Don't Miss!
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Automobiles ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾ' ಚುನಾವಣೆ: ಪ್ರಕಾಶ್ ರೈ ಸೋಲಿಗೆ ಕಾರಣಗಳೇನು?
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ 'ಮಾ'ಚುನಾವಣೆಯಲ್ಲಿ ಪ್ರಕಾಶ್ ರೈ ಅವರ ಸೋಲನ್ನು ಚಿರಂಜೀವಿ ಕುಟುಂಬಕ್ಕಾದ ಮುಖಭಂಗವೆಂದು, ಗೆದ್ದು ಬೀಗಿದ ಮಂಚು ಪ್ಯಾನಲ್ ಮೂಲಕ ಹಿರಿಯ ನಟ ಮೋಹನ್ ಬಾಬು ಚಿರಂಜೀವಿ ಕುಟುಂಬದ ವಿರುದ್ಧ ಮೇಲುಗೈ ಸಾಧಿಸಿದ್ದಾರೆ ಅಂತಲೇ ವಿಶ್ಲೇಷಿಲಾಗುತ್ತಿದೆ.
ಭಾರೀ ಕುತೂಹಲಕ್ಕೆ ಮತ್ತು ಹಣಾಹಣಿಗೆ ಕಾರಣವಾಗಿದ್ದ ಮೂವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (ಮಾ) ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಭಾರಿ ಗೆಲುವಿನ ನಿರೀಕ್ಷೆಯಲ್ಲಿದ್ದ ಪ್ರಕಾಶ್ ರೈ ಪ್ಯಾನಲ್ ಅನಿರೀಕ್ಷಿತವಾಗಿ ಭಾರಿ ಮುಖವನ್ನೇ ಅನುಭವಿಸಿದೆ. ಚುನಾವಣಾ ಪೂರ್ವದಲ್ಲಿ ಭಾರಿ ಗೆಲುವಿನ ಲೆಕ್ಕಾಚಾರದಲ್ಲಿ ಚುನಾವಣೆ ಕಣಕ್ಕೆ ಇಳಿದಿದ್ದ ಪ್ರಕಾಶ್ ರೈ ಪ್ಯಾನಲ್ ಚುನಾವಣೆಯಲ್ಲಿ ಅತ್ಯಂತ ಸುಲಭವಾಗಿ ಗೆಲ್ಲುವ ವಾತಾವರಣ ನಿರ್ಮಾಣವಾಗಿತ್ತು. ಆದರೆ ಚುನಾವಣೆ ದಿನಗಳು ಹತ್ತಿರವಾಗುತ್ತಿದ್ದಂತೆ ಎದುರಾಳಿ ಮಂಚು ವಿಷ್ಣು ಪ್ಯಾನಲ್ ತೀವ್ರ ಸ್ಪರ್ಧೆ ಒಡ್ಡುವ ಸ್ಥಿತಿಗೆ ಬಂದು ತಲುಪಿತು. ಇದಕ್ಕೆ ಕಾರಣವಾದ ಎಲ್ಲ ಅಂಶಗಳನ್ನು ಫಿಲ್ಮಿಬೀಟ್ ಕನ್ನಡ ಎಳೆ ಎಳೆಯಾಗಿ ಬಿಡಿಸಿ ತರ್ಕಬದ್ಧವಾಗಿ ವಿಶ್ಲೇಷಣೆ ಮಾಡಿತ್ತು.
