"ನಮ್ ದೇವ್ರು, ಅಪ್ಪ- ಅಮ್ಮ ಆಶೀರ್ವಾದ ಏನಂತೀರಾ?" ಎಂದ ಶ್ರೇಯಾಂಕ ಪಾಟೀಲ್
ಆರ್ಸಿಬಿ ವನಿತೆಯರ ತಂಡ WPL ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದೆ. 16 ವರ್ಷಗಳಿಂದ ಆರ್ಸಿಬಿ ಕಪ್ ಗೆಲ್ಲಲಿಲ್ಲ ಎನ್ನುವ ಕೊರಗು ಅಭಿಮಾನಿಗಳಲ್ಲಿತ್ತು. ಅದು ಕೊಂಚಮಟ್ಟಿಗೆ ಕಮ್ಮಿ ಆದಂತಾಗಿದೆ. ಆರ್ಸಿಬಿ ವನಿತೆಯರ ತಂಡ ಕಪ್ ಗೆದ್ದಿದ್ದು ಈ ಸಲ ಪುರುಷರ ತಂಡ ಕೂಡ ಗೆಲ್ಲುತ್ತದೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ WPL ಸೀಸನ್ 2ರ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ತಂಡ 8 ವಿಕೆಟ್ಗಳ ಗೆಲುವು ಸಾಧಿಸಿತ್ತು. ಈ ಗೆಲ್ಲುವನ್ನು ಅಭಿಮಾನಿಗಳು ಭರ್ಜರಿಯಾಗಿ ಆಚರಿಸಿದ್ದಾರೆ. ಪಟಾಕಿ ಸಿಡಿಸಿ ಜೈ ಹಾಕಿ ಸಂಭ್ರಮಿಸಿದರು. ಅತ್ತ ಮೈದಾನದಲ್ಲಿ ಪಂದ್ಯ ಗೆಲ್ಲುತ್ತಿದ್ದಂತೆ ಬೆಂಗಳೂರಿನಲ್ಲಿ ಕೆಲವರು ರಸ್ತೆಗಿಳಿದು ಕುಣಿದು ಸಂಭ್ರಮಿಸಿದರು.

ಅಂತೂ ಇಂತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆದ್ದು ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದೆ. ಸರಣಿಯಲ್ಲಿ ಒಬ್ಬರಿಗಿಂತ ಒಬ್ಬರು ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ಆರೆಂಜ್ ಕ್ಯಾಪ್ ಪಡೆದ ಎಲಿಸ್ ಪೆರ್ರಿ ಹಾಗೂ ಪರ್ಪಲ್ ಕ್ಯಾಪ್ ಪಡೆದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಆಟವನ್ನು ಮರೆಯುವಂತಿಲ್ಲ.
ಹೊಸ ನ್ಯಾಷನಲ್ ಕ್ರಶ್ ಆಗಿಬಿಟ್ಟಿರುವ ಶ್ರೇಯಾಂಕಾ ಪಾಟೀಲ್ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಪ್ರತಿಭೆ. ಫೈನಲ್ ಪಂದ್ಯದಲ್ಲಿ ಕೂಡ 3.3 ಓವರ್ ಬೌಲಿಂಗ್ ಮಾಡಿದ್ದ ಶ್ರೇಯಾಂಕ ಕೇವಲ 12 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಪಂದ್ಯದ ಗೆಲುವಿನ ಬಳಿಕ ಇಡೀ ತಂಡದ ಜೊತೆ ಆಕೆ ಕುಣಿದು ಸಂಭ್ರಮಿಸಿದರು. ನಟ ಡ್ಯಾನಿಶ್ ಸೇಠ್ ಅಲಿಯಾಸ್ ಮಿಸ್ಟರ್ ನ್ಯಾಗ್ಸ್ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದರು. ಆ ವೀಡಿಯೋ ಈಗ ವೈರಲ್ ಆಗ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಯಾರು, ಏನೋ ಮಾತನಾಡಿದರೆ ಅದು ವಿಚಿತ್ರ ಅನ್ನಿಸಿ ಕೆಲವೊಮ್ಮೆ ವೈರಲ್ ಆಗಿಬಿಡುತ್ತದೆ. ಇದೇ ರೀತಿ ಯುವಕನೊಬ್ಬ "ನಮ್ಮ ಮನಸ್ಸು ನಮಗೆ ಒಳ್ಳೆಯದು ಮಾಡಿದರೆ ದೇವ್ರು ಏನಂತೀರಾ" ಎನ್ನುವ ಡೈಲಾಗ್ ಸಖತ್ ಸದ್ದು ಮಾಡಿತ್ತು. ಇದು ಆರ್ಸಿಬಿ ವನಿತೆಯರ ತಂಡದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಕಣ್ಣಿಗೂ ಬಿದ್ದಿದೆ. ಆಕೆ ಕೂಡ ಇದನ್ನು ಈಗ ರಿಪೀಟ್ ಮಾಡಿದ್ದು ವೀಡಿಯೋ ವೈರಲ್ ಆಗುತ್ತಿದೆ.

