ಶ್ರೀದೇವಿ, ಐಶ್ ಇಬ್ಬರನ್ನು ಕ್ರೇಜಿಸ್ಟಾರ್ ಕನ್ನಡ ಚಿತ್ರರಂಗಕ್ಕೆ ಯಾಕೆ ಪರಿಚಯಿಸಲು ಸಾಧ್ಯವಾಗಲಿಲ್ಲ?
ಹೀರೋ ಆಗಿ ಮಾತ್ರವಲ್ಲದೇ ನಿರ್ದೇಶಕನಾಗಿ ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ರವಿಚಂದ್ರನ್ ಕೊಡುಗೆ ದೊಡ್ಡದು. ದಶಕಗಳ ಹಿಂದೆಯೇ ಕೋಟಿ ಕೋಟಿ ಸುರಿದು ಸಿನಿಮಾಗಳನ್ನು ನಿರ್ಮಿಸಿದ್ದರು. ಪರಭಾಷೆಯ ಖ್ಯಾತ ನಟಿಯರನ್ನು ಕನ್ನಡಕ್ಕೆ ಪರಿಚಯಿಸಿದ ಹೆಗ್ಗಳಿಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಸಲ್ಲುತ್ತದೆ.
ತಂದೆ ಎನ್. ವೀರಾಸ್ವಾಮಿ ಕನ್ನಡದಲ್ಲಿ ಅದ್ಭುತ ಸಿನಿಮಾಗಳನ್ನು ನಿರ್ಮಿಸಿ ಗೆದ್ದಿದ್ದರು. ತಂದೆಯನ್ನು ನೋಡುತ್ತಾ ಬೆಳೆದ ರವಿಚಂದ್ರನ್ ಕೂಡ ದೊಡ್ಡ ದೊಡ್ಡ ಕನಸು ಕಂಡರು. ಅದನ್ನು ತೆರೆಗೆ ತರಲು ಶ್ರಮಿಸಿದರು. ಸೋಲಿಗೆ ಜಗ್ಗದೇ ಮತ್ತೆ ಮತ್ತೆ ಸಿನಿಮಾ ಮಾಡಿ ಗೆಲ್ಲುವ ಹಠಕ್ಕೆ ಬಿದ್ದರು. ತಮಗೆ ಇಷ್ಟವಾಗುವವರೆಗೆ ಸಿನಿಮಾ ಪ್ರೇಕ್ಷಕರಿಗೆ ತೋರಿಸಲ್ಲ ಎಂದರು. ಕೆಲ ಸಿನಿಮಾಗಳನ್ನು ಪ್ರಾರಂಭಿಸಿ ಅರ್ಧಕ್ಕೆ ನಿಲ್ಲಿಸಿಬಿಟ್ಟರು.

'ಶಾಂತಿ-ಕ್ರಾಂತಿ', 'ಏಕಾಂಗಿ' ರೀತಿಯ ಸಿನಿಮಾಗಳು ರವಿಚಂದ್ರನ್ ಅವರಿಗೆ ಅಪಾರ ನಷ್ಟ ತಂದೊಡ್ಡಿದ್ದವು. ಸೋತಾಗಲೆಲ್ಲಾ ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ಕೆಲಸ ಮಾಡಿ ಸಾಲ ತೀರಿಸಿ, ಮತ್ತೆ ಹಣ ಹಾಕಿ ಸಿನಿಮಾ ಮಾಡುವ ಸಾಹಸ ಮಾಡುತ್ತಾ ಬರುತ್ತಿದ್ದಾರೆ. ದೊಡ್ಡ ದೊಡ್ಡ ಸೆಟ್ಟು, ಸ್ಟಾರ್ ನಟ, ನಟಿಯರು, ಕಲರ್ಫುಲ್ ಲೋಕೇಶನ್ಗಳು ಕ್ರೇಜಿಸ್ಟಾರ್ ಸಿನಿಮಾ ಹೈಲೆಟ್.