ಫಿಲ್ಮಿಬೀಟ್ ಕನ್ನಡ ವಿಶ್ಲೇಷಣೆ ಮಾಡಿದಂತೆ ಚಿರಂಜೀವಿ ಕುಟುಂಬದ ಸಂಪೂರ್ಣ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಪ್ರಕಾಶ್ ರೈ ಬಣಕ್ಕೆ ಸೆಡ್ಡುಹೊಡೆದ ಹಿರಿಯ ನಟ ಮೋಹನ್ ಬಾಬು ಅವರ ಪುತ್ರ ಮಂಚು ವಿಷ್ಣುವರ್ಧನ್ ಬಣ ಇತರೆ ಸೂಪರ್ ಸ್ಟಾರ್ ಗಳ ಕುಟುಂಬಗಳ ಪೂರ್ಣ ಬೆಂಬಲ ಪಡೆಯುವುದರಲ್ಲಿ ಯಶಸ್ವಿಯಾಯಿತು. ಅಲ್ಲದೆ ಪ್ರಕಾಶ್ ರೈ ವಿರುದ್ಧ non-local ಎಂಬ ಬಲವಾಗಿ ಕೇಳಿ ಬಂದಿದ್ದು ಅಲ್ಲದೆ ಹಿರಿಯ ನಟರಾದ ಕೋಟ ಶ್ರೀನಿವಾಸ ರಾವ್ ( ಗಮನಿಸಬೇಕಾದ ಸಂಗತಿ ಇವರು ಬಿಜೆಪಿಯ ಮಾಜಿ ಶಾಸಕರು ಕೂಡ ಹೌದು) ಬಹಿರಂಗವಾಗಿಯೇ ಪ್ರಕಾಶ್ ರಾಜ್ ಅವರನ್ನು ಸೋಲಿಸುವಂತೆ ಕರೆ ನೀಡಿದ್ದರು. ಇದಕ್ಕೆ ಹಲವಾರು ಹಿರಿಯ ನಟರು ಕೂಡ ಧ್ವನಿಗೂಡಿಸಿದರು.
ಆರಂಭದಲ್ಲಿ ಪ್ರಕಾಶ್ ರೈ ಪರವಾಗಿದ್ದ ಅಂಶಗಳೇ ಕೊನೆಹಂತದಲ್ಲಿ ಅವರಿಗೆ ಮುಳುವಾಯಿತು. ಚಿರಂಜೀವಿ ಕುಟುಂಬದ ಬೆಂಬಲವನ್ನು ತನ್ನ ಬಲವಾದ ಆಯುಧವನ್ನಾಗಿಸಿಕೊಂಡು ಚುನಾವಣೆ ಕಣಕ್ಕೆ ಇಳಿದ ಪ್ರಕಾಶ್ ತಂಡ ಇತರ ಯಾವುದೇ ಸ್ಟಾರ್ ಕುಟುಂಬಗಳ ಬೆಂಬಲವಿಲ್ಲದೆ ಕೂಡ ಗೆಲ್ಲಬಹುದು ಎಂಬ ಧಿಮಾಕಿನಿಂದ ವರ್ತಿಸಿತು. ಅದರಲ್ಲೂ ವಿಶೇಷವಾಗಿ ಹಿರಿಯ ನಟರನ್ನು ಅವರು ಸಂಪೂರ್ಣವಾಗಿ ಕಡೆಗಣಿಸಿದರು.
ಮಗನ ಪರ ಇಳಿದ ಮೋಹನ್ ಬಾಬು
ಪ್ರಕಾಶ್ ರೈ ತಂಡ ಹೀಗೆ ಧಿಮಾಕಿನಿಂದ ವರ್ತಿಸುತ್ತಿರುವಾಗಲೇ ಮಂಚು ವಿಷ್ಣುವರ್ಧನ್ ಪರವಾಗಿ ಅವರ ತಂದೆ ಹಿರಿಯ ನಟ ಮೋಹನ್ ಬಾಬು ಚುನಾವಣಾ ಅಖಾಡಕ್ಕೆ ಇಳಿದು ಚಿರಂಜೀವಿ ಕುಟುಂಬ ಮತ್ತು ಅವರ ಬೆಂಬಲಿಗರ ಹೊರತಾದ ಇತರ ಎಲ್ಲಾ ಸ್ಟಾರ್ ನಟರ ಹಾಗೂ ಮತ್ತು ಅವರ ಬೆಂಬಲಿಗರ ಮತಗಳನ್ನು ಮಗನ ಪರವಾಗಿ ಕ್ರೋಡೀಕರಿಸಿ ದರು. ಹಿರಿಯ ಕಲಾವಿದರನ್ನು ಭೇಟಿಮಾಡಿದರು. ಸ್ಟುಡಿಯೋ ಅಧಿಪತಿಗಳ ಬೆಂಬಲ ಕೇಳಿದರು. ಇದರಿಂದ ಮಂಚು ತಂಡಕ್ಕೆ ದೊಡ್ಡ ಮಟ್ಟದಲ್ಲಿ ಲಾಭವೇ ತಂದುಕೊಟ್ಟಿತು.
