ಅವತ್ತಿನ ಕಾಲಕ್ಕೆ 'ಮುತ್ತಿನಹಾರ' ಬಜೆಟ್ ಎಷ್ಟು? ಅಷ್ಟಕ್ಕೂ ಸಿನಿಮಾ ಸೋತಿದ್ದೇಕೆ?
ಕೆಲ ಜನಪ್ರಿಯ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸಕ್ಸಸ್ ಕಂಡಿರಲ್ಲ. ಇದು ದಶಕಗಳಿಂದ ನಡೆದುಕೊಂಡು ಬಂದಿದೆ. ಒಳ್ಳೆ ಕಥೆ, ಚಿತ್ರಕಥೆ, ನಿರ್ದೇಶನ, ಕಲಾವಿದರಿಂದ ಅದ್ಭುತ ನಟನೆ, ಅದ್ಭುತ ಸಂಗೀತ ಎಲ್ಲಾ ಇದ್ರು ಸಿನಿಮಾಗಳು ಸೋತಿರುವ ಉದಾಹರಣೆಗಳಿವೆ. ಅದಕ್ಕೆ ನಾನಾ ಕಾರಣಗಳಿರುತ್ತವೆ. ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ಮುತ್ತಿನಹಾರ' ಚಿತ್ರ ಕೂಡ ಇದೇ ಪಟ್ಟಿಗೆ ಸೇರುತ್ತದೆ.
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಎವರ್ಗ್ರೀನ್ ಸಿನಿಮಾ ಇದು. ವಿಷ್ಣುವರ್ಧನ್, ಅಶ್ವಥ್, ಸುಹಾಸಿನಿ, ಮಾಸ್ಟರ್ ಮಂಜುನಾಥ್ ನಟಿಸಿದ್ದ ಕಲ್ಟ್ ಕ್ಲಾಸಿಕ್ ಸಿನಿಮಾ. 1990ರಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಅದಾಗಲೇ ಹಂಸಲೇಖ ಸಂಗೀತದಲ್ಲಿ ಹಾಡುಗಳು ಹಿಟ್ ಆಗಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದಿತ್ತು. ಕೆಲವೆಡೆ ಅದ್ಭುತ ಪ್ರದರ್ಶನ ಕಂಡರೂ ಒಟ್ಟಾರೆ ಸಿನಿಮಾ ಕಮರ್ಷಿಯಲ್ ಆಗಿ ಸೋಲುಂಡಿತ್ತು.

ಸ್ವತಃ ನಿರ್ದೇಶಕ ರಾಜೇಂದ್ರಸಿಂಗ್ ಬಾಬು 'ಮುತ್ತಿನಹಾರ' ಚಿತ್ರದ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಅವರು ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದಾರೆ. ಇದೇ ಸಂಭ್ರಮದಲ್ಲಿ ನ್ಯೂಸ್ಫಸ್ಟ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಸಿನಿ ಬದುಕಿನ ಪ್ರಯಾಣವನ್ನು ಮೆಲುಕು ಹಾಕಿದ್ದಾರೆ. ಸೋಲು, ಗೆಲುವಿನ ಬಗ್ಗೆ ಅಂತರಾಳ ತೆರೆದಿಟ್ಟಿದ್ದಾರೆ.
ರಾಜೇಂದ್ರಸಿಂಗ್ ಬಾಬು ಮಾತನಾಡಿ "ಬಂಧನ ಸಿನಿಮಾ ಬಳಿಕ 4 ವರ್ಷ ಯಾವುದೇ ಸಿನಿಮಾ ಮಾಡ್ಲಿಲ್ಲ. ಗಡಿಯಲ್ಲಿ ನಾನು ಬಾಲಿವುಡ್ 'ಶರಾರ' ಚಿತ್ರದ ಚಿತ್ರೀಕರಣ ಮಾಡುವಾಗ ಅಲ್ಲಿ ನಮ್ಮ ಕೊಡಗಿನ ಮೂಲಕ ಸಾಕಷ್ಟು ಜನ ಸೈನಿಕರು ಸಿಕ್ಕಿ ಇಲ್ಲಿ ಒಂದು ಕನ್ನಡ ಸಿನಿಮಾ ಮಾಡಿ ಎಂದು ಕೇಳಿದ್ದರು. ಡಾ. ವಿಜಯಾ ಅವರು ವೆ. ಮು ಜೋಶಿ ಅವರ ಕಥಾಸಂಕಲನ ಕೊಟ್ಟಿದ್ರು. ಅದರಲ್ಲಿ 'ಅನ್ನಪೂರ್ಣ' ಕಥೆ ಇತ್ತು. ಅದರಿಂದ 'ಮುತ್ತಿನಹಾರ' ಸಿನಿಮಾ ಮಾಡಿದ್ದು. ನನಗೆ ಬೇಸರ ಇಲ್ಲ. 'ಬಂಧನ' ಚಿತ್ರದಿಂದ ಬಹಳ ಲಾಭ ಬಂದಿತ್ತು. ಹಾಗಾಗಿ ಅವತ್ತಿನ ಕಾಲಕ್ಕೆ 1.50 ಕೋಟಿ ರೂ. ಹಾಕಿ ಸಿನಿಮಾ ಮಾಡಿದ್ವಿ" ಎಂದಿದ್ದಾರೆ.

