'ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ' ಹಾಡಿನಲ್ಲಿ 'ಪಕ್ಕ'ದಲ್ಲಿ ಅನ್ನೋದು ತಪ್ಪಾಗಿ ಕೇಳಿಸೋದ್ಯಾಕೆ?
"ತಪ್ಪು ಮಾಡದವರು ಯಾರೋರೆ, ತಪ್ಪೇ ಮಾಡದೋರು ಎಲ್ಲೋರೆ" ಎನ್ನುವಂತೆ ಪ್ರಪಂಚದಲ್ಲಿ ಎಲ್ಲರೂ ಒಂದಲ್ಲ ಒಂದು ತಪ್ಪು ಮಾಡುತ್ತಾರೆ. ಸಿನಿಮಾಗಳಲ್ಲಿ ಕೂಡ ಕೆಲವೊಮ್ಮೆ ತಪ್ಪುಗಳು ನಡೆಯುತ್ತವೆ. ಕೆಲವೊಮ್ಮೆ ಗೊತ್ತಿದ್ದು ತಪ್ಪುಗಳಾಗುತ್ತವೆ. ಆದರೆ ಬಹುತೇಕ ಸಮಯದಲ್ಲಿ ಅರಿವಿಗೆ ಬರದೇ ತಪ್ಪಾಗುತ್ತದೆ.
'ಕೋಟಿಗೊಬ್ಬ-2' ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್. ಅದರಲ್ಲೂ ರೊಮ್ಯಾಂಟಿಕ್ ಸಾಂಗ್ 'ಸಾಲುತ್ತಿಲ್ಲವೇ' ಎಲ್ಲರ ಫೇವರಿಟ್. ಡಿ. ಇಮ್ಮಾನ್ ಸಂಗೀತದಲ್ಲಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದ ಈ ಹಾಡನ್ನು ಶ್ರೇಯಾ ಘೋಷಾಲ್ ಹಾಗೂ ವಿಜಯ ಪ್ರಕಾಶ್ ಹಾಡಿದ್ದಾರೆ. ಹಾಡಿನಲ್ಲಿ 'ಪಕ್ಕ'ದಲ್ಲಿ ಕುಳಿತುಕೊಂಡು ಎನ್ನುವ ಸಾಲು ಕೇಳುವವರಿಗೆ ವಿಚಿತ್ರ ಅನ್ನಿಸುತ್ತೆ. ಶ್ರೇಯಾ ಘೋಷಾಲ್ ಉಚ್ಚಾರಣೆ ಸರಿ ಇಲ್ಲವೋ, ನಾವು ಕೇಳುವುದು ತಪ್ಪೋ ಅಥವಾ ಎಡಿಟಿಂಗ್ ವೇಳೆ ಈ ತಪ್ಪಾಯ್ತಾ ಎನ್ನುವ ಪ್ರಶ್ನೆ ಮೂಡುತ್ತದೆ. ಈ ಬಗ್ಗೆ ಹಾಡು ಬರೆದ ವಿ. ನಾಗೇಂದ್ರ ಪ್ರಸಾದ್ ಸ್ಪಷ್ಟನೆ ಕೊಟ್ಟಿದ್ದಾರೆ.

ಇದೊಂದೇ ಅಲ್ಲ. ಬೇರೆ ಸಿನಿಮಾಗಳಲ್ಲಿ ಕೆಲ ಹಾಡುಗಳಲ್ಲಿ ಇರುವ ಪದಗಳು ಈಗ ಅಭಾಸ ಎನ್ನುವಂತೆ ಕೇಳಿಸುತ್ತದೆ. ತಾಂತ್ರಿಕ ಕಾರಣದಿಂದ ಹೀಗೆ ಆಗುತ್ತದೆ ಎಂದು ಕೀರ್ತಿ ಇಎನ್ಟಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿ. ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. ಮತ್ತೊಬ್ಬ ಗೀತಸಾಹಿತಿ ಕವಿರಾಜ್ ಜೊತೆ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿದ್ದಾರೆ. ತಮ್ಮ ಸಿನಿಸಾಹಿತ್ಯ ಜರ್ನಿಯ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ 'ಸಾಲುತ್ತಿಲ್ಲವೇ' ಹಾಡಿನಲ್ಲಿ ಅಭಾಸ ಎನಿಸುವ ಈ ಉಚ್ಚಾರಣೆ ಬಗ್ಗೆಯೂ ಮಾತನಾಡಿದ್ದಾರೆ. ಅದಕ್ಕೆ ಎಸ್ಪಿ ಬಾಲಸುಬ್ರಮಣ್ಯಂ ಜೊತೆಗಿನ ಸಂಭಾಷಣೆಯ ಘಟನೆಯನ್ನು ನಾಗೇಂದ್ರ ಪ್ರಸಾದ್ ನೆನಪಿಸಿಕೊಂಡಿದ್ದಾರೆ.
'ಒಡಹುಟ್ಟಿದವರು' ಚಿತ್ರದ 'ಜನಕನ ಮಾತ ಶಿರದಲಿ ಧರಿಸಿದ ಅನುಪಮ ರಘುರಾಮ' ಎನ್ನುವ ಹಾಡಿದೆ. ಆ ಹಾಡು ಕೇಳುವಾಗ ನನಗೆ ಜನಕನ 'ಮಾತ' ಎನ್ನುವುದು 'ಮಾಸ' ಎಂದು ಕೇಳಿಸುತ್ತದೆ. ಹಾಡು ಹಾಡಿರುವ ಎಸ್ಪಿಬಿ ಅವರನ್ನೇ ಈ ಬಗ್ಗೆ ಕೇಳಿದ್ದೆ. ಆಗ ಅವರು ಅದಕ್ಕೆ ಉತ್ತರ ಕೊಟ್ರು.. ಮ್ಯೂಸಿಕ್ ಬ್ಯಾಲೆನ್ಸ್ ಮಾಡುವಾಗ, ಅಕ್ಷರದ ಶಬ್ಧದ ಮೇಲೆ ಸಂಗೀತವಾದ್ಯದ ಧ್ವನಿ ಕೇಳಿಸುತ್ತದೆ. ಹಾಗಾಗಿ 'ಪಕ್ಕ'ದಲ್ಲಿ ಎನ್ನುವಾಗ 'ಪ' ಸರಿಯಾಗಿ ಕೇಳಿಸದೇ 'ಕ್ಕದಲ್ಲಿ' ಎಂದು ಕೇಳುತ್ತದೆ. ಅದಕ್ಕೆ ಅದು ಅಭಾಸ ಎನಿಸುತ್ತದೆ ಎಂದು ವಿವರಿಸಿದ್ದಾರೆ.

