ಮದುವೆ ಆಗಬಾರದು ಎಂದು ಸಂಘ ಕಟ್ಟಿದ್ದ ಉಪ್ಪಿ, ದಿಢೀರ್ ಪ್ರಿಯಾಂಕ ಕೈಹಿಡಿದಿದ್ದೇಗೆ?
ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ. ಬಡ ಕುಟುಂಬದಿಂದ ಬಂದು ಸೂಪರ್ ಸ್ಟಾರ್ ಪಟ್ಟಕ್ಕೇರಿದವರು. ಇವತ್ತಿಗೂ ತಮ್ಮ ಸಿನಿಮಾಗಳಿಂದ ಉಪ್ಪಿ ಮ್ಯಾಜಿಕ್ ಮಾಡುತ್ತಿದ್ದಾರೆ. ಬುದ್ಧಿವಂತ ನಿರ್ದೇಶನದ ಚಿತ್ರಕ್ಕಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಾರೆ.
ಭಾರತೀಯ ಚಿತ್ರರಂಗದ ಟಾಪ್ ಫಿಲ್ಮ್ ಮೇಕರ್ಸ್ ಅಲ್ಲಿ ಉಪೇಂದ್ರ ಕೂಡ ಒಬ್ಬರು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬರೀ ತಮ್ಮ ಪ್ರತಿಭೆಯಿಂದಲೇ ಗೆದ್ದವರು. ಹಂತ ಹಂತವಾಗಿ ಬೆಳೆದು ನಿರ್ದೇಶಕರಾಗಿ ಹೀರೊ ಆಗಿ ಉಪೇಂದ್ರ ಸಕ್ಸಸ್ ಕಂಡಿದ್ದಾರೆ. 2003ರಲ್ಲಿ ನಟಿ ಪ್ರಿಯಾಂಕರನ್ನು ಉಪ್ಪಿ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ತೆರೆಮೇಲೆ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂದು ಹೇಳುತ್ತಿದ್ದ ಉಪೇಂದ್ರ ನಿಜ ಜೀವನದಲ್ಲಿ ಪ್ರೀತಿಸಿ ಮದುವೆ ಆಗಿದ್ದರು. 20 ವರ್ಷಗಳ ಹಿಂದೆ ಅವರ ಡಿಢೀರ್ ಮದುವೆ ಆಪ್ತ ಬಳಗಕ್ಕೂ ಶಾಕ್ ತಂದಿತ್ತು. ಮದುವೆ ಬೇಡ, ಸಾಧನೆ ಮುಖ್ಯ ಎನ್ನುತ್ತಿದ್ದ ಉಪ್ಪಿ ಅಷ್ಟು ಬೇಗ ಮದುವೆ ಆಗುತ್ತಾರೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ.
ತೆಲುಗಿನ 'ರಾ' ಸಿನಿಮಾ ಚಿತ್ರೀಕರಣದ ವೇಳೆ ಪ್ರಿಯಾಂಕ ಪರಿಚಯ ಆಗಿತ್ತು. ಅದೇ ಪರಿಚಯ ಮುಂದೆ ಪ್ರೀತಿಗೆ ತಿರುಗಿ ಮದುವೆ ಹಂತಕ್ಕೆ ಹೋಗಿತ್ತು. 'H2O' ಚಿತ್ರದಲ್ಲಿ ನಟಿಸುವ ವೇಳೆಗೆ ಪ್ರೀತಿ ಗಾಢವಾಗಿತ್ತು. ಪ್ರಿಯಾಂಕ ಕೊಲ್ಕತ್ತಾದಲ್ಲಿ ಹುಟ್ಟಿ ಬೆಳೆದವರು. ಅವರ ಹುಟ್ಟೂರಲ್ಲಿ ಮದುವೆ ನಡೆದಿತ್ತು. ಈ ಮದುವೆ ಎಷ್ಟು ರಹಸ್ಯವಾಗಿತ್ತು ಅಂದ್ರೆ, ಕೊಲ್ಕತ್ತಾಗೆ ಹೋಗಲು ವಿಮಾನ ನಿಲ್ದಾಣದಕ್ಕೆ ಉಪ್ಪಿಯನ್ನು ಡ್ರಾಪ್ ಮಾಡಿದ್ದ ಆಪ್ತ ಹನುಮಂತನಿಗೂ ಈ ವಿಚಾರ ಗೊತ್ತಿರಲಿಲ್ಲವಂತೆ.