ತೆರೆಯ ಮುಂದೆ ಎಲ್ಲವೂ ತಾನಾಗೆ ಆಟ ನಡೆಸಿದ ನರೇಶ್
'ಮಾ'ಮಾಜಿ ಅಧ್ಯಕ್ಷ,ಹಿರಿಯ ಚಿತ್ರನಟ ನರೇಶ್ ಮತ್ತು ಅವರ ಬೆಂಬಲಿಗರು ಮಂಚು ತಂಡದ ಪರವಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದರು. ಅದರಲ್ಲೂ ನರೇಶ್ ಎಲ್ಲಾ ತಾನಾಗಿ ಮುಂದೆ ನಿಂತು ಪ್ರತಿಯೊಂದು ಸದಸ್ಯನ ಮನವೊಲಿಸಿದ್ದು ಅಲ್ಲದೆ ದೊಡ್ಡ ಪ್ರಮಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ವೋಟಿಂಗ್ ಆಗುವಂತೆ ನೋಡಿಕೊಂಡರು.
ಜಯಗಳಿಸಿದವರು ಯಾರ್ಯಾರು?
ಪೋಲ್ ಮ್ಯಾನೇಜ್ಮೆಂಟ್ ವಿಷಯಕ್ಕೆ ಬಂದರೆ ಮಂಚು ತಂಡದ ಮುಂದೆ ಪ್ರಕಾಶ್ ರೈ ತಂಡ
ತೀರಾ ಸಪ್ಪೆ ಎನಿಸುತ್ತೆ. ಬೆಂಗಳೂರು-ಚೆನ್ನೈ ಮುಂಬೈಯಲ್ಲಿರುವ ಮಾ ಸದಸ್ಯರಿಗೆ ವಿಮಾನ, ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯ ಕೊಟ್ಟು ಮತದಾನಕ್ಕೆ ಬರುವಂತೆ ನೋಡಿಕೊಂಡರು ಮಂಚು ತಂಡ.
ಹೀಗಾಗಿಯೇ ಮುಂಬೈಯಿಂದ ಜೆನಿಲಿಯಾ ದೆಹಲಿಯಲ್ಲಿದ್ದ ಜಯಪ್ರದಾ ಚೆನ್ನೈಯಿಂದ ಅನೇಕ ಕಲಾವಿದರು ದೊಡ್ಡಮಟ್ಟದಲ್ಲಿ ಬಂದು ಮತ ಚಲಾವಣೆ ಮಾಡಿದರು. ಶೇಕಡ 75 ರಷ್ಟು ಮತದಾನದಿಂದಾಗಿ ಅದರಲ್ಲೂ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಪಟ್ಟಂತೆ ವಾರ್ ಒನ್ ಸೈಡ್ ಆಯ್ತು. ಇಸಿ ಮೆಂಬರ್ (executive committee) ಗಳಲ್ಲಿ ಎರಡು ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಿತು. ಪ್ರಕಾಶ್ ಬಣದಿಂದ 8
ಮಂಚು ತಂಡದಿಂದ 10 ಸದಸ್ಯರು ಆಯ್ಕೆಯಾಗಿದ್ದಾರೆ. ಇನ್ನು ಬಹುಮುಖ್ಯವಾದ ಜನರಲ್ ಸೆಕ್ರೆಟರಿ, ಖಜಾಂಚಿ ಸ್ಥಾನಗಳು ಕೂಡ ಮಂಚು ತಂಡದ ಪಾಲಾಗಿದೆ. ಜಾಯಿಂಟ್ ಸೆಕ್ರೆಟರಿ 1,2,3 ವೈಸ್ ಪ್ರೆಸಿಡೆಂಟ್ 1, 2,3 ಇದರ ಚುನಾವಣೆಯಲ್ಲಿ ಪ್ರಕಾಶ್ ರೈ ಬಣದ 2 ಸದಸ್ಯರು ಮಾತ್ರ ಜಯಗಳಿಸಿದ್ದಾರೆ.