ಎಡಿಟಿಂಗ್ ವೇಳೆ 'ಪ್' ಅಕ್ಷರ ಕಟ್ ಆಗಿ ಕೂಡ ಆ ರೀತಿ ತಪ್ಪಾಗಿ ಕೇಳಿಸಬಹುದು. ಆದರೆ 'ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ' ಸಾಂಗ್ ರೆಕಾರ್ಡಿಂಗ್ ವೇಳೆ ಅಂದು ನಾನು ಕೂಡ ಸ್ಟುಡಿಯೋದಲ್ಲಿದ್ದೆ. ಎಲ್ಲವನ್ನು ಸರಿಯಾಗಿ ನೋಡಿಕೊಂಡಿದ್ದೆ. ಆಗ ಎಲ್ಲಾ 'ಪಕ್ಕಾ' ಇತ್ತು ಎಂದು ನಾಗೇಂದ್ರ ಪ್ರಸಾದ್ ನಕ್ಕಿದ್ದಾರೆ. ಸುದೀಪ್ ಹಾಗೂ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದ ಹಾಡು ಇವತ್ತಿಗೂ ಸುದೀಪಿಯನ್ಸ್ ಹಾಟ್ ಫೇವರಿಟ್.
'ಮುಂಗಾರುಮಳೆ' ಚಿತ್ರದಲ್ಲಿ ಸೋನು ನಿಗಮ್ 'ಅನಿಸುತ್ತಿದೆ ಯಾಕೋ ಇಂದು' ಹಾಡು ಹಾಡಿ ಗೆದ್ದಿದ್ದರು. ಈ ಹಾಡನ್ನು ಕನ್ನಡ ಸಿನಿರಸಿಕರು ಮರೆಯೋಕೆ ಸಾಧ್ಯವಿಲ್ಲ. ಆದರೆ ಈ ಹಾಡನ್ನು ತಪ್ಪಾಗಿ 'ಹನಿಸುತ್ತಿದೆ' ಎಂದು ಸೋನು ಹಾಡಿರುವುದಾಗಿ ಕೆಲವರು ಕಾಮೆಂಟ್ ಮಾಡುತ್ತಾರೆ. ಅದೇ ರೀತಿ 'ರವಿವರ್ಮನ ಕುಂಚದ ಕಲೆ ಬಲೆ' ಹಾಡನ್ನು ರೀಮಿಕ್ಸ್ ಮಾಡಿದ ಪ್ರಾಸಕ್ಕಾಗಿ ತಪ್ಪು ಅರ್ಥ ಬರುವಂತೆ ಕಟ್ಟಿಕೊಡಲಾಗಿತ್ತು. 'ಬುದ್ಧವಂತ' ಚಿತ್ರಕ್ಕಾಗಿ ವಿಜಯ್ ಆಂಟೋನಿ ರೀಮಿಕ್ಸ್ ಮಾಡಿದ್ದರು. 'ರವಿವರ್ಮನ ಕುಂಚದ ಕಲ್ಲೆ ಭಲೆ' ಎಂದು ಹಾಡಿಸಲಾಗಿತ್ತು. ಹರಿಹರನ್, ಕೌಶಿಕ್, ವಿನಯ ಈ ಹಾಡು ಹಾಡಿದ್ದರು. ಈ ಬಗ್ಗೆ ಕೂಡ ಟೀಕೆ ವ್ಯಕ್ತವಾಗಿತ್ತು.


Click it and Unblock the Notifications











