ಪ್ಯಾನ್ ಇಂಡಿಯಾ ಸ್ಟಾರ್ಗಳಲ್ಲಿ ಯಶ್, ಪ್ರಭಾಸ್ಗಿಂತ್ಲೂ ರಿಷಬ್ ಶೆಟ್ಟಿ ಗ್ರೇಟ್ ಯಾಕೆ?
ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಜೋರಾಗಿದೆ. ಹೊಸಬರು ಕೂಡ 5 ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಹಾಗಂತ ಎಲ್ಲರೂ ಗೆಲ್ಲುತ್ತಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಿದ ಮಾತ್ರಕ್ಕೆ ಹಿಟ್ ಆಗಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಸಿಗಲ್ಲ.
ಮೊದಲಿಗೆ ಯೂನಿವರ್ಸಲ್ ಸಬ್ಜೆಕ್ಟ್ ಬೇಕು. ಎಲ್ಲಾ ಭಾಷಿಕರನ್ನೂ ತಲುಪುವ ಸತ್ವ ಇರಬೇಕು. ಒಳ್ಳೆ ಮೇಕಿಂಗ್, ಕಲಾವಿದರ ಉತ್ತಮ ಅಭಿನಯ, ಒಳ್ಳೆ ಪ್ರಚಾರ ಎಲ್ಲಕ್ಕಿಂತ ಮುಖ್ಯವಾಗಿ ತೆರೆಮೇಲೆ ಸಿನಿಮಾ ಮ್ಯಾಜಿಕ್ ಮಾಡಬೇಕು. ಸ್ಟಾರ್ ನಿರ್ದೇಶಕರು, ಸೂಪರ್ ಸ್ಟಾರ್ಗಳು ಇದ್ದ ಮಾತ್ರಕ್ಕೆ ಆ ಕ್ರಿಯೇಟ್ ಮಾಡೋಕೆ ಆಗೋಲ್ಲ. ಸಿನಿಮಾ ತಾನಾಗಿಯೇ ಅಂತಾದೊಂದು ಅದ್ಭುತ ಸೃಷ್ಟಿಸಬೇಕು. ಆಗ ಮಾತ್ರ ಗೆಲುವು ಸಾಧ್ಯ.

ದಶಕಗಳ ಹಿಂದೆಯೇ ಒಂದು ಭಾಷೆಯಲ್ಲಿ ನಿರ್ಮಾಣವಾದ ಸಿನಿಮಾಗಳನ್ನು ಬೇರೆ ಭಾಷೆಗಳಿವೆ ಡಬ್ ಮಾಡುವ ಪ್ರಯತ್ನ ನಡೆಯುತ್ತಿತ್ತು. ಕೆಲವೊಮ್ಮೆ ಒಂದೇ ಕಥೆಯಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರು ನಟಿಸಿ ಆಯಾ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡುವುದು ಇತ್ತು. 'ಬಾಹುಬಲಿ' ಸರಣಿ ಚಿತ್ರಗಳಿಂದ ನಿರ್ದೇಶಕ ರಾಜಮೌಳಿ ಅದಕ್ಕೆ ಒಂದು ಹೊರ ರೂಪ ಕೊಟ್ಟರು. ಮುಂದೆ ಆ ಕಾನ್ಸೆಪ್ಟ್ ಪ್ಯಾನ್ ಇಂಡಿಯಾ ಹೆಸರಿನಲ್ಲಿ ಚಾಲ್ತಿಗೆ ಬಂತು.
