ದರ್ಶನ್ ನಟಿಸಿಬೇಕಿದ್ದ 'ಕಪಾಲಿ' ಚಿತ್ರ ನಿಂತಿದ್ದೇಕೆ? ಚಿತ್ರಕ್ಕೆ ಉಪ್ಪಿ ಕಥೆ, ಚಿತ್ರಕಥೆ ಬರೆದಿದ್ರಾ?
ಅದೆಷ್ಟೋ ಸಿನಿಮಾಗಳು ಸೆಟ್ಟೇರುವ ಮುನ್ನವೇ ನಿಂತು ಹೋಗುತ್ತವೆ. ಚಿತ್ರೀಕರಣ ಮುಗಿದು ಬಿಡುಗಡೆ ಆಗದೇ ಡಬ್ಬಾದಲ್ಲೇ ಉಳಿದಿರುವ ಚಿತ್ರಗಳ ಪಟ್ಟಿ ಕೂಡ ದೊಡ್ಡದಿದೆ. ಕೆಲವು ಸಿನಿಮಾಗಳು ಘೋಷಣೆ ಬಳಿಕ ಶುರುವಾಗುವುದೇ ಇಲ್ಲ. ದರ್ಶನ್ ನಟಿಸಬೇಕಿದ್ದ ಕೆಲ ಸಿನಿಮಾಗಳ ಕಥೆ ಕೂಡ ಹೀಗೆ ಆಗಿದೆ.
ದರ್ಶನ್ ಹೀರೊ ಆಗಿ ಒಂದಷ್ಟು ಸಿನಿಮಾಗಳು ಘೋಷಣೆ ಆಗಿ ಬಳಿಕ ಸೆಟ್ಟೇರಲಿಲ್ಲ. 'ರಾಜವೀರ ಮದಕರಿ ನಾಯಕ' ಸಿನಿಮಾ ಒಂದು ವಾರ ಚಿತ್ರೀಕರಣದ ನಂತರ ತಣ್ಣಗಾಗಿತ್ತು. ಇಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತದೆ. 15 ವರ್ಷಗಳ ಹಿಂದೆ 'ಕಪಾಲಿ' ಎಂಬ ಟೈಟಲ್ನಲ್ಲಿ ಚಿತ್ರವೊಂದು ಘೋಷಣೆ ಆಗಿತ್ತು. ಆದರೆ ಮುಂದೆ ಆ ಸಿನಿಮಾ ಶುರುವಾಗಲೇ ಇಲ್ಲ. ದರ್ಶನ್ ಕಾಂಬಿನೇಷನ್ನಲ್ಲಿ ನಿರ್ಮಾಪಕ ರಮೇಶ್ ಯಾದವ್ ಈ ಚಿತ್ರ ಮಾಡಬೇಕಿತ್ತು.

'ನವಗ್ರಹ', 'ಅಭಯ್', 'ಪೊರ್ಕಿ' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ದರ್ಶನ್ ನಟಿಸುತ್ತಿದ್ದ ಸಮಯ ಅದು. ಅವರ ಹುಟ್ಟುಹಬ್ಬಕ್ಕೆ ನಾಲ್ಕೈದು ಸಿನಿಮಾಗಳು ಘೋಷಣೆ ಆಗುತ್ತಿದ್ದವು. ಅದೇ ರೀತಿ 'ಕಪಾಲಿ' ಎನ್ನುವ ಖಡಕ್ ಟೈಟಲ್ ಚಿತ್ರದ ಅನೌನ್ಸ್ಮೆಂಟ್ ಪೋಸ್ಟರ್ ಸಹ ಪೇಪರ್ಗಳಲ್ಲಿ ಬಂದಿತ್ತು. ಆದರೆ ನಂತರ ಅದರ ಚರ್ಚೆ ನಡೆಯಲೇ ಇಲ್ಲ.
ಸದ್ಯ ದಿಢೀರನೆ ಸೋಶಿಯಲ್ ಮೀಡಿಯಾದಲ್ಲಿ 'ಕಪಾಲಿ' ಚಿತ್ರದ ಬಗ್ಗೆ ಚರ್ಚೆ ಶುರುವಾಗಿದೆ. ಈ ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಕಥ, ಚಿತ್ರಕಥೆ ಬರೆಯುತ್ತಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ. ಅಭಿಮಾನಿಗಳು ಪೋಸ್ಟರ್ ವೈರಲ್ ಮಾಡಿ ಚರ್ಚೆ ಹುಟ್ಟಾಕ್ಕಿದ್ದಾರೆ. 'ಕಪಾಲಿ' ಸಿನಿಮಾ ಯಾಕೆ ನಿಂತು ಹೋಯಿತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಸಲಿಗೆ ಆ ಸಿನಿಮಾ ಶುರುವಾಗಿರಲಿಲ್ಲ. ಬದಲಿಗೆ ಘೋಷಣೆ ಮಾತ್ರ ಮಾಡಲಾಗಿತ್ತು. ಈ ಬಗ್ಗೆ ನಿರ್ದೇಶಕ ರಮೇಶ್ ಯಾದವ್ ಫಿಲ್ಮ್ಬೀಟ್ಗೆ ಪ್ರತಿಕ್ರಿಯಿಸಿದ್ದಾರೆ.

