ಗಣೇಶ ಹಬ್ಬಕ್ಕೆ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಲ್ಲ ಯಾಕೆ?
ಹಬ್ಬದ ಸಂಭ್ರಮದಲ್ಲಿ ಸಿನಿಮಾಗಳು ಬಿಡುಗಡೆಯಾದರೆ ಸಕ್ಸಸ್ ಸಿಗುತ್ತದೆ ಎನ್ನುನ ನಂಬಿಕೆ ಇದೆ. ಹಾಗಾಗಿ ಹಬ್ಬದ ವೀಕೆಂಡ್ನಲ್ಲೇ ದೊಡ್ಡ ದೊಡ್ಡ ಸಿನಿಮಾಗಳನ್ನು ತೆರೆಗೆ ತರಲು ಫಿಲ್ಮ್ ಮೇಕರ್ಸ್ ಇಷ್ಟಪಡುತ್ತಾರೆ. ಸಂಕ್ರಾಂತಿ, ದೀಪಾವಳಿ, ಸ್ವಾತಂತ್ರ್ಯ ದಿನಾಚರಣೆ, ದಸರಾ ಹಾಗೂ ಕ್ರಿಸ್ಮಸ್ ವೀಕೆಂಡ್ಗಳಲ್ಲಿ ಸಿನಿಮಾಗಳ ಕಾರುಬಾರು ಜೋರು. ಆದರೆ ಗಣೇಶ್ ಹಬ್ಬದಲ್ಲಿ ಇಂತಹ ಸಂಭ್ರಮ ಕಾಣಿಸಲ್ಲ.
ಮೊದಲಿನಿಂದಲೂ ಗಮನಿಸಿದರೆ ಗಣೇಶ ಹಬ್ಬದ ಸಂಭ್ರಮದಲ್ಲಿ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗಿ ಗೆದ್ದಿರುವ ಉದಾಹರಣೆ ಇಲ್ಲ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆದಿರಬಹುದು. ಈ ವರ್ಷ ಕೂಡ ಗಣೇಶ ಚತುರ್ಥಿಗೆ ಯಾವುದೇ ದೊಡ್ಡ ಸಿನಿಮಾ ಬಿಡುಗಡೆಗೆ ಸಜ್ಜಾಗಿಲ್ಲ. ಹಬ್ಬದ ವೀಕೆಂಡ್ನಲ್ಲಿ ಸ್ಟಾರ್ ನಟರು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಮುಗಿಬೀಳುತ್ತಾರೆ. ಇದೇ ಕಾರಣಕ್ಕೆ ಕೆಲವೊಮ್ಮೆ ಮನಸ್ತಾಪಗಳು ಮೂಡಿರುವುದು ಇದೆ. ಆದರೆ ಗಣೇಶ ಹಬ್ಬಕ್ಕೆ ಅಂತಹ ಪೈಪೋಟಿ ಏರ್ಪಡದೇ ಇರುವುದಕ್ಕೆ ಕಾರಣವೂ ಇದೆ.

ಸಾಮಾನ್ಯವಾಗಿ ಹಬ್ಬದ ಸಂಭ್ರಮದಲ್ಲಿ ಜನ ಹಬ್ಬ ಮುಗಿಸಿ ಸಿನಿಮಾ ನೋಡಲು ಬರುತ್ತಾರೆ. ರಜೆ ಇರುವುದರಿಂದ ಸಹಜವಾಗಿಯೇ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುತ್ತದೆ ಎನ್ನುವ ಲೆಕ್ಕಾಚಾರ ಇದೆ. ಇದು ನಿಜ ಕೂಡ ಹೌದು. ಅದೇ ಕಾರಣಕ್ಕೆ ಕಾಲಿವುಡ್, ಟಾಲಿವುಡ್ನಲ್ಲಿ ಸಂಕ್ರಾಂತಿ, ದೀಪಾವಳಿಗೆ ಸ್ಟಾರ್ ನಟರ ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆ ಆಗುತ್ತವೆ. ಬಾಕ್ಸಾಫೀಸ್ ಕ್ಲ್ಯಾಶ್ಗೂ ಜಗ್ಗದೇ ತೆಲುಗಿನಲ್ಲಿ ಸಂಕ್ರಾಂತಿ ಎರಡ್ಮೂರು ಸಿನಿಮಾಗಳನ್ನು ಬಿಡುಗಡೆ ಮಾಡುತ್ತಾರೆ.
ಸಂಕ್ರಾಂತಿಗೆ ಕನ್ನಡದ ದೊಡ್ಡ ಸಿನಿಮಾಗಳು ಬರುವುದು ಕಮ್ಮಿ. ಸ್ವಾತಂತ್ರ್ಯ ದಿನಾಚರಣೆ, ದಸರಾ ಹಾಗೂ ದೀಪಾವಳಿ ಕನ್ನಡ ಫಿಲ್ಮ್ ಮೇಕರ್ಸ್ಗೆ ಫೇವರಿಟ್. ಇತ್ತೀಚೆಗೆ ವರ್ಷದ ಕೊನೆಗೆ ಕ್ರಿಸ್ಮಸ್ ವೀಕೆಂಡ್ ಮೇಲೆ ಕೂಡ ಕೆಲವರು ಕಣ್ಣಿಟ್ಟಿದ್ದಾರೆ. ಆದರೆ ಗಣೇಶ ಹಬ್ಬಕ್ಕೆ ಸಿನಿಮಾಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಾರೆ. ಗಣೇಶ ಹಬ್ಬದ ಗುಂಗಿನಲ್ಲಿ ಇರುವವರು ಸಿನಿಮಾ ನೋಡೋಕೆ ಬರಲ್ಲ ಎನ್ನುವ ಲೆಕ್ಕಾಚಾರ ಇದು.

