ಕನ್ನಡ ಕಣ್ಮಣಿ ಡಾ. ರಾಜ್ಕುಮಾರ್ ಜೀವನ ಚರಿತ್ರೆಯನ್ನು ಸಿನಿಮಾ ಮಾಡಿದರೆ ಗೆಲ್ಲಲ್ವಾ?
ಬಯೋಪಿಕ್ ಸಿನಿಮಾಗಳ ಟ್ರೆಂಡ್ ಇಂದು ನಿನ್ನೆಯದಲ್ಲ. ಬಹಳ ವರ್ಷಗಳಿಂದ ಇಂತಹ ಪ್ರಯತ್ನಗಳು ನಡೆಯುತ್ತಲೇ ಇದೆ. ಕೆಲ ಬಯೋಪಿಕ್ ಸಿನಿಮಾಗಳು ಹಿಟ್ ಆಗಿವೆ. ಮತ್ತೆ ಕೆಲವು ಸೋತಿವೆ. ಆದರೆ ಸಾಧಕರ ಜೀವನ ಚರಿತ್ರೆಯನ್ನು ತೆರೆಗೆ ತರುವ ಪ್ರಯತ್ನ ಪದೇ ಪದೆ ನಡೆಯುತ್ತಲೇ ಇದೆ.
ಕನ್ನಡದಲ್ಲಿ ಬಯೋಪಿಕ್ ಸಿನಿಮಾಗಳ ಸಂಖ್ಯೆ ಕಮ್ಮಿ. ಬಾಲಿವುಡ್ನಲ್ಲಿ ಈ ಸಂಖ್ಯೆ ಹೆಚ್ಚಿದೆ. ತಮಿಳು, ತೆಲುಗಿನಲ್ಲೂ ಸಾಧಕರ ಕಥೆಗಳು ಬೆಳ್ಳಿ ಪರದೆ ಅಲಂಕರಿಸಿವೆ. ಕನ್ನಡದಲ್ಲಿ ಡಾ. ರಾಜ್ಕುಮಾರ್ ಬಯೋಪಿಕ್ ಮಾಡಬೇಕು ಎನ್ನುವುದು ಸಾಕಷ್ಟು ಅಭಿಮಾನಿಗಳ ಆಸೆ. ಸ್ವತಃ ಪುನೀತ್ ರಾಜ್ಕುಮಾರ್ ಕೂಡ ಅಪ್ಪಾಜಿ ಕಥೆಯನ್ನು ತೆರೆಗೆ ತರುವ ಇಂಗಿತ ವ್ಯಕ್ತಪಡಿಸಿದ್ದರು. ಸಾಧ್ಯವಾದರೆ ತಮ್ಮದೇ ಪಿಆರ್ಕೆ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದರು.

ಡಾ. ರಾಜ್ಕುಮಾರ್ ಸಾಧನೆಗೆ ಬಗ್ಗೆ ಹೊಸದಾಗಿ ಹೇಳುವುದು ಬೇಕಿಲ್ಲ. ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಮುತ್ತುರಾಜ್ ಮುಂದೆ ಕನ್ನಡ ಕಣ್ಮಣಿ ಆಗಿ ಬೆಳೆದರು. ಅಸಂಖ್ಯಾತ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ಇಂದಿಗೂ ರಾಜನಂತೆ ಮೆರೆಯುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ ತಮ್ಮ ಸಾಮಾಜಿಕ ಕಳಕಳಿಯಿಂದಲೂ ಅಣ್ಣಾವ್ರು ಕರುನಾಡಿನ ಆಸ್ತಿ ಆಗಿದ್ದರು. ಕನ್ನಡ ನಾಡು, ಜಲ, ಭಾಷೆ ವಿಚಾರ ಬಂದಾಗ ಸದಾ ಕನ್ನಡಿಗರ ಬೆಂಬಲಕ್ಕೆ ನಿಲ್ಲುತ್ತಿದ್ದರು.