ಖುಷ್ಬೂ, ಜೂಹಿ ಚಾವ್ಲಾ, ಮೀನಾ, ಶಿಲ್ಪಾ ಶೆಟ್ಟಿ ಸೇರಿದಂತೆ ಪರಭಾಷೆಯ ಸ್ಟಾರ್ ನಟಿಯರನ್ನು ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಕರೆತಂದಿದ್ದರು. ನಟಿಯರನ್ನು ಬಹಳ ಸೊಗಸಾಗಿ ತೆರೆಮೇಲೆ ತೋರಿಸುವುದರಲ್ಲಿ ಕೂಡ ರವಿಮಾಮನಿಗೆ ಅವರೇ ಸಾಟಿ. ಯಾವುದಕ್ಕೆ ಕಮ್ಮಿ ಆದರೂ ತಮ್ಮ ಸಿನಿಮಾಗಳಿಗೆ ಕಮ್ಮಿ ಆಗಬಾರದು. ಎಲ್ಲವೂ ಚೆಂದವಾಗಿ ಕಾಣಿಸಬೇಕು, ನಾಯಕಿಯರೂ ಕೂಡ ಅಷ್ಟೇ ಸೊಗಸಾಗಿ ಮಿಂಚಬೇಕು ಎನ್ನುವುದು ಅವರ ಮಹದಾಸೆ.
ಪರಭಾಷೆಯ ಸ್ಟಾರ್ ನಟಿಯರು ಕೇಳಿದ್ದಷ್ಟು ಸಂಭಾವನೆ ಕೊಟ್ಟು ರವಿಚಂದ್ರನ್ ಕನ್ನಡಕ್ಕೆ ಕರೆತಂದಿದ್ದರು. ಮೊದಲಿಗೆ ಕೆಲವರು ಬರಲ್ಲ, ಎಂದರೂ ಬಳಿಕ ಅವರನ್ನು ಕರೆಸಿ ಸಿನಿಮಾ ಮಾಡುವುದರಲ್ಲಿ ಕ್ರೇಜಿಸ್ಟಾರ್ ಗೆದ್ದಿದ್ದರು. ಕ್ರೇಜಿಸ್ಟಾರ್ ಸಿನಿಮಾ ಎಂದರೆ ಇವತ್ತಿಗೂ ಪರಭಾಷೆಯ ಕೆಲ ನಟಿಯರು ಕಾಲ್ಶೀಟ್ ಕೊಡಲು ಸಿದ್ಧರಿರುತ್ತಾರೆ. ಆದರೆ 90ರ ದಶಕದಲ್ಲಿ ಭಾರೀ ಕ್ರೇಜಿ ಸೃಷ್ಟಿಸಿಕೊಂಡಿದ್ದ ಐಶ್ವರ್ಯ ರೈ ಹಾಗೂ ಶ್ರೀದೇವಿ ಅವರನ್ನು ರವಿಮಾಮ ಕನ್ನಡಕ್ಕೆ ಕರೆತರಲು ಸಾಧ್ಯವಾಗಲಿಲ್ಲ.
'ಭರ್ಜರಿ ಬ್ಯಾಚುಲರ್ಸ್' ಶೋನಲ್ಲಿ ನಟಿ ರಚಿತಾ ರಾಮ್ ಇದೇ ಪ್ರಶ್ನೆಯನ್ನು ರವಿಚಂದ್ರನ್ ಮುಂದಿಟ್ಟಿದ್ದಾರೆ. ಆಗ ಕ್ರೇಜಿಸ್ಟಾರ್ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಐಶ್ವರ್ಯ ರೈ ಹಾಗೂ ಶ್ರೀದೇವಿ ಇಬ್ಬರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ಮಾಡಿದ್ದಾಗಿ ನೆನಪಿಸಿಕೊಂಡಿದ್ದಾರೆ. ರವಿಚಂದ್ರನ್ ಅವರೊಟ್ಟಿಗೆ ಶ್ರೀದೇವಿ ಹಾಗೂ ಐಶ್ವರ್ಯ ರೈ ಅವರನ್ನು ನೋಡುವ ಆಸೆ ನನಗಿತ್ತು, ಅದು ಇವರಿಂದ ಮಾತ್ರ ಸಾಧ್ಯವಾಗುತ್ತಿತ್ತು ಎಂದು ರಚಿತಾ ರಾಮ್ ಹೇಳಿದ್ದಾರೆ.
