ರಾತ್ರೋರಾತ್ರಿ 'ಅಯ್ಯ' ಚಿತ್ರದ 'ಕೆಟ್ಟೋದೆ ಕೆಟ್ಟೋದೆ' ಹಾಡು ಬದಲಾಗಿದ್ದೇಕೆ?
ಭಾರತೀಯ ಸಿನಿಮಾಗಳಲ್ಲಿ ಮಾತ್ರ ಹಾಡುಗಳಿಗೆ ಬಹಳ ಮಹತ್ವ ಇದೆ. ದಶಕಗಳಿಂದಲೂ ನಮ್ಮ ಸಿನಿಮಾಗಳು ಹಾಡುಗಳು ಹಾಸು ಹೊಕ್ಕಾಗಿವೆ. ಒಂದ್ಕಾಲದಲ್ಲಿ 10, 15 ಹಾಡುಗಳಿದ್ದ ಸಿನಿಮಾಗಳು ಬರುತ್ತಿದ್ದವು. ಕನ್ನಡ ಸಿನಿಮಾಗಳಲ್ಲಿ ಕೂಡ ಮೂರ್ನಾಲ್ಕು ಹಾಡುಗಳು ಇದ್ದೇ ಇರುತ್ತವೆ. ಕೆಲವೊಮ್ಮೆ ಹಾಡುಗಳಿಲ್ಲದೇ ಸಿನಿಮಾ ಮಾಡಿರುವುದು ಇದೆ.
ಆಲ್ಬಮ್ ಹಿಟ್ ಆದರೆ ಸಿನಿಮಾ ಹಿಟ್ ಎನ್ನುವ ಮಾತು ಒಂದ್ಕಾಲದಲ್ಲಿ ಇತ್ತು. ಇದೇ ಕಾರಣಕ್ಕೆ ಹಾಡುಗಳ ರೆಕಾರ್ಡಿಂಗ್, ಶೂಟಿಂಗ್ಗೆ ಚಿತ್ರತಂಡಗಳು ಸಾಕಷ್ಟು ಕಸರತ್ತು ನಡೆಸುತ್ತದೆ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಹಾಡುಗಳನ್ನು ಬದಲಿಸುವ, ಕೈ ಬಿಡುವ ಕೆಲಸ ನಡೆಯುತ್ತದೆ. ಕೆಲವೊಮ್ಮೆ ಕೊನೆ ಕ್ಷಣದಲ್ಲಿ ಹಾಡಿನ ಸಾಹಿತ್ಯ ಬದಲಿಸಿರುವ ಉದಾಹರಣೆಗಳು ಇವೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕ್ರೇಜಿ ಕ್ವೀನ್ ರಕ್ಷಿತಾ ನಟನೆಯ 'ಅಯ್ಯ' ಹಿಟ್ ಲಿಸ್ಟ್ ಸೇರಿತ್ತು. ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರವನ್ನು ಬೈರೇ ಗೌಡ ನಿರ್ಮಿಸಿದ್ದರು. ತಮಿಳಿನ 'ಸಾಮಿ' ಚಿತ್ರದಿಂದ ಪ್ರೇರಣೆಗೊಂದು ಈ ಚಿತ್ರವನ್ನು ಕಟ್ಟಿಕೊಡಲಾಗಿತ್ತು. ಚಿತ್ರದಲ್ಲಿ ಪೊಲೀಸ್ ಆಫೀಸರ್ 'ಅಯ್ಯ' ಆಗಿ ಅಬ್ಬರಿಸಿದ್ದರು. 2005ರಲ್ಲಿ ತೆರೆಕಂಡ ಸಿನಿಮಾ ಶತದಿನೋತ್ಸವ ಆಚರಿಸಿಕೊಂಡಿತ್ತು.
