"100, 200 ಕೋಟಿ ರೂ. ಕಲೆಕ್ಷನ್ ಅಂತ ನಿರ್ಮಾಪಕರು ದಾರಿ ತಪ್ಪಬಾರದು"; ಯಶ್ ಹೇಳಿಕೆ ವೈರಲ್
ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಭಾರೀ ಚರ್ಚೆ ನಡೆಯುತ್ತದೆ. ಅಭಿಮಾನಿಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆ ಆಗಿರುತ್ತದೆ. ಕನ್ನಡದಲ್ಲಿ ಈಗಾಗಲೇ ಕೆಲ ಸಿನಿಮಾ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿವೆ. ಆದರೆ ನಿರ್ಮಾಪಕ ಉಮಾಪತಿ ಅದೆಲ್ಲಾ ಸುಳ್ಳು ಎನ್ನುತ್ತಿದ್ದಾರೆ.
ಸದ್ಯ ಸ್ಯಾಂಡಲ್ವುಡ್ನಲಿ ನಟ ದರ್ಶನ್ ವರ್ಸಸ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವೆ ಫೈಟ್ ನಡೀತಿದೆ. ಇನ್ನು ನಟ ದರ್ಶನ್ಗೆ ತಿರುಗೇಟು ನೀಡುವ ವೇಳೆ ಉಮಾಪತಿ ಶ್ರೀನಿವಾಸ್ ತಮ್ಮ ಸಿನಿಮಾಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ಹೆಬ್ಬುಲಿ' ಹಾಗೂ 'ರಾಬರ್ಟ್' ಸಿನಿಮಾಗಳ ಕಲೆಕ್ಷನ್ ಬಗ್ಗೆಯೂ ಮಾತನಾಡಿದ್ದಾರೆ.

ನಿರ್ಮಾಪಕ ಉಮಾಪತಿ ಸಂದರ್ಶನಗಳಲ್ಲಿ ತಮ್ಮದೇ 'ರಾಬರ್ಟ್' ಬಾಕ್ಸಾಫೀಸ್ ಗಳಿಕೆ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. 100 ಕೋಟಿ ರೂ. ಕಲೆಕ್ಷನ್ ಆಗಿದೆ ಎನ್ನುವುದೆಲ್ಲಾ ಸುಳ್ಳು. "100 ಕೋಟಿ, 200 ಕೋಟಿ ರೂ. ಅಂತಾರಲ್ಲ ಚಾಲೆಂಜ್ ಮಾಡ್ತೀನಿ ಯಾವ ಸಿನಿಮಾ ನೂರು ಕೋಟಿ ಮುಟ್ಟಿಸಿದ್ದಾರೆ ಹೇಳಿಬಿಡಲಿ. ನಾನು ಅವತ್ತು ಉತ್ತರ ಕೊಡುತ್ತೇನೆ. ಇವರ ಮಾತು ನಂಬಿ ತೆಲುಗಿಗೆ ಡಬ್ ಮಾಡಿ ಕೋಟ್ಯಂತರ ರೂ. ಹಾಕಿದೆ. ಬಂದಿದ್ದು 16 ಲಕ್ಷ" ಎಂದಿದ್ದಾರೆ.
ಇನ್ನು ಗೌರೀಶ್ ಅಕ್ಕಿ ಸಂದರ್ಶನದಲ್ಲಿ ಮಾತನಾಡಿದ್ದ ಉಮಾಪತಿ "300 ಕೋಟಿ ಆಯ್ತು.. 200 ಕೋಟಿ ಆಯ್ತು ಅಂತಾರಲ್ಲ ಅದೇನು ಆಗಿರಲ್ಲ ಸರ್. ನನಗೆ ಕೇಳಿದ್ರೆ ಎಲ್ಲಾ ಸಿನಿಮಾಗಳ ಲೆಕ್ಕ ಕೊಡ್ತೀನಿ. ಅವರವರ ಫ್ಯಾನ್ಸ್ಗೆ ಹರ್ಟ್ ಆಗುತ್ತೆ. ಅದಕ್ಕೆ ಅದನ್ನು ಟಚ್ ಮಾಡುವುದಕ್ಕೆ ಹೋಗುವುದಿಲ್ಲ. ನಮಗೆ ಅದ್ಬುತ ಲಾಭ ಬೇಡ. ಹಾಕಿರೋ ದುಡ್ಡಿಗೆ ಬಡ್ಡಿ ಎಲ್ಲಾ ಕಳೆದು ಒಂದು ಚೂರು ಲಾಭ ಸಿಕ್ಕರೂ ಸಾಕು" ಎಂದಿದ್ದರು.
ಉಮಾಪತಿ ಶ್ರೀನಿವಾಸ್ ಮಾತು ಕೇಳಿದ ಮೇಲೆ ಕನ್ನಡ ಸಿನಿಮಾ 100 ಕೋಟಿ ರೂ. 200 ಕೋಟಿ ರೂ. ಕಲೆಕ್ಷನ್ ಎನ್ನುವುದು ಸುಳ್ಳಾ? ಎಂದು ಕೆಲವರು ಅಚ್ಚರಿಗೊಂಡಿದ್ದಾರೆ. ಏಳೆಂಟು ವರ್ಷಗಳ ಹಿಂದೆಯೇ ನಟ ಯಶ್ ಈ ರೀತಿ ಕಲೆಕ್ಷನ್ ಲೆಕ್ಕ ಕೊಡುವ ಬಗ್ಗೆ ಮಾತನಾಡಿದ್ದರು. TV5 ಕನ್ನಡ ವಾಹಿನಿ ಸಂದರ್ಶನದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಆ ವಿಡಿಯೋ ಈಗ ವೈರಲ್ ಆಗುತ್ತಿದೆ.

