ಅಂದು ಹೆಚ್ಡಿಕೆ, ಹೆಚ್ಡಿಡಿ ಕೊಟ್ಟ ಆಫರ್ ತಿರಸ್ಕರಿಸಿದ್ದೇಕೆ ನಟ ದರ್ಶನ್?
ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಕಲಾವಿದರು ರಾಜಕೀಯಕ್ಷೇತ್ರಕ್ಕೆ ಬರುವುದು ಹೊಸದೇನು ಅಲ್ಲ. ಕನ್ನಡ ಚಿತ್ರರಂಗದ ಕೆಲ ನಟ, ನಟಿಯರು ಕೂಡ ರಾಜಕೀಯರಂಗ ಪ್ರವೇಶಿಸಿದ್ದಾರೆ. ಕೆಲವರು ಗೆದ್ದಿರುವುದು ಇದೆ. ಇನ್ನು ಜನಪ್ರಿಯ ತಾರೆಯರನ್ನು ರಾಜಕೀಯಕ್ಕೆ ಸೆಳೆಯುವ ಪ್ರಯತ್ನಗಳು ನಡೆಯುತ್ತಿರುತ್ತದೆ. ನಟ ದರ್ಶನ್ಗೆ ಬಹಳ ಹಿಂದೆ ಎಂಪಿ ಟಿಕೆಟ್ ಆಫರ್ ಹೋಗಿತ್ತು.
ಚುನಾವಣೆಗಳ ಸಮಯದಲ್ಲಿ ನಟ ದರ್ಶನ್ ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಾ ಬರುತ್ತಿದ್ದಾರೆ. ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಮತಗಳನ್ನು ಸೆಳೆಯಲು ಸಿನಿಮಾ ತಾರೆಯರನ್ನು ಬಳಸಿಕೊಳ್ಳಲಾಗುತ್ತದೆ. 2019ರಲ್ಲಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ದರ್ಶನ್ ಹಾಗೂ ಯಶ್ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದರು.

ಅಂದು ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎದುರು ಸುಮಲತಾ ಅಂಬರೀಶ್ ಗೆಲುವಿನ ನಗೆ ಬೀರಿದ್ದರು. ದರ್ಶನ್, ಯಶ್ ಪ್ರಚಾರ ಈ ಗೆಲುವಿನಲ್ಲಿ ಪ್ರಮಖ ಪಾತ್ರ ವಹಿಸಿತ್ತು. ಆ ಬಳಿಕ ಕೂಡ ಚುನಾವಣೆ ಪ್ರಚಾರಗಳಲ್ಲಿ ದರ್ಶನ್ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ದರ್ಶನ್ ಮತಬೇಟೆ ನಡೆಸಿದ್ದರು. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಆಗಿ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಸ್ಪರ್ಧಿಸಿ ಗೆದ್ದಿದ್ದರು.
2019ರ ಮಂಡ್ಯ ಚುನಾವಣೆ ವೇಳೆ ಆೋಪ ಪ್ರತ್ಯಾರೋಪಗಳು ನಡೆದಿತ್ತು. ಜೋಡೆತ್ತು ಎನ್ನುವ ಪದ ಬಹಳ ಚರ್ಚೆ ಹುಟ್ಟುಹಾಕಿತ್ತು. ಇಂಟ್ರೆಸ್ಟಿಂಗ್ ಅಂದರೆ ಜೆಡಿಎಸ್ ಪಕ್ಷದಿಂದ ನಟ ದರ್ಶನ್ ಅವರನ್ನು ಎಂಪಿ ಸ್ಥಾನಕ್ಕಾಗಿ ಚುನಾವಣೆಗೆ ನಿಲ್ಲಿಸುವ ಪ್ರಯತ್ನ ನಡೆದಿತ್ತಂತೆ. ಈ ವಿಚಾರವನ್ನು ಕನ್ನಡ ಚಿತ್ರ ನಿರ್ಮಾಪಕ ಭಾ. ಮಾ ಹರೀಶ್ ಬಹಿರಂಗ ಪಡಿಸಿದ್ದಾರೆ. ಬಹಳ ಹಿಂದೆ ದರ್ಶನ್ ಅವರನ್ನು ರಾಜಕೀಯರಂಗಕ್ಕೆ ಸೆಳೆಯಲು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಅವರ ತಂದೆ ಮಾಜಿ ಪ್ರಧಾನಿ ದೇವೆಗೌಡರು ಯತ್ನಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ದರ್ಶನ್ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ನಿಲ್ಲಿಸಲು ಹೆಚ್ಡಿಡಿ, ಹೆಚ್ಡಿಕೆ ತಮ್ಮ ಮೂಲಕ ಮಾತುಕತೆ ನಡೆಸಿದ್ದರು ಎಂದು ಭಾಮಾ ಹರೀಶ್ ತಿಳಿಸಿದ್ದಾರೆ. ಡೈಲಿ ಮಾಧ್ಯಮ ಯೂಟ್ಯೂಬ್ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ದರ್ಶನ್ ನಟನೆಯ 'ಮೆಜೆಸ್ಟಿಕ್' ಚಿತ್ರವನ್ನು ಭಾಮಾ ಹರೀಶ್ ನಿರ್ಮಿಸಿದ್ದರು. ಗೌಡರ ಕುಟುಂಬದ ಜೊತೆಗೂ ಉತ್ತಮ ಒಡನಾಟ ಅವರಿಗಿದೆ.

