'ನಾಗರಹಾವು' ತಮಿಳು ರೀಮೆಕ್ನಲ್ಲಿ ಜಯಲಲಿತಾ ನಟಿಸಲ್ಲ ಎಂದಿದ್ದೇಕೆ? ಕಾರಣ ವಿಷ್ಣುವರ್ಧನ್!
ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿತ್ತು. ಅದಾಗಲೇ ಒಂದು ಚಿತ್ರದಲ್ಲಿ ನಟಿಸಿದ್ದರೂ ರಾಮಾಚಾರಿಯಾಗಿ ವಿಷ್ಣುಗೆ ಈ ಚಿತ್ರ ಚಿತ್ರರಂಗದಲ್ಲಿ ಭದ್ರ ಬುನಾದಿಯಾಗಿತ್ತು. ಅಣ್ಣಾವ್ರಿಗೆ ಸೆಡ್ಡು ಹೊಡೆಯುವ ನಟ ಎನ್ನುವ ಮಟ್ಟಿಗೆ ಚರ್ಚೆ ಶುರುವಾಗಿಬಿಟ್ಟಿತ್ತು.
'ನಾಗರಹಾವು' ಚಿತ್ರದ ಮೂಲಕ ವಿಷ್ಣುವರ್ಧನ್ ಜೊತೆಗೆ ಅಂಬರೀಶ್ ಕೂಡ ಚಿತ್ರರಂಗ ಪ್ರವೇಶಿಸಿದ್ದರು. 1972ರಲ್ಲಿ ಈ ಕಾದಂಬರಿ ಆಧರಿತ ಸಿನಿಮಾ ತೆರೆಗೆ ಬಂದಿತ್ತು. ಬೆಂಕಿಚೆಂಡಿನಂತಹ ರಾಮಾಚಾರಿ ಪಾತ್ರದಲ್ಲಿ ದಾದಾ ನಟನೆ ಮೋಡಿ ಮಾಡಿತ್ತು. ಪುಟ್ಟಣ್ಣ ಟೇಕಿಂಗ್, ದಾದಾ ಆಕ್ಟಿಂಗ್ ಸೇರಿ ಸಿನಿಮಾ ದಾಖಲೆ ಬರೆಯಿತು. ಎಲ್ಲರ ನಿರೀಕ್ಷೆ ಮೀರಿ ಸಿನಿಮಾ ಸದ್ದು ಮಾಡಿತ್ತು. ಅಲ್ಲಿಂದ ಮುಂದೆ ವಿಷ್ಣು ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

ಕನ್ನಡದಲ್ಲಿ ಭರ್ಜರಿ ಯಶಸ್ಸು ಗಳಿಸಿದ 'ನಾಗರಹಾವು' ಚಿತ್ರ ಮುಂದೆ ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ರೀಮೆಕ್ ಆಗಿತ್ತು. ಆದರೆ ಕನ್ನಡದಲ್ಲಿ ಸಿಕ್ಕ ಯಶಸ್ಸು ಅಲ್ಲಿ ಸಿಗಲಿಲ್ಲ. ಕೆಲ ವರ್ಷಗಳ ಹಿಂದೆ ಡಿಜಿಟಲ್ ರೂಪದಲ್ಲಿ ಮತ್ತೆ ಆ ಐಕಾನಿಕ್ ಸಿನಿಮಾ ಕನ್ನಡ ಸಿನಿರಸಿಕರ ಮುಂದೆ ಬಂದಿತ್ತು. ಆ ಚಿತ್ರ ಪ್ರತಿ ಪಾತ್ರ, ಸನ್ನಿವೇಶ ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ.
ನಿಮಗೆ ಗೊತ್ತಾ ಈ ಚಿತ್ರದ ತಮಿಳು ರೀಮೆಕ್ನಲ್ಲಿ ನಟಿಸುವಂತೆ ಜಯಲಲಿತಾ ಅವರನ್ನು ಕೇಳಲಾಗಿತ್ತು. ಆದರೆ ಆಕೆ ಒಪ್ಪಿರಲಿಲ್ಲ. ಕರ್ನಾಟಕದ ಮೇಲುಕೋಟೆ ಮೂಲದ ಜಯಲಲಿತಾ ಮುಂದೆ ತಮಿಳು ಚಿತ್ರರಂಗದಲ್ಲಿ ಯಶಸ್ಸು ಗಳಿಸಿದರು. ಕಾಲಿವುಡ್ನ ಖ್ಯಾತ ನಟರೊಟ್ಟಿಗೆ ತೆರೆಹಂಚಿಕೊಂಡು ಕಮಾಲ್ ಮಾಡಿದ್ದರು. ಮುಂದೆ ಇದೇ ಜನಪ್ರಿಯತೆ ಬಳಸಿಕೊಂಡು ರಾಜಕೀಯರಂಗ ಪ್ರವೇಶಿಸಿ ಇತಿಹಾಸ ನಿರ್ಮಿಸಿದರು. ಸಿಎಂ ಗದ್ದುಗೆ ಏರಿ ಪುರುಚ್ಚಿ ತಲೈವಿ ಎನಿಸಿಕೊಂಡರು.

