'ಆನಂದ್' ಚಿತ್ರಕ್ಕೆ ನಾಯಕಿಯಾಗಿ ಅಪರ್ಣ ಆಯ್ಕೆ; ಕೊನೆ ಕ್ಷಣದಲ್ಲಿ ಪಾರ್ವತಮ್ಮ ಬೇಡ ಅಂದಿದ್ದೇಕೆ?
ನಟಿ, ನಿರೂಪಕಿ ಅಪರ್ಣಾ ವಸ್ತಾರೆ ಶ್ವಾಸಕೋಶದ ಕ್ಯಾನ್ಸರ್ನಿಂದ ಇತ್ತೀಚೆಗೆ ನಿಧನರಾದರು. ಅಚ್ಚ ಕನ್ನಡದ ಸ್ವಚ್ಛ ಕಂಠದ ನಿರೂಪಕಿ ತಮ್ಮ ನಿರರ್ಗಳ ಮಾತಿನಿಂದಲೇ ಹೆಚ್ಚು ಖ್ಯಾತರಾಗಿದ್ದರು. ಕೆಲ ಕನ್ನಡ ಸಿನಿಮಾ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ಅಪರ್ಣಾ ನಟಿಸಿದ್ದರು.
ಅಪರ್ಣಾ 1985ರಲ್ಲಿ ಬಂದ 'ಮಸಣದ ಹೂವು' ಚಿತ್ರದ ಮುಖ್ಯ ಪಾತ್ರದಲ್ಲಿ ಸಹ ನಟಿಸಿದ್ದರು. ಪತ್ರಕರ್ತ ಕೆ. ಎಸ್. ನಾರಾಯಣಸ್ವಾಮಿ ಮಗಳಾದ ಅಪರ್ಣಾಗೆ ಮೊದಲ ಪ್ರಯತ್ನದಲ್ಲೇ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಖುದ್ದು ತಂದೆ ಪುಟ್ಟಣ್ಣ ಬಳಿ ಮಗಳನ್ನು ಕರೆದುಕೊಂಡು ಹೋಗಿ ಅವಕಾಶ ಕೊಡುವಂತೆ ಕೇಳಿದ್ದರು.

ಚಿತ್ರದಲ್ಲಿ ಪಾರ್ವತಿ ಎನ್ನುವ ಪಾತ್ರದಲ್ಲಿ ಅಪರ್ಣಾ ನಟಿಸಿದ್ದರು. ಆಕೆಯ ನಟನೆಗೆ ಒಳ್ಳೆ ಪ್ರಶಂಸೆ ವ್ಯಕ್ತವಾಗಿತ್ತು. ಅದರ ಮರುವರ್ಷ ಶಿವರಾಜ್ಕುಮಾರ್ 'ಆನಂದ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆ ಚಿತ್ರಕ್ಕೆ ಮೊದಲಿಗೆ ಅಪರ್ಣಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಬಳಿಕ ಆ ಅವಕಾಶ ಸುಧಾರಾಣಿ ಪಾಲಾಗಿತ್ತು. ಸಿನಿಮಾ ಹಿಟ್ ಆಗಿ ಶಿವಣ್ಣ- ಸುಧಾರಾಣಿ ಇಬ್ಬರೂ ಸೂಪರ್ ಸಕ್ಸಸ್ ಕಂಡರು.
ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿಯನ್ನು ಪಾರ್ವತಮ್ಮ ವಹಿಸಿಕೊಂಡಿದ್ದರು. ಸಿಂಗೀತಂ ಶ್ರೀನಿವಾಸ್ ರಾವ್ 'ಆನಂದ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಅಣ್ಣಾವ್ರ ಮಗ ಚಿತ್ರರಂಗಕ್ಕೆ ಹೀರೊ ಆಗಿ ಎಂಟ್ರಿಗೆ ವೇದಿಕೆ ಸಿದ್ಧವಾಗುತ್ತಿತ್ತು. ಆಗ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿತ್ತು. ಮುದ್ದು ಮುಖದ ಅಪರ್ಣಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಚಿ. ಉದಯಶಂಕರ್ ಅವರೇ ಅಪರ್ಣಾ ಅವರನ್ನು ಚಿತ್ರಕ್ಕೆ ನಾಯಕಿ ಎಂದು ಆಯ್ಕೆ ಮಾಡಿದ್ದರು. ಈ ಸುದ್ದಿ ಪತ್ರಿಕೆಗಳಲ್ಲಿ ಕೂಡ ಬಂದಿತ್ತು.