"ಮೆಜೆಸ್ಟಿಕ್ ಸಿನಿಮಾ ಹಿಟ್ ಆಗಿತ್ತು. 'ಕರಿಯ', 'ನಿನಗೋಸ್ಕರ', 'ನೀನಂದ್ರೆ ಇಷ್ಟ', 'ಕಿಟ್ಟಿ' ಸೇರಿ ಕೆಲ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು. ಆಗ ಒಮ್ಮೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಬೇಕು ಎಂದು ನನ್ನನ್ನು ಕರೆಸಿದ್ದರು. ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಗೆ ದರ್ಶನ್ ಅವರನ್ನು ನಿಲ್ಲಿಸೋಣ ಎಂದುಕೊಂಡಿದ್ದೇವೆ. ನಿನ್ನ ಅಭಿಪ್ರಾಯ ಏನು ಎಂದು ಕೇಳಿದರು. ನಾನು ಖಂಡಿತ ಮಾಡಬಹುದು, ಆತನಿಗೆ ಜನಪ್ರಿಯತೆ ಇದೆ, ಅವರ ಜನಾಂಗ ಜಾಸ್ತಿ ಇದೆ, ಒಳ್ಳೆ ಲೆಕ್ಕಾಚಾರ ಎಂದೆ. ಸರಿ ದರ್ಶನ್ ಜೊತೆ ಮಾತನಾಡಿ, ನಾಮಿನೇಷನ್ ಮಾಡಲಿ, ನಾವೇ ಚುನಾವಣೆ ವೆಚ್ ಭರಿಸುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾಗಿ ಭಾಮಾ ಹರೀಶ್ ತಿಳಿಸಿದ್ದಾರೆ.
ಈ ವಿಚಾರವಾಗಿ ಅದೇ ದಿನ ಮಾಜಿ ಪ್ರಧಾನಿ ದೇವೇಗೌಡರ ಬಳಿ ಕೂಡ ಭಾಮಾ ಹರೀಶ್ ಮಾತನಾಡಿದ್ದರಂತೆ. ಬಳಿಕ ದರ್ಶನ್ ಅವರ ಬಿಟಿಎಂ ಬಡಾವಣೆ ನಿವಾಸಕ್ಕೆ ಭಾಮಾ ಹರೀಶ್ ಹೋಗಿ ಈ ವಿಚಾರ ಪ್ರಸ್ತಾಪಿಸಿದ್ದಾಗಿ ಹೇಳಿದ್ದಾರೆ. "ಅದೇ ದಿನ ನಾನು ದರ್ಶನ್ ಅವರ ಮನೆಗೆ ಹೋಗಿದ್ದೆ. ಹೀಗೆ ಒಳ್ಳೆ ಆಫರ್ ಬಂದಿದೆ. ನೋಡಿ ನಿಮ್ಮ ಹಣೆಲಿ ಬರೆದಿದ್ದರೆ ಒಳ್ಳೆಯದು ಆಗಬಹುದು" ಎಂದು ದರ್ಶನ್ಗೆ ಹೇಳಿದ್ದೆ ಎಂದು ವಿವರಿಸಿದ್ದಾರೆ.
"ನನ್ನ ಮಾತು ಕೇಳಿ ದರ್ಶನ್ ಒಂದು ಕ್ಷಣ ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ದರ್ಶನ್ ಗುರುಗಳೇ ಸ್ವಲ್ಪ ಟೈಂ ಕೊಡಿ ಎಂದರು. ನೀವು ಒಪ್ಪಿದರೆ ಕೂಡಲೇ ಮಾಜಿ ಸಿಎಂ, ಮಾಜಿ ಪ್ರಧಾನಿ ಜೊತೆ ಮಾತುಕತೆಗೆ ವ್ಯವಸ್ಥೆ ಮಾಡುತ್ತೇನೆ ಎಂದೆ. ಆದರೆ ಚಿತ್ರರಂಗದಲ್ಲಿ ಬೆಳೆಯುವ ಕಾರಣಕ್ಕೆ ಅವತ್ತಿಗೆ ರಾಜಕೀಯ ಬೇಡ ಎಂದು ದರ್ಶನ್ ಭಾವಿಸಿದ್ದರು. ಮುಂದೆ ನೋಡೋಣ ಸರ್, ಎಂದು ನನ್ನ ಬಳಿ ಹೇಳಿಕೊಂಡಿದ್ದರು. ಇದೇ ವಿಚಾರವನ್ನು ನಾನು ಬಳಿಕ ಹೆಚ್ಡಿಕೆ ಹಾಗೂ ಹೆಚ್ಡಿಡಿ ಅವರಿಗೆ ತಿಳಿಸಿದೆ" ಎಂದು ಆ ಸನ್ನಿವೇಶವನ್ನ ಭಾಮಾ ಹರೀಶ್ ನೆನಪಿಸಿಕೊಂಡಿದ್ದಾರೆ.


Click it and Unblock the Notifications