ಗಣೇಶ ಹಬ್ಬಕ್ಕೆ ಯುವಕರು ತಿಂಗಳಿಗೂ ಮುನ್ನ ತಯಾರಿ ಆರಂಭಿಸುತ್ತಾರೆ. ಹಬ್ಬಕ್ಕೆ ಗಲ್ಲಿ ಗಲ್ಲಿಗಳಲ್ಲಿ ಪೆಂಡಾಲ್ ಹಾಕಿ ವಿಘ್ನ ವಿನಾಶಕನನ್ನು ಕೂರಿಸಿ ಹಾಡು, ತಮಟೆ, ಆರ್ಕೇಸ್ಟ್ರಾ, ಅನ್ನದಾನ ಎಂದು ಸಂಭ್ರಮಿಸುತ್ತಾರೆ. ಬಹುತೇಕ ಕಡೆಗಳಲ್ಲಿ ಶುಕ್ರವಾರ ಗಣೇಶಮೂರ್ತಿ ಪ್ರತಿಷ್ಠಾಪಿಸಿ 3 ದಿನಗಳ ಕಾಲ ಯುವಕರು ಗಣೇಶನನ್ನು ಪೂಜಿಸುತ್ತಾರೆ. ಗಣೇಶನನ್ನು ನೀರಿಗೆ ವಿಸರ್ಜಿಸುವವರೆಗೂ ಅದೇ ಗುಂಗಿನಲ್ಲಿ ಇರುತ್ತಾರೆ. ಇಂತಹ ಸಮಯದಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವ ಮನಸ್ಸು ಮಾಡುವುದಿಲ್ಲ. ಯಾವುದೇ ಚಿತ್ರಕ್ಕೆ ಮೊದಲ ಪ್ರೇಕ್ಷಕರು ಯುವಕರು, ಅಭಿಮಾನಿಗಳು. ಅವರೆಲ್ಲರೂ ಗಣೇಶ ಹಬ್ಬದ ಗುಂಗಿನಲ್ಲಿ ಇದ್ದರೆ ಬಂದು ಸಿನಿಮಾ ನೋಡುವವರು ಯಾರು? ಹಾಗಾಗಿ ಇಂತಹ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡದೇ ಇರುವುದೇ ಒಳಿತು ಎನ್ನುವ ಲೆಕ್ಕಾಚಾರ ಬಹುತೇಕರದ್ದು.
ಈ ವರ್ಷ ಮೊದಲ 7 ತಿಂಗಳು ಕನ್ನಡದಲ್ಲಿ ಯಾವುದೇ ಸಿನಿಮಾ ಹಿಟ್ ಆಗಲಿಲ್ಲ. ಆದರೆ 'ಎಕ್ಕ' ಸಿನಿಮಾ ಬಳಿಕ ಸು ಫ್ರಂ ಸೋ ಸಿನಿಮಾ ಬಂದು ಬಾಕ್ಸಾಫೀಸ್ ಶೇಕ್ ಮಾಡುತ್ತಿದೆ. 15 ದಿನ ಕಳೆದರೂ ಸಿನಿಮಾ ಆರ್ಭಟ ಕಮ್ಮಿ ಆಗಿಲ್ಲ. ಇನ್ನು ಪ್ರೇಮ್ ನಿರ್ದೇಶನದ 'ಕೆಡಿ', ಅರ್ಜುನ್ ಜನ್ಯಾ ಸಾರಥ್ಯದ '45' ಸೇರಿ ಒಂದಷ್ಟು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಆದರೆ ಆಗಸ್ಟ್ ಕೊನೆ ವಾರ ಅಂದರೆ ಗಣೇಶ ಹಬ್ಬದ ವೀಕೆಂಡ್ ಯಾವುದೇ ಸಿನಿಮಾ ಬಿಡುಗಡೆ ಆಗುತ್ತಿಲ್ಲ.
ಅಕ್ಟೋಬರ್ 2ಕ್ಕೆ ಗಾಂಧಿ ಜಯಂತಿ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ-1' ಸಿನಿಮಾ ತೆರೆಗೆ ಬರ್ತಿದೆ. ದುನಿಯಾ ವಿಜಯ್ ನಟನೆಯ 'ಲ್ಯಾಂಡ್ ಲಾರ್ಡ್' ಚಿತ್ರತಂಡ ದೀಪಾವಳಿ ವೀಕೆಂಡ್ ಮೇಲೆ ಕಣ್ಣಿಟ್ಟಿದೆ. ದರ್ಶನ್- ಮಿಲನಾ ಪ್ರಕಾಶ್ ಕಾಂಬಿನೇಷನ್ 'ಡೆವಿಲ್' ಸಿನಿಮಾ ದಸರಾ ಸಂಭ್ರಮದಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಸುದೀಪ್ ನಟನೆಯ 'K47' ಚಿತ್ರವನ್ನು ಕ್ರಿಸ್ಮಸ್ ಹಬ್ಬಕ್ಕೆ ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