ಟೋಟಲ್ ಕನ್ನಡ ಮೀಡಿಯಾ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಅಪರ್ಣ ಬಗ್ಗೆ ಹಿರಿಯ ಪತ್ರಕರ್ತ ಎನ್.ಎಸ್ ಶ್ರೀಧರ ಮೂರ್ತಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಕೆಗೆ ಅವರು ಆಪ್ತರು ಆಗಿದ್ದರು. ಉತ್ತಮ ಒಡನಾಟ ಇತ್ತು. 'ಆನಂದ್' ಚಿತ್ರಕ್ಕೆ ಅಪರ್ಣ ಆಯ್ಕೆ ಆಗಿದ್ದರ ಬಗ್ಗೆ ಅವರು ನೆನಪಿಸಿಕೊಂಡಿದ್ದಾರೆ.
'ಮಸಣದ ಹೂವು' ಸಿನಿಮಾ ಮುಗಿಯುವ ಸಮಯಕ್ಕೆ ಶಿವಣ್ಣನ 'ಆನಂದ್' ಸಿನಿಮಾ ಶುರುವಾಯಿತು. ಚಿತ್ರಕ್ಕೆ ಅಪರ್ಣ ನಾಯಕಿಯಾಗಿ ಆಯ್ಕೆ ಆಗಿದ್ದರು. ಚಿ. ಉದಯಶಂಕರ್ ಮುದ್ದು ಮುಖದ ಹುಡುಗಿ ಚೆನ್ನಾಗಿದ್ದಾಳೆ ಎಂದಿದ್ದರು. ಪತ್ರಿಕೆಯಲ್ಲಿ ಕೂಡ ಪುಟ್ಟಣ್ಣ ಶೋಧನ ನಟಿ 'ಆನಂದ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಎಂದು ಬರೆದರು.
'ಆನಂದ್' ಶಿವಣ್ಣನ ಮೊದಲ ಸಿನಿಮಾ. ಅಪರ್ಣಾ ಈಗಾಗಲೇ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ಹೊಸ ಮುಖ ನಾಯಕಿ ಆದ್ರೆ ಚೆನ್ನಾಗಿರುತ್ತದೆ ಎಂದು ಪಾರ್ವತಮ್ಮ ನಿರ್ಧರಿಸಿದರು. ಹಾಗಾಗಿ ಆ ಅವಕಾಶ ಸುಧಾರಾಣಿ ಪಾಲಾಯಿತು.
ಬಳಿಕ 'ಸಂಗ್ರಾಮ' ಹಾಗೂ 'ನಮ್ಮೂರ ರಾಜ' ಸಿನಿಮಾಗಳಲ್ಲಿ ಕೂಡ ಅಪರ್ಣಾ ನಟಿಸಿದ್ದರು. 'ಮಸಣದ ಹೂವು' ಸಿನಿಮಾ ಸಮಯದಲ್ಲೇ ನನ್ನ ಮುಂದಿನ 3 ಸಿನಿಮಾಗಳಿಗೆ ನೀನೇ ನಾಯಕಿ, ಆಮೇಲೆ ಬೇರೆ ಸಿನಿಮಾಗಳಲ್ಲಿ ನಟಿಸು ಎಂದು ಅಪರ್ಣಾಗೆ ಪುಟ್ಟಣ್ಣ ಹೇಳಿದ್ದರಂತೆ. ಆದರೆ ಆ ಸಿನಿಮಾ ಮುಗಿಯುವ ವೇಳೆಗೆ ಪುಟ್ಟಣ್ಣ ಕೂಡ ನಿಧನರಾಗಿಬಿಟ್ಟರು.
ಇದೇ ವರ್ಷ ಬಂದ 'ಗ್ರೇ ಗೇಮ್ಸ್' ಅಪರ್ಣಾ ನಟಿಸಿದ ಕೊನೆಯ ಸಿನಿಮಾ. ಬಹಳ ದಿನಗಳ ಬಳಿಕ ಈ ಚಿತ್ರದಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದರು. 'ಬಿಗ್ಬಾಸ್' ಹಾಗೂ 'ಮಜಾ ಟಾಕೀಸ್' ಶೋಗಳಲ್ಲಿ ಕೂಡ ಕಾಣಿಸಿಕೊಂಡು ಕನ್ನಡಿಗರಿಗೆ ಬಹಳ ಹತ್ತಿರವಾಗಿದ್ದರು.


Click it and Unblock the Notifications











