ವಿಷ್ಣುವರ್ಧನ್ ಅನ್ನು ಅವಮಾನಿಸಿದ್ದ ವಿಜಯ್ ರಂಗರಾಜು ಯಾರು? ಆತನ ಚರಿತ್ರೆಯೇನು?
ಕನ್ನಡ ಸಿನಿಮಾರಂಗದ ಮೇರುನಟರಲ್ಲಿ ಒಬ್ಬರಾದ ವಿಷ್ಣುವರ್ಧನ್ ಕುರಿತಂತೆ ತೆಲುಗಿನ ನಟ ವಿಜಯ್ ರಂಗರಾಜು ಅವಹೇಳನಕಾರಿಯಾಗಿ ಮಾತನಾಡಿದ್ದು, ವಿಷ್ಣುವರ್ಧನ್ ಅಭಿಮಾನಿಗಳನ್ನು, ಕನ್ನಡಿಗರನ್ನು ಕೆರಳಿಸಿತ್ತು.
ಕನ್ನಡಿಗರ ಸಿಟ್ಟಿಗೆ ತಲೆಬಾಗಿದ ನಟ ವಿಜಯ್ ರಂಗರಾಜು, ದೀನನಾಗಿ, ತಲೆ ತಗ್ಗಿಸಿ, ಮಂಡಿಯೂರಿ, ಅಳುತ್ತಾ ಕೈಮುಗಿದ ವಿಷ್ಣು ಅಭಿಮಾನಿಗಳ, ಕನ್ನಡಿಗರ ಕ್ಷಮೆ ಕೇಳಿದ್ದಾರೆ. ವಿಷ್ಣು ಅಭಿಮಾನಿಗಳು ವಿವಾದವನ್ನು ಇಲ್ಲಿಗೆ ಕೈ ಬಿಟ್ಟಿದ್ದಾರೆ. ಆದರೆ ಈ ವಿಜಯ್ ರಂಗರಾಜು ಯಾರು? ಆತನ ಹಿನ್ನೆಲೆ ಏನು ಎಂದು ತುಸು ಕೆದಕಿದರೆ, ಈ ವ್ಯಕ್ತಿಗೆ ವಿವಾದಗಳು ಹೊಸದಲ್ಲ ಎಂಬುದು ಅರಿವಿಗೆ ಬರುತ್ತದೆ.
Recommended Video
ವಿಷ್ಣುವರ್ಧನ್ ಬಗ್ಗೆ ಬಹು ಅಹಂಕಾರದಿಂದ ಸಂದರ್ಶನದಲ್ಲಿ ಮಾತನಾಡಿದ್ದ ವಿಜಯ್ ರಂಗರಾಜು, ಹೀಗೆ ನಾಲಗೆ ಹರಿಬಿಟ್ಟಿರುವುದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆ ಸಹ ಕೆಲವು ನಟರ ಬಗ್ಗೆ ಹೀಗೆಯೇ ಇಲ್ಲ -ಸಲ್ಲದ್ದು ಹೇಳಿದ್ದಾರೆ. ಆದರೆ ಆಗೆಲ್ಲಾ ಈತನನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ, ಹಾಗಾಗಿ ಅದನ್ನೇ ಮುಂದುವರೆಸಿದ್ದ ವಿಜಯ್ ರಂಗರಾಜು, ಈಗ ಕನ್ನಡಿಗರ ಸಿಟ್ಟಿಗೆ ಬೆದರಿ ಬೆಂಡಾಗಿ ಕ್ಷಮೆ ಕೇಳಿದ್ದಾನೆ.

ಭೈರವನ ಪಾತ್ರದಿಂದ ಹೆಚ್ಚು ಗುರುತು ದೊರಕಿತು
ವಿಜಯ್ ರಂಗರಾಜು ಮೂಲ ಹೆಸರು ರಾಜ್ಕುಮಾರ್. ಈತ ಹುಟ್ಟಿದ್ದು ಮಹಾರಾಷ್ಟ್ರ ಪುಣೆಯಲ್ಲಿ ಆದರೆ ಬೆಳೆದಿದ್ದಲ್ಲಾ ಆಂಧ್ರದ ಗುಂತಕಲ್. ಉತ್ತಮ ಮೈಕಟ್ಟು ಹೊಂದಿದ್ದ, ವಿಕ್ಷಿಪ್ತ ಮುಖಚಹರೆ, ದೊಡ್ಡ ಮೀಸೆ ಹೊಂದಿದ್ದ ವಿಜಯ್ ರಂಗರಾಜು, ಮೊದಲಿಗೆ 1976 ರ ಸೀತಾಕಲ್ಯಾಣಂ ಸಿನಿಮಾದಲ್ಲಿ ನಟಿಸಿದ್ದರು, ಜೊತೆಗೆ ಕೆಲವು ಸಿನಿಮಾಗಳಲ್ಲಿ ಫೈಟರ್ ಸಹ ಆಗಿದ್ದರು. ಆ ನಂತರ ಮಲಾಯಳಂ ನ ಕೆಲವು ಸಿನಿಮಾಗಳು, ನಂತರ ಸಿಂಗೀತಂ ಶ್ರೀನಿವಾಸ್ ನಿರ್ದೇಶಿಸಿದ್ದ 'ಭೈರವದೀಪಂ' ಸಿನಿಮಾದಲ್ಲಿ ಭೈರವನ ಪಾತ್ರ ಈತನಿಗೆ ಗುರುತು ದೊರಕಿಸಿಕೊಟ್ಟಿತು.