ಎಲ್ಲರಿಗಿಂತ ಹೀನಾಯವಾಗಿ ಸೋತಿದ್ದು ಪ್ರಕಾಶ್ ರೈ!
ಹೌದು ಇಡೀ ಚುನಾವಣೆಯಲ್ಲಿ ಆಸಕ್ತಿದಾಯಕ ವಿಷಯವೆಂದರೆ ಸೆಕ್ರೆಟರಿ ಚುನಾವಣೆಯಲ್ಲಿ ರಘು ಬಾಬು ಪ್ರಕಾಶ್ ರೈ ಬಣದ ಜೀವಿತಾ ರಾಜಶೇಖರ್ ಮೇಲೆ ಕೇವಲ 7 ಮತಗಳಲ್ಲಿ ಗೆದ್ದಿದ್ದಾರೆ. ಅದೇ ರೀತಿ ಬಹುತೇಕ ಎಲ್ಲಾ ಸ್ಪರ್ಧಿಗಳು ಎದುರಾಳಿಗಳ ಮೇಲೆ ಕೆಲವೇ ಕೆಲವು ಮತಗಳ ಅಂತರದಲ್ಲಿ ಜಯಶಾಲಿಗಳಾಗಿದ್ದಾರೆ. ಹೀಗೆ ಪ್ರತಿಯೊಂದು ಪೋಸ್ಟ್ ಗೂ ಎರಡು ಬಣಗಳ ನಡುವೆ ನೇರ ಹಣಾಹಣಿ ನಡೆದಿದೆ. ಆದರೆ ಆಶ್ಚರ್ಯವೆಂದರೆ ಅಧ್ಯಕ್ಷೀಯ ಚುನಾವಣೆ ಬಂದಾಗ ಬಹುತೇಕ ಸದಸ್ಯರು ಪ್ರಕಾಶ ರೈ ಅವರನ್ನು ತಿರಸ್ಕರಿಸಿದ್ದಾರೆ. ಒಟ್ಟು 883 ಸದಸ್ಯರಲ್ಲಿ 665 ಸದಸ್ಯರು ಮತದಾನ ಮಾಡಿದ್ದಾರೆ ಇದರಲ್ಲಿ 50 ಮತಗಳು ಅನುರ್ಜಿತ ಗೊಂಡಿದೆ. ಇನ್ನುಳಿದಂತೆ ಮಂಚು ವಿಷ್ಣುವರ್ಧನ್ ಅವರಿಗೆ 381ಮತಗಳು ಪ್ರಕಾಶ್ ರೈ ಅವರಿಗೆ 274 ಮತಗಳು ಪೋಲಾಗಿದೆ. ಇದರಿಂದ 107 ಮತಗಳ ಭಾರೀ ಅಂತರದಲ್ಲಿ ಪ್ರಕಾಶ್ ರೈ ಸೋಲನ್ನು ಅನುಭವಿಸಿದ್ದಾರೆ. ಪ್ರಕಾಶ್ ರೈ ಬಣಕ್ಕೆ ಮತದಾನ ಮಾಡಿದ ಮತದಾರರು ಕೂಡ ಅಧ್ಯಕ್ಷ ಚುನಾವಣೆಯಲ್ಲಿ ಪ್ರಕಾಶ್ ರೈ ವಿರುದ್ಧ ಚಲಾಯಿಸಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ.ಅದಕ್ಕೆ ಬಹುಶಃ ಪ್ರಕಾಶ್ ಅವರ ಹಿಂದಿನ ವರ್ತನೆಗಳು ಆಗಬಹುದು, non-local ಎಂಬ ವಿಚಾರ ಇರಬಹುದು, ಅತಿ ಮುಖ್ಯವಾಗಿ ಅವರ ರಾಜಕೀಯ ನಡೆ ಅವರ ದೊಡ್ಡ ಸೋಲಿಗೆ ಕಾರಣವಾಗಿದೆ.
