'ಒಂದು ಮುತ್ತಿನ ಕಥೆ'ಯಲ್ಲಿ ಅಣ್ಣಾವ್ರು ನಟಿಸುವುದು ಮೊದಲಿಗೆ ಅರುಂಧತಿಗೆ ಇಷ್ಟವಿರಲಿಲ್ಲ, ಕಾರಣವೇನು?
ಶಂಕರ್ ನಾಗ್ ನಿಜಕ್ಕೂ ಕನ್ನಡ ಚಿತ್ರರಂಗದ ಮುತ್ತು. ಆದರೆ ಮುತ್ತು ಬಹಳ ದಿನ ನಮ್ಮ ನಡುವೆ ಇರಲಿಲ್ಲ. ಸಿನಿಮಾ ಬಿಟ್ಟು ಸಮಾಜ, ದೇಶದ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿದ್ದವರು ಶಂಕ್ರಣ್ಣ. ಅಭಿಮಾನಿಗಳ ಪ್ರೀತಿಯ ಕರಾಟೆ ಕಿಂಗ್ ನಮ್ಮನ್ನಗಲಿ 34 ವರ್ಷ ಕಳೆದಿದೆ.
ತಮ್ಮ 35ನೇ ವಯಸ್ಸಿನಲ್ಲೇ ಶಂಕರ್ ನಾಗ್ ದುರಂತ ಅಂತ್ಯ ಕಂಡಿದ್ದರು. ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಅಂದು(ಸೆಪ್ಟೆಂಬರ್ 30, 1990) 'ಜೋಕುಮಾರಸ್ವಾಮಿ' ಸಿನಿಮಾ ಚಿತ್ರೀಕರಣಕ್ಕಾಗಿ ಬೆಂಗಳೂರಿನಿಂದ ದಾವಣಗೆರೆಗೆ ಅವರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಬೆಳಗಿನ ಜಾವ ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ಮಧ್ಯೆ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಶಂಕರ್ ನಾಗ್ ಹಾಗೂ ಕಾರಿನ ಚಾಲಕ ಪ್ರಾಣ ಬಿಟ್ಟಿದ್ದರು.

ಶಂಕರಣ್ಣನದ್ದು ನಿಜಕ್ಕೂ ಮಿಂಚಿನ ಓಟ. ಹೀಗೆ ಮಿಂಚಿ ಹಾಗೆ ಮರೆಯಾಗಿಬಿಟ್ಟರು. ಆದರೆ ಚಿತ್ರರಂಗದಲ್ಲಿದ್ದ 10 ವರ್ಷಗಳಲ್ಲಿ ಅವರ ಕೊಡುಗೆ ಅಪಾರ. ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಒಂದಷ್ಟು ಸಿನಿಮಾಗಳನ್ನು ಶಂಕರ್ ನಾಗ್ ಕಟ್ಟಿಕೊಟ್ಟಿದ್ದರು. ಅದರಲ್ಲಿ ಡಾ. ರಾಜ್ಕುಮಾರ್ ನಟಿಸಿದ 'ಒಂದು ಮುತ್ತಿನ ಕಥೆ' ಚಿತ್ರವನ್ನು ಮರೆಯುವಂತಿಲ್ಲ.
ಜಾನ್ ಸ್ಟೈನ್ಬೆಕ್ ಬರೆದ 'ದಿ ಪರ್ಲ್' ಎನ್ನುವ ಕಾದಂಬರಿ ಆಧರಿಸಿ ಶಂಕರ್ ನಾಗ್ 'ಒಂದು ಮುತ್ತಿನ ಕಥೆ' ಚಿತ್ರ ಮಾಡಿದ್ದರು. ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದರು. ನೀರಿನ ಆಳದಲ್ಲಿ ಚಿತ್ರೀಕರಣ ನಡೆಸಲು ಅಂದು ಶಂಕ್ರಣ್ಣ ಮಾಡಿದ ಸಾಹಸ ಅಷ್ಟಿಷ್ಟಲ್ಲ. ಅಣ್ಣಾವ್ರ ಜೊತೆ ಅರ್ಚನಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.
ನಿರೀಕ್ಷಿತ ಮಟ್ಟದಲ್ಲಿ 'ಒಂದು ಮುತ್ತಿನ ಕಥೆ' ಸಿನಿಮಾ ಗೆಲ್ಲಲಿಲ್ಲ. ಆದರೆ ಶಂಕರ್ ನಾಗ್ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ಅಣ್ಣಾವ್ರ ನಟನೆ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಈ ಚಿತ್ರದ ಬಗ್ಗೆ ಬಹಳ ವರ್ಷಗಳ ಹಿಂದೆ ಶಂಕರ್ ನಾಗ್ ಪತ್ನಿ ಅರುಂಧತಿ ಸುವರ್ಣ ನ್ಯೂಸ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದರು. ಈ ಚಿತ್ರದಲ್ಲಿ ಅಣ್ಣಾವ್ರು ಹೀರೊ ಆಗಿ ನಟಿಸುವುದು ಆಕೆಗೆ ಮೊದಲಿಗೆ ಇಷ್ಟವಿರಲಿಲ್ಲವಂತೆ. ಅದಕ್ಕೆ ಕಾರಣ ಕೂಡ ಕೊಟ್ಟಿದ್ದರು.