ಯೂಟ್ಯೂಬ್ ಸಂದರ್ಶನಗಳಲ್ಲಿ ಬಾಯಿಗೆ ಬಂದಂತೆ ಮಾತು
ಭೈರವನ ಪಾತ್ರದ ಕೆಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ ವಿಜಯ್ ರಂಗರಾಜು, ನಂತರ ಲಂಡನ್ಗೆ ತೆರಳಿ ಅಲ್ಲಿ ಐದು ವರ್ಷ ಇದ್ದು ಬಂದರು. ಇಲ್ಲಿಗೆ ಬಂದ ನಂತರ ಗೋಪಿಚಂದ್ ನಟನೆಯ ಯಜ್ಞಂ ಸಿನಿಮಾದಲ್ಲಿ ವಿಲನ್ ಪಾತ್ರ, ನಂತರ ವಿಶಾಖ ಎಕ್ಸ್ಪ್ರೆಸ್, ಢಮರುಗಂ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದರು. ಹೊಸ ನಟರ ಅಲೆಯ ನಡುವೆ ವಿಜಯ್ ರಂಗರಾಜುಗೆ ಬೇಡಿಕೆ ಕಡಿಮೆಯಾಯಿತು. ಆಗ ಪ್ರಾರಂಭವಾಯಿತು ಈತನ ಬಾಯಿಬಡಕುತನ. ಯೂಟ್ಯೂಬ್ ಚಾನೆಲ್ಗಳ ಸಂದರ್ಶನಗಳಲ್ಲಿ ಕುಳಿತು ದೊಡ್ಡ-ದೊಡ್ಡ ಸ್ಟಾರ್ ನಟರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಪ್ರಾರಂಭವಾಯಿತು.

ಮೋಹನ್ ಲಾಲ್, ಈತನನ್ನು ತುಳಿಯಲು ಯತ್ನಿಸಿದರಂತೆ!
ಮಲಯಾಳಂ ಸಿನಿಮಾ ಸೂಪರ್ ಸ್ಟಾರ್ ಮೋಹನ್ ಲಾಲ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಜಯ್ ರಂಗರಾಜು, 'ವಿಯೆಟ್ನಾಂ ಕಾಲನಿ' ಎಂಬ ಸಿನಿಮಾದಲ್ಲಿ ಮೋಹನ್ ಲಾಲ್ ಎದುರು ವಿಲನ್ ಆಗಿ ನಾನು ನಟಿಸಿದ್ದೆ. ಆ ಸಿನಿಮಾ ನೋಡಿದವರೆಲ್ಲಾ, ಮೋಹನ್ ಲಾಲ್ ಸೂಪರ್ ಸ್ಟಾರ್ ಅಲ್ಲ, ನೀನೆ ಸೂಪರ್ ಸ್ಟಾರ್ ಎಂದಿದ್ದರು. ಅದು ಮೋಹನ್ ಲಾಲ್ ಅನ್ನು ಕೆರಳಿಸಿತು, 'ವಿಜಯ್ ರಂಗರಾಜು ಅನ್ನು ಸಿನಿಮಾ ಉದ್ಯಮದಲ್ಲಿ ಬೆಳೆಯಲು ಬಿಡಬಾರದು' ಎಂದು ಮೋಹನ್ ಲಾಲ್ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದರು, ಅದನ್ನು ಮೋಹನ್ ಲಾಲ್ ಆಪ್ತರೆ ನನಗೆ ಹೇಳಿದರು. ಕೊನೆಗೆ ಮೋಹನ್ಲಾಲ್ ಹಾಗೆಯೇ ಮಾಡಿದರು, ನನಗೆ ಮಲಯಾಳಂ ಸಿನಿಮಾದಲ್ಲಿ ಅವಕಾಶ ಸಿಗದ ಹಾಗೆ ಮಾಡಿದರು ಎಂದು ಹೇಳಿದ್ದಾರೆ ವಿಜಯ್ ರಂಗರಾಜು. ಎರಡು ರಾಷ್ಟ್ರಪ್ರಶಸ್ತಿ ವಿಜೇತ ನಟ ಮೋಹನ್ ಲಾಲ್, ವಿಜಯ್ ರಂಗರಾಜು ಪ್ರತಿಭೆಯಿಂದ ಅಭದ್ರತೆ ಅನುಭವಿಸಿದ್ದರಂತೆ!

