ಶಂಕ್ರಣ್ಣಗೆ ಪಾಲಿಟಿಕ್ಸ್ಗೆ ಬರಬೇಕು ಅಂತ ಯಾಕೆ ಅನ್ನಿಸ್ತಿತ್ತು? ಆ ಘಟನೆ ಏನು?
ಕನ್ನಡ ನಟ, ನಿರ್ದೇಶಕ ಶಂಕರ್ನಾಗ್ ನಮ್ಮನ್ನಗಲಿ ದಶಕಗಳೇ ಕಳೆದಿದೆ. ಇವತ್ತಿಗೂ ತಮ್ಮ ರಂಗಭೂಮಿ, ಸಿನಿಮಾ, ವ್ಯಕ್ತಿತ್ವ ಹಾಗೂ ಸಾಧನೆಯಿಂದ ಶಂಕ್ರಣ್ಣ ಸಾಕಷ್ಟು ಜನರಿಗೆ ಪ್ರೇರಣೆಯಾಗಿದ್ದಾರೆ. ಬರೀ ಸಿನಿಮಾ ನಟನಾಗಿ ಮಾತ್ರವಲ್ಲದೇ ತಮ್ಮ ಸಮಾಜಮುಖಿ ಆಲೋಚನೆಗಳಿಂದ ಅವರು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.
ಶಂಕರ್ ನಾಗ್ ಅವರ ದೂರದೃಷ್ಟಿ, ಸಾಧನೆ ಮಾಡುವ ಹುಮ್ಮಸ್ಸು ಎಂಥಹವರಿಗೆ ಪ್ರೇರಣೆಯೇ ಸರಿ. ಸಿನಿಮಾ ಬಿಟ್ಟು ನಮ್ಮ ಜನಕ್ಕೆ ನಮ್ಮ ನಾಡಿಗೆ ಏನಾದರೂ ಸೇವೆ ಸಲ್ಲಿಸಬೇಕು ಎಂದು ಸದಾ ಕನಸು ಕಾಣುತ್ತಿದ್ದರು. ಬೆಂಗಳೂರಿನಲ್ಲಿ ದಶಕಗಳ ಹಿಂದೆಯೇ ಮೆಟ್ರೋ ರೈಲು ತರುವ ಪ್ರಯತ್ನ ಮಾಡಿದ್ದರು. ಅದಕ್ಕಾಗಿ ತಮ್ಮದೇ ಸ್ವಂತ ಖರ್ಚಿನಲ್ಲಿ ಲಂಡನ್ಗೆ ಹೋಗಿ ಅಲ್ಲಿನ ಮೆಟ್ರೋ ರೈಲು ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿ ಬಂದಿದ್ದರು.

ಸದಾ ಕನಸುಗಳ ಬೆನ್ನೇರಿ ಶಂಕರ್ನಾಗ್ ಸುತ್ತಾಡುತ್ತಿದ್ದರು. ಕಂಟ್ಲಿ ಕ್ಲಬ್, ನಂದಿ ಬೆಟ್ಟಕ್ಕೆ ರೋಪ್ವೇ, ಅಮ್ಯೂಸ್ಮೆಂಟ್ ಪಾರ್ಕ್, ಬಡವರಿಗೆ ಕಡಿಮೆ ಖರ್ಚಿನಲ್ಲಿ ಮನೆಗಳನ್ನು ನಿರ್ಮಿಸುವುದು ಹೀಗೆ ಸಾಕಷ್ಟು ಕನಸುಗಳು, ಆಲೋಚನೆಗಳು ಅವರ ತಲೆಯಲ್ಲಿತ್ತು. ಈಗ ನಗರದಲ್ಲಿ ಮೆಟ್ರೋ ಸೇವೆ ಆರಂಭವಾಗಿದೆ. ಆದರೆ ಶಂಕ್ರಣ್ಣ ಭೂಮಿಯ ಮೇಲೆ ಅಲ್ಲದೇ ಅಂಡರ್ಗ್ರೌಂಡ್ ಮೆಟ್ರೋ ರೈಲು ತರಬೇಕು ಎಂದು ಯೋಚಿಸಿದ್ದರು.
ರಂಗಭೂಮಿ, ಸಿನಿಮಾ ಎಂದು ಸದಾ ಬ್ಯುಸಿ ಇರುತ್ತಿದ್ದ ಶಂಕರ್ ನಾಗ್ ರಾಜಕೀಯರಂಗ ಪ್ರವೇಶಿಸುವ ಲೆಕ್ಕಾಚಾರದಲ್ಲಿದ್ದರು. ಅದಕ್ಕೆ ಕಾರಣವೂ ಇತ್ತು. ಪ್ರಯೋಗಶೀಲ ವ್ಯಕ್ತಿತ್ವದ ಶಂಕರ್ ನಾಗ್ ಅಂದಿನ ಸಿಎಂ ರಾಮಕೃಷ್ಣ ಹೆಗಡೆಯವರ ಒಡನಾಟ ಬೆಳೆಸಿಕೊಂಡಿದ್ದರು. ಒಮ್ಮೆ ಚುನಾವಣೆ ಪ್ರಚಾರಕ್ಕೂ ಕರಾಟೆ ಕಿಂಗ್ ಹೋಗಿದ್ದರು.
