ಚಿತ್ರರಂಗದಲ್ಲಿ ಗೆದ್ದಿದ್ದ ಸೌಂದರ್ಯ ರಾಜಕೀಯದತ್ತ ವಾಲಿದ್ದೇಕೆ? ಅತ್ತಿಗೆ ನಿರ್ಮಲಾ ಮಾತು
ನಟಿ ಸೌಂದರ್ಯ. ನಿಜಕ್ಕೂ ಹೆಸರಿಗೆ ತಕ್ಕ ಸೌಂದರ್ಯ ರಾಶಿ. ಇಂದು(ಜುಲೈ 18) ಸೌಂದರ್ಯ ಜನ್ಮದಿನದ ಸವಿನೆನಪು. ಆಕೆ ಬದುಕಿದ್ದರೆ 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಬಹುಭಾಷಾ ನಟಿ ಸೌಂದರ್ಯ ಅಗಲಿ ವರ್ಷಗಳೇ ಕಳೆದರೂ ಸಿನಿರಸಿಕರು ಆಕೆಯನ್ನು ಮರೆತ್ತಿಲ್ಲ.
ಬೆಂಗಳೂರಿನಲ್ಲಿ ಹುಟ್ಟಿಬೆಳೆದ ಸೌಮ್ಯ ಮುಂದೆ ಸೌಂದರ್ಯ ಆಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಒಂದು ದಶಕದ ಸಿನಿಕರಿಯರ್ನಲ್ಲಿ 100 ಕ್ಕೂ ಅಧಿಕ ಸಿನಿಮಾಗಳಲ್ಲಿ ಸೌಂದರ್ಯ ನಟಿಸಿದ್ದರು. ಕನ್ನಡಕ್ಕಿಂತ ತೆಲುಗು ಸಿನಿಮಾಗಳಲ್ಲಿ ಆಕೆ ಹೆಚ್ಚು ಮಿಂಚಿದ್ದರು. 2004 ಏಪ್ರಿಲ್ 17 ರಂದು ಕರೀಂನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕಾಗಿ ಅಣ್ಣ ಅಮರ್ನಾಥ್ ಅವರೊಂದಿಗೆ ತೆರಳುವಾಗ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾಗಿದ್ದರು.

ಜಕ್ಕೂರು ವಿಮಾನ ನೆಲೆಯಿಂದ ಲಘು ಹೆಲಿಕಾಪ್ಟರ್ ಟೇಕ್ ಆಫ್ ಆಗಿದ್ದ ಕೆಲವೇ ಕ್ಷಣಗಳಲ್ಲಿ ಪತನವಾಗಿತ್ತು. ಹೆಲಿಕಾಪ್ಟರ್ನಲ್ಲಿದ್ದ ನಟಿ ಸೌಂದರ್ಯ, ಸಹೋದರ ಅಮರನಾಥ್, ಅವರ ಸ್ನೇಹಿತ ರಮೇಶ್ ಹಾಗೂ ಪೈಲೆಟ್ ಸುಟ್ಟು ಕರಕಲಾಗಿದ್ದರು. ಈ ಸುದ್ದಿ ಕೇಳಿ ಇಡೀ ದಕ್ಷಿಣ ಭಾರತ ಶಾಕ್ ಆಗಿತ್ತು. ಚಿತ್ರರಂಗದಲ್ಲಿ ನಾಯಕಿಯಾಗಿ ಉತ್ತುಂಗಕ್ಕೇರಿದ್ದ ಸಮಯದಲ್ಲೇ ಸೌಂದರ್ಯ ದುರಂತ ಅಂತ್ಯ ಕಂಡಿದ್ದರು.
ಬಣ್ಣದಲೋಕದಲ್ಲಿ ಯಶಸ್ಸು ಸಾಧಿಸಿದ್ದ ಸೌಂದರ್ಯ ದಿಢೀರನೆ ರಾಜಕೀಯರಂಗದತ್ತ ಮುಖ ಮಾಡಿದ್ಯಾಕೆ? ಎನ್ನುವ ಪ್ರಶ್ನೆ ಸಾಕಷ್ಟು ಜನರನ್ನು ಕಾಡಿತ್ತು. ಸೌಂದರ್ಯ ಅವರ ಅತ್ತಿಗೆ ನಿರ್ಮಲಾ ಅಮರನಾಥ್ ಇತ್ತೀಚೆಗೆ ರಾಜೇಶ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ಸೌಂದರ್ಯ ಕುರಿತು ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
"ಆಪ್ತಮಿತ್ರ ಸಿನಿಮಾ ಚಿತ್ರೀಕರಣದ ಮುಗಿದ್ದಿದ್ದ ಸಮಯ ಅದು. ಮಲ್ಲೇಶ್ವರಂನಲ್ಲಿ ಡಾ. ಅಶ್ವತ್ನಾರಾಯಣ್ ಅವರು ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಎಲ್ಲರೂ ಕರೆ ಮಾಡಿ ಮನವಿ ಮಾಡಿಕೊಂಡಿದ್ದರು. ಸೌಂದರ್ಯ ಪ್ರಚಾರಕ್ಕೆ ಬರಬೇಕು ಎಂದು. ಅಮರ್ ಆರ್ಎಸ್ಎಸ್, ಬಿಜೆಪಿಯಲ್ಲಿ ಆಸಕ್ತಿ ಇತ್ತು. ಭವಿಷ್ಯದಲ್ಲಿ ತಂಗಿಯನ್ನು ರಾಜಕೀಯರಂಗದಲ್ಲಿ ನೋಡಬೇಕು ಎಂದುಕೊಂಡಿದ್ದರು"

