'ನಂದಿ' ಚಿತ್ರದಲ್ಲಿ ಕಿಚ್ಚನ ಜೊತೆ 'ನಕರಾ' ಮಾಡಿದ್ದ ಸಿಂಧು ಮೆನನ್ ಈಗ ಯಾವ ದೇಶದಲ್ಲಿದ್ದಾರೆ?
ಕೆಲ ನಟ-ನಟಿಯರು ಒಂದು ಎರಡು ಸಿನಿಮಾದಲ್ಲಿ ನಟಿಸಿದರೂ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಡುತ್ತಾರೆ. ಅವರನ್ನು ಮತ್ತೆ ಮತ್ತೆ ತೆರೆಮೇಲೆ ನೋಡಬೇಕು ಎಂದುಕೊಳ್ಳುತ್ತಾರೆ. ನಟಿ ಸಿಂಧು ಮೆನನ್ ಕನ್ನಡದಲ್ಲಿ ಏಳೆಂಟು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. ಬಳಿಕ ದಿಢೀರನೆ ಕಣ್ಮರೆ ಆಗಿಬಿಟ್ಟರು.
ನಟ ದರ್ಶನ್, ಸುದೀಪ್ ಜೊತೆಗೂ ಸಿಂಧು ಮೆನನ್ ನಾಯಕಿಯಾಗಿ ನಟಿಸಿದ್ದಾರೆ. 'ನಂದಿ' ಚಿತ್ರದಲ್ಲಿ 'ನಕರಾ ಗಿಕರಾ ಬೇಡ' ಎಂದು ಬೆಂಗಳೂರು ಬೆಡಗಿಗೆ ಸುದೀಪ್ ಸವಾಲ್ ಹಾಕಿದ್ದನ್ನು ಅಭಿಮಾನಿಗಳು ಇನ್ನು ಮರೆತ್ತಿಲ್ಲ. ಇನ್ನು ದರ್ಶನ್ ಜೊತೆ 'ಧರ್ಮ' ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರಾಗಿ ಸಿಂಧು ಮಿಂಚಿದ್ದರು.

ಬೆಂಗಳೂರಿನಲ್ಲಿ ಮಲಯಾಳಿ ಫ್ಯಾಮಿಲಿಯಲ್ಲಿ ಹುಟ್ಟಿ ಬೆಳೆದ ಸಿಂಧು ಮೆನನ್ ಚಿಕ್ಕಂದಿನಲ್ಲೇ ಭರತನಾಟ್ಯ ಕಲಿತಿದ್ದರು. 1994ರಲ್ಲಿ 'ರಶ್ಮಿ' ಎನ್ನುವ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ಸಿಂಧು ಬಳಿಕ ದೇವರಾಜ್ ನಟನೆಯ 'ಹುಲಿಯಾ' ಚಿತ್ರದಲ್ಲೂ ಪುಟ್ಟ ಪಾತ್ರ ಮಾಡಿದ್ದರು. ಬಳಿಕ ನಾಯಕಿಯಾಗಿ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡ ಮಿಂಚಿದರು. ಆದರೆ 'ನಂದಿ' ಚಿತ್ರದ ದಿವ್ಯಾ ಪಾತ್ರ ಬ್ರೇಕ್ ಕೊಟ್ಟಿತ್ತು.
ಬಳಿಕ ತೆಲುಗು, ಕನ್ನಡ, ಮಲಯಾಳಂನ ಹಲವು ಸಿನಿಮಾಗಳಲ್ಲಿ ಸಿಂಧು ಮೆನನ್ ಬಣ್ಣ ಹಚ್ಚಿ ಗೆದ್ದರು. 2010ರಲ್ಲಿ ಮದುವೆ ಮಾಡಿಕೊಂಡರು. ಬಳಿಕ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಕೆಲ ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಂಡರು. 2012ರಲ್ಲಿ ಬಂದ ಮಲಯಾಳಂನ 'ಮಂಜಡಿಕೂರು' ಆಕೆ ನಟಿಸಿದ ಕೊನೆಯ ಸಿನಿಮಾ.