ಬೆಂಗಳೂರು, ಮೈಸೂರು ಹಾಗೂ ದಾವಣಗೆರೆಯಲ್ಲಿ 'ಮುತ್ತಿನಹಾರ' ಸಿನಿಮಾ ಒಳ್ಳೆ ಪ್ರದರ್ಶನ ಕಂಡಿತ್ತು. ಆದರೆ ಬಿ, ಸಿ ಸೆಂಟರ್ಗಳಲ್ಲಿ ಸಿನಿಮಾ ಜನರಿಗೆ ರೀಚ್ ಆಗಲಿಲ್ಲ ಎಂದು ರಾಜೇಂದ್ರಸಿಂಗ್ ಬಾಬು ಮೆಲುಕು ಹಾಕಿದ್ದಾರೆ. "ಟ್ರ್ಯಾಜಿಡಿ ಇತ್ತು. ಅವತ್ತಿನ ಕಾಲಕ್ಕೆ ಬಹಳ ಮುಂದಿನವರೆದ ಸಿನಿಮಾ ಎನಿಸಿಬಿಟ್ಟಿತ್ತು. ಇತ್ತಿಚೆಗೆ ಬಂದ ತಮಿಳಿನ 'ಅಮರನ್' ಸೇಮ್ ಕಥೆ. ನಮ್ಮ ಸ್ನೇಹಿತರೊಬ್ಬರು ಹೇಳ್ತಿದ್ರು. ಸರ್ ನೀವು ಅವತ್ತೇ ಮಾಡಿದ್ರಿ, ಈಗ 'ಅಮರನ್' 250 ಕೋಟಿ ರೂ. ಮಾಡಿದೆ ಅಂದ್ರು. ಏನು ಮಾಡೋಕೆ ಆಗಲ್ಲ. ಪ್ರೇಕ್ಷಕರೇ ಸರಿ. ಪ್ರೇಕ್ಷಕರ ಜಡ್ಜ್ಮೆಂಟ್ ತಪ್ಪು ಎನ್ನುವುದಕ್ಕೆ ಸಾಧ್ಯವಿಲ್ಲ" ಎಂದು ವಿವರಿಸಿದ್ದಾರೆ.
'ಮುತ್ತಿನಹಾರ' ಸಿನಿಮಾ ನೋಡಿ ಡಾ. ರಾಜ್ಕುಮಾರ್ ಬಹಳ ಇಷ್ಟಪಟ್ಟಿದ್ದರು. ಇಂತಾದೊಂದು ಪಾತ್ರ ನನಗೆ ಸಿಗಲಿಲ್ಲ ಎಂದು ಬೇಸರಿಸಿಕೊಂಡಿದ್ದು ಇದೆ ಎಂದು ಇದೇ ಸಂದರ್ಶನದಲ್ಲಿ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ಅಣ್ಣಾವ್ರು ಹಾಗೂ ವಿಷ್ಣುವರ್ಧನ್ ಒಡನಾಟದ ಬಗ್ಗೆ ಮಾತನಾಡುತ್ತಾ ಈ ವಿಚಾರವನ್ನು ನೆನಪಿಸಿಕೊಂಡಿದ್ದಾರೆ. ನಾನು ನೋಡಿದಂತೆ ಇಬ್ಬರ ನಡುವೆ ಉತ್ತಮ ಒಡನಾಟ ಇತ್ತು. ಹೊರಗಡೆ ಬಿಂಬಿಸಿದಂತೆ ಏನೂ ಇರಲಿಲ್ಲ ಎಂದಿದ್ದಾರೆ.
ಚಿಕ್ಕಂದಿನಿಂದ ನನ್ನನ್ನು ಅಣ್ಣಾವ್ರು ನೋಡಿದ್ದರು. ಆದರೆ ಅವರೊಟ್ಟಿಗೆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. 'ಬಂಧನ' ಸಿನಿಮಾ ನೋಡಿ ಡಾ. ರಾಜ್ಕುಮಾರ್ ಬಹಳ ಹೊಗಳಿದ್ದರು. ವಿಷ್ಣು ಎಂಥ ಅಭಿನಯ ಮಾಡಿದ್ದಾರೆ ಎಂದು ಫೋನ್ ಮಾಡಿ ಅವರೊಟ್ಟಿಗೆ ಮಾತನಾಡಿದ್ದರು. 'ಮುತ್ತಿನಹಾರ' ನೋಡಿದಾಗ ಇಂತಾದೊಂದು ಪಾತ್ರ ನನಗೆ ಸಿಗಲಿಲ್ಲ ನೋಡಿ, ದೇಶಭಕ್ತನ ಪಾತ್ರ ಎಂದು ಹೇಳಿದ್ದು ಇದೆ ಎಂದು ರಾಜೇಂದ್ರ ಸಿಂಗ್ ಬಾಬು ವಿವರಿಸಿದ್ದಾರೆ.


Click it and Unblock the Notifications