ಅಣ್ಣಾವ್ರ ಸಾಧನೆ, ಜನಪ್ರಿಯತೆಗೆ ಗೋಕಾಕ್ ಚಳುವಳಿಗೆ ಸಿಕ್ಕ ಗೆಲುವೇ ಕನ್ನಡಿ. ಇವತ್ತಿಗೂ ತಮ್ಮ ನಟನೆ, ವ್ಯಕ್ತಿತ್ವ ಹಾಗೂ ಸಿನಿಮಾಗಳ ಮೂಲಕ ಡಾ. ರಾಜ್ಕುಮಾರ್ ಕನ್ನಡಿಗರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ. ಅಣ್ಣಾವ್ರು ಮನಸ್ಸು ಮಾಡಿದ್ದರೆ ರಾಜಕೀಯರಂಗ ಪ್ರವೇಶಿಸಿ ಮುಖ್ಯಮಂತ್ರಿ ಆಗುವ ಅವಕಾಶವೂ ಇತ್ತು. ಆದರೆ ಅಂತಹ ಪ್ರಯತ್ನವನ್ನು ಅವರು ಮಾಡಲಿಲ್ಲ. ರಾಜಕೀಯ ಪಕ್ಷಗಳಿಂದ ಆಹ್ವಾನ ಬಂದಾಗಲೂ ನಯವಾಗಿಯೇ ತಿರಸ್ಕರಿಸಿಬಿಟ್ಟಿದ್ದರು.
ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡಾ ಕ್ಷೇತ್ರದ ಸಾಧಕರು ಮಾತ್ರವಲ್ಲ ಸಿನಿಮಾ ಕಲಾವಿದರ ಸಾಧನೆಯ ಕಥೆ ಕೂಡ ತೆರೆಗೆ ಬಂದಿದೆ. ತೆಲುಗಿನ 'ಮಹಾನಟಿ' ಅದಕ್ಕೆ ಉತ್ತಮ ಉದಾಹರಣೆ. ಅಣ್ಣಾವ್ರ ಬಯೋಪಿಕ್ ಬಗ್ಗೆ ಅಭಿಮಾನಿಗಳು ಕೇಳುತ್ತಾರೆ. ಆದರೆ ನಿಜಕ್ಕೂ ಅಣ್ಣಾವ್ರ ಕಥೆಯನ್ನು ತೆರೆಗೆ ತರೋಕೆ ಸಾಧ್ಯವೇ? ಪರಿಣಾಮಕಾರಿಯಾಗಿ ಸಿನಿಮಾ ಮಾಡಬಹುದೇ? ನಟಸಾರ್ವಭೌಮನಂತೆ ತೆರೆಮೇಲೆ ನಟಿಸೋಕೆ ಯಾರಿಗಾದರೂ ಸಾಧ್ಯವೇ? ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ ಕಷ್ಟ.

ಎಲ್ಲಕ್ಕಿಂತ ಮುಖ್ಯವಾಗಿ ಡಾ. ರಾಜ್ಕುಮಾರ್ ಜೀವನದ ಕಥೆಯಲ್ಲಿ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಅಂಶಗಳು ಇಲ್ಲ. ಇದೇ ಕಾರಣಕ್ಕೆ ಎಲ್ಲಾ ಸಾಧಕರ ಕಥೆಗಳು ಸಿನಿಮಾ ಆಗಲಿಲ್ಲ. ಬಯೋಪಿಕ್ ಸಿನಿಮಾ ಮಾಡಲು ಮುಖ್ಯವಾಗಿ ಸಾಧಕರ ಬದುಕಿನ ಏರಿಳಿತದ ಕಥೆ ಇರಬೇಕು. ಬಿದ್ದಾಗ ಮತ್ತೆ ತಿರುಗಿ ಎದ್ದು ನಿಂತ ಪ್ರೇರಣಾತ್ಮಕ ಅಂಶ ಇರಬೇಕು. ಆದರೆ ಅಣ್ಣಾವ್ರದ್ದು ಬರೀ ಸಾಧನೆ ಕಥೆ. ಆರಂಭದಲ್ಲಿ ಸಿನಿಮಾ ಅವಕಾಶ ಸಿಗುವುದು ಕೊಂಚ ಕಷ್ಟವಾಗಿದ್ದು ಬಿಟ್ಟರೆ ಒಮ್ಮೆ ಗೆದ್ದಮೇಲೆ ಹಿಂತಿರುಗಿ ನೋಡಲಿಲ್ಲ.
