ದುರ್ಯೋಧನನ ಪಾತ್ರ ಮಾಡಲು ಡಾ. ರಾಜ್ಕುಮಾರ್ ಅಂದು ನಿರಾಕರಿಸಿದ್ದು ಏಕೆ?
ರಂಗಭೂಮಿ ಹಿನ್ನೆಲೆಯ ಡಾ. ರಾಜ್ಕುಮಾರ್ ಹಲವು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ್ದರು. ಅದರಲ್ಲೂ ಪೌರಾಣಿಕ, ಐತಿಹಾಸಿಕ ಪಾತ್ರಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಅಣ್ಣಾವ್ರ ಅಭಿನಯ ಮರೆಯೋಕೆ ಸಾಧ್ಯವಿಲ್ಲ. ಚಿತ್ರರಂಗದಲ್ಲಿ ಒಬ್ಬರಿಗೆ ಸಿಕ್ಕ ಅವಕಾಶ ಮತ್ತೊಬ್ಬರ ಪಾಲಾಗುವುದು ಸರ್ವೇ ಸಾಮಾನ್ಯ.
ಅಣ್ಣಾವ್ರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. 50, 60, 70ರ ದಶಕದಲ್ಲಿ ಡಬ್ಬಿಂಗ್ ಸಿನಿಮಾಗಳು ಸಾಕಷ್ಟು ಬರುತ್ತಿದ್ದವು. ಅಥವಾ ಒಂದೇ ಕಥೆಯಲ್ಲಿ ಬೇರೆ ಬೇರೆ ಭಾಷೆಯಲ್ಲಿ ಬೇರೆ ಬೇರೆ ಕಲಾವಿದರನ್ನು ಬಳಸಿಕೊಂಡು ಸಿನಿಮಾ ಮಾಡುವುದು ಹೆಚ್ಚಾಗಿತ್ತು. ಒಂದರ್ಥದಲ್ಲಿ ಅವತ್ತಿನ ಕಾಲಕ್ಕೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇತ್ತು. ಅಂತಹ ಸಮಯದಲ್ಲಿ 'ಕರ್ಣನ್' ಚಿತ್ರದಲ್ಲಿ ನಟಿಸುವಂತೆ ಡಾ. ರಾಜ್ ಅವರನ್ನು ಕೇಳಲಾಗಿತ್ತು. ಆದರೆ ಅವರು ಒಪ್ಪಿರಲಿಲ್ಲ.