ಉಪೇಂದ್ರ ಆಪ್ತ ಬಳಗದಲ್ಲಿ ನಿರ್ದೇಶಕ ಮುರಳಿ ಮೋಹನ್ ಸಹ ಗುರ್ತಿಸಿಕೊಂಡಿದ್ದರು. ಕಾಲೇಜು ದಿನಗಳಿಂದಲೂ ಇಬ್ಬರೂ ಒಟ್ಟಿಗೆ ಬೆಳೆದವರು. 'ತರ್ಲೆ ನನ್ಮಗ', 'ಓಂ', 'ಆಪರೇಷನ್ ಅಂತ' ಸೇರಿ ಕೆಲ ಸಿನಿಮಾಗಳಿಗೆ ಉಪ್ಪಿ ಜೊತೆ ಸಹಾಯಕರಾಗಿ ಮುರಳಿ ಮೋಹನ್ ಕೆಲಸ ಮಾಡಿದ್ದರು. ಇವತ್ತಿಗೂ ರಿಯಲ್ ಸ್ಟಾರ್ ಸಿನಿಮಾ ಕಥೆ ಚರ್ಚೆಯಲ್ಲಿ ಮುರಳಿ ಮೋಹನ್ ಇರುತ್ತಾರೆ.
ಚಿತ್ರರಂಗಕ್ಕೆ ಉಪೇಂದ್ರ ಜೊತೆ ಜೊತೆಗೆ ಮುರಳಿ ಮೋಹನ್ ಬಂದಿದ್ದರು. ಉಪ್ಪಿ ಆಪ್ತಮಿತ್ರ. ಕಾಲೇಜು ಮುಗಿಸಿ ಕೆಲಸ ಮಾಡಬೇಕು, ಏನಾದರೂ ಸಾಧನೆ ಮಾಡಬೇಕು ಎಂದು ಮುಂದಾದಾಗ ಉಪೇಂದ್ರ ಮದುವೆ ಆಗಬಾರದು ಎಂದು ನಿರ್ಧರಿಸಿದ್ದರಂತೆ. ತಾವು ಮಾತ್ರವಲ್ಲ ತಮ್ಮ ಆಪ್ತ ಬಳಗದಲ್ಲಿದ್ದ ಏಳೆಂಟು ಜನರಿಗೆ ಇದೇ ಮಾತನ್ನು ಹೇಳುತ್ತಿದ್ದರಂತೆ. ಅದಕ್ಕೆ ವಿ. ಮನೋಹರ್ ಸಹ ದನಿಗೂಡಿಸುತ್ತಿದ್ದರಂತೆ.
ಮದುವೆ ಬೇಡ ಸಾಧನೆ ಮುಖ್ಯ ಎಂದು ಉಪೇಂದ್ರ ಹಾಗೂ ವಿ. ಮನೋಹರ್ ಎಷ್ಟರಮಟ್ಟಿಗೆ ಹೇಳುತ್ತಿದ್ದರು ಅಂದ್ರೆ ಇಬ್ಬರೂ ಮದುವೆ ಆಗಲ್ಲ ಎಂದೇ ಸ್ನೇಹಿತರು ಭಾವಿಸಿದ್ದರು. ಒಂದು ಲೆಕ್ಕದಲ್ಲಿ ಮದುವೆ ಆಗದೇ ಇರುವ ಆಪ್ತರ ಸಂಘವನ್ನೇ ಉಪೇಂದ್ರ ಕಟ್ಟಿಬಿಟ್ಟಿದ್ದರು. ಸದಾ ಇದೇ ಮಾತುಗಳನ್ನು ಆಡುತ್ತಿದ್ದರಂತೆ. ಮದುವೆ ಆಗಬಾರದು, ಹುಡುಗಿಯ ಹಿಂದೆ ಹೋಗಬಾರದು, ಎಮೋಷನ್ ಯಾವ್ದು ಇಟ್ಕೊಬಾರ್ದು, ಸಂಬಂಧಗಳ ಬಂಧನದಲ್ಲಿ ಸಿಲುಕಬಾರದು, ಸಾಧನೆ ಮಾಡಬೇಕು, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ರೀತಿ ಸಾಧನೆ ಸಾಧನೆ ಎನ್ನುತ್ತಿದ್ದರು.
