ಸುಧಾ ಪತ್ರಿಕೆಯ ಆ ಕಥೆಯನ್ನು ಸಿನ್ಮಾ ಮಾಡಲು ಅಣ್ಣಾವ್ರು-ವಿಷ್ಣು ಇಷ್ಟಪಟ್ಟಿದ್ರು, ಅಂಬಿ ಪಾಲಾಗಿದ್ದೇಕೆ?
ಯಾವುದೇ ಚಿತ್ರದ ಮೊದಲ ಪ್ರೇಕ್ಷಕ ನಿರ್ದೇಶಕನೇ ಆಗಿರುತ್ತಾನೆ. ನಟರನ್ನು ಮನಸ್ಸಿನಲ್ಲಿಟ್ಟುಕೊಂಡು ಅವರಿಗೂ ಸೂಕ್ತ ಕಥೆ ಮಾಡುವುದು, ಕಥೆಗೆ ತಕ್ಕ ನಟನನ್ನು ಆಯ್ಕೆ ಮಾಡಿಕೊಳ್ಳುವುದು ರೂಢಿಯಲ್ಲಿದೆ. ಅಂತಿಮವಾಗಿ ನಿರ್ದೇಶಕನೇ ತಮ್ಮ ಚಿತ್ರಕ್ಕೆ ಯಾರು ನಾಯಕ-ನಾಯಕಿ ಆಗಬೇಕು ಎಂದು ತೀರ್ಮಾನಿಸುತ್ತಾನೆ. ಕೆಲವೊಮ್ಮೆ ಯಾವುದೋ ಒತ್ತಡಕ್ಕೆ ಸಿಲುಕಿ ಬದಲಿಸಬೇಕಾದ ಅನಿವಾರ್ಯತೆ ಎದುರಾಗಬಹುದು.
ನಿಮಗೆ ಗೊತ್ತಾ ಸುಧಾ ವಾರಪತ್ರಿಕೆಯಲ್ಲಿ ಬಂದಿದ್ದ ಕಥೆಯನ್ನು ಆಧರಿಸಿ ಸಿನಿಮಾ ಮಾಡಬೇಕು ಎಂದಾಗ ಡಾ. ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ಬಹಳ ಇಷ್ಟಪಟ್ಟಿದ್ದರು. ಆದರೆ ಅಂತಿಮವಾಗಿ ಆ ಕಥೆ ಅಂಬರೀಶ್ ಪಾಲಾಗಿತ್ತು. ಸಿನಿಮಾ ಸೂಪರ್ ಹಿಟ್ ಕೂಡ ಆಗಿತ್ತು. ಬಳಿಕ ತಮಿಳು, ಹಿಂದಿ ಹಾಗೂ ತೆಲುಗು ಭಾಷೆಗಳಿಗೂ ರೀಮೆಕ್ ಆಗಿತ್ತು.

ಕನ್ನಡ ಚಿತ್ರರಂಗದಲ್ಲಿ ಹೀರೊ ಆಗಿ ಅಂಬರೀಶ್ ಅವರಿಗೆ ಈ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. 44 ವರ್ಷಗಳ ಹಿಂದೆ 20 ಲಕ್ಷ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 40 ಲಕ್ಷ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಅವತ್ತಿನ ಕಾಲಕ್ಕೆ ಅದ್ಭುತ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಮುಂದೆ ಈ ಸಿನಿಮಾ ಇಂತಹ ಹಲವು ಸಿನಿಮಾಗಳಿಗೆ ಪ್ರೇರಣೆಯಾಗಿತ್ತು. ಸುಧಾ ವಾರಪತ್ರಿಕೆಯಲ್ಲಿ ಕೆಲವು ಕಥೆಗಳನ್ನು ಪ್ರಕಟನೆ ಮಾಡುತ್ತಿದ್ದರು. ಧಾರಾವಾಹಿ ರೀತಿ ಸಣ್ಣ ಸಣ್ಣ ಕಂತುಗಳ ರೀತಿ ಪ್ರತಿವಾರ ಕಥೆಯನ್ನು ಹೇಳುತ್ತಾ ಸಾಗುತ್ತಿದ್ದರು.
ಕಥೆ ಎಷ್ಟು ಕುತೂಹಲ ಮೂಡಿಸುತ್ತಿತ್ತು ಅಂದರೆ ಮುಂದೆ ಏನಾಗುತ್ತದೆ ಎಂದು ತಿಳಿದುಕೊಳ್ಳಲು ಜನ ಮುಗಿಬಿದ್ದು ಪತ್ರಿಕೆಯನ್ನು ಖರೀದಿಸುತ್ತಿದ್ದರಿ. ಅದೇ ರೀತಿ 70ರ ದಶಕದಲ್ಲಿ ಹೆಚ್. ಕೆ ಅನಂತರಾವ್ ಬರೆದ 'ಅಂತ' ಕಥೆ ಸುಧಾ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದನ್ನು ಓದಿ ರಾಜೇಂದ್ರ ಸಿಂಗ್ ಬಾಬು ಸಿನಿಮಾ ಮಾಡಲು ಮುಂದಾಗಿದ್ದರು. ಚಿತ್ರಕಥೆ ಸಿದ್ಧಪಡಿಸಿಕೊಂಡು ಸಿನಿಮಾ ಮಾಡಲು ಹೊರಟಾಗ ಡಾ. ರಾಜ್ಕುಮಾರ್ ಅವರಿಗೂ ಕಥೆ ಹೇಳಿದ್ದರು. ವಿಷ್ಣುವರ್ಧನ್ ಕೂಡ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದರು. ಆದರೆ ಚಿಕ್ಕಂದಿನಿಂದ ಒಟ್ಟಿಗೆ ಆಡಿ ಬೆಳೆದ ನನ್ನ ಸ್ನೇಹಿತ ಅಂಬರೀಶ್ ಈ ಕಥೆಗೆ ಸೂಕ್ತ ಎಂದು ನಿರ್ದೇಶಕರು ತೀರ್ಮಾನಿಸಿಬಿಟ್ಟಿದ್ದರು.