ನಿಜಕ್ಕೂ ಹೆಸರಿಗೆ ತಕ್ಕಂತೆ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಡಾ. ರಾಜ್ಕುಮಾರ್ ಮೆರೆದರು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು. 90ರ ದಶಕದ ಆರಂಭದಲ್ಲೇ ಸಿನಿಮಾಗಳಿಗೆ ಬಣ್ಣ ಹಚ್ಚುವುದು ಕಮ್ಮಿ ಮಾಡಿಬಿಟ್ಟರು. ಹಾಗಾಗಿ ಅಣ್ಣಾವ್ರ ಸಾಧನೆಯ ಬದುಕಿನಲ್ಲಿ ಏರಿಳಿತ ಕಮ್ಮಿ. ಅದೇ ಕಾರಣಕ್ಕೆ ಬಯೋಪಿಕ್ ಸಿನಿಮಾ ಮಾಡಿ ಗೆಲ್ಲುವುದು ಕಷ್ಟ. ಅಂತಹ ಪ್ರಯತ್ನ ಮಾಡದೇ ಇರುವುದೇ ಒಳ್ಳೆಯದು ಎನ್ನುವುದು ಕೆಲವರ ವಾದ.
ತೆಲುಗು ನಟ, ಆಂಧ್ರದ ಮಾಜಿ ಸಿಎಂ ದಿವಂಗತ ಎನ್ಟಿಆರ್ ಜೀವನ ಕಥೆಯನ್ನು ಕೂಡ ತೆರೆಗೆ ತರಲಾಯಿತು. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬಂತು. ಸ್ವತಃ ಎನ್ಟಿಆರ್ ಪುತ್ರ ಬಾಲಕೃಷ್ಣ ತಮ್ಮ ತಂದೆ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಚೆನ್ನಾಗಿ ಮೂಡಿ ಬಂದಿತ್ತು. 'ಕಥಾನಾಯಕುಡು' ಚಿತ್ರದಲ್ಲಿ ಎನ್ಟಿಆರ್ ಸಿನಿ ಜೀವನ, 'ಮಹಾನಾಯಕುಡು' ಚಿತ್ರದಲ್ಲಿ ರಾಜಕೀಯ ಜೀವನವನ್ನು ಕಟ್ಟಿಕೊಡಲಾಗಿತ್ತು. ಆದರೂ ಸಿನಿಮಾ ಗೆಲ್ಲಲಿಲ್ಲ.
ಇತ್ತೀಚೆಗೆ ಮತ್ತೊಮ್ಮೆ ತೆಲುಗು ನಟ ಅಕ್ಕಿನೇನಿ ನಾಗೇಶ್ವರ ರಾವ್ ಬಯೋಪಿಕ್ ಮಾಡುವ ಬಗ್ಗೆ ಪುತ್ರ ನಾಗಾರ್ಜುನ ಬಳಿ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ನಾಗ್ "ತಂದೆ ಕಥೆಯನ್ನು ಡಾಕ್ಯುಮೆಂಟರಿ ಮಾಡಬಹುದು. ಬಯೋಪಿಕ್ ಮಾಡಲು, ವ್ಯಕ್ತಿಯ ಜೀವನ ಏರಿಳಿತಗಳಿಂದ ಕೂಡಿರಬೇಕು. ಆದರೆ ಎಎನ್ಆರ್ ಅವರ ಜೀವನದಲ್ಲಿ ಬರೀ ಸಾಧನೆ ಮಾತ್ರ ನೋಡಬಹುದು. ಹಾಗಾಗಿ, ಬಯೋಪಿಕ್ ಮಾಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ಅಣ್ಣಾವ್ರ ಬಯೋಪಿಕ್ ಮಾಡುವುದು ಯಾಕೆ ಕಷ್ಟ ಎನ್ನುವುದಕ್ಕೂ ವಿಶ್ಲೇಷಣೆ ಕೊಡಬಹುದು.


Click it and Unblock the Notifications