ವಿಶೇಷ ಅಂದರೆ 'ಅಯ್ಯ' ಚಿತ್ರದ ಹಾಡುಗಳಿಗೆ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಸಂಗೀತ, ಸಾಹಿತ್ಯ ಒದಗಿಸಿದ್ದರು. ಚಿತ್ರದಲ್ಲಿ ಒಟ್ಟು 5 ಹಾಡುಗಳಿತ್ತು. ಸಿನಿಮಾ ತೆರೆಗೆ ಬರುವ ಮುನ್ನ ಚಿತ್ರದ ಆಡಿಯೋ ರಿಲೀಸ್ ಆಗಿ ಹಿಟ್ ಆಗಿತ್ತು. ಎಲ್ಲಾ ಹಾಡುಗಳು ಅಭಿಮಾನಿಗಳ ಮನಗೆದ್ದಿತ್ತು. 'ಕೆಟ್ಟೋದೆ ಕೆಟ್ಟೋದೆ' ಹಾಡು ವೈರಲ್ ಆಗಿತ್ತು. ಆದರೆ ಸೆನ್ಸಾರ್ ಮಂಡಳಿ ಈ ಹಾಡಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ಏನಾಯ್ತು? ಎನ್ನುವುದನ್ನು 19 ವರ್ಷಗಳ ಬಳಿ ಚಿತ್ರ ಸಾಹಿತಿ ಕೆ. ಕಲ್ಯಾಣ್ ವಿವರಿಸಿದ್ದಾರೆ.
ಚಿತ್ರಸಾಹಿತಿ, ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ತಮ್ಮದೇ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಅದರಲ್ಲಿ ತಾವು ಬರೆದ ಹಾಡುಗಳು ಹುಟ್ಟಿದ ಸಮಯವನ್ನು ವಿವರಿಸುತ್ತಾರೆ. ಸದ್ಯ 'ಅಯ್ಯ' ಚಿತ್ರದ 'ಕೆಟ್ಟೋದೆ ಕೆಟ್ಟೋದೆ' ಹಾಡಿನ ಸಾಹಿತ್ಯ ಯಾಕೆ ಬದಲಾಯಿತು ಎನ್ನುವುದನ್ನು ಈಗ ವಿವರಿಸಿದ್ದಾರೆ. 'ಅಯ್ಯ' ಶುಕ್ರವಾರ ತೆರೆಗೆ ಬರಬೇಕಿತ್ತು. ಆದರೆ ಬುಧವಾರ ರಾತ್ರಿ 12 ಗಂಟೆಗೆ ಸಾಹಿತ್ಯ ಬದಲಿಸುವಂತಾಯಿತು ಎಂದು ಹೇಳಿದ್ದಾರೆ.

'ಅಯ್ಯ' ಚಿತ್ರವನ್ನು ಸೆನ್ಸಾರ್ ಮಂಡಳಿ ನೋಡಿ ಮೆಚ್ಚಿಕೊಂಡಿತ್ತು. ಆದರೆ 'ಕೆಟ್ಟೋದೆ ಕೆಟ್ಟೋದೆ' ಹಾಡಿನ ಸಾಹಿತ್ಯಕ್ಕೆ ಚಕಾರ ಎತ್ತಿತ್ತು. ಈ ಹಾಡನ್ನು ಬಳಸಿಕೊಳ್ಳುವಂತಿದ್ದರೆ 'ಎ' ಸರ್ಟಿಫಿಕೇಟ್ ಕೊಡುತ್ತೇವೆ. 'ಯು/ಎ' ಬೇಕು ಅಂದ್ರೆ ಹಾಡನ್ನು ತೆಗೆಯಬೇಕು ಎನ್ನುವ ಷರತ್ತು ಹಾಕಿದ್ದರಂತೆ. ಆಗ ಚಿತ್ರದ ವಿತರಕರಾಗಿದ್ದ ಜಯಣ್ಣ, ಭೋಗೇಂದ್ರ ಆ ಹಾಡು ಬೇಕೇಬೇಕು ಎಂದು ಪಟ್ಟು ಹಿಡಿದರು. ಹಾಗಾಗಿ ಅನಿವಾರ್ಯವಾಗಿ ಅದನ್ನು ಬದಲಿಸುವಂತಾಯಿತು ಎಂದು ಕೆ. ಕಲ್ಯಾಣ್ ಹೇಳಿದ್ದಾರೆ.