ಪ್ರಕಾಶ್ ರೈ ಬಣ ವರ್ಸಸ್ ವೈಸಿಪಿ-ಬಿಜೆಪಿ
ಇದು ಸಿನಿಮಾರಂಗಕ್ಕೆ ನಡೆದ ಚುನಾವಣೆಯಾದರೂ ಇದರ ಒಳಗೂ ರಾಜಕೀಯ ಪಕ್ಷಗಳ ಒಳಸುಳಿ ನುಸುಳಿಕೊಂಡು ಬಂದು ಪ್ರಕಾಶ್ ರೈ ತಂಡಕ್ಕೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ. ಚಿರಂಜೀವಿ ಕುಟುಂಬದ ಬೆಂಬಲವೊಂದು ಬಿಟ್ಟರೆ ಬೇರೆ ಯಾವುದೇ ರೀತಿಯ ಬೆಂಬಲ ಪಡೆಯಲು ವಿಫಲವಾದ ತಂಡಕ್ಕೆ ಅದೇ ಚಿರಂಜೀವಿ ಕುಟುಂಬದ ಸದಸ್ಯರ ಹೇಳಿಕೆಗಳು ಮುಳುವಾಯಿತು. ಜೊತೆಗೆ ಪ್ರಕಾಶ್ ರೈ ಅವರ ಬಿಜೆಪಿ ವಿರೋಧಿ ನಡೆ ಕೂಡ ಇಲ್ಲಿ ಕೆಲಸ ಮಾಡಿದೆ.
ಬಿಜೆಪಿ-ವೈಸಿಪಿ ಸದಸ್ಯರ ಬೆಂಬಲ
ಮಂಚು ವಿಷ್ಣುವರ್ಧನ್ ಪ್ಯಾನಲ್ ತೆಗೆದುಕೊಂಡರೆ ಇಲ್ಲಿ ಬಹುತೇಕ ಸದಸ್ಯರಗಳು ನೇರವಾಗಿ ಬಿಜೆಪಿ, ವೈಸಿಪಿ ಬೆಂಬಲಿಗರು ಅಥವಾ ಸಕ್ರಿಯ ಸದಸ್ಯರು ಆಗಿದ್ದಾರೆ. ಇನ್ನು ಮಂಚು ಪರವಾಗಿ ಪೋಲ್ ಮ್ಯಾನೇಜ್ಮೆಂಟ್ ಮಾಡಿದ ಹಿರಿಯ ನಟ ನರೇಶ್ ರಾಜ್ಯದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಮಂಚು ಕುಟುಂಬ ಪ್ರಧಾನಿ ಮೋದಿ ಅವರೊಂದಿಗೆ ಒಳ್ಳೆ ಸಂಬಂಧವನ್ನು ಹೊಂದಿದೆ. ಜೊತೆಗೆ ಆಂಧ್ರದ ಮುಖ್ಯಮಂತ್ರಿ ಜಗನ್ ಕುಟುಂಬಕ್ಕೆ ಮಂಚು ಅಳಿಯನಾಗಬೇಕು. ತೆಲಂಗಾಣದ TRS ಜೊತೆಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹೀಗಾಗಿ ಆಂಧ್ರ ತೆಲಂಗಾಣ ಮತ್ತು ಕೇಂದ್ರ ಮೂರರ ನಡುವೆ ಸಮನ್ವಯತೆಯನ್ನು ಸಾಧಿಸಬಲ್ಲ ಸಾಮರ್ಥ್ಯ ಈ ತಂಡಕ್ಕೆ ಇರುವುದೇ ಇದರ ಪ್ಲಸ್ ಪಾಯಿಂಟ್ ಆಯ್ತು.
