"ನಾನು ಅಣ್ಣಾವ್ರ ಕಾಲ ಧೂಳಿಗೂ ಸಮವಿಲ್ಲ"; ವರನಟನ ಮೇಲಿರುವ ಗೌರವ ಮಕ್ಕಳ ಮೇಲಿಲ್ವಾ?
ದೊಡ್ಮನೆಗೂ ತೂಗುದೀಪ ಕುಟುಂಬಕ್ಕೂ ಬಿಡಲಾರದ ನಂಟಿದೆ. ಇದು ಅಣ್ಣಾವ್ರು ಹಾಗೂ ತೂಗುದೀಪ ಶ್ರೀನಿವಾಸ್ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ, ಡಾ.ರಾಜ್ಕುಮಾರ್ ಹಾಗೂ ತೂಗುದೀಪ್ ಶ್ರೀನಿವಾಸ್ ಅಗಲಿದ ಬಳಿಕ ಈ ಸಂಬಂಧ ಹಾಗೇ ಉಳಿದಿಲ್ಲ ಅನ್ನೋದು ಎರಡೂ ಮನೆತನದ ಅಭಿಮಾನಿಗಳಿಗೂ ಗೊತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ಇಂತಹದ್ದೊಂದು ಚರ್ಚೆ ಶುರುವಾಗಿದೆ. ಈ ಎರಡೂ ಕುಟುಂಬವನ್ನು ನೋಡಿಕೊಂಡು ಬಂದಿರುವ ಹಿರಿಯ ಪತ್ರಕರ್ತರು ಕೆಲವು ವಿಷಯಗಳನ್ನು ಹೊರ ಹಾಕುತ್ತಿದ್ದಾರೆ. ದರ್ಶನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದಿನದಿಂದಲೇ ದೊಡ್ಮನೆ ಜೊತೆ ಅಸಮಧಾನವಿತ್ತು ಎಂದು ಹೇಳಿದ್ದಾರೆ.

2011ರವರೆಗೂ ದರ್ಶನ್ ಹಾಗೂ ದೊಡ್ಮನೆಯೊಂದಿಗೆ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ, ಪತ್ನಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ ಬಳಿಕ ದರ್ಶನ್ ಹಾಗೂ ದೊಡ್ಮನೆ ಕುಟುಂಬದೊಂದಿಗೆ ಒಡಕು ಮೂಡಿತ್ತು ಎಂದು ಆ ವೇಳೆ ಸುದ್ದಿಯಾಗಿತ್ತು. ತನ್ನ ಕೌಟುಂಬಿಕ ವಿಷಯಕ್ಕೆ ದೊಡ್ಮನೆ ಹೀರೊಗಳು ತಲೆ ಹಾಕಿದ್ದರು ಅನ್ನೋ ಕಾರಣಕ್ಕೆ ದರ್ಶನ್ ಕೋಪಗೊಂಡಿದ್ದರು. ಅಲ್ಲಿಂದ ದರ್ಶನ್ ಹಾಗೂ ದೊಡ್ಮನೆ ಹೀರೊಗಳ ಮಧ್ಯೆ ವೈಷಮ್ಯ ಬೆಳೆಯಿತು ಅಂತ ವರದಿ ಆಗಿದ್ದೂ ಇವೆ.
ಆದ್ರೀಗ ಹಿರಿಯ ಪತ್ರಕರ್ತರು ದರ್ಶನ್ ಸಹಾಯಕ ಕ್ಯಾಮರಾಮ್ಯಾನ್ ಆಗಿದ್ದಾಗಲೇ ದೊಡ್ಮನೆ ಜೊತೆ ಅಸಮಧಾನವಿತ್ತು ಎಂದಿದ್ದಾರೆ. ದರ್ಶನ್ ಕ್ಯಾಮರಾಮ್ಯಾನ್ ಆಗಿದ್ದಾಗ ಪಾರ್ವತಮ್ಮ ರಾಜ್ಕುಮಾರ್ ಹೊಸ ಕ್ಯಾಮರಾ ಆಪರೇಟ್ ಮಾಡುವುದನ್ನು ಕಲಿಯಲು ಹೇಳಿದ್ದರು. ಆದರೆ, ಆ ವೇಳೆ ದರ್ಶನ್ ನಿರಾಕರಿಸಿದ್ದರು. ಪಾರ್ವತಮ್ಮ ರಾಜ್ಕುಮಾರ್ಗೆ ತಾನು ಹೀರೊ ಆಗುವುದು ಇಷ್ಟವಿರಲಿಲ್ಲ ಎಂದು ಹೇಳಿದ್ದಾಗಿ ಮಾಧ್ಯಮಗಳ ಮುಂದೆ ರಿವೀಲ್ ಮಾಡಿದ್ದಾರೆ.

