ಮಾಫಿಯಾ ರಾಣಿ ಗಂಗೂಭಾಯಿ ಕಾತ್ಯಾವಾಡ: ಈಕೆಗಿದೆ ಭಯಾನಕ ಇತಿಹಾಸ
ಆಲಿಯಾ ಭಟ್ ನಟನೆಯ 'ಗಂಗೂಭಾಯಿ ಕಾತ್ಯಾವಾಡ' ಸಿನಿಮಾದ ಟೀಸರ್ ಈಗಷ್ಟೆ ಬಿಡುಗಡೆ ಆಗಿದೆ. ಮುದ್ದು ಮುಖದ ಆಲಿಯಾ ಭಟ್ ಸಖತ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ ಸಿನಿಮಾದಲ್ಲಿ, ಟೀಸರ್ನಲ್ಲಿಯಂತೂ ಕೆಲವು ಖಡಕ್ ಡೈಲಾಗ್ಗಳು, ದೃಶ್ಯಗಳು ಇವೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿರುವ ಈ ಸಿನಿಮಾ ನಿಜವ್ಯಕ್ತಿಯೊಬ್ಬರ ಜೀವನದಿಂದ ಪ್ರೇರಣೆಗೊಂಡಿದ್ದು. ಆಕೆಯೇ ಮಾಫಿಯಾ ರಾಣಿ ಗಂಗೂಭಾಯಿ ಕಾತ್ಯಾವಾಡ ಅಲಿಯಾಸ್ ಗಂಗೂಬಾಯಿ ಕೋಟೆವಾಲಿ. ಆಕೆಯ ಹೆಸರನ್ನೇ ಸಿನಿಮಾಕ್ಕೆ ಇಡಲಾಗಿದೆ. ಆಲಿಯಾ ಭಟ್ ಗಂಗೂಭಾಯಿ ಕಾತ್ಯಾವಾಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗಂಗೂಭಾಯಿ ಕಾತ್ಯಾವಾಡ ಸಾಮಾನ್ಯ ಹೆಣ್ಣುಮಗಳಲ್ಲ. ಮುಂಬೈ ಕಂಡಿರುವ ಅನೇಕ ಮಾಫಿಯಾ ಡಾನ್ಗಳಲ್ಲಿ ಆಕೆಯೂ ಸಹ ಒಬ್ಬಳು. ಮೋಸ, ವಂಚನೆ, ವೇಶ್ಯಾಗೃಹದ ಹಿಂಸೆ, ಪುರುಷರ ದಬ್ಬಾಳಿಕೆ, ಡಾನ್ಗಳ ಉಗ್ರರೂಪ ಎಲ್ಲವನ್ನೂ ಕಂಡ ಗಂಗೂಭಾಯಿ ತಾನೇ ಡಾನ್ ಆಗಿ ಬೆಳೆದ ಕತೆ ಅತ್ಯಂತ ರೋಚಕ.
ಗೂಗಲ್ ನಲ್ಲಿ ಗಂಗೂಭಾಯಿ ಕಾತ್ಯಾವಾಡ ಎಂದು ಟೈಪ್ ಮಾಡಿದರೆ ಕಾಸಗಲ ಕುಂಕುಮ ಇಟ್ಟ, ತಲೆಗೆ ಸೆರಗು ಹೊದ್ದ ಹೆಣ್ಣುಮಗಳ ಚಿತ್ರ ಕಾಣಿಸುತ್ತದೆ. ಅದೇ ಗಂಗೂಭಾಯಿ ಕಾತ್ಯಾವಾಡಿ. ಒಂದು ಕಾಲದಲ್ಲಿ ಮುಂಬೈನಲ್ಲಿರುವ ಎಲ್ಲ ವೇಶ್ಯಾಗೃಹಗಳನ್ನು ಆಳಿದಾಕೆ. ಕಾಮಾಟಿಪುರದ ರಾಣಿ.

500 ರು. ಮಾರಿಬಿಟ್ಟ ಪ್ರಿಯಕರ
ಲಾಯರ್ಗಳೇ ತುಂಬಿದ್ದ ಶಿಕ್ಷಿತ ಕುಟುಂಬದಲ್ಲಿ ಹುಟ್ಟಿದ ಗಂಗೂಭಾಯಿ ಕಾತ್ಯಾವಾಡ ತನ್ನ ಹದಿನಾರನೇ ವಯಸ್ಸಿನಲ್ಲಿಯೇ ತನ್ನ ತಂದೆಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರಾಮ್ಕಿಲಾಲ್ ಎಂಬುವನ ಪ್ರೇಮಕ್ಕೆ ಸಿಲುಕಿ ಮುಂಬೈಗೆ ಬಂದುಬಿಟ್ಟಳು. ಆದರೆ ಆ ನಂತರ ಆಕೆಯ ಜೀವನದಲ್ಲಿ ನಡೆದದ್ದು ಬಲು ಭಯಾನಕ ಘಟನೆ. ಬರೀ 500 ರು ಹಣಕ್ಕೆ ಗಂಗೂಭಾಯಿಯನ್ನು ಕಾಮಾಟಿಪುರದ ವೇಶ್ಯಾಗೃಹಕ್ಕೆ ಮಾರಿಬಿಟ್ಟ ಆಕೆಯ ಪ್ರಿಯಕರ.