ಒಬ್ಬ ವ್ಯಕ್ತಿಗೆ ಒಂದು ಅಮೂಲ್ಯ ಮುತ್ತು ಸಿಗುತ್ತದೆ. ಅದರಿಂದ ಅವನ ಜೀವನ ಹೇಗೆ ನಾಶವಾಗುತ್ತದೆ, ಸಮಾಜದಲ್ಲಿ ದುರಾಸೆ ಶುರುವಾಗಿ ಏನೆಲ್ಲಾ ಆಗುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ. ಶಂಕರ್ ನಾಗ್ ಕಾದಂಬರಿ ಓದಿ ಸ್ಕ್ರೀನ್ಪ್ಲೇ ಮಾಡಿಕೊಂಡಿದ್ದ. ನಸೀರುದ್ದೀಶ್ ಶಾ ನಾಯಕನಾಗಿ(ಐತು) ಆಗಿ ನಟಿಸಬೇಕು ಎನ್ನುವುದು ನನ್ನ ಬಯಕೆ ಆಗಿತ್ತು ಎಂದು ಅರುಂಧತಿ ನಾಗ್ ಹೇಳಿದ್ದರು.
ಶಂಕರ್ ಹೋಗಿ ಅಣ್ಣಾವ್ರಿಗೆ ಕಥೆ ಹೇಳಿದ್ದ. ಅವರು ಬಹಳ ಇಷ್ಟಪಟ್ಟರು. ಇದೇ ವಿಚಾರದಲ್ಲಿ ನನಗೂ-ಶಂಕರ್ಗೂ ಒಂದಷ್ಟು ದಿನ ಭಿನ್ನ ಅಭಿಪ್ರಾಯಗಳಿತ್ತು. ಅಣ್ಣಾವ್ರ ವಯಸ್ಸಿಗೆ ಆ ಪಾತ್ರ ಸೂಕ್ತವಾಗಿರಲ್ಲ ಅಂತ ನನಗೆ ಅನ್ನಿಸಿತ್ತು. ಕಥೆಯ ನಾಯಕ ಬಹಳ ಯಂಗ್ ಆಗಿ ಇರ್ತಾನೆ. ಆಗಷ್ಟೆ ಮದುವೆಯಾದವನು. ಹಾಗಾಗಿ ನನಗೆ ಹಾಗನ್ನಿಸದ್ದು ನಿಜ. ಆದರೆ ಅಣ್ಣಾವ್ರು ಕಥೆ ಒಪ್ಪಿಕೊಂಡ ಮೇಲೆ ಆ ವಯಸ್ಸಿನಲ್ಲೂ ಸಿಕ್ಕಾಪಟ್ಟೆ ಯಂಗ್ ಆಗಿ ಅವರ ಬಾಡಿ, ಪಿಜಿಕ್, ಶ್ರದ್ಧೆಯಿಂದ ಎಲ್ಲರಿಗಿಂತ ಯಂಗ್ ಎನಿಸಿಬಿಟ್ಟಿದ್ದರು ಎಂದು ಅರುಂಧತಿ ವಿವರಿಸಿದ್ದರು.
1987ರಲ್ಲಿ 'ಒಂದು ಮುತ್ತಿನ ಕಥೆ' ಸಿನಿಮಾ ತೆರೆಗೆ ಬಂದಿತ್ತು. ಸಮುದ್ರದ ಆಳದಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿತ್ತು. ಯಾವುದೇ ಆಕ್ಸಿಜನ್ ಮಾಸ್ಕ್ ಇಲ್ಲದೇ ಬಹಳ ಕಷ್ಟಪಟ್ಟು ಆ ಸನ್ನಿವೇಶಗಳನ್ನು ಶಂಕರ್ ನಾಗ್ ಸೆರೆ ಹಿಡಿದಿದ್ದರು. ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆಲ್ಲದಿದ್ದರೂ ಕಲ್ಟ್ ಸಿನಿಮಾ ಎನಿಕೊಂಡಿದೆ.


Click it and Unblock the Notifications