ಪವನ್ ಕಲ್ಯಾಣ್ ವರ್ಸಸ್ ಜಗನ್ಮೋಹನ್ ರೆಡ್ಡಿ
ಪವನ್ ಕಲ್ಯಾಣ್ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಮಾಡಿದ ಗಂಭೀರ ಆರೋಪಗಳು ಸಿನಿಮಾರಂಗಕ್ಕೆ ಪರೋಕ್ಷವಾಗಿ ಬಾರಿ ಡ್ಯಾಮೇಜ್ ಮಾಡಿತು.ಕೊನೆಗೆ ಸಿನಿಮಾ ರಂಗದವರು ಇದರ ಬಗ್ಗೆ ಬಹಿರಂಗವಾಗಿ ಸ್ಪಷ್ಟನೆ ಕೊಟ್ಟುಆಂಧ್ರದ ವಾರ್ತಾ ಸಚಿವರಾದ P. ನಾನಿ ಅವರನ್ನು ಭೇಟಿ ಮಾಡಿ ಸಿನಿಮಾರಂಗಕ್ಕೂ ಪವನ್ ಕಲ್ಯಾಣ್ ಹೇಳಿಕೆಗಳಿಗೂ ಸಂಬಂಧವಿಲ್ಲವೆಂದು ಸೃಷ್ಟೀಕರಣ ಕೊಟ್ಟು ಬಂದರು.
ಪವನ್ ಕಲ್ಯಾಣ್ ಪರವಾಗಿ ನಿಂತರೆ ಮುಂದೆ ಆಂಧ್ರದಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡುವುದು ಕಷ್ಟಕರ ಎಂಬ ಭಾವನೆ ಒಂದೆಡೆ ನಿರ್ಮಾಪಕರಲ್ಲಿ ಮೂಡಿದೆ, ಇನ್ನೊಂದೆಡೆ ಪವನ್ ಪರವಾದ ಬ್ಯಾಟಿಂಗ್ ಮಾಡುವ ಪ್ರಕಾಶ್ ರೈ ಗೆದ್ದರೆ ಸಿನಿಮಾಮಂದಿಯ ಸಂಬಂಧ ಆಂಧ್ರ ಸರ್ಕಾರದ ಜೊತೆ ಕೆಡಬಹುದು ಎಂಬ ಭಯ ನಿರ್ಮಾಪಕರದಾಗಿತ್ತು. ಅತಿ ಕಷ್ಟದ ಮೇಲೆ ತೆಲಂಗಾಣ ಸರ್ಕಾರ ಮತ್ತು TRS ಪಕ್ಷದ ಜೊತೆಗೆ ಸಿನಿಮಾ ಮಂದಿ ತತ್ಸಂಬಂಧ ಬೆಳೆಸಿಕೊಳ್ಳಲು ಯಶಸ್ವಿಯಾಗಿದ್ದರು. ಇಂತಹ ಸಮಯದಲ್ಲಿ ಆಂಧ್ರದಲ್ಲಿ ಮತ್ತೊಂದು ಬಲಾಡ್ಯ ಆಡಳಿತರೂಢ ವೈಸಿಪಿ ಪಕ್ಷದೊಂದಿಗೆ ಯಾವುದೇ ತರದ ವೈರತ್ವ ಬೆಳೆಸಿಕೊಳ್ಳಲು ಸಿನಿಮಾ ಮಂದಿ ಸಿದ್ಧರಿಲ್ಲ.
ನಾಗಬಾಬು ನೀಡಿದ ಆ ಒಂದು ಹೇಳಿಕೆ...