'ಬಾಹುಬಲಿ' ಬಳಿಕ 'KGF' ಸರಣಿ ಚಿತ್ರಗಳಿಂದ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ಗೆ ಮತ್ತಷ್ಟು ಮೈಲೇಜ್ ಬಂತು. ಇದೀಗ ಸ್ಟಾರ್ ನಟರೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದಿದ್ದಾರೆ. ನಿರ್ಮಾಪಕರು, ನಿರ್ದೇಶಕರು ಕೂಡ ಹೊಡೆದರೆ ಆನೆ ಹೊಡೆಯಬೇಕು ಎನ್ನುತ್ತಿದ್ದಾರೆ. ಆದರೆ ಅದು ಸುಲಭದ ಕೆಲಸವಲ್ಲ. ಒಂದೇ ಕಥೆಯನ್ನು ದೇಶಾದ್ಯಂತ ಎಲ್ಲಾ ಭಾಷಿಕರಿಗೂ ಒಪ್ಪುವಂತೆ ಹೇಳುವುದು ನಿಜಕ್ಕೂ ಸವಾಲಿನ ಕೆಲಸ.
ಪ್ರಭಾಸ್, ಯಶ್, ರಾಮ್ಚರಣ್, ಜ್ಯೂ. ಎನ್ಟಿಆರ್, ರಿಷಬ್ ಶೆಟ್ಟಿ, ಅಲ್ಲು ಅರ್ಜುನ್ ಹೀಗೆ ಹಲವರು ಪ್ಯಾನ್ ಇಂಡಿಯಾ ಸ್ಟಾರ್ಗಳ ಪಟ್ಟ ಅಲಂಕರಿಸಿದ್ದಾರೆ. 'ದಂಗಲ್' ಸಿನಿಮಾದಿಂದ ಆಮೀರ್ ಖಾನ್ ಹಾಗೂ 'ಜವಾನ್' ಚಿತ್ರದಿಂದ ಶಾರುಖ್ ಖಾನ್ ಕೂಡ ಹೆಚ್ಚು ಕಮ್ಮಿ ಪ್ಯಾನ್ ಇಂಡಿಯಾ ಸ್ಟಾರ್ ಸ್ಟೇಟಸ್ ಗಳಿಸಿದ್ದಾರೆ. 'ಜೈಲರ್' ಆಗಿ ರಜನಿಕಾಂತ್ ಕೂಡ ಈ ಕ್ಲಬ್ ಸೇರಿದ್ದಾರೆ. ಆದರೆ ಅವರೆಲ್ಲರಿಗಿಂತ ಕನ್ನಡಿಗ ರಿಷಬ್ ಶೆಟ್ಟಿ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಅದಕ್ಕೆ ಕಾರಣವೂ ಇದೆ.
ಹಾಗ್ ನೋಡಿದ್ರೆ 'ಕಾಂತಾರ' ಚಿತ್ರವನ್ನು ಕನ್ನಡದಲ್ಲಿ ಮಾತ್ರ ಪ್ರೇಕ್ಷಕರ ಮುಂದಿಡಲು ರಿಷಬ್ ಶೆಟ್ಟಿ ಬಯಸಿದ್ದರು. ನಮ್ಮ ಭಾಷೆಯಲ್ಲೇ ಎಲ್ಲರೂ ಈ ಕಥೆಯನ್ನು ನೋಡಬೇಕು ಎನ್ನುವುದು ಅವರ ಆಸೆ ಆಗಿತ್ತು. ಆದರೆ ಸಿನಿಮಾ ರಿಲೀಸ್ ಬಳಿಕ ಬೇರೆ ಭಾಷೆಗಳಿಗೆ ಡಬ್ ಮಾಡುವಂತೆ ಒತ್ತಡ ಹೆಚ್ಚಾಯಿತು. ಹಾಗಾಗಿ ಕನ್ನಡ ಬಳಿಕ ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಕಂಡಿತ್ತು. ಎಲ್ಲಾ ಕಡೆ ಹಿಟ್ ಆಯಿತು. ಪ್ಯಾನ್ ಇಂಡಿಯಾ ಎಂದು ಮೊದಲೇ ಹೇಳದೇ, ಒಟ್ಟಿಗೆ 5 ಭಾಷೆಗಳಲ್ಲಿ ಬಿಡುಗಡೆ ಆಗದಿದ್ದರೂ 300 ಕೋಟಿ ರೂ. ಕಲೆಕ್ಷನ್ ಸಾಮಾನ್ಯ ವಿಚಾರವಲ್ಲ.

