ಪ್ರತಿಭಟನೆ ಬಳಿಕ ಕ್ಲೈಮ್ಯಾಕ್ಸ್ ಬದಲಿಸಿ ರೀ-ರಿಲೀಸ್ ಆಗಿದ್ದ ಅಣ್ಣಾವ್ರ ಚಿತ್ರ ಯಾವುದು?
ಸಾಮಾನ್ಯವಾಗಿ ಸಿನಿಮಾ ತೆರೆಗೆ ಬರುವುದಕ್ಕೂ ಮುನ್ನ ರೀ-ಶೂಟ್ ಮಾಡುವುದನ್ನು ನೋಡಿದ್ದೇವೆ. ಎಷ್ಟೋ ಚಿತ್ರಗಳ ಚಿತ್ರೀಕರಣ ಅರ್ಧ ಮುಗಿದ ಬಳಿಕ ಮತ್ತೆ ಹೊಸದಾಗಿ ಶೂಟ್ ಮಾಡಿದ ಉದಾಹರಣೆಗಳಿವೆ. ಮೇಕಿಂಗ್ ಹಂತದಲ್ಲೇ ತಪ್ಪು ಗೊತ್ತಾದರೆ ಇಂತಹ ಪ್ರಯತ್ನ ನಡೆಯುತ್ತದೆ.
ಸಿನಿಮಾ ಬಿಡುಗಡೆ ಬಳಿಕ ಮುಗೀತು. ಪ್ರೇಕ್ಷಕರ ತೀರ್ಮಾನವೇ ಅಂತಿಮ. ಒಮ್ಮೆ ಸಿನಿಮಾ ತೆರೆಗೆ ಬಂದಮೇಲೆ ಏನೂ ಮಾಡುವುದಕ್ಕೆ ಆಗಲ್ಲ. ಆದರೆ ಕೆಲವೊಮ್ಮೆ ಸಣ್ಣಪುಟ್ಟ ಬದಲಾವಣೆ ಮಾಡಿರುವ ಉದಾಹರಣೆಗಳಿವೆ. ಇತ್ತೀಚೆಗೆ ಚಿತ್ರದ ಕಾಲಾವಧಿಗೆ ಕತ್ತರಿ ಹಾಕುವ ಪ್ರಯತ್ನಗಳು ನಡೆಯುತ್ತದೆ. ಆದರೆ ಅಣ್ಣಾವ್ರ ಚಿತ್ರವೊಂದು ತೆರೆಗೆ ಬಂದ ಬಳಿಕ ಪ್ರೇಕ್ಷಕರ ಒತ್ತಾಯದ ಮೇರೆಗೆ ಕ್ಲೈಮ್ಯಾಕ್ಸ್ ಬದಲಿಸಿ ರೀ-ರಿಲೀಸ್ ಮಾಡಲಾಗಿತ್ತು.

ಹೌದು. ಅಣ್ಣಾವ್ರ ಮಾಡದ ಪಾತ್ರಗಳಿಲ್ಲ, ಜಾನರ್ ಇಲ್ಲ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ಭಿನ್ನ ವಿಭಿನ್ನ ಕಥೆಗಳಲ್ಲಿ ಡಾ. ರಾಜ್ಕುಮಾರ್ ನಟಿಸಿದ್ದಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಭಕ್ತಿ ಪ್ರಧಾನ, ಬಾಂಡ್ ಹೀಗೆ ತರಹೇವಾರಿ ಶೈಲಿಯ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು.
1973ರಲ್ಲಿ ಬಂದಿದ್ದ 'ಬಿಡುಗಡೆ' ಅಣ್ಣಾವ್ರ ಸಿನಿಬದುಕಿನಲ್ಲಿ ಬಹಳ ವಿಭಿನ್ನವಾದ ಸಿನಿಮಾ. ವೈ. ಆರ್ ಸ್ವಾಮಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಟಿ. ಪಿ ವೇಣುಗೋಪಾಲ್ ಚಿತ್ರಕ್ಕೆ ಹಣ ಹಾಕಿದ್ದರು. ಡಾ. ರಾಜ್ಕುಮಾತ್ ಜೊತೆ ಕೆ. ಎಸ್ ಅಶ್ವಥ್, ರಾಜೇಶ್, ಭಾರತಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಇವತ್ತಿಗೂ ಅಣ್ಣಾವ್ರ ಅಭಿಮಾನಿಗಳಿಗೆ 'ಬಿಡುಗಡೆ' ಬಹಳ ಅಚ್ಚು ಮೆಚ್ಚಿನ ಸಿನಿಮಾ. ಮರಣ ದಂಡನೆ ಸರಿನಾ? ತಪ್ಪಾ? ಎನ್ನುವ ಚರ್ಚೆ ಈ ಚಿತ್ರದಲ್ಲಾಗಿತ್ತು. ನಟಿ ಕಲ್ಪನಾ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಎಂಎ, ಎಲ್ಎಲ್ಬಿ ಮುಗಿಸಿದ ಶೇಖರ್(ಡಾ. ರಾಜ್ಕುಮಾರ್) ಅಖಂಡ ಕರ್ನಾಟಕ ಪತ್ರಿಕೆಯ ಸಹ ಸಂಪಾದಕನಾಗಿ ಕೆಲಸ ಸೇರುತ್ತಾನೆ. ಆತನ ತಂದೆ ಭೈರಪ್ಪ ಪಾತ್ರದಲ್ಲಿ ಕೆ. ಎಸ್ ಅಶ್ವಥ್ ನಟಿಸಿದ್ದಾರೆ. ಈ ಪಾತ್ರದ ಸುತ್ತಾ ಇಡೀ ಕಥೆ ಸಾಗುತ್ತದೆ.