2000ರ ದಶಕದಲ್ಲಿ ಸೌತ್ ಸಿನಿಇಂಡಸ್ಟ್ರಿಯಲ್ಲಿ ಮಿಂಚಿದ ಸಿಂಧು ಮೆನನ್ ಮದುವೆ ಬಳಿಕ ಫ್ಯಾಮಿಲಿ ಕಡೆ ಹೆಚ್ಚು ಗಮನ ಹರಿಸಿದರು. ಐಟಿ ಉದ್ಯೋಗಿ ಪ್ರಭು ಎಂಬುವವರ ಕೈ ಹಿಡಿದ ಬೆಂಗಳೂರು ಬೆಡಗಿ ಸದ್ಯ ಲಂಡನ್ನಲ್ಲಿ ಸೆಟ್ಲ್ ಆಗಿದ್ದಾರೆ ಎನ್ನಲಾಗ್ತಿದೆ. ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಿಂಧು, ಆಗಾಗ್ಗೆ ಫ್ಯಾಮಿಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕನ್ನಡದ ಅಭಿಮಾನಿಗಳು ಕೂಡ ಸಿಂಧು ಮೆನನ್ ಇನ್ಸ್ಟಾಮ್ ಪೋಸ್ಟ್ಗಳಿಗೆ ಲೈಕ್ಸ್, ಕಾಮೆಂಟ್ ಕೊಡುತ್ತಿರುತ್ತಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸಿ, ನಿಮ್ಮ ಹಳೆಯ ಫೋಟೊಗಳನ್ನು ಹಂಚಿಕೊಳ್ಳಿ ಎಂದು ಕೇಳುತ್ತಿರುತ್ತಾರೆ. ನಿಮ್ಮ 'ಹುಲಿಯಾ', 'ನಂದಿ' ಹಾಗೂ 'ಧರ್ಮ' ಸಿನಿಮಾಗಳು ಇಷ್ಟ ಎಂದು ಕಾಮೆಂಟ್ ಮಾಡುತ್ತಿರುತ್ತಾರೆ.
ಬಾಲ್ಯದಲ್ಲಿ ಸಾಕಷ್ಟು ಭರತನಾಟ್ಯ ಸ್ಪರ್ಧಗಳಲ್ಲಿ ಸಿಂಧು ಭಾಗವಹಿಸುತ್ತಿದ್ದರು. ಒಂದು ಸ್ಪರ್ಧೆಯಲ್ಲಿ ಆಕೆ ಪ್ರಥಮ ಬಹುಮಾನ ಗಳಿಸಿದ್ದರು. ತೀರ್ಪುಗಾರರಲ್ಲಿ ಒಬ್ಬರಾದ ಭಾಸ್ಕರ್ ಹೆಗ್ಡೆ ಆಕೆಯನ್ನು ಸಿನಿಮಾ ನಿರ್ದೇಶಕ ಕೆ.ವಿ. ಜಯರಾಮ್ ಅವರಿಗೆ ಪರಿಚಯಿಸಿದ್ದರು. ಹಾಗಾಗಿ 1994ರಲ್ಲಿ ಅವರ 'ರಶ್ಮಿ' ಚಿತ್ರದಲ್ ಬಾಲನಟಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಬಳಿಕ 'ಹುಲಿಯಾ' ಸಿನಿಮಾ ಅವಕಾಶ ಸಿಕ್ಕಿತ್ತು. ಇನ್ನು ಕೇವಲ 13 ವರ್ಷ ವಯಸ್ಸಿನವರಾಗಿದ್ದಾಗ 1999ರಲ್ಲಿ ಬಂದ 'ಪ್ರೇಮ ಪ್ರೇಮ ಪ್ರೇಮ' ಚಿತ್ರದಲ್ಲಿ ಲೀಡ್ ರೋಲ್ನಲ್ಲಿ ನಟಿಸಿದರು.
'ಮಾರಿ ಕಣ್ಣು ಹೋರಿಮ್ಯಾಗೆ', 'ವಿಕ್ರಂ', 'ಖುಷಿ' ಆಕೆ ನಟಿಸಿದ ಇತರೆ ಚಿತ್ರಗಳು. ವಿಷ್ಣುವರ್ಧನ್ ನಟನೆಯ 'ಜೇಷ್ಠ' ಚಿತ್ರದಲ್ಲಿ ಸಿಂಧು ಮೆನನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2008ರಲ್ಲಿ ಬಂದಿದ್ದ 'ಯಾರೆ ನೀ ಹುಡುಗಿ' ಆಕೆ ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ ಆಗಿದೆ.


Click it and Unblock the Notifications