ಫೈನಲ್ ಪಂದ್ಯ ಗೆದ್ದ ಬಳಿಕ ಡ್ಯಾನಿಶ್ ಸೇಠ್ ತಂಡದ ಆಟಗಾರರನ್ನು ಪ್ರತಿಕ್ರಿಯೆ ಪಡೆದಿದ್ದಾರೆ. ಈ ವೇಳೆ ಶ್ರೇಯಾಂಕ ಪಾಟೀಲ್ ಬಳಿ "ಆರ್ಸಿಬಿ ಆಡಲು ಆರಂಭಿಸಿದಾಗ ನಿಮಗೆ 5 ವರ್ಷ ವಯಸ್ಸು. ಈಗ ನಿಮಗೆ 21 ವರ್ಷ ವಯಸ್ಸು. ಟ್ರೋಫಿ ಗೆದ್ದಿದ್ದೇವೆ. ಹೇಗನ್ನಿಸುತ್ತಿದೆ" ಎಂದು ಕೇಳಿದ್ದಾರೆ. ಕೂಡಲೇ ಆಕೆ ಕನ್ನಡದಲ್ಲೇ ಪ್ರತಿಕ್ರಿಯಿಸಿದ್ದಾರೆ.
"ನಮ್ ದೇವ್ರು. ನಮ್ ಅಪ್ಪ-ಅಮ್ಮನ ಆಶೀರ್ವಾದ. ಎಲ್ಲಾ ಇದ್ರೆ ಆರಾಮು. ಏನಂತೀರಾ?" ಎಂದು ಡ್ಯಾನಿಶ್ ಸೇಠ್ಗೆ ಶ್ರೇಯಾಂಕಾ ಶಾಕ್ ಕೊಟ್ಟಿದ್ದಾರೆ. ಅಂಕಲ್ ಪರವಾಗಿಲ್ಲ, ನನಗಾಗಿ ನೀವು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದೀರಾ ಎಂದಿದ್ದಾರೆ. ಬೆಂಗಳೂರು ಅಲ್ಲ, ದೆಹಲಿ ಅಂತ ಡ್ಯಾನಿಶ್ ನೆನಪಿಸಿದಾಗ ಪಂದ್ಯ ಗೆದ್ದ ಖುಷಿಯಲ್ಲಿ ಏನೇನೊ ಮಾತನಾಡುತ್ತಿದ್ದೇನೆ" ಎಂದು ನಕ್ಕಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.
ಅಂದಹಾಗೆ ಶ್ರೇಯಾಂಕ ಪಾಟೀಲ್ ತಂದೆ ರಾಜೇಶ್ ಪಾಟೀಲ್ ಕೂಡ ಕ್ರಿಕೆಟ್ ಆಟಗಾರರಾಗಿದ್ದರು. ಚಿಕ್ಕಂದಿನಲ್ಲಿ ಆಕೆಗೆ ಕ್ರಿಕೆಟ್ ಆಟಗಾರ್ಟಿ ಆಗುತ್ತೇನೆ ಎನ್ನುವ ಅಂದಾಜು ಇರಲಿಲ್ಲವಂತೆ. ಆದರೆ ತಂದೆಯ ಪ್ರೋತ್ಸಾಹದಿಂದ ಆಕೆ ಈ ಕ್ಷೇತ್ರದಲ್ಲಿ ಬೆಳೆದುಬಂದಿದ್ದಾರೆ. ಇನ್ನು ಆರ್ಸಿಬಿ ಪಂದ್ಯ ಗೆಲ್ಲುತ್ತಿದ್ದಂತೆ ಆಕೆಯ ಇನ್ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆಯೂ ಹೆಚ್ಚಾಗಿದೆ.


Click it and Unblock the Notifications