ಆದರೆ, ದೊಡ್ಮನೆ ವಿಷಯ ಬಂದಾಗ ದರ್ಶನ್ ಹಲವು ಬಾರಿ ವೇದಿಕೆ ಮೇಲೆ ಅಣ್ಣಾವ್ರ ಗುಣಗಾನ ಮಾಡಿದ್ದು ಇದೆ. ಈ ಹಿಂದೆ ಅಣ್ಣಾವ್ರ ಬಗ್ಗೆ ದರ್ಶನ್ ಆಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. "ನಾನು ಅಣ್ಣಾವ್ರ ಕಾಲು ಸಮಕ್ಕೂ ಇಲ್ಲ" ಎಂದು ಇತ್ತೀಚೆಗಷ್ಟೇ ಹೇಳಿದ್ದರು. ಅದೇ ವಿಡಿಯೋ ಈಗ ದರ್ಶನ್ ಜೈಲಿನಲ್ಲಿರುವಾಗ ವೈರಲ್ ಆಗುತ್ತಿದೆ.
ದರ್ಶನ್ ನಟಿಸಿದ ಬ್ಲಾಕ್ ಬಸ್ಟರ್ ಸಿನಿಮಾ 'ಕಾಟೇರ' ಯಶಸ್ಸು ಕಂಡಿತ್ತು. ಆ ಸಿನಿಮಾ ಸಕ್ಸಸ್ ಮೀಟ್ನಲ್ಲಿ ದರ್ಶನ್ ನಟನೆಯನ್ನು ಅಣ್ಣಾವ್ರಿಗೆ ಹೋಲಿಕೆ ಮಾಡಲಾಗಿತ್ತು. ಆ ವೇಳೆ ದರ್ಶನ್ ಹೇಳಿದ ಮಾತು ವೈರಲ್ ಆಗುತ್ತಿದೆ. "ರಾಜ್ಕುಮಾರ್ ಅವರ ಹೆಸರು ಹೇಳುವುದಲ್ಲ. ಅವರ ಕಾಲು ಧೂಳಿಗೂ ಸಮ ಅಲ್ಲ. ನೀವು ಆ ಎತ್ತರದವರೆಗೂ ಹೋಗಲೇ ಬೇಡಿ. ಪ್ರಯತ್ನ ಪಡಬಹುದು." ಎಂದು ದರ್ಶನ್ ಹೇಳಿದ್ದರು.
ಇದೇ ವೇಳೆ ತೂಗುದೀಪ ಶ್ರೀನಿವಾಸ್ ಅವರನ್ನೇ ಹೋಲುತ್ತೀರಾ ಎಂದು ಪ್ರಶ್ನೆ ಮಾಡಿದ್ದರು. ಆಗ "ಪ್ರಿಂಟ್ ಅವರದ್ದೇ ಅಲ್ವ ಸರ್. ವಾಯ್ಸ್ ಎಲ್ಲವನ್ನೂ ಮ್ಯಾಚ್ ಮಾಡಬೇಕಲ್ವಾ ಸರ್" ಎಂದು ದರ್ಶನ್ ತಮಾಷೆಯಾಗಿ ಹೇಳಿದ್ದರು. ಇನ್ನೊಂದು ಕಡೆ ಹಲವು ಸಂದರ್ಭಗಳಲ್ಲಿ ಶಿವಣ್ಣನ ನ್ನೂ ದರ್ಶನ್ ಗೌರವದಿಂದ ಕಂಡಿದ್ದಾರೆ. ಒಟ್ನಲ್ಲಿ ದರ್ಶನ್ ಜೈಲು ಸೇರಿದ ಬಳಿಕ ಹೊಸ ಹೊಸ ಸಂಗತಿಗಳು ಹೊರಬೀಳುತ್ತಿವೆ. ಅದಕ್ಕೆ ರೆಕ್ಕೆ ಪುಕ್ಕಗಳು ಅಂಟಿಕೊಂಡಿವೆ.


Click it and Unblock the Notifications











