ಶಿವಣ್ಣ, ಉಪ್ಪಿ 'ಹುಚ್ಚ' ಚಿತ್ರ ರಿಜೆಕ್ಟ್ ಮಾಡಿದ್ದೇಕೆ? ಕಿಚ್ಚನ ಪಾತ್ರಕ್ಕೆ ಸುದೀಪ್ ಆಯ್ಕೆ ಆಗಿದ್ಹೇಗೆ?
ಪ್ರತಿ ಅನ್ನದ ಅಗುಳಿನ ಮೇಲೂ ತಿನ್ನುವವರ ಹೆಸರು ಬರೆದಿರುತ್ತದೆ ಎನ್ನುವ ಮಾತಿದೆ. ಅದೇ ಅವಕಾಶ ಯಾರಿಗೆ ಸಿಗಬೇಕೋ ಅವರಿಗೆ ಮಾತ್ರ ಸಿಗುತ್ತದೆ. ಚಿತ್ರರಂಗದಲ್ಲಿ ಇದು ಸರ್ವೇ ಸಾಮಾನ್ಯ. ಯಾರೋ ಮಾಡಬೇಕಿದ್ದ ಸಿನ್ಮಾದಲ್ಲಿ ಮತ್ಯಾರೋ ನಟಿಸಿ ಗೆದ್ದಿದ್ದಾರೆ. ಸದ್ಯ ಸುದೀಪ್ ನಟನೆಯ 'ಹುಚ್ಚ' ಚಿತ್ರ 23 ವರ್ಷ ಪೂರೈಸಿದೆ.
ಹಾಗ್ ನೋಡಿದ್ರೆ, 'ಹುಚ್ಚ' ಸಿನಿಮಾ ಕಥೆಗೆ ಮೊದಲು ಮೂವರ ಹೆಸರು ಕೇಳಿ ಬಂದಿತ್ತು. ಕೊನೆಗೆ ಆ ಅವಕಾಶ ಸುದೀಪ್ ಪಾಲಾಗಿತ್ತು. ತಮಿಳಿನ ಸೂಪರ್ ಹಿಟ್ 'ಸೇತು' ಸಿನಿಮಾ ರೀಮೆಕ್ ಇದು. ತಮಿಳಿನಲ್ಲಿ ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ ಸಿನಿಮಾ ಸಂಚಲನ ಸೃಷ್ಟಿಸಿ ಗೆದ್ದಿತ್ತು. ಕೆಲವೇ ಶೋಗಳಲ್ಲಿ ಶುರುವಾಗಿದ್ದ ಸಿನಿಮಾ ಮುಂದೆ ಸಾವಿರಾರು ಶೋಗಳಲ್ಲಿ ಪ್ರದರ್ಶನ ಕಂಡಿತ್ತು. ಕನ್ನಡ ಚಿತ್ರ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಮೊದಲಿಗೆ ಚಿತ್ರದ ರೀಮೆಕ್ ರೈಟ್ಸ್ ಖರೀದಿಸಿ ತಂದಿದ್ದರು.

ಶಿಲ್ಪಾ ಶ್ರೀನಿವಾಸ್ ತಾವೇ ಹೀರೋ ಆಗಿ ನಟಿಸಬೇಕು ಎಂದುಕೊಂಡಿದ್ದರು. ಅದಕ್ಕಾಗಿ ತಯಾರಿ ನಡೆಸಿದ್ದರು. ತಲೆ ಬೋಳಿಸಿಕೊಂಡು ಸ್ಟಂಟ್ಸ್ ಟ್ರೈನಿಂಗ್ ಪಡೆಯಲು ಆರಂಭಿಸಿದ್ದರು. ಇದನ್ನು ಕೇಳಿದ ಆಪ್ತ ನಿರ್ಮಾಪಕ ರೆಹಮಾನ್ ತಲೆ ಬೋಳಿಸಿಕೊಂಡರೆ ಹೀರೊ ಆಗೋಕ್ಕಾಗಲ್ಲ. ರೈಟ್ಸ್ ಕೊಡು ನಾನು ಸಿನಿಮಾ ಮಾಡ್ತೀನಿ ಎಂದು ಶಿಲ್ಪಾ ಶ್ರೀನಿವಾಸ್ ಬಳಿ ಚಿತ್ರದ ರೈಟ್ಸ್ ಪಡೆದುಕೊಂಡಿದ್ದರು. ಆಗ ಇನ್ನು ರೆಹಮಾನ್ ಇನ್ನು ವಿಷ್ಣುವರ್ಧನ್ ನಟನೆಯ 'ಯಜಮಾನ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದರು.
'ಸೇತು' ಸಿನಿಮಾ ರೈಟ್ಸ್ ಕೊಂಡುಕೊಂಡ ಬಳಿಕ ಶಿವಣ್ಣ ಹೀರೊ ಆಗಿ ನಟಿಸಿದರೆ ಚೆನ್ನಾಗಿರುತ್ತದೆ ಎಂದು ಅಂದುಕೊಂಡಿದ್ದರು. ಚಿತ್ರದ ಸಿಡಿಯನ್ನು ಗೀತಾ ಶಿವರಾಜ್ಕುಮಾರ್ ಅವರಿಗೆ ಕೊಟ್ಟಿದ್ದರು. ಗೀತಕ್ಕ ಸೆಕೆಂಡ್ ಆಫ್ ಶಾಕ್ ಆಗಿದ್ದರು. ಹುಚ್ಚನ ರೀತಿ ಇಷ್ಟು ಈ ರೀತಿ ನಮ್ಮ ಯಜಮಾನರನ್ನು ಊಹಿಸಿಕೊಳ್ಳೋಕು ಆಗಲ್ಲ. ಅವರು ಈ ಸಿನಿಮಾ ಮಾಡಲ್ಲ ಎಂದುಬಿಟ್ಟಿದ್ದರು. ಬಳಿಕ ರೆಹಮಾನ್ ಈ ಕಥೆಯನ್ನು ಉಪೇಂದ್ರಗೆ ಹೇಳಿದ್ದರು.

