'ಅಂಬರೀಶ' ಚಿತ್ರಕ್ಕೆ ಆಯ್ಕೆ ಆಗಿದ್ದ ನಿಶಾ ಯೋಗೇಶ್ವರ್ ಯಾಕೆ ನಟಿಸಲಿಲ್ಲ?
ತಂದೆ ಸಿ. ಪಿ ಯೋಗೇಶ್ವರ್ ವಿರುದ್ಧ ಮತ್ತೆ ಪುತ್ರಿ ನಿಶಾ ಯೋಗೇಶ್ವರ್ ತಿರುಗಿಬಿದ್ದಿದ್ದಾರೆ. "ಕುಟುಂಬದ ಎಲ್ಲಾ ಗುಟ್ಟು ರಟ್ಟು ಮಾಡುವೆ" ಎಂದು ನಿಶಾ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಸಿ. ಪಿ ಯೋಗೇಶ್ವರ್ ಬಿಜೆಪಿ ಪಕ್ಷ ತೊರೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ತಂದೆ ವಿರುದ್ಧ ನಿಶಾ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಈ ಹಿಂದೆ ಕೂಡ ತಂದೆ ಬಗ್ಗೆ ನಿಶಾ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ವಿಧಾನಸಭೆ ಚುನಾವಣೆಯಲ್ಲಿ ತಂದೆ ಪರ ಭರ್ಜರಿ ಪ್ರಚಾರ ನಡೆಸಿದ್ದರು. ನನಗೆ 10 ವರ್ಷ ಆಗಿದ್ದಾಗಲೇ ತಂದೆಯವರು ನನ್ನ ಜೀವನದಿಂದ ಹೊರಗೆ ಹೋಗಿಬಿಟ್ಟರು ಎಂದು ನಿಶಾ ಹೇಳಿಕೊಂಡಿದ್ದರು. ಇದೀಗ ಮತ್ತೊಮ್ಮೆ ಬೇಸರ ವ್ಯಕ್ತಪಡಿಸಿದ್ದಾರೆ. "ನಾನು ರಾಜಕೀಯಕ್ಕೆ ಬರಬಾರದು ಅಂತ ತಡೆದರು. ಒಳ್ಳೆ ವಿದ್ಯಾಭ್ಯಾಸ ಮಾಡದಂತೆ, ಸಮಾಜ ಸೇವೆ ಮಾಡದಂತೆ ನನ್ನ ತಡೆದರು. ಇಷ್ಟದ ಯಾವ ರಂಗದಲ್ಲೂ ಮುಂದೆ ಬರಲು ಬಿಡಲಿಲ್ಲ. ನನ್ನ ಜೀವನ ಹಲವು ವಿಚಾರ ಜನರು ಮುಂದಿಡುತ್ತೇನೆ" ಎಂದು ನಿಶಾ ಹೇಳಿದ್ದಾರೆ.

ನನ್ನ ಇಷ್ಟದ ಯಾವ ರಂಗದಲ್ಲೂ ಮುಂದೆ ಬರಲು ಬಿಡಲಿಲ್ಲ ಎಂದು ನಿಶಾ ಹೇಳುತ್ತಿದ್ದಂತೆ ಹಿಂದೆ ಆಕೆ ಚಿತ್ರರಂಗಕ್ಕೆ ಬರಲು ಯತ್ನಿಸಿದ್ದು ನೆನಪಾಗುತ್ತಿದೆ. ಹೌದು ನಿಶಾ ಸಿನಿಮಾ ನಟಿಯಾಗಲು ಬಯಸಿದ್ದರು. ದರ್ಶನ್ ನಟನೆಯ 'ಅಂಬರೀಷ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಸಹ ಭಾಗಿ ಆಗಿದ್ದರು. ಆದರೆ ಬಳಿಕ ಆ ಪಾತ್ರ ರಚಿತಾ ರಾಮ್ ಪಾಲಾಗಿತ್ತು.
'ಅಂಬರೀಷ' ಚಿತ್ರದಲ್ಲಿ ರಚಿತಾ ರಾಮ್ ಮಾಡಿದ್ದ ಕರುಣಾ ಪಾತ್ರದಲ್ಲಿ ನಿಶಾ ಯೋಗೇಶ್ವರ್ ನಟಿಸಬೇಕಿತ್ತು. ಫೋಟೊಶೂಟ್ ಸಹ ನಡೆದಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಸಿನಿಮಾ ಮುಹೂರ್ತದ ಬಳಿಕ ಆಕೆಯ ಕಾಲಿಗೆ ಪೆಟ್ಟಾಗಿತ್ತು. ಅದರಿಂದ ಚೇತರಿಸಿಕೊಳ್ಳಲು 2 ತಿಂಗಳು ಬೇಕಾಯಿತು. ಆದರೆ ಚಿತ್ರತಂಡ ಅಷ್ಟು ದಿನ ಕಾಯಲು ತಯಾರಿರಲಿಲ್ಲ. ಬೇರೆಯವರ ಡೇಟ್ಸ್ ಸಮಸ್ಯೆ ಆಗುತ್ತದೆ ಎಂದು ರಚಿತಾ ಅವರನ್ನು ಆಯ್ಕೆ ಮಾಡಿ ಚಿತ್ರೀಕರಣ ಮುಗಿಸಿದ್ದರು.