ಮರಣ ದಂಡನೆ ತಪ್ಪು ಎನ್ನುವುದು ಶೇಖರ್ ವಾದ. ಅದನ್ನು ನಿಲ್ಲಿಸಬೇಕು, ಈ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕು ಎಂದು ಸ್ನೇಹಿತ ಸೋಮನಾಥನ ಜೊತೆ ಸೇರಿ ಶೇಖರ್ ಒಂದು ಉಪಾಯ ಮಾಡುತ್ತಾನೆ. ಅದಕ್ಕೆ ಒಂದು ಕೊಲೆ ಪ್ರಕರಣವನ್ನು ಆಯ್ಕೆ ಮಾಡಿಕೊಂಡು ತಾನೇ ಆರೋಪಿಯಾಗಿ ಜೈಲು ಸೇರುತ್ತಾನೆ. ಮತ್ತೊಂದು ಕಡೆ ತಂದೆ ಭೈರಪ್ಪ ಇನ್ನೊಂದು ಪ್ರಕರಣದಲ್ಲಿ ಜೈಲಿನ ಕಂಬಿ ಹಿಂದೆ ನಿಲ್ಲುವಂತಾಗುತ್ತದೆ.
ಮರಣ ದಂಡನೆಯನ್ನು ತಪ್ಪಿಸಲು ಶೇಖರ್ ಹೆಣಗುತ್ತಾನೆ. ಆದರೆ ಆತನ ತಂದೆಯೇ ತಪ್ಪು ಮಾಡದಿದ್ದರೂ ಮರಣ ದಂಡನೆ ಶಿಕ್ಷೆಗೆ ಒಳಗಾಗುವ ವಿಪರ್ಯಾಸದ ಕಥೆ ಚಿತ್ರದಲ್ಲಿತ್ತು. ಆದರೆ 'ಬಿಡುಗಡೆ' ಸಿನಿಮಾ ತೆರೆಗೆ ಬಂದಾಗ ಪ್ರೇಕ್ಷಕರು ಬೇಸರಗೊಂಡಿದ್ದರು. ಕೆಲ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಚಿತ್ರ ಸುಖಾಂತ್ಯ ಕಾಣಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು. ಹಾಗಾಗಿ ಮತ್ತೆ ಚಿತ್ರೀಕರಣ ನಡೆಸಿ, ಅಂತ್ಯವನ್ನು ಬದಲಿಸಿ ಸಿನಿಮಾ ತೆರೆಗೆ ತರಲಾಗಿತ್ತು.
ತಂದೆಯನ್ನು ಉಳಿಸಲು ಶೇಖರ್ ಪ್ರಯತ್ನಿಸುತ್ತಾನೆ. ನಿಜವಾದ ಅಪರಾಧಿಗಳನ್ನು ಹುಡುಕಿ ತನ್ನ ತಂದೆ ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡುತ್ತಾನೆ. ಕೊನೆ ಗಳಿಗೆಯಲ್ಲಿ ನೇಣಿನ ಕುಣಿಕೆಯಲ್ಲಿದ್ದ ತಂದೆಯನ್ನು ರಕ್ಷಿಸಿಕೊಳ್ಳುವಂತೆ ಕ್ಲೈಮ್ಯಾಕ್ಸ್ ಬದಲಿಸಿ 'ಬಿಡುಗಡೆ' ಚಿತ್ರವನ್ನು ಮತ್ತೊಮ್ಮೆ ತೆರೆಗೆ ತರಲಾಗಿತ್ತು. ಹೀಗೆ ಅಣ್ಣಾವ್ರ ಚಿತ್ರದಲ್ಲಿ ಸುಖಾಂತ್ಯ ಇರುವ ಕ್ಲೈಮ್ಯಾಕ್ಸ್ ಇಲ್ಲ ಎಂದು ಅಭಿಮಾನಿಗಳು ಪ್ರತಿಭಟನೆ ಮಾಡಿದ್ದು ಕೂಡ ಒಂದು ವಿಶೇಷ. ಇಂತಹ ಸಾಕಷ್ಟು ವಿಶೇಷಗಳು ಅಣ್ಣಾವ್ರ ಚಿತ್ರ ಬದುಕಿನಲ್ಲಿದೆ.


Click it and Unblock the Notifications











