1986ರಲ್ಲೇ ನಟನೆಗೆ ಗುಡ್ಬೈ ಹೇಳಲು ಬಯಸಿದ್ದ ಅಣ್ಣಾವ್ರು; ಬಳಿಕ ಏನಾಯ್ತು?
ನಟಸಾರ್ವಭೌಮ ಡಾ. ರಾಜ್ಕುಮಾರ್ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ. ಇವತ್ತಿಗೂ ತಮ್ಮ ಸಿನಿಮಾಗಳು ಹಾಗೂ ಆದರ್ಶ ವ್ಯಕ್ತಿತ್ವದಿಂದ ಅಣ್ಣಾವ್ರು ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ಮರೆಯುತ್ತಿದ್ದಾರೆ. ಕನ್ನಡಿಗರು ಎಂದೂ ಮುತ್ತುರಾಜನನ್ನು ಮರೆಯೋಕೆ ಸಾಧ್ಯವಿಲ್ಲ. 206 ಸಿನಿಮಾಗಳಲ್ಲಿ ಡಾ. ರಾಜ್ ನಟಿಸಿದ್ದರು.
ನೂರಾರು ಸಿನಿಮಾಗಳಲ್ಲಿ ನೂರಾರು ಪಾತ್ರಗಳಲ್ಲಿ ಅಣ್ಣಾವ್ರು ಬಣ್ಣ ಹಚ್ಚಿ ನಟಿಸಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಮುತ್ತುರಾಜ ಮಾಡದ ಪಾತ್ರಗಳಿಲ್ಲ. ಕೂಲಿ, ಶ್ರೀಮಂತ, ರೈತ, ಕಾರ್ಮಿಕ, ರಾಮ, ರಾವಣ, ಕನಕದಾಸ, ಭಕ್ತ ಕುಂಬಾರ, ಮಯೂರ ಸಿಐಡಿ ಹೀಗೆ ಎಲ್ಲಾ ತರಹದ ಪಾತ್ರಗಳಲ್ಲಿ ಡಾ. ರಾಜ್ ನಟಿಸಿದ್ದರು. ಅಣ್ಣಾವ್ರು ನಟಿಸಿದ ಬಹುತೇಕ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ.

ತಮ್ಮ ಸಿನಿಮಾಗಳಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿದೆ ಎಂದು ಗೊತ್ತಾದಾಗ ಸ್ವತಃ ತಾವೇ ಸಿನಿಮಾ ನಿರ್ಮಾಣಕ್ಕೆ ಇಳಿದರು. ಆ ಬಳಿಕ ಕೂಡ ಬೇರೆ ನಿರ್ಮಾಪಕರಿಗೆ ಕಾಲ್ಶೀಟ್ ಕೊಟ್ಟರು. ತೊಂಭತ್ತರ ದಶಕದ ಆರಂಭದ ವೇಳೆಗೆ ಅಣ್ಣಾವ್ರು ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಿಬಿಟ್ಟಿದ್ದರು. 'ಶಬ್ಧವೇದಿ' ಅವರು ನಟಿಸಿದ ಕೊನೆಯ ಸಿನಿಮಾ. ನಿಮಗೆ ಗೊತ್ತಾ 'ಅನುರಾಗ ಅರಳಿತು' ಚಿತ್ರದ ಬಳಿಕ ಚಿತ್ರರಂಗಕ್ಕೆ ಗುಡ್ಬೈ ಹೇಳಲು ಮುತ್ತುರಾಜ್ ಬಯಸಿದ್ದರು.
1953ರಲ್ಲಿ 'ಬೇಡರ ಕಣಪ್ಪ' ಚಿತ್ರದ ಮೂಲಕ ಅಣ್ಣಾವ್ರು ಚಿತ್ರರಂಗ ಪ್ರವೇಶಿಸಿದರು. ಅದಕ್ಕೂ ಮುನ್ನ ನಾಟಕಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಯಶಸ್ಸು ಸಿಗುತ್ತಿದ್ದಂತೆ ನಿಯಮಿತವಾಗಿ ಚಿತ್ರಗಳಲ್ಲಿ ನಟಿಸೋಕೆ ಆರಂಭಿಸಿದರು. ವರ್ಷಕ್ಕೆ ಐದಾರು ಸಿನಿಮಾಗಳು ರಿಲೀಸ್ ಆಗುತ್ತಿದ್ದವು. ಅಷ್ಟರ ಮಟ್ಟಿಗೆ ಬ್ಯುಸಿಯಾಗಿದ್ದರು. 25 ವರ್ಷಗಳ ಕಾಲ ಸತತವಾಗಿ ನಟಿಸಿದರು. 'ಅನುರಾಗ ಅರಳಿತು' ಚಿತ್ರದ ಬಳಿಕ ಸಾಕೆನಿಸಿಬಿಟ್ಟಿತ್ತು.