ರಚಿತಾ ರಾಮ್ ಮಾತಿಗೆ ಪ್ರತಿಕ್ರಿಯಿಸಿರುವ ರವಿಚಂದ್ರನ್ "ಚೆಲುವ' ಚಿತ್ರಕ್ಕೆ ಮೊದಲು 'ಚೆಲುವೆ' ಎಂದು ಹೆಸರಿಟ್ಟಿದ್ದೆವು. ಶ್ರೀದೇವಿ ಚಿತ್ರದ ನಾಯಕಿಯಾಗಿ ಫಿಕ್ಸ್ ಆಗಿದ್ದರು. ಶ್ರೀದೇವಿ ಅವರನ್ನು ಕರ್ಕೊಂಡ್ ಬಂದರೆ ನನಗೆ ಸಂಭಾವನೆ ಕೂಡ ಬೇಡ, ಫ್ರೀಯಾಗಿ ನಟಿಸುತ್ತೀನಿ ಎಂದಿದ್ದೆ. ನಾನೇ ಆ ಚಿತ್ರ ನಿರ್ದೇಶನ ಮಾಡಬೇಕಿತ್ತು. ಕಥೆ ಹೇಳಿ ಆಕೆ ಒಪ್ಪಿ ಎಲ್ಲಾ ಓಕೆ ಆಗಿತ್ತು. ಕಾರಣಾಂತರಗಳಿಂದ ಆ ಸಿನಿಮಾ ಸಾಧ್ಯವಾಗಲಿಲ್ಲ. ಬಳಿಕ 'ಚೆಲುವ' ಅಂತ ಟೈಟಲ್ ಬದಲಿಸಿ ರೀಮೆಕ್ ಸಿನಿಮಾ ಮಾಡುವಂತಾಯಿತು" ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿರುವ ರವಿಚಂದ್ರನ್ "ಐಶ್ವರ್ಯ ರೈ ಅವರಿಗೆ ಮೊದಲು ಸಿನಿಮಾ ಮಾಡುವಂತೆ ಪತ್ರ ಬರೆದವನು ನಾನೇ. ಆಕೆ ಆಗಿನ್ನು ಮಿಸ್ ವರ್ಲ್ಡ್ ಆಗಿರಲಿಲ್ಲ. ಅವಳ ಫೋಟೊ ನೋಡಿ ಸಿನಿಮಾದಲ್ಲಿ ನಟಿಸೋಕೆ ಸೂಕ್ತವಾಗಿರುತ್ತಾರೆ ಎಂದು ಪತ್ರ ಬರೆದಿದ್ದೆ. ಆದರೆ ಆಗ ಆಕೆ ನಟಿಸೋಕೆ ಇಷ್ಟಪಡುತ್ತಿರಲಿಲ್ಲ. ಇನ್ನು ಮಿಸ್ ವರ್ಲ್ಡ್ ಆಗಿ ಆಕೆ ಗೆದ್ದು ಬಂದಮೇಲೆ ರಾಜ್ಯದಲ್ಲಿ ಮೊದಲು ಸನ್ಮಾನಿಸಿದ್ದು ಕೂಡ ನಾನೇ" ಎಂದು ವಿವರಿಸಿದ್ದಾರೆ.


Click it and Unblock the Notifications