ಬುಧವಾರ ಚಿತ್ರತಂಡ ನನ್ನನ್ನು ಸಂಪರ್ಕಿಸಿತ್ತು. ರವಿಚಂದ್ರನ್ ಸರ್ ಅನುಮತಿ ಪಡೆದು ಹಾಡಿನ ಸಾಹಿತ್ಯ ಬದಲಿಸಲು ಕೆ. ಕಲ್ಯಾಣ್ ಒಪ್ಪಿಕೊಂಡಿದ್ದರಂತೆ. ಗಾಂಧಿನಗರದ ಈಶ್ವರಿ ಎಡಿಟಿಂಗ್ ರೂಮ್ನಲ್ಲಿ 'ಕೆಟ್ಟೋದೆ ಕೆಟ್ಟೊದೆ' ಹಾಡನ್ನು ಕೇಳಿದ್ದರಂತೆ. ಅದಾಗಲೇ ಚಿತ್ರೀಕರಣವಾಗಿದ್ದ ಹಾಡನ್ನು ನೋಡಿ, ದರ್ಶನ್ ಹಾಗೂ ರಕ್ಷಿತ್ ಲಿಪ್ಸಿಂಕ್ಗೆ ಸರಿಹೊಂದುವಂತೆ 'ರಕ್ಷಿತಾ ರಕ್ಷಿತಾ' ಎನ್ನುವ ಸಾಹಿತ್ಯವನ್ನು ಕೆ. ಕಲ್ಯಾಣ್ ರಚಿಸಿದರು.
ಎಲ್. ಎನ್ ಶಾಸ್ತ್ರಿ ಹಾಗೂ ಸುಮಾ ಶಾಸ್ತ್ರಿ 'ಕೆಟ್ಟೋದೆ ಕೆಟ್ಟೋದೆ' ಹಾಡನ್ನು ಹಾಡಿದ್ದರು. ಬಳಿಕ ಮಧ್ಯರಾತ್ರಿ ಭದ್ರಿ ಪ್ರಸಾದ್ ಹಾಗೂ ಮಂಜುಳಾ ಗುರುರಾಜ್ ಅವರನ್ನು ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋಗೆ ಕರೆಸಿ 'ರಕ್ಷಿತಾ ರಕ್ಷಿತಾ' ಹಾಡನ್ನು ಹಾಡಿಸಲಾಯಿತು. ಬಳಿಕ ಅದನ್ನು ಅದಾಗಲೇ ಚಿತ್ರೀಕರಣ ಮಾಡಿದ್ದ ವೀಡಿಯೋ ಜೊತೆಗೆ ಸಿಂಕ್ ಮಾಡಿ ಎಡಿಟ್ ಮಾಡಲಾಯಿತು. ಎಲ್ಲರೂ ಮೆಚ್ಚಿದರು. ಸಿನಿಮಾ ಬಿಡುಗಡೆ ಆಗಿ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.
'ಅಯ್ಯ' ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಅಂದು ಸಂಜೆ ನಟ ದರ್ಶನ್ ನನಗೆ ಕರೆ ಮಾಡಿ ಅಭಿನಂದಿಸಿದರು. ನೀವು ರಾತ್ರಿಯೆಲ್ಲಾ ಕಷ್ಟಬಿದ್ದು ಶ್ರಮಿಸಿದ್ದಕ್ಕೆ ಇವತ್ತು ಸಿನಿಮಾ ಬಿಡುಗಡೆ ಆಯಿತು ಎಂದರು ಎಂದು ಕೆ. ಕಲ್ಯಾಣ್ ನೆನಪಿಸಿಕೊಂಡಿದ್ದಾರೆ. ಜೊತೆಗೆ ವಾರದ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಹಾಡು ಕೇಳಿ ಮೆಚ್ಚಿಕೊಂಡರು ಎಂದು ಕೆ. ಕಲ್ಯಾಣ್ ಹೇಳಿದ್ದಾರೆ.


Click it and Unblock the Notifications