1964ರಲ್ಲಿ ಬಿ. ಆರ್ ಪಂತುಲು ನಿರ್ಮಿಸಿ ನಿರ್ದೇಶಿಸಿದ 'ಕರ್ಣನ್' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಚಿತ್ರದಲ್ಲಿ ಕರ್ಣನ ಪಾತ್ರದಲ್ಲಿ ತಮಿಳು ನಟ ಶಿವಾಜಿ ಗಣೇಶನ್ ನಟಿಸಿದ್ದರು. ಶ್ರೀಕೃಷ್ಣನಾಗಿ ತೆಲುಗು ನಟ ಎನ್ಟಿಆರ್ ಕಾಣಿಸಿಕೊಂಡಿದ್ದರು. ಆದರೆ ದುರ್ಯೋಧನ ಪಾತ್ರ ಮಾಡೋಕೆ ಡಾ. ರಾಜ್ಕುಮಾರ್ ಒಲ್ಲೆ ಎಂದಿದ್ದರು.
ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹಿಂದೆ ಹಿರಿಯ ಪತ್ರಕರ್ತ ರಾಮ್ಕುಮಾರ್ ಈ ವಿಚಾರವನ್ನು ಹೇಳಿದ್ದರು. "ಬಿ. ಆರ್ ಪಂತುಲು ಕರ್ಣನ ಕುರಿತು ಸಿನಿಮಾ ಮಾಡಿದಾಗ ನಿನಗೂ ಪಾತ್ರ ಕೊಡ್ತೀನಿ ಎಂದಿದ್ದರಂತೆ. ಅದೇ ರೀತಿ ಸಿನಿಮಾ ಶುರುವಾದಾಗ ತಮಗೆ ಕರ್ಣನ ಪಾತ್ರ ಸಿಗುತ್ತದೆ ಎಂದು ಅಣ್ಣಾವ್ರು ಭಾವಿಸಿದ್ದರಂತೆ. ಇದು 4 ಭಾಷೆಯ ಸಿನಿಮಾ. ತೆಲುಗು, ತಮಿಳು, ಹಿಂದಿ, ಕನ್ನಡ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ನಿನಗೆ ದುರ್ಯೋಧನನ ಪಾತ್ರ ಕೊಡ್ತೀನಿ ಎಂದರಂತೆ"
"ಅಣ್ಣಾವ್ರಿಗೆ ಬೇಸರವಾಗಿ ಹಾಗಿದ್ದರೆ ಕರ್ಣನ ಪಾತ್ರ ಯಾರು ಮಾಡ್ತಾರೆ ಎಂದಾಗ ಶಿವಾಜಿ ಗಣೇಶನ್ ಎಂದಿದ್ದರಂತೆ. ಇದು ಯಾವ ಭಾಷೆಯ ಸಿನಿಮಾ ಎಂದಾಗ. ತಮಿಳು ಸಿನಿಮಾ. ನಂತರ ಬೇರೆ ಭಾಷೆಗಳಿಗೆ ಡಬ್ ಆಗುತ್ತದೆ ಎಂದಿದ್ದರಂತೆ ಪಂತುಲು. ಆಗ ಅಣ್ಣಾವ್ರು ನಾನು ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಸಿನಿಮಾ ಮಾಡಲ್ಲ ಎನ್ನುವುದು ಗೊತ್ತಿಲ್ಲವೇ ಎಂದು ಹೇಳಿದ್ದರಂತೆ."
"ಪಂತುಲು ನೀವು ಕೆಲ ಅಭಿಮಾನಿಗಳ ಮುಂದೆ ತಾನೇ ಹೇಳಿರುವುದು. ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಸಿನಿಮಾ ಮಾಡಲ್ಲ ಅಂತ. ಇದು ದೊಡ್ಡ ಸಿನಿಮಾ. ದುರ್ಯೋಧನನ ಪಾತ್ರ ಮಾಡು. ಏನು ಆಗಲ್ಲ. ನಿನ್ನನ್ನು ಬಿಟ್ಟರೆ ಈ ಪಾತ್ರ ಯಾರು ಮಾಡೋಕ್ಕಾಗಲ್ಲ ಎಂದಿದ್ದರಂತೆ. ಆಗ ಅಣ್ಣಾವ್ರು ನಾನು ತಮಿಳಿನಲ್ಲಿ ನಟಿಸಲ್ಲ, ಕರ್ಣನ ಪಾತ್ರ ಬಿಟ್ಟು ಬೇರೆ ಪಾತ್ರ ಮಾಡಲ್ಲ ಎಂದಿದ್ದರು. ಬಳಿಕ ತಮಿಳು ನಟ ಅಶೋಕನ್ ಆ ಚಿತ್ರದಲ್ಲಿ ದುರ್ಯೋಧನನ ಪಾತ್ರ ಮಾಡಿದ್ದರು"

1964ರ ಜನವರಿ 14ರಂದು ಸಂಕ್ರಾಂತಿ ಸಂಭ್ರಮದಲ್ಲಿ 'ಕರ್ಣನ್' ಸಿನಿಮಾ ತೆರೆಕಂಡು ಗೆದ್ದಿತ್ತು. ಚಿತ್ರದಲ್ಲಿ ದ್ರೌಪದಿಯಾಗಿ ಜಯಂತಿ, ದೇವತೆಯ ಪಾತ್ರದಲ್ಲಿ ಕಲ್ಪನಾ ನಟಿಸಿದ್ದರು. ಇನ್ನುಳಿದಂತೆ ಕನ್ನಡದ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಸಿನಿಮಾ ತೆಲುಗು ಹಾಗೂ ಹಿಂದಿಗೆ ಡಬ್ ಆಗಿತ್ತು. ಕನ್ನಡಕ್ಕೆ ಡಬ್ ಆಗಿರಲಿಲ್ಲ. ಡಾ. ರಾಜ್ಕುಮಾರ್ ದುರ್ಯೋಧನನ ಪಾತ್ರ ಮಾಡಿದ್ದರೆ ಕನ್ನಡಕ್ಕೂ ಡಬ್ ಆಗುತ್ತಿತ್ತು ಎನಿಸುತ್ತದೆ.


Click it and Unblock the Notifications