ಮಗ ಶಿವರಾಜ್ಕುಮಾರ್ ಹೆಚ್ಚು ಕಮ್ಮಿ ಅದೇ ಸಮಯಕ್ಕೆ ಚಿತ್ರರಂಗಕ್ಕೆ ಬಂದರು. ಹಾಗಾಗಿ ಜನ ತಾವು ನಟಿಸೋಕೆ ಕಮ್ಮಿ ಮಾಡಲು ಮುಂದಾಗಿದ್ದರು. ಈ ಬಗ್ಗೆ ರ್ಯಾಪಿಡ್ ರಶ್ಮಿ ಸಂದರ್ಶನದಲ್ಲಿ ಡಾ. ರಾಜ್ಕುಮಾರ್ ಪುತ್ರಿ ಪೂರ್ಣಿಮಾ ಮಾತನಾಡಿದ್ದಾರೆ. ನನಗೆ ವಯಸ್ಸಾಯ್ತು, ತೆರೆಮೇಲೆ ಅಷ್ಟು ಯಂಗ್ ಆಗಿ ಕಾಣಲ್ಲ ಎನ್ನುವ ಕಾರಣಕ್ಕೆ ಅಪ್ಪಾಜಿ ಈ ನಿರ್ಧಾರಕ್ಕೆ ಬಂದಿದ್ದರು ಎಂದು ಪೂರ್ಣಮಾ ತಿಳಿಸಿದ್ದಾರೆ.
"ಅನುರಾಗ ಅರಳಿತು' ಸಿನಿಮಾ ಮಾಡುವಾಗಲೇ ಅಪ್ಪ ನಟಿಸುವುದನ್ನು ನಿಲ್ಲಿಸಬೇಕು ಎಂದು ಚಿಂತಿಸಿದ್ದರು. ಸಾಕು ಹೀರೊ ಆಗಿ ಇನ್ನು ನಟಿಸುವುದು ಬೇಡ. ನಾನು ನೋಡಲು ವಯಸ್ಸಾದಂತೆ ಕಾಣುತ್ತೇನೆ ಎಂದಿದ್ದರು. ಆದರೆ ಮುಂದೆ ಮತ್ತೆ 10 ವರ್ಷ ನಟಿಸಿದರು. ಶಿವಣ್ಣ ಚಿತ್ರರಂಗಕ್ಕೆ ಬರುವ ಮುನ್ನವೇ ಅಪ್ಪಾಜಿ ಹೀಗೆ ಯೋಚಿಸಿದ್ದರು" ಎಂದು ಪೂರ್ಣಿಮಾ ನೆನಪಿಸಿಕೊಂಡಿದ್ದಾರೆ.
ಗಾಯನ ಸೇರಿದಂತೆ ತಮ್ಮಿಷ್ಟದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಅಣ್ಣಾವ್ರು ಆಗ ನಿರ್ಧರಿಸಿದ್ದರಂತೆ. "ಎಲ್ಲರ ಒತ್ತಾಯಕ್ಕೆ ಮುಂದೆ ಏಳೆಂಟು ಸಿನಿಮಾಗಳಲ್ಲಿ ನಟಿಸಿದರು. ಅಮ್ಮ ಯಾವತ್ತು ಒತ್ತಯ ಮಾಡಲಿಲ್ಲ. ಆದರೆ ಆಪ್ತರು, ಅಭಿಮಾನಿಗಳ ಕೋರಿಕೆಯಂತೆ ನಟಿಸಿದರು. ಇಲ್ಲದೇ ಇದ್ದಿದ್ದರೆ 'ಅನುರಾಗ ಅರಳಿತು' ಸಿನಿಮಾ ಬಳಿಕ ನಟನೆಯಿಂದ ಬಹುತೇಕ ದೂರ ಉಳಿದುಬಿಡುತ್ತಿದ್ದರು" ಎಂದು ಪೂರ್ಣಿಮಾ ವಿವರಿಸಿದ್ದಾರೆ.
'ಅನುರಾಗ ಅರಳಿತು' ನಂತರ 'ಗುರಿ', 'ಒಂದು ಮುತ್ತಿನ ಕಥೆ', 'ಶ್ರುತಿ ಸೇರಿದಾಗ', 'ದೇವತಾ ಮನುಷ್ಯ', 'ಪರಶುರಾಮ', 'ಜೀವನಚೈತ್ರ', 'ಆಕಸ್ಮಿಕ', 'ಒಡಹುಟ್ಟಿದವರು' ಹಾಗೂ 'ಶಬ್ಧವೇದಿ' ಸಿನಿಮಾಗಳಲ್ಲಿ ನಟಿಸಿದರು. 'ಭಕ್ತ ಅಂಬರೀಶ' ಚಿತ್ರದಲ್ಲಿ ನಟಿಸಲು ಆಸೆಪಟ್ಟಿದ್ದರು. ಸಿನಿಮಾ ಪ್ರಾರಂಭ ಕೂಡ ಆಗಿತ್ತು. ಆದರೆ ಬಳಿಕ ನಿಂತು ಹೋಗಿತ್ತು.
ಇದೇ ಸಂದರ್ಶನದಲ್ಲಿ ಪೂರ್ಣಿಮಾ ತಮ್ಮ ಪ್ರೀತಿ- ಮದುವೆ, ಅಣ್ಣಾವ್ರ ಸಿನಿಮಾಗಳು, ತಂದೆಯವರನ್ನು ವೀರಪ್ಪನ್ ಅಪಹರಿಸಿದ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.


Click it and Unblock the Notifications