ಪವನ್ ಕಲ್ಯಾಣ್ ಅವರ ರಾಜಕೀಯ ಸಿದ್ಧಾಂತ ಒಂದೆಡೆ ಆಂಧ್ರ ಸರ್ಕಾರದ ಜೊತೆ ವ್ಯವಹಾರದಲ್ಲಿ ಇಕ್ಕಟ್ಟುಗಳನ್ನು ಉಂಟು ಮಾಡುತ್ತಿರುವಾಗ, ಚಿರಂಜೀವಿಯ ಮತ್ತೊಬ್ಬ ಸೋದರ ನಾಗಬಾಬು ಚುನಾವಣೆಗೆ ಎರಡು ದಿನಗಳು ಬಾಕಿ ಇರುವಾಗಲೇ ಪ್ರಕಾಶ್ ಪರವಾಗಿ ಬ್ಯಾಟ್ ಬೀಸುತ್ತ ಆವೇಶದಲ್ಲಿ ' ಪ್ರಕಾಶ್ ರೈ ಅವರಿಗೆ ಇರುವಷ್ಟು ಜ್ಞಾನ ಚುನಾವಣೆ ಕಣದಲ್ಲಿರುವ ಯಾವ ಸ್ಪರ್ಧೆಗೂ ಇಲ್ಲ. ಪ್ರಪಂಚದ ಎಲ್ಲ ವಿಷಯಗಳನ್ನು ಅವರು ಆಪೋಷನ ಮಾಡಿದ್ದಾರೆ. ತೊಡೆತಟ್ಟಿ ಮೋದಿಯವರನ್ನು ಎದುರಿಸಬಲ್ಲ ತಾಕತ್ತು ಪ್ರಕಾಶ್ ರೈ ಅವರಿಗೆ ಇದೆ' ಅಂತ ಹೇಳಿಕೆ ನೀಡಿದರು. ಈ ಮಾತುಗಳೇ ಇಡೀ ಚುನಾವಣಾ ಕಣವನ್ನು ಬದಲಾಯಿಸಿತು.ಮೊದಲೇ ಆಂಧ್ರಸರ್ಕಾರದ ಜೊತೆ ಸಮಸ್ಯೆ ಈಗ ಕೇಂದ್ರ ಜೊತೆ ಕೂಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಆತಂಕ ಮತ್ತು ಭಯ ಇಡೀ ಸಿನಿಮಾದಲ್ಲಿ ಆ ಕ್ಷಣ ಮೂಡಿತು.
ಪ್ರಕಾಶ್ ರೈ ಅವರನ್ನು ಹೇಗಾದರೂ ಸೋಲಿಸಿ
'ಪ್ರಕಾಶ್ ರೈ ಅವರನ್ನು ಹೇಗಾದರೂ ಸೋಲಿಸಿ' ಹಾಗಂತ ದೊಡ್ಡ ಮಟ್ಟದಲ್ಲಿ ಮೆಸೇಜ್ ಗಳು ಪಾಸಾಯಿತು. ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ಕೆಲಸ ಮಾಡುವ ಸದಸ್ಯರುಗಳಿಗೆ 'ನೀವು ಯಾರಿಗಾದರೂ ಮತಚಲಾವಣೆ ಮಾಡಿ ಆದರೆ ಅಧ್ಯಕ್ಷ ಚುನಾವಣೆ ಬಂದಾಗ ಮಾತ್ರ ಖಂಡಿತವಾಗಿಯೂ ಪ್ರಕಾಶ್ ರೈ ವಿರುದ್ಧ ಮತಚಲಾವಣೆ ಮಾಡಿ. ಪ್ರಕಾಶ್ ರೈ ಸೋತರೆ ಮಾತ್ರವೇ ನಮ್ಮ ಸಿನಿಮಾರಂಗಕ್ಕೆ ಒಳಿತು. ಪ್ರಕಾಶ್ ಗೆದ್ದರೆ ರಾಜ್ಯ ಸರ್ಕಾರಗಳ ಜೊತೆಜೊತೆಗೆ ಕೇಂದ್ರದ ಜೊತೆ ಕೂಡ ನಾವು ಈಗಿರುವ ಸಂಬಂಧಗಳನ್ನು ಹಾಳುಮಾಡಿಕೊಳ್ಳುವ ಅವಕಾಶಗಳಿದೆ. ಒಬ್ಬ ತೊಡೆ ಮುರಿಯುವ(ಪವನ್ ಕಲ್ಯಾಣ್)ಹೇಳಿಕೆ ಕೊಡುತ್ತಾನೆ. ಮತ್ತೊಬ್ಬ ತೊಡೆ ತಟ್ಟುವ ಹೇಳಿಕೆ (ನಾಗಬಾಬು) ಕೊಡುತ್ತಾನೆ. ಅದರಿಂದ ನಷ್ಟವಾಗುವುದು ನಮಗೆ ಹೊರತು ಅವರ ಕುಟುಂಬಕ್ಕೆ ಅಲ್ಲ' ಅಂತ ಪ್ರಕಾಶ್ ಸೋಲಿಗೆ ಮುನ್ನುಡಿ ಬರೆದೇಬಿಟ್ಟರು.