ವಿದೇಶಗಳಲ್ಲಿ ಕೂಡ ಜನ ಕ್ಯೂ ನಿಂತು 'ಕಾಂತಾರ' ಸಿನಿಮಾ ನೋಡಿದ್ದರು. ಅಷ್ಟರಮಟ್ಟಿಗೆ ಸಿನಿಮಾ ಮ್ಯಾಜಿಕ್ ಮಾಡಿತ್ತು. ಇನ್ನು 'ಕಾಂತಾರ' ಚಿತ್ರದಲ್ಲಿ ನಟಿಸಿದ್ದು ಮಾತ್ರವಲ್ಲೇ ತಾವೇ ಚಿತ್ರವನ್ನು ರಿಷಬ್ ಶೆಟ್ಟಿ ಕಟ್ಟಿಕೊಟ್ಟಿದ್ದರು. ಬೇರೆಲ್ಲಾ ಪ್ಯಾನ್ ಇಂಡಿಯಾ ಸ್ಟಾರ್ಗಳಿಗಿಂತ ರಿಷಬ್ ವಿಶೇಷವಾಗಿ ನಿಲ್ಲುವುದು ಇದೇ ಕಾರಣಕ್ಕೆ. ಪ್ರಭಾಸ್ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಇರಬಹುದು. ಆದರೆ ರಾಜಮೌಳಿ, ಪ್ರಶಾಂತ್ ನೀಲ್, ನಾಗ್ ಅಶ್ವಿನ್ರಂತಹ ಸ್ಟಾರ್ ನಿರ್ದೇಶಕರು ಆ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು ಎನ್ನುವುದನ್ನು ಮರೆಯುವಂತಿಲ್ಲ.
'KGF' ಸರಣಿಗೆ ಹೀರೋ ಆಗಿ ಮಾತ್ರವಲ್ಲದೇ ಚಿತ್ರದ ನಿರ್ಮಾಣದ ವೇಳೆ ರಾಕಿಂಗ್ ಸ್ಟಾರ್ ಶ್ರಮವನ್ನು ಅಲ್ಲಗಳೆಯುವಂತಿಲ್ಲ. ಆ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದಿದ್ದು ಯಶ್. ಈ ವಿಚಾರವನ್ನು ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಸಹ ಒಪ್ಪಿಕೊಳ್ಳುತ್ತಾರೆ. ಆದರೆ ಸಿನಿಮಾ ಯಶಸ್ಸಿನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಪಾಲು ದೊಡ್ಡದ್ದಿದೆ.
ಇನ್ನು ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ನಟಿಸಿ ಜ್ಯೂ. ಎನ್ಟಿಆರ್, ರಾಮ್ಚರಣ್ ಪ್ಯಾನ್ ಇಂಡಿಯಾ ಸ್ಟಾರ್ಗಳಾದರು. ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರದಲ್ಲಿ ನಟಿಸಿ ಅಲ್ಲು ಅರ್ಜುನ್ ಗೆದ್ದರು. ಅಟ್ಲಿ ನಿರ್ದೇಶನದ 'ಜವಾನ್' ಚಿತ್ರದಲ್ಲಿ ಶಾರುಕ್ ಖಾನ್ ನಟಿಸಿದ್ದರು. ಆದರೆ 'ಕಾಂತಾರ' ಚಿತ್ರವನ್ನು ತಾವೇ ನಿರ್ದೇಶಿಸಿ ನಟಿಸಿ ರಿಷಬ್ ಶೆಟ್ಟಿ ಗೆದ್ದಿದ್ದಾರೆ. ಸದ್ಯ ಪ್ರೀಕ್ವೆಲ್ ಅನ್ನು ಅದಕ್ಕಿಂತ ದೊಡ್ಡಮಟ್ಟದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.


Click it and Unblock the Notifications