'ಅಂತ' ಚಿತ್ರದ ಕಥೆಗೆ ಅಂಬರೀಶ್ ಹೀರೊ ಅಂದಾಗ ಚಿತ್ರರಂಗದಲ್ಲಿ ಕೆಲವರು ನಕ್ಕಿದ್ದರಂತೆ. ನಿರ್ಮಾಪಕರು ಅಲುಕಿನಲ್ಲೇ ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ ಅಂತಿಮವಾಗಿ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಇತ್ತೀಚೆಗೆ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಈ ಬಗ್ಗೆ ರಾಜೇಂದ್ರ ಸಿಂಗ್ ಬಾಬು ಮಾತನಾಡಿದ್ದಾರೆ. "ಈ ಕಥೆ ಡಾ. ರಾಜ್ಕುಮಾರ್ ಅವ್ರಿಗೆ ಹೇಳುವಂತೆ ಒಬ್ರು ನನ್ನನ್ನು ಅವ್ರ ಬಳಿ ಕರ್ಕೊಂಡ್ ಹೋಗಿದ್ರು, ಕಥೆ ಹೇಳ್ದೆ. ಈ ಕಥೆ ನಿಮಗೆ ಸರಿ ಹೋಗಲ್ಲ, ಕೊನೆಯಲ್ಲಿ ಸೋತು ಗೆಲ್ಲುವ ಕಥೆ ಇದೆ. ಗರ್ಭಿಣಿ ಹೆಂಗಸನ್ನು ನಿಮ್ಮ ಮುಂದೆ ಒದ್ದು ಒದ್ದು ಸಾಯಿಸ್ತಾರೆ. ನಿಮ್ಮ ಇಮೇಜ್ಗೆ ಜನ ಅದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ಅವರಿಗೆ ಮನವರಿಕೆ ಮಾಡಿದ್ದೆ" ಎಂದು ಅವರು ತಿಳಿಸಿದ್ದಾರೆ.
ವಿಷ್ಣುವರ್ಧನ್ ಕೂಡ ಈ ಕಥೆಯನ್ನು ಸಿನಿಮಾ ಮಾಡಲು ಇಷ್ಟಪಟ್ಟಿದ್ದ. ಆದರೆ ನನಗೆ ಅಂಬರೀಶ್ ಹೀರೊ ಆಗಬೇಕು ಎನಿಸಿತ್ತು. ಅವನೇ ಸೂಕ್ತ ಅಂದುಕೊಂಡಿದ್ದೆ ಎಂದು ರಾಜೇಂದ್ರ ಸಿಂಗ್ ಬಾಬು ಮೆಲುಕು ಹಾಕಿದ್ದಾರೆ. "ಅಂಬರೀಶ್ ಹೀರೊ ಅಂದಾಗ ವಿತರಕರು ಯಾರು ಒಪ್ಪಲಿಲ್ಲ. ಈಗ 'ಅಮರ್ನಾಥ್' ಅಂತ ಸಿನ್ಮಾ ಮಾಡ್ತಿದ್ದಾನೆ. ನೀವು ಇವನನ್ನು ಹೀರೊ ಮಾಡಿ ಇಷ್ಟು ದೊಡ್ಡ ಸಿನಿಮಾ ಮಾಡ್ತೀನಿ ಅಂತೀರಾ ಅಂದ್ರು. ನಾನು ಎಲ್ಲರನ್ನು ಒಪ್ಪಿಸಿದ್ದೆ. ಕಾರಣ ಅಂಬಿ ಸಾಮರ್ಥ್ಯದ ಬಗ್ಗೆ ನಂಬಿಕೆ ಇತ್ತು. ಫೈನಾನ್ಸ್ ಮಾಡುವ ಕೆಸಿಎನ್ ಚಂದ್ರು ಕೂಡ ಮೀನಾಮೇಷ ಎಣಿಸಿದ್ದರು" ಎಂದು ವಿವರಿಸಿದ್ದಾರೆ.
ಫಸ್ಟ್ ಕಾಪಿ ನೋಡಿದಾಗಲೂ ಕೆಲವರು ಸಿನಿಮಾ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಸಿನಿಮಾ ಜನ ನೋಡ್ತಾರಾ ಅಂತೆಲ್ಲಾ ಅಂದಿದ್ರು. ಆದರೆ ಅಂತಿಮವಾಗಿ ಸಿನಿಮಾ ಗೆದ್ದಿತ್ತು ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.


Click it and Unblock the Notifications