2014ರಲ್ಲಿ 'ಅಂಬರೀಶ' ಸಿನಿಮಾ ತೆರೆಗೆ ಬಂದಿತ್ತು. ಮಹೇಶ್ ಸುಖಧರೆ ಆಕ್ಷನ್ ಕಟ್ ಹೇಳಿದ್ದರು. ಸಿ. ಪಿ ಯೋಗೇಶ್ವರ್ ನಟಿಸಿದ್ದ 'ಸೈನಿಕ' ಚಿತ್ರವನ್ನು ಇವರೇ ಕಟ್ಟಿಕೊಟ್ಟಿದ್ದರು. 'ಅಂಬರೀಶ' ಚಿತ್ರದಲ್ಲಿ ಪ್ರಿಯಮಣಿ ಸಹ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಕೆಂಪೇಗೌಡರಾಗಿ ಅತಿಥಿ ಪಾತ್ರದಲ್ಲಿ ರೆಬಲ್ ಸ್ಟಾರ್ ನಟಿಸಿದ್ದರು. ಹರಿಕೃಷ್ಣ ಸಂಗೀತದಲ್ಲಿ ಆಲ್ಬಮ್ ಸೂಪರ್ ಹಿಟ್ ಆಗಿತ್ತು.
ಸಿ. ಪಿ ಯೋಗೇಶ್ವರ್ ಕೂಡ ಕೆಲ ಕನ್ನಡ ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದರು. 'ಉತ್ತರ ಧ್ರುವದಿಂ ದಕ್ಷಿಣ ಧ್ರುವಕು', 'ಬದ್ರಿ', 'ಸೈನಿಕ' ಸೇರಿ ಕೆಲ ಚಿತ್ರಗಳಲ್ಲಿ ಮಿಂಚಿದ್ದರು. 'ಸೈನಿಕ' ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ತಂದೆಯ ಹಾದಿಯಲ್ಲೇ ಕನ್ನಡ ಚಿತ್ರರಂಗಕ್ಕೆ ಬರುವ ನಿಶಾ ಆಸೆ ಈಡೇರಲಿಲ್ಲ. ಬಳಿಕ ತೆಲುಗಿನ ಎರಡು ಚಿತ್ರಗಳಲ್ಲಿ ನಿಶಾ ಯೋಗೇಶ್ವರ್ ನಾಯಕಿಯಾಗಿ ನಟಿಸಿದ್ದರು.
'ಶ್ರೀರಾಮರಕ್ಷ' ಎನ್ನುವ ತೆಲುಗು ಚಿತ್ರದ ಇಬ್ಬರು ನಾಯಕಿಯರಲ್ಲಿ ನಿಶಾ ಕೂಡ ಒಬ್ಬರಾಗಿದ್ದರು. 'ಹ್ಯಾಂಡ್ ಇಚ್ಚಿಂದಿ' ಎನ್ನುವ ಮತ್ತೊಂದು ತೆಲುಗು ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಕಾಲೇಜು ದಿನಗಳಲ್ಲೇ ಸಾಕಷ್ಟು ಸಿನಿಮಾ ಅವಕಾಶಗಳು ಬಂದಿತ್ತು. ಆದರೆ ಓದಲು ವಿದೇಶಕ್ಕೆ ತೆರಳಿದ್ದರು. ಬಳಿಕ ವಾಪಸ್ ಬಂದಾಗ ಚಿತ್ರರಂಗದತ್ತ ಒಲವು ಮೂಡಿತ್ತು.
ಈ ಹಿಂದೆ ಕೂಡ ತಂದೆ ಜೊತೆಗಿನ ಭಿನ್ನಾಭಿಪ್ರಾಯಗಳ ಬಗ್ಗೆ ನಿಶಾ ಯೋಗೇಶ್ವರ್ ಮಾತನಾಡಿದ್ದರು. ರಾಮಾಯಣದ ಕಥೆಯನ್ನು ಸೇರಿ ತಮ್ಮ ಜೀವನದ ಕಹಿ ಸಂಗತಿಗಳನ್ನು ಹಂಚಿಕೊಂಡಿದ್ದರು.


Click it and Unblock the Notifications











