01 ಹಿಟ್, 13 ಫ್ಲಾಪ್, ಚಿತ್ರರಂಗದಿಂದ ಕಣ್ಮರೆಯಾದ ಈ ನಟ ಇಂದು ₹1500 ಕೋಟಿ ಆಸ್ತಿಯ ಒಡೆಯ...!
ಜನ ಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ ಇವತ್ತಲ್ಲಾ ನಾಳೆ ಗೆಲ್ಲುತ್ತೇವೆ, ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತದೆ ಎಂಬ ಭರವಸೆಯಿಂದ ಅನೇಕರು ಕಾಯುತ್ತಾರೆ. ಆ ಭರವಸೆ ಹುಸಿಯಾದಾಗ ತುತ್ತು ಅನ್ನಕ್ಕೆ ಬೇರೆ ಉದ್ಯೋಗವನ್ನು ಮಾಡಿದ್ದಾರೆ. ಇನ್ನು ಕೆಲವರು ಕನಸು ಮತ್ತು ಭ್ರಮೆಗಳಿಂದ ಹೊರ ಬಂದು ಬದುಕನ್ನು ರೂಪಿಸಿಕೊಳ್ಳುತ್ತಾರೆ. ತಮ್ಮ ಜೊತೆ ಚಿತ್ರರಂಗಕ್ಕೆ ಬಂದು ಗೆದ್ದವರ ಎದುರು ಎದ್ದು ನಿಲ್ಲುತ್ತಾರೆ. ಉದಾಹರಣೆಗೆ ಜಾಯೆದ್ ಖಾನ್.
ಹೌದು, ಜಾಯೆದ್ ಖಾನ್ ಕಿರುತೆರೆಯ ಟಿಪ್ಪು ಸುಲ್ತಾನ್ ಸಂಜಯ್ ಖಾನ್ ಅವರ ಮಗ. ಫರ್ದಿನ್ ಖಾನ್ ಅವರ ತಂದೆ ಫಿರೋಜ್ ಖಾನ್ ಅವರ ಸೋದರಳಿಯ. ಕೇವಲ 22ರ ಹರೆಯದಲ್ಲಿಯೇ ಚಿತ್ರರಂಗಕ್ಕೆ ಬಂದ ಜಾಯೆದ್, ಚುರಾ ಲಿಯಾ ಹೈ ತುಮ್ನೆ ಚಿತ್ರವನ್ನು ಮಾಡಿದಾಗ ಬಾಲಿವುಡ್ನ ಭರವಸೆಯ ನಾಯಕ ಎಂದು ಎಲ್ಲರು ಮಾತನಾಡಿದರು. ಬಾಯ್ತುಂಬ ಹೊಗಳಿದರು. ಆದರೆ, ಅವಕಾಶ ಕೊಡಲಿಲ್ಲ. ಈ ಕಾರಣಕ್ಕೆ.. ಎರಡನೇ ಚಿತ್ರದಲ್ಲಿಯೇ ನಾಯಕನ ಸ್ಥಾನದಿಂದ ಕೆಳಗಿಳಿದ ಜಾಯೆದ್ ಆ ನಂತರ ಚಿತ್ರದಲ್ಲಿನ ಎರಡನೇ ನಾಯಕನ ಪಾತ್ರವನ್ನು ಮಾಡಲು ಶುರುಮಾಡಿದರು. ಬಹುತಾರಾಗಣದ ಚಿತ್ರವನ್ನು ಒಪ್ಪಿಕೊಂಡರು.

ಆ ಪೈಕಿ ಶಾರುಖ್ ಖಾನ್ ಅಭಿನಯದ ಮೇ ಹೂ ನಾ ಚಿತ್ರ ಕೂಡ ಒಂದು. ಜಾಯೆದ್ ಖಾನ್ ತಮ್ಮ ಒಂದು ದಶಕದ ವೃತ್ತಿ ಬದುಕಿನಲ್ಲಿ ಗೆಲುವಿನ ಮುಖವನ್ನು ನೋಡಿದ್ದು ಇದೊಂದೇ ಚಿತ್ರದಲ್ಲಿ. ಈ ಚಿತ್ರ ಹೊರತು ಪಡಿಸಿದರೆ ಸಂಜಯ್ ದತ್, ಸುನಿಲ್ ಶೆಟ್ಟಿ ಮತ್ತು ಅಭಿಷೇಕ್ ಬಚ್ಚನ್ ಜೊತೆ ಅಭಿನಯಿಸಿದ್ದ ದಸ್ ಚೂರು ಹೆಸರನ್ನು ತಂದು ಕೊಟ್ಟಿತ್ತು. ಮಿಕ್ಕಂತೆ ಜಾಯೆದ್ ಖಾನ್ ಅಭಿನಯದ ಯಾವೊಂದು ಚಿತ್ರ ಕೂಡ ಗೆಲ್ಲುವುದಿರಲಿ ಹಾಕಿದ ಬಂಡವಾಳವನ್ನು ಕೂಡ ನಿರ್ಮಾಪಕರಿಗೆ ವಾಪಸು ತಂದು ಕೊಡಲಿಲ್ಲ.
