'ಕಿತ್ತೂರು ಚೆನ್ನಮ್ಮ' ಚಿತ್ರದಲ್ಲಿ ಚಿಕ್ಕ ಪಾತ್ರವನ್ನು ಅಣ್ಣಾವ್ರು ಒಪ್ಪಿಕೊಂಡಿದ್ದೇಕೆ?
ನಟ ಸಾರ್ವಭೌಮ ಡಾ. ರಾಜ್ಕುಮಾರ್ ಮಾಡದ ಪಾತ್ರಗಳಿಲ್ಲ. ರಾಜನಾಗಿ, ಸೇವಕನಾಗಿ, ಬಡವನಾಗಿ, ಶ್ರೀಮಂತನಾಗಿ, ರೈತನಾಗಿ, ಕುಂಬಾರನಾಗಿ, ಭಕ್ತನಾಗಿ, ದೇವರಾಗಿ, ಪೊಲೀಸ್ ಆಫೀಸರ್ ಆಗಿ, ಸಿಐಡಿ ಆಫೀಸರ್ ಹೀಗೆ ಎಲ್ಲಾ ಬಗೆಯ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದರು.
ಅಣ್ಣಾವ್ರು ಇಂದು ನಮ್ಮೊಂದಿಗೆ ಇಲ್ಲದೇ ಇದ್ದರೂ ತಮ್ಮ ಸಿನಿಮಾಗಳು ಹಾಗೂ ಆದರ್ಶನಗಳಿಂದ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತಸ್ಥಾನ ಅಲಂಕರಿಸಿದ್ದಾರೆ. ಆರಂಭದಲ್ಲಿ ದಿನಗಳಲ್ಲಿ ಪೌರಾಣಿಕ ಹಾಗೂ ಐತಿಹಾಸಿಕ ಸಿನಿಮಾಗಳಲ್ಲಿ ಡಾ. ರಾಜ್ ಹೆಚ್ಚು ನಟಿಸಿದರು. ಬಳಿಕ ಸಾಮಾಜಿಕ ಸಿನಿಮಾಗಳತ್ತ ವಾಲಿದರು. ಅಣ್ಣಾವ್ರ ಮನೆಯಲ್ಲೇ ಸದಾ ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತಿತ್ತು.

ಹತ್ತಾರು ಪಾತ್ರಗಳಲ್ಲಿ ನಟಿಸಿದರೂ ಒಂದಷ್ಟು ಪಾತ್ರಗಳಲ್ಲಿ ನಟಿಸಬೇಕು ಎನ್ನುವ ಅವರ ಆಸೆ ಈಡೇರಲೇ ಇಲ್ಲ. ಶುರುವಾಗಿದ್ದ ಒಂದಷ್ಟು ಸಿನಿಮಾಗಳು ನಿಂತೇ ಹೋಯಿತು. 'ಲವ-ಕುಶ' ಹಾಗೂ 'ಭಕ್ತ ಅಂಬರೀಶ' ಸೇರಿದಂತೆ ಒಂದಷ್ಟು ಸಿನಿಮಾಗಳು ಆ ಲಿಸ್ಟ್ನಲ್ಲಿ ಇದೆ. ಬರೀ ನಾಯಕನಾಗಿ ಮಾತ್ರವಲ್ಲದೇ ಡಾ. ರಾಜ್ ಕೆಲವೊಮ್ಮೆ ಚಿಕ್ಕ ಪಾತ್ರಗಳಲ್ಲಿ ನಟಿಸಿದ್ದು ಇದೆ. ಅದಕ್ಕೆ ಬೇರೆ ಬೇರೆ ಕಾರಣಗಳೂ ಇವೆ.
1961ರಲ್ಲಿ ಬಂದ 'ಕಿತ್ತೂರು ಚೆನ್ನಮ್ಮ' ಚಿತ್ರದಲ್ಲಿ ರಾಜಾ ಮಲ್ಲಸರ್ಜ ಪಾತ್ರದಲ್ಲಿ ಅಣ್ಣಾವ್ರು ನಟಿಸಿದ್ದರು. ಬಿ. ಆರ್ ಪಂತುಲು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಜಿ. ವಿ ಅಯ್ಯರ್ ಚಿತ್ರಕಥೆ ಬರೆದಿದ್ದರು. ಬಿ. ಸರೋಜಾ ದೇವಿ ಚಿತ್ರದಲ್ಲಿ ಚೆನ್ನಮ್ಮನಾಗಿ ಲೀಡ್ ರೋಲ್ನಲ್ಲಿ ನಟಿಸಿದ್ದರು. ರುದ್ರಾಂಬೆಯಾಗಿ ಎಂ. ವಿ ರಾಜಮ್ಮ ಕಾಣಿಸಿಕೊಂಡಿದ್ದರು. ಮೊದಲ ಸ್ವಾತಂತ್ರ ಸಂಗ್ರಾಮಕ್ಕೂ ಮೊದಲು ಕಿತ್ತೂರು ಸಂಸ್ಥಾನ ಬ್ರಿಟೀಷರ ವಿರುದ್ಧ ಹೋರಾಡಿತ್ತು.
ಚೆನ್ನಮ್ಮನ ಶೌರ್ಯ, ಸಾಹಸ ಕಂಡು ಬ್ರಿಟೀಷರು ಬೆಚ್ಚಿ ಬಿದ್ದಿದ್ದರು. ಚೆನ್ನಮ್ಮನಾಗಿ ಬಿ. ಸರೋಜಾ ದೇವಿ ನಟನೆಗೂ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ಚಿನ್ನಮ್ಮನ ಪತಿ ರಾಜ ಮಲ್ಲ ಸರ್ಜ ಆಗಿ ಚಿಕ್ಕ ಪಾತ್ರದಲ್ಲಿ ಡಾ. ರಾಜ್ಕುಮಾರ್ ನಟಿಸಿದ್ದರು. ಅಷ್ಟರಲ್ಲಾಗಲೇ ಅಣ್ಣಾವ್ರು ಹೀರೊ ಆಗಿ ಗೆದ್ದಿದ್ದರು. ಆದರೂ ಅದು ಸ್ವಾತಂತ್ರ್ಯ ಹೋರಾಟದ ಕುರಿತಾದ ಸಿನಿಮಾ ಎನ್ನುವ ಕಾರಣಕ್ಕೆ ಮಲ್ಲ ಸರ್ಜ ಪಾತ್ರ ಮಾಡಲು ಒಪ್ಪಿಕೊಂಡಿದ್ದರು. ತಮ್ಮ ಅದ್ಭುತ ನಟನೆಯಿಂದ ಗಮನ ಸೆಳೆದರು.