ಶಂಕರ್ನಾಗ್ ಅವರಿಗೆ ಯಾಕೆ ರಾಜಕೀಯಕ್ಕೆ ಬರಬೇಕು ಅಂತ ಅನ್ನಿಸ್ತಿತ್ತು ಎನ್ನುವ ಬಗ್ಗೆ ಪತ್ನಿ ಅರುಂಧತಿ ನಾಗ್ ಒಮ್ಮೆ ನೆನಪಿಸಿಕೊಂಡಿದ್ದರು. ಸುವರ್ಣ ನ್ಯೂಸ್ ವಾಹಿನಿ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದರು. ಆಗ ಹೊಸೂರು ರಸ್ತೆಯ ಸಿಂಗಸಂದ್ರ ಬಳಿ ಶಂಕರ್ ನಾಗ್ ಫಾರ್ಮ್ಹೌಸ್ ಮಾಡಿಕೊಂಡು ವಾಸವಾಗಿದ್ದರು. ಆ ಸಮಯದಲ್ಲಿ ಅಲ್ಲಿನ ಸರ್ಕಾರಿ ಶಾಲೆ ಮಕ್ಕಳು ಕೂರಲು ಬೆಂಚ್ ಇಲ್ಲದೇ ನೆಲದ ಮೇಲೆ ಕೂತು ಪಾಠ ಕೇಳುತ್ತಿದ್ದರು. ಅದನ್ನು ನೋಡಿ ಶಂಕರ್ ಬೆಂಚು, ಬ್ಲ್ಯಾಕ್ ಬೋರ್ಡ್ ಕೊಡಿಸಿದ್ದರು.
ಆ ಸಮಯದಲ್ಲಿ ನೀನು ಯಾಕೆ ಪಾಲಿಟಿಕ್ಸ್ಗೆ ಹೋಗುವ ಯೋಚನೆಯಲ್ಲಿದ್ದೀಯಾ ಎಂದು ನಾನು ಶಂಕರ್ನ ಕೇಳಿದ್ದೆ. ನಾನು ಒಬ್ಬನೇ ಎಷ್ಟು ಶಾಲೆಗಳಿಗೆ ಬೆಂಚ್ ಕೊಡಬಲ್ಲೆ. ಆದರೆ ನಾನು ರಾಜಕೀಯಕ್ಕೆ ಹೋದರೆ ಇಡೀ ಕರ್ನಾಟಕದಲ್ಲಿರುವ ಎಲ್ಲಾ ಶಾಲೆಗಳಿಗೆ ಮಕ್ಕಳು ಕುಳಿತು ಪಾಠ ಕೇಳಲು ಬೆಂಚ್ ಹಾಕಿಸಬಹುದು. ಪಾಲಿಟಿಕ್ಸ್ಗೆ ಅಷ್ಟು ಪವರ್ ಇದೆ ಎಂದು ಹೇಳಿದ್ದ ಎಂದು ಅರುಂಧತಿ ಹೇಳಿದ್ದರು.
ಶಂಕರ್ ಬಗ್ಗೆ ಒಂದು ವಿಚಾರ ಹೇಳಬೇಕು ಅಂದರೆ ಆತ ಭ್ರಷ್ಟ ಅಲ್ಲ. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಚುನಾವಣೆ ಪ್ರಚಾರ ಮಾಡಲು ಶಂಕರ್ ಕೈಗೆ ಒಂದಷ್ಟು ಹಣ ಕೊಟ್ಟಿದ್ದರು. ಪ್ರಚಾರ ಎಲ್ಲಾ ಮುಗಿದ ಮೇಲೆ ಉಳಿದ ಹಣವನ್ನು ಹೋಗಿ ಅವರಿಗೆ ವಾಪಸ್ ಕೊಟ್ಟಿದ್ದ. ಇಷ್ಟು ಹಣ ಕೊಟ್ಟಿದ್ರೆ, ಇಷ್ಟು ಖರ್ಚು ಆಗಿದೆ, ಇಷ್ಟು ಉಳಿದಿದೆ ಎಂದು ಹೇಳಿದ್ದ. ಆಗ ಹೆಗಡೆಯವರು ನನ್ನ ಇಡೀ ರಾಜಕೀಯ ಜೀವನದಲ್ಲಿ ಹಣ ವಾಪಸ್ ಕೊಡುವವರನ್ನು ಇದೇ ಮೊದಲ ಬಾರಿ ನೋಡ್ತಿದ್ದೀನಿ ಎಂದಿದ್ದರಂತೆ.
'ಆಟೋರಾಜ' ಚಿತ್ರದಲ್ಲಿ ನಟಿಸಿ ಶಂಕರ್ ನಾಗ್ ಗೆದ್ದಿದ್ದರು. ಅಲ್ಲಿಂದ ಮುಂದೆ ಆಟೋ ಚಾಲಕರು ಶಂಕರಣ್ಣನ ಅಭಿಮಾನಿಗಳಾಗಿಬಿಟ್ಟರು. ಆಟೋ ಚಾಲಕರಿಗೂ ಏನಾದರೂ ಸಹಾಯ ಮಾಡಬೇಕು ಎಂದು ಆತನ ಮನಸ್ಸು ತುಡಿಯುತ್ತಿತ್ತು. ಆಟೋ ಇರುವ ಡಿಸೈನ್ ಸರಿಯಿಲ್ಲ. ಇದರಿಂದ ಚಾಲಕರಿಗೆ ಸಮಸ್ಯೆ ಆಗುತ್ತಿದೆ ಎನ್ನುವುದನ್ನು ಶಂಕರ್ ಮನಗಂಡಿದ್ದ. ಆಟೋ ಡಿಸೈನ್ನಲ್ಲಿ ಏನಾದರೂ ಬದಲಾವಣೆ ತಡಬಹುದಾ? ಎನ್ನುವ ಆಲೋಚನೆ ಇತ್ತು ಎಂದು ಕೂಡ ಅರುಂಧತಿ ನಾಗ್ ವಿವರಿಸಿದ್ದರು.


Click it and Unblock the Notifications