"ಯಾವುದೇ ಸಿನಿಮಾ ಬಿಡುಗಡೆ ಆಗಲಿ, ಅದು ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುತ್ತಾರೆ. ನನ್ನ ಸಿನಿಮಾ ಕೂಡ ಸೇರಿಸಿಕೊಂಡು ಈ ಮಾತು ಹೇಳುತ್ತಿದ್ದೇನೆ. ನಾಳೆ ನನ್ನದೇ ಸಿನಿಮಾ ಬಂದರೂ ಎಲ್ಲಾ ರೆಕಾರ್ಡ್ ಬ್ರೇಕ್ ಅಂತಾರೆ. ಮುಂದಿನ ವಾರ ಮತ್ತೊಂದು ಸಿನಿಮಾ ಬಂದರೆ ಎಲ್ಲಾ ರೆಕಾರ್ಡ್ಸ್ ಬ್ರೇಕ್ ಅಂತಾರೆ ಆದರೆ ಅದು ಸತ್ಯ ಅಲ್ಲ"
"ಸತ್ಯ ಏನು ಅಂದ್ರೆ, ನಿಜವಾಗಿಯೂ ಎಷ್ಟು ಕಲೆಕ್ಷನ್ ಆಯ್ತು. ನನಗಿಂತ ಮತ್ತೊಬ್ಬರ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದ್ರೆ ಎಂಜಾಯ್ ಮಾಡಬೇಕು. ಒಳ್ಳೆ ಸಿನಿಮಾ ರೆಕಾರ್ಡ್ ಬ್ರೇಕ್ ಆಗಿದೆ ಅಂತ. ಆಗದೇ ಇದ್ದರೆ ಸುಮ್ ಸುಮ್ನೆ ಆ ರೀತಿ ಸುದ್ದಿ ಬರಬಾರದು. 100 ಕೋಟಿ, 200 ಕೋಟಿ ರೂ. ಆಗಿದೆ ಎಂದು ನಿರ್ಮಾಪಕರು ದಾರಿ ತಪ್ಪಬಾರದು.
"ಹೊಸ ನಿರ್ಮಾಪಕರು ಚಿತ್ರರಂಗಕ್ಕೆ ಬರುತ್ತಿರುತ್ತಾರೆ. ಅವರು ಇದನ್ನು ನೋಡಿ ಯಾಮಾರಬಾರದು. ಅದರಲ್ಲಿ ಪಾರದರ್ಶಕತೆ ಇರಬೇಕು. ಒಂದೊಂದು ರೂಪಾಯಿಯನ್ನು ಇಲ್ಲಿ ಕಷ್ಟಪಟ್ಟು ದುಡಿಯಬೇಕು. ಇದನ್ನು ಗಂಭೀರವಾಗಿ ಯೋಚಿಸಬೇಕು. ನಾನು ತಿರುಗಿ ನೋಡುವಷ್ಟರಲ್ಲಿ ನಮ್ಮ ನಿರ್ಮಾಪಕರು ಕಲೆಕ್ಷನ್ ಇಷ್ಟು ಅಂತಹ ಹಾಕ್ತಾರೆ. ಕಲೆಕ್ಷನ್ ಚೆನ್ನಾಗಿ ಬರುತ್ತೆ ಸಾರ್ ಅಂತಾರೆ. ಕಲೆಕ್ಷನ್ ಚೆನ್ನಾಗಿ ಆಗುತ್ತಿದೆ ನಿಜ. ಆದರೆ ಅದು ಪಾರದರ್ಶಕವಾಗಿರಬೇಕು" ಎಂದಿದ್ದರು.
ಕನ್ನಡ ಸಿನಿಮಾಗಳ ಕಲೆಕ್ಷನ್ ಬಗ್ಗೆ ಉಮಾಪತಿ ಮಾತುಗಳು ವೈರಲ್ ಆಗುತ್ತಿದ್ದಂತೆ ಯಶ್ ಅಂದು ಮಾತನಾಡಿದ್ದ ಮಾತಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.


Click it and Unblock the Notifications