"ಜನಸೇವೆ ಮಾಡಬೇಕು. ಸಿನಿಮಾಗಳಲ್ಲಿ ಆಕೆ ಯಶಸ್ಸು ಗಳಿಸಿದ್ದಾಳೆ. ಮುಂದೆ ಏನು ಎಂದು ಅಮರ್ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದರು. ಸಮಾಜ ಆಕೆಗೆ ಸಾಕಷ್ಟು ಕೊಟ್ಟಿದೆ. ಸಿನಿಮಾಗಳಿಂದ ನೇಮು ಫೇಮು ಸಿಕ್ಕಿದೆ. ಸಮಾಜಕ್ಕೆ ಏನಾದರೂ ವಾಪಸ್ ಕೊಡಬೇಕು. ಅದಕ್ಕೆ ಅಧಿಕಾರ ಬೇಕು. ತಂಗಿಯನ್ನು ಎಂಪಿ ಮಾಡಬೇಕು ಎನ್ನುವ ಕನಸು ಇತ್ತು. ಜನಸೇವೆ ಮಾಡಬೇಕು ಎಂದುಕೊಳ್ಳುತ್ತಿದ್ದರು"
"ಸೌಂದರ್ಯ ರಾಜಕೀಯರಂಗಕ್ಕೆ ಹೋಗೋದು ಬೇಕಾ? ಬೇಡ್ವಾ? ಎಂದು ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಅಣ್ಣನ ನಿರ್ಧಾರಕ್ಕೆ ಸೌಂದರ್ಯ ಕಟ್ಟುಬಿದ್ದಿದ್ದರು. ಪತಿ ರಘುಗೆ ಅದು ಇಷ್ಟವಿರಲಿಲ್ಲ. ಇದೆಲ್ಲಾ ಬೇಕಾ ಎನ್ನುವ ಗೊಂದಲ ಇತ್ತು. ಸೌಂದರ್ಯ 50:50 ಎನ್ನುವ ಮನಸ್ಥಿತಿಯಲ್ಲಿ ಇದ್ದರು. ಆಕೆ ಕರೀಂನಗರದಕ್ಕೆ ಹೋಗುವ ಹಿಂದಿನ ದಿನವೂ ಈ ಬಗ್ಗೆ ಬಹಳ ಚರ್ಚೆ ಆಗಿತ್ತು. ಆಕೆ ಮನಸ್ಸಲ್ಲಿ ಗೊಂದಲ ಇದ್ದಿದ್ದು ನನಗೆ ಗೊತ್ತಾಗುತ್ತಿತ್ತು" ಎಂದು ನಿರ್ಮಲಾ ಹೇಳಿದ್ದಾರೆ.
"ಹಿಂದಿನ ದಿನ ನಾನು, ಅವಳು ಮಾತನಾಡುವಾಗಲೂ ಈ ವಿಚಾರ ಬಂತು. ರಘುಗೆ ಇಷ್ಟವಿಲ್ಲ, ಅಮರ್ಗೆ ಕೇಳುತ್ತಿಲ್ಲ. ನನಗೆ ಗೊಂದಲ ಎನ್ನುತ್ತಿದ್ದಳು. ಸದ್ಯ ಬರೀ ಬೆಂಬಲ ಸೂಚಿಸಿ ಪ್ರಚಾರಕ್ಕೆ ತಾನೇ ಹೋಗುತ್ತಿರುವುದು ಮುಂದೆ ನಿರ್ಧಾರ ಕೈಗೊಳ್ಳೋಣ ಎಂದು ಹೇಳಿದ್ದೆ. ಅವತ್ತು ಇಬ್ಬರೂ ಹೊರಟಾಗ ಕೂಡ ಬಹಳ ಗೊಂದಲದಲ್ಲಿದ್ದರು. ಅಮರ್ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಅವರಿಗೆ ಬೆಳಗ್ಗೆ ಪದೇ ಪದೆ ಕರೆಗಳು ಬರುತ್ತಿತ್ತು. ಆ ಗೊಂದಲದಲ್ಲೇ ಮನೆಯಿಂದ ಹೊರಟಿದ್ದರು. ಹೀಗೆಲ್ಲಾ ಆಗುತ್ತದೆ ಎಂದುಕೊಂಡಿರಲಿಲ್ಲ" ಎಂದು ನಿರ್ಮಲಾ ವಿವರಿಸಿದ್ದಾರೆ.


Click it and Unblock the Notifications