ಅದಾಗಲೇ 'ಸೇತು' ಸಿನಿಮಾ ಹಿಟ್ ಆಗಿ ಎಲ್ಲೆಲ್ಲೂ ಟಾಕ್ ಕೇಳಿಬರುತ್ತಿತ್ತು. ಉಪೇಂದ್ರ ಕೂಡ ಕಥೆ ಗೊತ್ತು ಮಾಡೋಣ ಎಂದು ಒಪ್ಪಿಗೆ ಸೂಚಿಸಿದ್ದರು. ಆದರೆ ನಿರ್ಮಾಪಕ ರೆಹಮಾನ್ ನಾನು ಈಗಾಗಲೇ ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಮಾಡಿಸಿದ್ದೀನಿ ಎಂದು ಉಪ್ಪಿ ಮುಂದೆ ಹೇಳಿದ್ದಾರೆ. ಹೌದಾ? ಏನು ಟೈಟಲ್ ಎಂದಾಗ 'ಹುಚ್ಚ' ಎಂದು ಹೇಳಿದ್ದಾರೆ. ಇದನ್ನು ಕೇಳಿ ರಿಯಲ್ ಸ್ಟಾರ್ ನಾನು ಈ ಸಿನಿಮಾ ಮಾಡಲ್ಲ ಎಂದುಬಿಟ್ಟರಂತೆ. ಆಗಸ್ಟ್ 'ಎ' ಹಾಗೂ 'ಉಪೇಂದ್ರ' ಸಿನಿಮಾಗಳು ರಿಲೀಸ್ ಆಗಿತ್ತು. ಜನ ಈಗ್ಲೇ ನನ್ನನ್ನು ಹುಚ್ಚ ಎನ್ನುತ್ತಿದ್ದಾರೆ, ಇನ್ನು ಈ ಟೈಟಲ್ನಲ್ಲಿ ಸಿನಿಮಾ ಮಾಡಿದ್ರೆ ಮುಗೀತು ಕಥೆ, ಬೇಡ ಎಂದುಬಿಟ್ಟಿದ್ದಾರೆ.
ಸುದೀಪ್ ಅದಾಗಲೇ 'ಸ್ಪರ್ಶ' ಚಿತ್ರದಲ್ಲಿ ನಟಿಸಿದ್ದರು. ಚಿತ್ರದ ಹಾಡುಗಳು ಹಿಟ್ ಆಗಿತ್ತು. ಆದರೆ ಸಿನಿಮಾ ಸಕ್ಸಸ್ ಆಗಿರಲಿಲ್ಲ. ಇಂತಹ ಸಮಯದಲ್ಲೇ ರೆಹಮಾನ್ ಕಣ್ಣಿಗೆ ಬಿದ್ದಿದ್ದರು. ಹಾಗಾಗಿ ಆ ಪಾತ್ರಕ್ಕೆ ಸುದೀಪ್ ಸೂಕ್ತ ಎಂದು ನಿರ್ಧರಿಸಿದ್ದಾರೆ. ಆಗ ಸುದೀಪ್ ಒಂದೊಳ್ಳೆ ಬ್ರೇಕ್ಗಾಗಿ ಕಾಯುತ್ತಿದ್ದರು. 'ಸೇತು' ರೀಮೆಕ್ನಲ್ಲಿ ನಟಿಸೋಕೆ ಒಪ್ಪಿದ್ದರು. ಮುಂದೆ ಏನಾಯ್ತು? ಎನ್ನುವುದು ಗೊತ್ತೇಯಿದೆ. ಸಿನಿಮಾ ಹಿಟ್ ಆಯ್ತು. ಆ ಚಿತ್ರದಲ್ಲಿ ಮಾಡಿದ್ದ ಕಿಚ್ಚ ಪಾತ್ರದಿಂದಲೇ ಜನಪ್ರಿಯರಾದರು.
ಡಾ. ರಾಜ್ಕುಮಾರ್ ಸಹ 'ಹುಚ್ಚ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಕ್ಲೈಮ್ಯಾಕ್ಸ್ ನೋಡಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದರು. ಸುದೀಪ್ ನಟನೆ ಮೆಚ್ಚಿ ಮುಂದೆ ನೀವು ದೊಡ್ಡ ಹೀರೊ ಆಗ್ತೀರಾ ಎಂದು ಅಣ್ಣಾವ್ರು ಭವಿಷ್ಯ ನುಡಿದಿದ್ದರು. ಆ ಭವಿಷ್ಯ ಸುಳ್ಳಾಗಲಿಲ್ಲ.


Click it and Unblock the Notifications