ಹೀಗಾಗಿ ಸತತ ಪ್ರಯತ್ನಗಳನ್ನು ಮಾಡಿ ಆ ನಂತರ ಸೋಲನ್ನೊಪ್ಪಿಕೊಂಡ ಜಾಯೆದ್ ಖಾನ್ ಆ ನಂತರ ಕಣ್ಣೀರು ಹಾಕುತ್ತಾ ಕೂರಲಿಲ್ಲ. ಚಿತ್ರರಂಗ ತನ್ನನ್ನು ಒಪ್ಪಿಕೊಳ್ಳಲಿಲ್ಲ, ಅಪ್ಪಿಕೊಳ್ಳಲಿಲ್ಲ ಎಂದು ಕೊರಗಲಿಲ್ಲ. ಬದಲಿಗೆ ಧೂಳು ಹಿಡಿದಿದ್ದ ತಮ್ಮ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಪದವಿಯನ್ನು ಹೊರ ತೆಗೆದರು. ವ್ಯಾಪಾರಕ್ಕಿಳಿದರು. ಚಿಕ್ಕ ಚಿಕ್ಕ ಸ್ಟಾರ್ಟ್ ಅಪ್ಗಳಲ್ಲಿ ಹೂಡಿಕೆ ಮಾಡಲು ಶುರು ಮಾಡಿದರು. ಪರಿಣಾಮ ಈ ಹತ್ತು ವರ್ಷದಲ್ಲಿ ಅಂದರೆ 2015ರಿಂದ ಇಲ್ಲಿಯವರೆಗೆ ಜಾಯೆದ್ ಖಾನ್ ₹1500 ಕೋಟಿ ಒಡೆಯನಾಗಿ ಹೊರ ಹೊಮ್ಮಿದ್ದಾರೆ. ಹೀಗೆಂದು ET NOW ಸೇರಿ ಅನೇಕ ಮಾಧ್ಯಮಗಳು ವರದಿ ಮಾಡಿವೆ. ಆದರೆ. ಈ ವಿಚಾರವನ್ನು ಜಾಯೆದ್ ಒಪ್ಪಿಕೊಂಡಿಲ್ಲ. ಹಾಗಂಥ ನಿರಾಕರಿಸಿಯೂ ಇಲ್ಲ. ಇತ್ತೀಚಿನ ಸಂದರ್ಶನದಲ್ಲಿ ಈ ಕುರಿತು ಕೇಳಲಾದ ಪ್ರಶ್ನೆಗೆ ನಸು ನಕ್ಕು ತಮ್ಮ ಸಕ್ಸಸ್ ಸ್ಟೋರಿಯನ್ನು ಜಾಯೆದ್ ಖಾನ್ ಹಂಚಿಕೊಂಡಿದ್ಧಾರೆ.
ಸುಭೋಜಿತ್ ಘೋಷ್ ಅವರಿಗೆ ನೀಡಲಾದ ಸಂದರ್ಶನದಲ್ಲಿ ತಮ್ಮ ಈ ಯಶಸ್ಸಿನ ಕುರಿತು ಮಾತನಾಡಿರುವ ಜಾಯೆದ್ ಖಾನ್ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎನ್ನುವ ದೊಡ್ಡವರ ಮಾತನ್ನು ನೆನಪಿಸಿಕೊಂಡಿದ್ದಾರೆ. ನಿಮಗೆ ಫೆರಾರಿ ಕಾರನ್ನು ಖರೀದಿಸುವ ಶಕ್ತಿ ಇದ್ದರೆ ಮರ್ಸಿಡಿಸ್ ಕಾರನ್ನು ಖರೀದಿಸಿ, ಮರ್ಸಿಡಿಸ್ ತೆಗೆದುಕೊಳ್ಳುವ ಸಾಮರ್ಥ್ಯ ಇದ್ದರೆ ಫಿಯೆಟ್ ಕಾರನ್ನು ಖರೀದಿಸಿ ಅಂದಿದ್ದಾರೆ. ಆದರೆ, ಇದು ಸೋಶಿಯಲ್ ಮೀಡಿಯಾ ಕಾಲ. ಈ ಕಾಲದಲ್ಲಿ ಅನೇಕರು ತಮ್ಮ ಇಮೇಜ್ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ, ಅಗತ್ಯಕ್ಕಿಂತ ಹೆಚ್ಚಿನ ಖರ್ಚು ಮಾಡುತ್ತಾರೆ ಆ ನಂತರ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೇ ಒದ್ದಾಡುತ್ತಾರೆ ಎಂದಿರುವ ಜಾಯೆದ್ ಖಾನ್ ಶೇಕಡಾ 80 ರಷ್ಟು ಜನರು ಈ ತಪ್ಪುಗಳನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ. ಈ ತರಹದ ಸಮಸ್ಯೆಗಳಲ್ಲಿ ಸಿಲುಕಬೇಡಿ ಆಗ ಯಶಸ್ಸು ನಿಮ್ಮದಾಗುತ್ತೆ ಎಂಬ ಸಲಹೆಯನ್ನು ನೀಡಿದ್ದಾರೆ.


Click it and Unblock the Notifications