1974ರಲ್ಲಿ 'ನಾಗರಹಾವು' ತಮಿಳು ರೀಮೆಕ್ 'ರಾಜ ನಾಗಂ' ಸಿನಿಮಾ ತೆರೆಗೆ ಬಂದಿತ್ತು. ಎನ್. ಎಸ್ ಮಣಿಯನ್ ನಿರ್ದೇಶನದ ಚಿತ್ರದಲ್ಲಿ ಶ್ರೀಕಾಂತ್ ಎಂಬುವವರು ಹೀರೊ ಆಗಿ ನಟಿಸಿದ್ದರು. ಮಂಜುಳಾ ಹಾಗೂ ಶುಭ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಆದರೆ ಚಿತ್ರದ ಒಬ್ಬ ನಾಯಕಿ ಪಾತ್ರ ನಿಭಾಯಿಸುವಂತೆ ಜಯಲಲಿತಾ ಅವರನ್ನು ಕೇಳಿದಾಗ ಆಕೆ ನಿರಾಕರಿಸಿದ್ದರು. ಕಾರಣ ವಿಷ್ಣುವರ್ಧನ್.
ನಿರ್ದೇಶಕ ಪಿ. ವಾಸು ತಮ್ಮ ಜೊತೆ ವಿಷ್ಣುವರ್ಧನ್ ಮಾತನಾಡಿದ್ದ ವಿಚಾರವನ್ನು ವೇದಿಕೆಯೊಂದರಲ್ಲಿ ಹಂಚಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಕನ್ನಡದಲ್ಲೇ ಈ ವಿಚಾರ ತಿಳಿಸಿದ್ದರು. "ವಿಷ್ಣು ಸರ್ ಮಾತನಾಡುತ್ತಾ ವಾಸು ನಿನಗೆ ಗೊತ್ತಾ? ನಾನು 'ನಾಗರಹಾವು' ಸಿನ್ಮಾ ಮಾಡ್ದೆ, ತಮಿಳು ರೀಮೆಕ್ ರೈಟ್ಸ್ ತೆಗೆದುಕೊಂಡಿದ್ದರು" ಎಂದು ವಿಷ್ಣು ನೆನಪಿಸಿಕೊಂಡಿದ್ದಾಗಿ ವಾಸು ಹೇಳಿದ್ದರು.
"ಆ ಸಮಯದಲ್ಲಿ ಜಯಲಲಿತಾ ಅವರು ತಮಿಳು ಚಿತ್ರರಂಗದ ಟಾಪ್ ನಟಿ ಆಗಿದ್ದರು. ಆಕೆಯನ್ನು ಹೋಗಿ ನಟಿಸುವಂತೆ ಕೇಳಿದಾಗ ಆ ಹುಡುಗ(ವಿಷ್ಣುವರ್ಧನ್) ನಟಿಸಿದರೆ ನಾನು ನಟಿಸುತ್ತೇನೆ. ಇಲ್ಲ ಅಂದ್ರೆ ನಟಿಸಲ್ಲ ಎಂದುಬಿಟ್ಟಿದ್ದರಂತೆ. ಆತ ಇಲ್ಲದಿದ್ದರೆ ನಾನು ಬಣ್ಣ ಹಚ್ಚಲ್ಲ ಎಂದಿದ್ದರು. ಹಾಗಾಗಿ ಆಕೆ 'ರಾಜ ನಾಗಂ' ಚಿತ್ರದಲ್ಲಿ ಆಕೆ ನಟಿಸಲಿಲ್ಲ. ಈ ವಿಚಾರವನ್ನು ವಿಷ್ಣು ಸರ್ ನನ್ನ ಬಳಿ ಹೇಳಿದ್ದರು" ಎಂದು ಪಿ. ವಾಸು ವಿವರಿಸಿದ್ದರು.
ಬಾಲಚಂದರ್ ಸರ್ ಕೂಡ ತಮಿಳಿನಲ್ಲಿ 4 ಸಿನಿಮಾ ಮಾಡುವಂತೆ ವಿಷ್ಣುವರ್ಧನ್ ಸರ್ ಅವರನ್ನು ಬುಕ್ ಮಾಡಿಕೊಂಡಿದ್ದರು. ಆಗ ಮಾಡೋದಾ ಬೇಡ್ವಾ ಅಂತ ದಾದಾ ಗೊಂದಲದಲ್ಲಿ ಸಿಲುಕಿದ್ದರು. ಪುಟ್ಟಣ್ಣ, ಸಿದ್ದಲಿಂಗಯ್ಯ ಸಲಹೆಯಂತೆ ಕನ್ನಡದಲ್ಲೇ ಉಳಿದರು. ಅವರು ತಮಿಳಿಗೆ ಬಂದಿದ್ದರೆ ರಜನಿಕಾಂತ್, ಕಮಲ್ ರೀತಿ ಕಾಲಿವುಡ್ನ ಮತ್ತೊಬ್ಬ ಸೂಪರ್ ಸ್ಟಾರ್ ಆಗಿರುತ್ತಿದ್ದರು. ತೆಲುಗು, ಹಿಂದಿಗೆ ಹೋಗಿದ್ದರು ಅದೇ ನಡೆಯುತ್ತಿತ್ತು. ಕಾರಣ ಅವರು ಅಷ್ಟು ಸ್ಫುರದ್ರೂಪಿ, ಒಳ್ಳೆಯ ನಟ ಎಂದು ವಾಸು ಹೇಳಿದ್ದರು.


Click it and Unblock the Notifications