ರಜನೀಕಾಂತ್ ಮೇಲೆ ಜಗಳ ಮಾಡಲು ಹೋಗಿದ್ದರಂತೆ!
ರಜನೀಕಾಂತ್ ಬಗ್ಗೆಯೂ ಸಂದರ್ಶನವೊಂದರಲ್ಲಿ ಮಾತನಾಡಿರುವ ರಂಗರಾಜು, 'ನನಗೆ ಕುಡಿಯುವುದು ಹೇಳಿಕೊಟ್ಟಿದ್ದೇ ರಜನೀಕಾಂತ್. ನಾನು ಕುಡಿಯುತ್ತಿರಲಿಲ್ಲ, ಒಮ್ಮೆ ರಜನೀಕಾಂತ್ ಜೊತೆಯಲ್ಲಿ ಕೂತು ಮಾತನಾಡುತ್ತಿದ್ದಾಗ ಅವರು ಮದ್ಯದ ಬಾಟಲಿ ತೆಗೆದು ಕುಡಿಯಲು ಹೇಳಿದರು, ನಾನು ಕುಡಿಯುವುದಿಲ್ಲ ಎಂದೆ. ಇದು ರಜನೀಕಾಂತ್ ಗೆ ಸಿಟ್ಟು ತರಿಸಿತು. 'ನೀನು ಕುಡಿಯದಿದ್ದರೆ ತಮಿಳು ಸಿನಿಮಾರಂಗದಲ್ಲಿ ನಿನಗೆ ಅವಕಾಶ ಇಲ್ಲದ ಹಾಗೆ ಮಾಡುತ್ತೇನೆ' ಎಂದರು. ನಂತರ ಅವರೇ ನನಗೆ ಪೆಗ್ ಹಾಕಿಕೊಟ್ಟರು, ನಾನು ಕುಡಿದೆ. ಆದರೆ ಈ ವಿಷಯ ಅಮ್ಮನಿಗೆ ಗೊತ್ತಾಗಿ ಬಹಳ ಬೇಸರಪಟ್ಟುಕೊಂಡರು. ಅಮ್ಮನ ಬೇಸರ ನೋಡಿ ನನಗೆ ರಜನೀಕಾಂತ್ ಮೇಲೆ ಸಿಟ್ಟು ಬಂತು, ನೇರವಾಗಿ ಅವರ ಮನೆಗೆ ಹೋದೆ, ಆದರೆ ಯಾಕೋ ನನಗೆ ಅವರೊಂದಿಗೆ ಜಗಳವಾಡಬೇಕು ಎನಿಸಲಿಲ್ಲ, ಸುಮ್ಮನೆ ಮರಳಿಬಿಟ್ಟೆ' ಎಂದಿದ್ದರು.

ನಟರ ಮೇಲೆ ಮಾಟ-ಮಂತ್ರ ಪ್ರಯೋಗಿಸಿದ್ದರಂತೆ!
ವಿಜಯ್ ರಂಗರಾಜು ಸಹ ನಟನೊಬ್ಬನ ಮೇಲೆ ಮಾಟ ಮಂತ್ರ ಮಾಡಿಸಿದ್ದ ವಿಷಯವನ್ನು ಸಹ ಸಂದರ್ಶನವೊಂದರಲ್ಲಿ ಹೇಳಿದ್ದರು. 'ಕುಟ್ಟಿಚಾತ' ಎಂಬ ದೇವರನ್ನು ಅಮವಾಸ್ಯೆ ದಿನ ಪೂಜೆ ಮಾಡುತ್ತಿದ್ದರಂತೆ ಈ ವಿಜಯ್ ರಂಗರಾಜು. ಒಮ್ಮೆ ವಸೂಲ್ ರಾಜಾ ಸಿನಿಮಾದ ಚಿತ್ರೀಕರಣದ ವೇಳೆ ಒಬ್ಬ ಸಹನಟನ ಮೇಲೆ ಮಾಟ ಪ್ರಯೋಗ ಮಾಡಿದ್ದರಂತೆ. ಆ ನಟ ಕ್ಯಾರವಾನ್ ಗೆ ಹತ್ತಲು ಪ್ರಯತ್ನಿಸುತ್ತಿದ್ದರಂತೆ, ಆದರೆ ಈತನ ಮಾಟದ ಕಾರಣದಿಂದ ಆತನಿಗೆ ಕ್ಯಾರ್ಯಾವ್ಯಾನ್ ಮೆಟ್ಟಿಲು ಹತ್ತಲು ಆಗಿರಲಿಲ್ಲವಂತೆ. ಈ ಮಾಟ-ಮಂತ್ರವನ್ನು ವಿಜಯ್ ರಂಗರಾಜು ಕೇರಳದಲ್ಲಿ ಸಾವಿರಾರು ರೂಪಾಯಿ ಕೊಟ್ಟು ಕಲಿತಿದ್ದರಂತೆ. ವಿಜಯ್ ರಂಗರಾಜು ಏನು ಅಂದುಕೊಂಡರೆ ಅದು ಆಗುತ್ತಿತ್ತಂತೆ. ಹೀಗೆ ಕಂಬಿ ಇಲ್ಲದೆ ರೈಲು ಬಿಟ್ಟಿದ್ದ ಈ ವಿಜಯ್ ರಂಗರಾಜು.


Click it and Unblock the Notifications