ಶ್ರೀಮಂತರು, ರಾಜಕಾರಣಿಗಳನ್ನು ಬೆರಳ ತುದಿಯಲ್ಲಿ ಆಡಿಸಿದ್ದ ಗಂಗೂಭಾಯಿ
ಪ್ರತಿದಿನ ಅತ್ಯಾಚಾರಕ್ಕೆ ಒಳಗಾಗಿ ಅಳುತ್ತಲೇ ಕಾಲಕಳೆದ ಗಂಗೂಭಾಯಿ ಆ ನಂತರ ಇಲ್ಲಿಯೇ ಇದ್ದು ಬದುಕು ಕಟ್ಟಿಕೊಳ್ಳಬೇಕು ಎಂದು ಎದ್ದುನಿಂತಳು. ಕಾಮಾಟಿಪುರದ ಖ್ಯಾತ ವೇಶ್ಯೆಯಾದಳು. ಶ್ರೀಮಂತ ಗ್ರಾಹಕರು ಆಕೆಗಾಗಿ ಕಿತ್ತಾಡುವಂತಾಯಿತು. ಅವರನ್ನೆಲ್ಲಾ ಬೆರಳ ತುದಿಯಲ್ಲಿ ಕುಣಿಸಲು ಆರಂಭಿಸಿದಳು ಗಂಗೂಭಾಯಿ. ದಿನಕಳೆದಂತೆ ಕಾಮಾಟಿಪುರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಳು ಗಂಗೂಬಾಯಿ. 1960 ರ ದಶಕದಲ್ಲಿ ಮುಂಬೈನಲ್ಲಿದ್ದ ಎಲ್ಲಾ ವೇಶ್ಯಾಗೃಹಗಳು ಗಂಗೂಭಾಯಿ ಇಶಾರೆಯ ಮೇಲೆಯೇ ಕಾರ್ಯನಿರ್ವಹಿಸುತ್ತಿದ್ದವು.

ಡಾನ್ ಕರೀಂ ಲಾಲ್ ಮೇಲೆ ಜಗಳ ಮಾಡಿದ್ದ ಗಂಗೂಭಾಯಿ
ಮುಂಬೈನ ಆಗಿನ ಕಾಲದ ಎಲ್ಲ ಡಾನ್ಗಳೊಂದಿಗೆ ಸಂಪರ್ಕ ಹೊಂದಿದ್ದಳು ಗಂಗೂಭಾಯಿ. ಒಮ್ಮೆ ಕುಖ್ಯಾತ ಡಾನ್ ಕರೀಮ್ ಲಾಲ್ನ ಗ್ಯಾಂಗ್ನವನೊಬ್ಬ ಗಂಗೂಭಾಯಿ ವೇಶ್ಯಾಗೃಹದಲ್ಲಿ ಅತ್ಯಂತ ಕೆಟ್ಟದಾಗಿ ನಡೆದುಕೊಂಡಾಗ. ಗಂಗೂಭಾಯಿ ನೇರವಾಗಿ ಕರೀಮ್ ಲಾಲ್ ಅನ್ನು ಭೇಟಿಯಾಗಿ ಆತನಿಗೆ ಧಮ್ಕಿ ಹಾಕಿದ್ದಳು. ಅದೇ ದಿನ ಆ ಗೂಂಡಾನನ್ನು ಚೆನ್ನಾಗಿ ತದಕಿದ ಕರೀಂ ಲಾಲ್, 'ಗಂಗೂಭಾಯಿ ನನ್ನ ಸಹೋದರಿ, ಆಕೆಯ ತಂಟೆಗೆ ಯಾರೂ ಹೋಗುವಂತಿಲ್ಲ್' ಎಂದು ಅಬ್ಬರಿಸಿದ್ದನಂತೆ. ಈ ಘಟನೆ ನಂತರ ಗಂಗೂಭಾಯಿ ಹೆಸರು ಇಡೀಯ ಮುಂಬೈನಲ್ಲಿ ಅನುರಣಿಸಲು ಆರಂಭಿಸಿತು.