ಪ್ರಕಾಶ್ ರೈ ಸೋಲಿಗೆ ಬಿಜೆಪಿ ತಂತ್ರ
'ಮಾ'ಚುನಾವಣೆಯ ಆರಂಭದ ಹಂತದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ ಆದರೆ ಯಾವಾಗ ಪ್ರಕಾಶ್ ರೈ ತಂಡ ಚಿರಂಜೀವಿ ಕುಟುಂಬದ ಬೆಂಬಲದಿಂದ ಅಖಾಡಕ್ಕೆ ಇಳಿಯಿತು. ಅವರ ಕುಟುಂಬದ ಸದಸ್ಯರುಗಳ ಹೇಳಿಕೆಗಳು ವೈಸಿಪಿ-ಬಿಜೆಪಿ ಪಕ್ಷಗಳಿಗೆ ಪರೋಕ್ಷವಾಗಿ ವಿರುದ್ಧವಾಗಿತ್ತು. ಇದರಿಂದ ಸಹಜವಾಗಿ ಈ ಎರಡು ಪಕ್ಷಗಳು ಪರೋಕ್ಷವಾಗಿ ಮಂಚು ವಿಷ್ಣುವರ್ಧನ್ ಗೆಲ್ಲುವಂತೆ ನೋಡಿಕೊಳ್ಳುವುದರಲ್ಲಿ ಯಶಸ್ವಿಯಾದರು. ಇದರ ಬಗ್ಗೆ ಹೆಸರು ಹೇಳಲು ಇಚ್ಛಿಸದ ನಟರೊಬ್ಬರು ' ನಮಗೆ ರಾಜಕೀಯಗಳು ಬೇಕಿಲ್ಲ. ಅದರಲ್ಲೂ ದೇಶದ ಪ್ರಧಾನಿ ವಿರುದ್ಧ ತೊಡೆತಟ್ಟಿ ಮಾತಾಡುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡರೆ ಅದರ ನಷ್ಟ ನಮಗೆ ಹೊರತು ಆ ವ್ಯಕ್ತಿಗೆ ಅಲ್ಲ. ಅಲ್ಲದೆ ನಮ್ಮ ಸದಸ್ಯರಲ್ಲಿ ಅನೇಕರು ಬಿಜೆಪಿಯ ಬೆಂಬಲಿಗರೇ ಆಗಿದ್ದಾರೆ. ಆದರೆ ಅದನ್ನು ಅವರು ಎಂದು ಬಹಿರಂಗವಾಗಿ ತೋರಿಸಿಕೊಳ್ಳುವುದಿಲ್ಲ. ಯಾವಾಗ ಮೋದಿ ವಿರುದ್ಧದ ನಾಗಬಾಬು ಹೇಳಿಕೆ ಕೊಟ್ಟರು ಆಗಲೇ ಪ್ರಕಾಶ್ ರೈ ವಿರುದ್ಧ ಮತಚಲಾವಣೆಗೆ ದೊಡ್ಡಮಟ್ಟದಲ್ಲಿ ಅವರೆಲ್ಲ ಮಾನಸಿಕವಾಗಿ ಸಿದ್ದರಾಗಿಬಿಟ್ಟರು'
ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವೆ: ಮಂಚು ವಿಷ್ಣುವರ್ಧನ್
ಒಟ್ಟಿನಲ್ಲಿ ಮುಂದಿನ ಎರಡು ವರ್ಷಕ್ಕೆ ತೆಲುಗು ಕಲಾವಿದರ ಸಂಘಕ್ಕೆ ಮಂಚು ವಿಷ್ಣುವರ್ಧನ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಭರವಸೆಯನ್ನು ಅವರು ತಮ್ಮ ಗೆಲುವಿನ ಪ್ರತಿಕ್ರಿಯೆಯಲ್ಲಿ ನೀಡಿದ್ದಾರೆ. ಸೋಲಿನ ನಂತರ ಪ್ರಕಾಶ್ ರೈ ಮಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.