ಉಪೇಂದ್ರ ಜೊತೆ ಸೇರಿ ವಿ. ಮನೋಹರ್ ಕೂಡ ಇದೇ ಹೇಳುತ್ತಿದ್ದರು. ಆದರೆ ಅವರಿಬ್ಬರು ಮೊದಲು ಮದುವೆ ಆಗಿದ್ದರು. ಮದುವೆಗೆ ಎರಡು ತಿಂಗಳಿಗೂ ಮುನ್ನ ಮುರಳಿ ಮೋಹನ್ ಬಳಿ ಉಪ್ಪಿ ಮದುವೆ ಬಗ್ಗೆ ಮಾತನಾಡಿದ್ದರಂತೆ. ನೀನು ಮದುವೆ ಆಗಿಬಿಡೋ, ಯಾವ ಯಾವ ಟೈಮಲ್ಲಿ ಏನೇನು ಆಗಬೇಕೋ ಅದು ಆಗಬೇಕು ಎಂದಿದ್ದರಂತೆ. ಆಗಲೇ ಉಪ್ಪಿ ಮದುವೆ ಬಗ್ಗೆ ನನಗೆ ಸುಳಿವು ಸಿಕ್ಕಿತ್ತು ಎಂದು ಮುರಳಿ ಮೋಹನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಿರ್ಮಾಪಕ ಮುನಿರತ್ನ, ನಿರ್ದೇಶಕ ಎಂ. ಎಸ್ ರಮೇಶ್ ಸೇರಿ ಕೆಲವರು ಮಾತ್ರ ಉಪೇಂದ್ರ- ಪ್ರಿಯಾಂಕ ಮದುವೆ ಹಾಜರಾಗಿದ್ದರು. ಇನ್ನುಳಿದಂತೆ ಯಾರಿಗೂ ಆ ಬಗ್ಗೆ ಮಾಹಿತಿ ಇರಲಿಲ್ಲ. ನಾವು ಕೂಡ ಸುದ್ದಿವಾಹಿನಿಯಲ್ಲಿ ನೋಡಿ ಉಪ್ಪಿ ಮದುವೆ ವಿಚಾರ ತಿಳಿದುಕೊಂಡೆವು ಎಂದು ಮುರಳಿ ಮೋಹನ್ ಹೇಳಿದ್ದಾರೆ. ತಾವು ಮದುವೆ ಆಗದಿರಲೂ ಆರ್ಥಿಕ ಸಂಕಷ್ಟ ಕಾರಣ ಎಂದು ಅವರು ತಿಳಿಸಿದ್ದಾರೆ.
ಉಪ್ಪಿ ಮಾತುಗಳಿಂದ ಆಗ ನಾವೆಲ್ಲಾ ಪ್ರಭಾವಿರತಾಗಿದ್ದು ನಿಜ. ಆದರೆ ನಾವು ಐದಾರು ಜನ ಉಪೇಂದ್ರ ಆಪ್ತರು ಇನ್ನು ಮದುವೆ ಆಗದೇ ಉಳಿಯಲು ಬೇರೆ ಬೇರೆ ಕಾರಣಗಳಿವೆ. ಆದರೂ ಮದುವೆ ಬಗ್ಗೆ ಆ ರೀತಿ ಮಾತನಾಡುತ್ತಿದ್ದ ಉಪೇಂದ್ರ ಪ್ರೀತಿಸಿ ಮದುವೆ ಆಗಿದ್ದು ನಮಗೆ ಅಚ್ಚರಿ ತಂದಿತ್ತು ಎಂದಿದ್ದಾರೆ. ಪ್ರೀತಿ-ಪ್ರೇಮ ಪುಸ್ತಕದ ಬದನೆಕಾಯಿ ಎನ್ನುವುದು ಆ ವಯಸ್ಸಿನಲ್ಲಿ ಎಲ್ಲಾ ಯುವಕರ ಮನಸ್ಥಿತಿ. ಅದು ಉಪ್ಪಿ ಒಬ್ಬರ ಅಭಿಪ್ರಾಯ ಅಲ್ಲ ಎಂದು ಹೇಳಿದ್ದಾರೆ.
ಮದುವೆ ಹಿಂದಿನ ದಿನ ಜೊತೆಗೆ ಇದ್ದ ಗುರುಕಿರಣ್ ಅವರಿಗೂ ಈ ಮದುವೆ ವಿಚಾರ ಗೊತ್ತಿರಲಿಲ್ಲ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಗುರುಕಿರಣ್ ಮಾತನಾಡಿದ್ದರು. ಶಿವಣ್ಣ ಕೂಡ ಇದೇ ಮಾತು ಹೇಳಿದ್ದರು. ನನಗೂ ಅವರ ಮದುವೆ ವಿಷಯ ಗೊತ್ತಿರಲಿಲ್ಲ ಎಂದಿದ್ದರು.


Click it and Unblock the Notifications