'ಕಪಾಲಿ' ಹೆಸರಿನಲ್ಲಿ ನಾನು ಸಿನಿಮಾ ಘೋಷಣೆ ಮಾಡಿದ್ದು ನಿಜ. ಆದರೆ ಬಳಿಕ ಆ ಸಿನಿಮಾ ಕೈಗೂಡಲಿಲ್ಲ. ನಂತರ ದರ್ಶನ್ ಸರ್ ಜೊತೆ 'ಬಾಸ್' ಸಿನಿಮಾ ನಿರ್ಮಿಸಿದೆ. ಆ ಸಿನಿಮಾ ಗೆಲ್ತು. ಅಲ್ಲಿಂದ ಮುಂದೆ 'ಕಪಾಲಿ' ಸಿನಿಮಾ ಸಾಧ್ಯವಾಗಲಿಲ್ಲ. ಆ ಚಿತ್ರಕ್ಕೆ ಉಪೇಂದ್ರ ಕಥೆ, ಚಿತ್ರಕಥೆ ಬರೆಯುತ್ತಿದ್ದರು ಎನ್ನುವುದೆಲ್ಲಾ ಸುಳ್ಳು. ನಾವೇ ಒಂದು ಸಿನಿಮಾ ಮಾಡೋಣ ಅಂದುಕೊಂಡಿದ್ದೆವು. ನನ್ನ ತಲೆಯಲ್ಲೇ ಒಂದು ಸ್ಟೋರಿಲೈನ್ ಇತ್ತು. 'ಓಂ' ರೀತಿಯ ಸಿನಿಮಾ ಅದು. ಇವತ್ತಿಗೂ ಅದನ್ನು ನಾನು ಮರೆತ್ತಿಲ್ಲ" ಎಂದು ರಮೇಶ್ ಯಾದವ್ ಮಾಹಿತಿ ನೀಡಿದ್ದಾರೆ.
ಅಂದಹಾಗೆ 'ಅಶೋಕ' ಹಾಗೂ 'ತಾಯಿ ಇಲ್ಲದ ತಬ್ಬಲಿ' ಚಿತ್ರಗಳಿಗೆ ನಿರ್ಮಾಪಕರಾದ ರಮೇಶ್ ಯಾದವ್ ಕಥೆ ಕೊಟ್ಟಿದ್ದರು. ಶಿವಣ್ಣ ನಟಿಸಿದ್ದ 'ಅಶೋಕ' ಸಿನಿಮಾ ಕೂಡ ಸದ್ದು ಮಾಡಿತ್ತು. ಸುದೀಪ್ ನಟನೆಯ 'ವಾಲಿ' ಚಿತ್ರವನ್ನು ಕೂಡ ಅವರು ನಿರ್ಮಾಣ ಮಾಡಿದ್ದರು.
ರಮೇಶ್ ಯಾದವ್ ಸಾಕಷ್ಟು ಸಿನಿಮಾಗಳನ್ನು ವಿತರಣೆ ಮಾಡಿ ಗೆದ್ದಿದ್ದರು. ಬಳಿಕ ನಿರ್ಮಾಣಕ್ಕೆ ಕೈ ಹಾಕಿದ್ದರು. 'ದಾಸ', 'ಬಲರಾಮ', 'ಕೃಷ್ಣ', 'ಅಕ್ಕ ತಂಗಿ', 'ಕೆಂಚ', 'ಶಬರಿ' ಹೀಗೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಪ್ರೊಡಕ್ಷನ್ಸ್ ನಂ. 21 ಎನ್ನುವ ಮತ್ತೊಂದು ಸಿನಿಮಾ ಕೆಲಸಗಳು ನಡೆಯುತ್ತಿದೆ.
ದರ್ಶನ್ ನಟನೆಯ 'ಗಜ', 'ಇಂದ್ರ' ಹಾಗೂ ಶಿವಣ್ಣ ನಟನೆಯ 'ಕಿಲ್ಲಿಂಗ್ ವೀರಪ್ಪನ್' ಸೇರಿದಂತೆ ಕೆಲ ಸ್ಟಾರ್ ನಟ ಸಿನಿಮಾಗಳನ್ನು ಕೂಡ ರಮೇಶ್ ಯಾದವ್ ವಿತರಣೆ ಮಾಡಿ ಗೆದ್ದಿದ್ದಾರೆ. 'ಕಪಾಲಿ' ಸಿನಿಮಾ ಬರಬೇಕಿತ್ತು. ಟೈಟಲ್ಲೇ ಸಖತ್ ಖಡಕ್ಕಾಗಿದೆ. ಸಿನಿಮಾ ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