ಆ ಕಾಲಕ್ಕೆ ಬೆಂಟ್ಲಿ ಕಾರು ಹೊಂದಿದ್ದ ಗಂಗೂಭಾಯಿ
ಡಾನ್ಗಳು ಮಾತ್ರವೇ ಅಲ್ಲದೆ ಪೊಲೀಸ್ ಇಲಾಖೆ, ರಾಜಕಾರಣಿಗಳು ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನ ಪರಿಚಯ, ಪ್ರಭಾವ ಹೆಚ್ಚಿಸಿಕೊಂಡ ಗಂಗೂಭಾಯಿ ಮುಂಬೈನ ಎಲ್ಲ ವೇಶ್ಯಾಗೃಹಗಳಿಗೂ ಒಡತಿ ಆಗಿಬಿಟ್ಟಳು. ಆ ಕಾಲದಲ್ಲಿ ಅತ್ಯಂತ ದುಬಾರಿ ಕಪ್ಪು ಬೆಂಟ್ಲಿ ಕಾರು ಖರೀದಿಸಿ ಅದರಲ್ಲಿ ಓಡಾಡುತ್ತಿದ್ದಳು ಗಂಗೂಭಾಯಿ.

ವೇಶ್ಯೆಯರನ್ನು ಕುಟುಂಬದಂತೆ ನೋಡಿಕೊಳ್ಳುತ್ತಿದ್ದ ಗಂಗೂಭಾಯಿ
ಗಂಗೂಭಾಯಿ ಎಂದಿಗೂ ಯುವತಿಯರನ್ನು ಅವರ ಇಚ್ಛೆಯ ವಿರುದ್ಧವಾಗಿ ವೇಶ್ಯಾಗೃಹದಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲವಂತೆ. ಯುವತಿಯರಿಗೆ ಅವರ ದುಡಿಮೆಯ ಹೆಚ್ಚಾನು-ಹೆಚ್ಚು ಭಾಗ ಸಿಗುವಂತೆ ನೋಡಿಕೊಳ್ಳುತ್ತಿದ್ದರಂತೆ. ಆ ಯುವತಿಯರ ಕುಟುಂಬ, ಮಕ್ಕಳಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದ ಗಂಗೂಭಾಯಿ, ಮಾಜಿ ವೇಶ್ಯೆಯರಿಗೆ ವೃದ್ಧಾಶ್ರಮವನ್ನೂ ಸ್ಥಾಪಿಸಿದ್ದರಂತೆ. ಇದೇ ಕಾರಣಕ್ಕೆ ಆಕೆ ಕಾಮಾಟಿಪುರದಲ್ಲಿ ಮುನ್ಸಿಪಲ್ ಚುನಾವಣೆಯಲ್ಲಿಯೂ ಆಯ್ಕೆ ಆದರು.

ಭಾಷಣ ಮೆಚ್ಚಿಕೊಂಡಿದ್ದ ಜವಾಹಾರ್ ಲಾಲ್ ನೆಹರು
ಆಕೆಯ ಭಾಷಣ ಕೇಳಿದ್ದ ಆಗಿನ ಪ್ರಧಾನಿ ಜವಾಹಾರ್ಲಾಲ್ ನೆಹರು ಬಹುವಾಗಿ ಮೆಚ್ಚಿದ್ದರಂತೆ. ಅಷ್ಟೇ ಅಲ್ಲದೆ ಗಂಗೂಭಾಯಿ ಮನವಿ ಮೇರೆಗೆ ವೇಶ್ಯಾಗೃಹಗಳಲ್ಲಿ, ಕಾಮಾಟಿಪುರದಲ್ಲಿ ವೇಶ್ಯೆಯರ ಕುಟುಂಬ, ಮಕ್ಕಳಿಗೆ ಸಹಾಯ ಮಾಡುವ ಯೋಜನೆಗಳನ್ನು ತಂದಿದ್ದರಂತೆ. ಗಂಗೂಭಾಯಿ ತನ್ನ ಕೊನೆಯ ಸಮಯದಲ್ಲಿ ಮಹಿಳೆ ಮತ್ತು ಮಕ್ಕಳ ಹಕ್ಕು ರಕ್ಷಣೆ ಹೋರಾಟಗಾರ್ತಿಯಾಗಿ ಬದಲಾದರು. ಕಾಮಾಟಿಪುರದ ಹಲವು ಮನೆಗಳಲ್ಲಿ ಈಗಲೂ ಗಂಗೂಬಾಯಿ ಚಿತ್ರಗಳಿವೆ. ಗಂಗೂಭಾಯಿಯ ಮೂರ್ತಿಯನ್ನೂ ನಿಲ್ಲಿಸಲಾಗಿದೆ.


Click it and Unblock the Notifications











