲುವೆ' ಎಂದು ಟೈಟಲ್ ಫಿಕ್ಸ್ ಮಾಡಿದ್ದೆವು. ಶ್ರೀದೇವಿ ನಾಯಕಿಯಾಗಿ ಫಿಕ್ಸ್ ಆಗಿದ್ದರು. ಶ್ರೀದೇವಿ ಕರ್ಕೊಂಡ್ ಬಂದರೆ ನನಗೆ ಸಂಭಾವನೆ ಬೇಡ, ಫ್ರೀಯಾಗಿ ನಟಿಸುತ್ತೇನೆ ಎಂದಿದ್ದೆ" ಎಂದು ರವಿಚಂದ್ರನ್ ನೆನಪಿಸಿಕೊಂಡಿದ್ದರು.
ಮಾತು ಮುಂದುವರೆಸಿ "ಚೆಲುವೆ ಚಿತ್ರವನ್ನು ನಾನೇ ನಿರ್ದೇಶನ ಮಾಡಬೇಕಿತ್ತು. ಕಥೆ ಹೇಳಿ ಆಕೆ ಒಪ್ಪಿ ಎಲ್ಲಾ ಓಕೆ ಆಗಿತ್ತು. ಬಳಿಕ ಕಾರಣಾಂತರಗಳಿಂದ ಆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಅದೇ ಟೈಟಲ್ ಅನ್ನು 'ಚೆಲುವ' ಎಂದು ಬದಲಿಸಿ ರೀಮೆಕ್ ಸಿನಿಮಾ ಮಾಡುವಂತಾಯಿತು" ಎಂದು ರವಿಚಂದ್ರನ್ ವಿವರಿಸಿದ್ದರು. ಕನ್ನಡದಲ್ಲಿ ಬಾಲನಟಿಯಾಗಿ 'ಭಕ್ತ ಕುಂಬಾರ' ಚಿತ್ರದಲ್ಲಿ ಶ್ರೀದೇವಿ ನಟಿಸಿದ್ದರು. 'ಪ್ರಿಯಾ' ಹಾಗೂ 'ಹೆಣ್ಣು ಸಂಸಾರದ ಕಣ್ಣು' ಆಕೆ ಕನ್ನಡದಲ್ಲಿ ನಟಿಸಿದ ಮತ್ತೆರಡು ಚಿತ್ರಗಳು.


Click it and Unblock the Notifications