ಅರ್ಧ ಸಿನಿಮಾದಲ್ಲಿ ಮಾತ್ರ ಮಲ್ಲ ಸರ್ಜ ಪಾತ್ರ ಬರುತ್ತದೆ. ಆ ಬಳಿಕ ಚೆನ್ನಮ್ಮನ ಸುತ್ತಾ ಇಡೀ ಸಿನಿಮಾ ಸಾಗುತ್ತದೆ. ಕ್ಲೈಮ್ಯಾಕ್ಸ್ನಲ್ಲಿ ಬ್ರಿಟೀಷರ ವಿರುದ್ಧ ಕಿತ್ತೂರು ಸಂಸ್ಥಾನ ಹೋರಾಡುವ ಯುದ್ಧದ ಸನ್ನಿವೇಶವನ್ನು ಅವತ್ತಿನ ಕಾಲಕ್ಕೆ ಸೊಗಸಾಗಿ ಸೆರೆ ಹಿಡಿಯಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ ಹಾಗೂ ಸಿಂಧೂರ ಲಕ್ಷ್ಮಣರ ಜೀವನಾಧರಿತ ಸಿನಿಮಾಗಳಲ್ಲಿ ನಟಿಸುವ ಹಂಬಲ ಅಣ್ಣಾವ್ರಿಗೆ ಇತ್ತು.
90ರ ದಶಕದಲ್ಲಿ ರಾಯಣ್ಣ, ಸಿಂಧೂರ ಲಕ್ಷ್ಮಣ ಪಾತ್ರಗಳನ್ನು ಮಾಡುವ ಬಗ್ಗೆ ಅಣ್ಣಾವ್ರು ಆಪ್ತರ ಬಳಿ ಹೇಳಿಕೊಂಡಿದ್ದರು. ಈಗ ವಯಸ್ಸಾಯಿತು. ಈಗ ಅಂತಹ ಪಾತ್ರಗಳನ್ನು ಮಾಡೋಕೆ ನನ್ನಿಂದ ಆಗೊಲ್ಲ ಎಂದು ಹೇಳುತ್ತಿದ್ದರು. ಆದರೆ ಅಂತಹ ಯಾವುದೇ ಸಿನಿಮಾ ಮಾಡುವ ಪ್ರಯತ್ನ ಆಗಿರಿಲ್ಲ ಎಂದು ಅವರಿಗೆ ಆಪ್ತರಾಗಿದ್ದ ಪ್ರಕಾಶ್ ರಾಜ್ ಮೇಹು ವಿವರಿಸಿದ್ದಾರೆ.
ಮುಂದೆ ಸಾಹಸಸಿಂಹ ವಿಷ್ಣುವರ್ಧನ್ ಕೂಡ 'ಸಂಗೊಳ್ಳಿ ರಾಯಣ್ಣ' ಸಿನಿಮಾ ಮಾಡಲು ಬಯಸಿದ್ದರು. ಬಳಿಕ ದರ್ಶನ್ ರಾಯಣ್ಣನಾಗಿ ನಟಿಸಿ ಗೆದ್ದರು. ದರ್ಶನ್ ಹೀರೊ ಆಗಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡಲು ತಯಾರಿ ನಡೆಯುತ್ತಿದೆ. ನಿರ್ದೇಶಕ ತರುಣ್ ಸುಧೀರ್ ಆ ಕಥೆಯನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ.


Click it and Unblock the Notifications











